Homeಮುಖಪುಟಮರುಕಳಿಸಿದ ಸರ್ವಾಧಿಪತ್ಯದ ಅಪಾಯ

ಮರುಕಳಿಸಿದ ಸರ್ವಾಧಿಪತ್ಯದ ಅಪಾಯ

- Advertisement -
- Advertisement -

ಆಳುವ ಸರ್ವಾಧಿಕಾರಿಗಳ ಹುಟ್ಟು ಮತ್ತು ಜನ ಅವರನ್ನು ಸ್ವೀಕರಿಸುವುದರ ಕುರಿತು ಹಲವಾರು ಚಿಂತಕರು ಚಿಂತನೆ ನಡೆಸಿದ್ದಾರೆ. ಅವರಲ್ಲಿ ಬಹುಶಃ ಹನ್ಹಾ ಅರೆಂಟ್ (Hannah Arendt) ಅತ್ಯಂತ ಮುಖ್ಯರಾದವರು.

******

ಹನ್ಹಾ ಅರೆಂಟ್ ಮತ್ತು ಭೂತಗಳ ಒಗಟು ಬಿಡಿಸುವುದು

ಇಪ್ಪತ್ತೊಂದನೇ ಶತಮಾನದ ಪ್ರಪಂಚವು ಇಪ್ಪತ್ತನೇ ಶತಮಾನದ ಪ್ರಪಂಚಕ್ಕಿಂತ ತುಂಬಾ ಭಿನ್ನವಾಗಿದೆ. ಕಳೆದ ನೂರು ವರ್ಷಗಳಲ್ಲಿ ವ್ಯಕ್ತಿವಾದದ ಸ್ವರೂಪವು ಬದಲಾಗಿದೆ. ’ಬಂಡವಾಳ’ದ ಗುಣಸ್ವಭಾವವೂ ಬದಲಾಗಿದೆ. ನಗರ ಜನವಸತಿಗಳ ಸಂಕೀರ್ಣತೆಗಳು ಕೂಡಾ ಬದಲಾಗಿವೆ. ಹೀಗಿದ್ದರೂ, ಇಪ್ಪತ್ತನೇ ಶತಮಾನದ ಗುಣಸ್ವರೂಪಗಳನ್ನು ಅರ್ಥ ಮಾಡಿಕೊಳ್ಳದೇ ಇದ್ದರೆ. ಈ ಕಾಲದ ಅನಿಯಂತ್ರಿತವಾದ ಸ್ಥಿತಿ ಮತ್ತು ಸರ್ವಾಧಿಕಾರದ ಜಾಗತಿಕ ಬೆದರಿಕೆಯನ್ನು ಅರ್ಥಮಾಡಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಅಡಾಲ್ಫ್ ಹಿಟ್ಲರ್ ಮತ್ತು ಜೋಸೆಫ್ ಸ್ಟಾಲಿನ್ ಆಡಳಿತದ ಕಾಲದಿಂದಲೂ, ಆಳುವ ಸರ್ವಾಧಿಕಾರಿಗಳ ಹುಟ್ಟು ಮತ್ತು ಜನ ಅವರನ್ನು ಪ್ರವಾದಿಗಳಂತೆ ಸ್ವೀಕರಿಸುವುದರ ಕುರಿತು ಹಲವಾರು ಚಿಂತಕರು ಚಿಂತನೆ ನಡೆಸಿದ್ದಾರೆ. ಇಂತಹ ಚಿಂತಕರಲ್ಲಿ ಬಹುಶಃ ಹನ್ಹಾ ಅರೆಂಟ್ ಅತ್ಯಂತ (1906-1975) ಮುಖ್ಯರಾದವರು.

ಅಡಾಲ್ಫ್ ಹಿಟ್ಲರ್

ಎರಡನೇ ಮಹಾಯುದ್ಧದ ಮತಿಹೀನ ಹಿಂಸಾಚಾರ ಮತ್ತು ಹಿಟ್ಲರನ ಥರ್ಡ್ ರೈಖ್ (Third Reich) ಆಡಳಿತದಲ್ಲಿ ಯಹೂದಿಗಳು, ಪೋಲರು, ಜಿಪ್ಸಿಗಳು ಮತ್ತು ಇತರ ಬಿಳಿಯರಲ್ಲದ ಜನರನ್ನು ನಡೆಸಿಕೊಂಡ ಅಮಾನವೀಯ ರೀತಿಗಳನ್ನು ಕಣ್ಣಾರೆ ನೋಡಿದವರೂ, ಹಿಂದಿನ ಯುಎಸ್‌ಎಸ್‌ಆರ್‌ನ ಸ್ಟಾಲಿನ್‌ವಾದಿ ಆಡಳಿತದಲ್ಲಿ ದೊಡ್ಡ ಸಂಖ್ಯೆಯ ಜನರ ಅಂತ್ಯವನ್ನೂ, ಲಕ್ಷಾಂತರ ರೈತಾಪಿ ವರ್ಗದ ಜನರ ಸರ್ವನಾಶದ ಕುರಿತು ಆಳವಾಗಿ ಚಿಂತನೆ ನಡೆಸಿದವರೂ ಆದ ಅರೆಂಟ್, ಸರ್ವಾಧಿಕಾರಿ ಆಡಳಿತಗಳ ಮನಸ್ಥಿತಿ ಮತ್ತು ರಾಜಕೀಯದ ಕುರಿತು ಅಭೂತಪೂರ್ವವಾದ ಒಳನೋಟಗಳನ್ನು ಅಭಿವೃದ್ಧಿಪಡಿಸಿದ್ದಾರೆ.

’ದಿ ಒರಿಜಿನ್ಸ್ ಆಫ್ ಟೊಟಾಲಿಟೇರಿಯನಿಸಂ’ (1951) ಮತ್ತು ’ದಿ ಹ್ಯೂಮನ್ ಕಂಡಿಷನ್’ ಪುಸ್ತಕಗಳಲ್ಲಿ ಅವರು ಇಪ್ಪತ್ತನೇ ಶತಮಾನಕ್ಕೆ ವಿಶಿಷ್ಟವಾದ ಸರ್ವಾಧಿಕಾರಿ ಪ್ರವೃತ್ತಿಯ ಕುರಿತು ಆಳವಾದ ವಿಶ್ಲೇಷಣೆಯನ್ನು ಪ್ರಸ್ತುತಪಡಿಸಿದ್ದಾರೆ. ಅದನ್ನು ಅವರು ಹಿಂದಿನ ಕಾಲಘಟ್ಟಗಳ ಊಳಿಗಮಾನ್ಯ, ಪಾಳೇಗಾರಿ ಹಿಂಸಾಚಾರ ಮತ್ತು ಯುದ್ಧಗಳಿಂದ ಸ್ಪಷ್ಟವಾಗಿ ಪ್ರತ್ಯೇಕಿಸಿ, ಗುರುತಿಸಿದ್ದಾರೆ. ಇಪ್ಪತ್ತನೇ ಶತಮಾನದ ಸರ್ವಾಧಿಪತ್ಯವು ಹೇಗೆ ಭಯ-ಭೀತಿ ಮತ್ತು ಹೆಚ್ಚು ಮುಖ್ಯವಾಗಿ ತಾತ್ವಿಕವಾದ ಹುಸಿ ಕಲ್ಪನೆಯ ಸಿದ್ಧಾಂತದ ತಳಹದಿಯ ಮೇಲೆ ಕಟ್ಟಲಾದಂತದ್ದು ಎಂದು ಅವರು ಸ್ಪಷ್ಟವಾಗಿ ತೋರಿಸಿಕೊಟ್ಟಿದ್ದಾರೆ.

ಅವರ ಅಭಿಪ್ರಾಯದ ಪ್ರಕಾರ, ಹೊಸ ಸರ್ವಾಧಿಕಾರಿ ಪ್ರಭುತ್ವವು ಒಂದು ಭಾರೀ ಐತಿಹಾಸಿಕ ಅನ್ಯಾಯದ ಮತ್ತು ಅವಮಾನದ ಕಲ್ಪಿತ ಭಾವನೆಯ ತಳಹದಿಯ ಮೇಲೆ ಜೀವತಳೆದು, ಪ್ರಭುತ್ವದ ಹೆಸರಿನಲ್ಲಿ ಕೆಲಸ ಮಾಡುವ ಅನೌಪಚಾರಿಕವಾದ ಗುಂಪುಗಳ ಮೂಲಕ ಪ್ರತೀಕಾರ ಮತ್ತು ಸೇಡು ತೀರಿಸುವ ಭರವಸೆ ನೀಡುತ್ತದೆ. ಇದು ಬಹುಸಂಖ್ಯಾತ ಜನರ ಸ್ಥಾನಮಾನವನ್ನು, “ಐತಿಹಾಸಿಕವಾಗಿ ಅನ್ಯಾಯಕ್ಕೆ ಒಳಗಾದದ್ದರಿಂದ” “ಅನ್ಯಾಯ ಮಾಡಬಲ್ಲ ಸಾಮರ್ಥ್ಯದ” ಸ್ಥಾನಮಾನಕ್ಕೆ ಏರಿಸುವ ಭರವಸೆಯ ಮೂಲಕ ಭಾರೀ ಸಂಖ್ಯೆಯಲ್ಲಿ ಜನಸಮೂಹವನ್ನು ಆಕರ್ಷಿಸಿತು; ಆದರೆ ಆ ಪರಮೋಚ್ಚ ನಾಯಕನಿಗೆ ಆ ಜನಸಮೂಹದ ಕುರಿತು ಅಸಡ್ಡೆಯ ಭಾವನೆಯ ಹೊರತು ಬೇರೇನೂ ಇರಲಿಲ್ಲ. ಈ ಭರವಸೆಗಳಿಂದ ಆಕರ್ಷಿತರಾದ ಬಹುಸಂಖ್ಯಾತ ಜನರು ತಮ್ಮ ನಾಯಕನ ಯಾವುದೇ ಪ್ರತ್ಯಕ್ಷವಾದ ನಿರ್ದಿಷ್ಟ ಆದೇಶ ಇಲ್ಲದೆಯೇ “ಹಿಂದಿನ ಕಾಲ್ಪನಿಕ ಅನ್ಯಾಯದಾತರಿಗೆ” ಅನ್ಯಾಯವೆಸಗಲು ಸಿದ್ಧರಾದರು.

ಇದು ಒಂದು ರಾಷ್ಟ್ರಕ್ಕೆ ’ಇತಿಹಾಸದ ಬೀಗ ತೆರೆಯುವ ಕೀಲಿಗೈ’ ಒದಗಿಸಿತು- ಏಕೆಂದರೆ, ದೇಶವೆಂದರೆ, ’ಅನುಪಮ ಆಯ್ಕೆ’, ಎಂಬುದೇ ಆ ನಾಯಕನ ಘೋಷಿತ ಜೀವನ ಧ್ಯೇಯವಾಗಿತ್ತು. ಭಯ ಉತ್ಪಾದಿಸುವ ಆತನ ಅಧಿಕಾರವು- ಆತ ಬಹುಸಂಖ್ಯಾತ ಸಮುದಾಯದ ವಿರುದ್ಧ ದ್ವೇಷಪೂರಿತ ಗುರಿಯ ಸಾಧನೆಗಾಗಿಯೇ ಜನ್ಮವೆತ್ತಿದ್ದಾನೆ ಎಂದು ಹೇಳಿಕೊಳ್ಳುವಷ್ಟು ಬೆಳೆದಿತ್ತು. ಅವರು ಆತನನ್ನು ಶ್ಲಾಘಿಸಿದರು- ಆತನ ಕೃತ್ಯಗಳು ತಮಗೆ ಹಾನಿ ಮಾಡುತ್ತವೆ, ತಮ್ಮ ಕುಟುಂಬಗಳನ್ನು ನಾಶ ಮಾಡುತ್ತವೆ, ಸಮಾಜವನ್ನು ನಿರಂತರವಾಗಿ ಬೆಳೆಯುವ ದ್ವೇಷದ ವಾತಾವರಣಕ್ಕೆ ತಳ್ಳುತ್ತದೆ ಎಂದು ಗೊತ್ತಿದ್ದರೂ ಕೂಡಾ.

ಹನ್ಹಾ ಅರೆಂಟ್

ಇಪ್ಪತ್ತನೇ ಶತಮಾನದ ದ್ವೇಷಪ್ರೇರಿತ ಸರ್ವಾಧಿಕಾರಿ ಸರಕಾರಗಳ ಪರಮೋಚ್ಚ ನಾಯಕರ ಅಂತ್ಯ ಹೇಗಾಯಿತು ಮತ್ತು ಅವರ ನೆನಪಿನ ಜೊತೆಗೆ ಎಷ್ಟೊಂದು ಕಳಂಕದ ಕೊಳೆ ಅಂಟಿಕೊಡಿದೆ ಎಂಬುದು ಪ್ರಪಂಚಕ್ಕೇ ಗೊತ್ತಿದೆ. ಹೀಗಿದ್ದರೂ, ಒಂದು ಶತಮಾನಕ್ಕೂ ಕಡಿಮೆ ಅವಧಿಯಲ್ಲಿ ಮತ್ತೊಮ್ಮೆ ಪ್ರಪಂಚದಾದ್ಯಂತ ಸರ್ವಾಧಿಕಾರಿ ಆಧಿಪತ್ಯಗಳು ಹುಟ್ಟಿಬರುತ್ತಿವೆ. ಈ ವಿದ್ಯಮಾನವನ್ನು ಕೇವಲ ’ಬಲ’ ಮತ್ತು ’ಎಡ’ ರಾಜಕೀಯ ಗುಂಪುಗಳಲ್ಲಿ ಮಾತ್ರ ಇರಿಸುವುದರ ಮೂಲಕ ಆರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಅಥವಾ ಹೊಟ್ಟೆಬಾಕ ಕಾರ್ಪೊರೆಟ್ ಬಂಡವಾಳವಾದದ ಅಗತ್ಯ ವಿಸ್ತರಣೆಯೆಂದು ನೋಡುವುದರ ಮೂಲಕ ಪೂರ್ಣವಾಗಿ ಅರ್ಥ ಮಾಡಿಕೊಳ್ಳಲೂ ಆಗದು. ಇಪ್ಪತ್ತೊಂದನೇ ಶತಮಾನದ ಸರ್ವಾಧಿಪತ್ಯದ ಬ್ರಾಂಡುಗಳು ಕೃತಕ ಬುದ್ಧಿಮತ್ತೆಯಿಂದ ನೆರವು ಪಡೆಯುವ ಹೊಸ ಸವಾಲನ್ನೂ ಹೊಂದಿದೆ ಎಂದೂ ಹೇಳಬೇಕಾಗುತ್ತದೆ; ಮತ್ತು ಇದು ಸಮಸ್ಯೆಯ ಕೇವಲ ಒಂದು ಭಾಗ ಮಾತ್ರ.

ಬೆಲ್ಜಿಯಂನ ಘೆಂಟ್ ವಿಶ್ವವಿದ್ಯಾಲಯದ ಮೆಥಿಯಸ್ ಡೆಸ್ಮೆಟ್ (Mattias Desmet) ಅವರು ಈಗ ಇಪ್ಪತ್ತೊಂದನೇ ಶತಮಾನದ ವ್ಯಾಪಕ ಸರ್ವಾಧಿಪತ್ಯಗಳಿಗೆ ಒಂದು ವಿವರಣೆಯನ್ನು ಕಂಡುಕೊಂಡಿದ್ದಾರೆ. ಇತ್ತೀಚೆಗೆ ಪ್ರಕಟವಾದ, ಈಗ ಇಂಗ್ಲಿಷ್ ಅನುವಾದದಲ್ಲಿ ಲಭ್ಯವಿರುವ ಪುಸ್ತಕ ’ದಿ ಸೈಕಾಲಜಿ ಆಫ್ ಟೊಟಾಲಿಟೇರಿಯನಿಸಂ’ನಲ್ಲಿ ಅವರು, ಪ್ರಪಂಚದಾದ್ಯಂತ ಜನರು- ಚೇತರಿಸಲಾಗದ ಏಕಾಂಗಿತನದಿಂದ ಬಳಲುತ್ತಿದ್ದಾರೆ (ಇದು ಅರೆಂಟ್ ಅವರಿಂದ ಪಡೆದ ಒಂದು ಅಂಶ) ಮತ್ತು ಅದು ಅಪಾಯಗಳನ್ನು ಎದುರಿಸಲು ಅವರನ್ನು ಅಸಮರ್ಥರನ್ನಾಗಿಸಿದೆ ಎಂದು ಸೂಚಿಸುತ್ತಾರೆ. ಅಪಾಯವನ್ನು ತಡೆಯುವುದು ಮತ್ತು ಅಪಾಯವನ್ನು ಶಮನ ಮಾಡುವುದಕ್ಕೆ ತಹತಹಿಸುವುದು- ಅವರ ದೃಷ್ಟಿಯಲ್ಲಿ ಅತಿ ವ್ಯಾಪಕವಾಗಿ ಹರಡುತ್ತಿರುವ ಒಂದು ಗುಣಸ್ವಭಾವವಾಗಿಬಿಟ್ಟಿದೆ. ಇದನ್ನು ಅವರು ’ಇನ್ಶೂರೆನ್ಸ್ ಸಿಂಡ್ರೋಮ್’ ಎಂದು ಕರೆಯುತ್ತಾರೆ. ಇದು ಬರೇ ಜೀವ ಅಥವಾ ಆಸ್ತಿಗೆ ಮಾತ್ತವಲ್ಲ; “ವಿಮಗೂ ವಿಮೆ ಮಾಡುವುದು” ಎಂಬಂತಹ ಸಾಮಾನ್ಯ ಪ್ರವೃತ್ತಿಯಾಗಿದೆ. ಈಗ ನಾಗರಿಕರು- ತಮ್ಮ ಜೀವನ ಅಪಾಯರಹಿತವಾಗಿರುವಂತೆ ಮಾಡಲು ಪ್ರಭುತ್ವವು ತಮ್ಮ ಮೇಲೆ ನಿಯಂತ್ರಣಗಳನ್ನು ಹೇರುವುದನ್ನು ಎದುರುನೋಡುತ್ತಾರೆ ಎಂದವರು ವಾದಿಸುತ್ತಾರೆ. ಇಂಥ ಒಂದು ಪರಿಸ್ಥಿತಿಯಲ್ಲಿ ಒಬ್ಬ ಚತುರ ರಾಜಕಾರಣಿಯು ಮೊದಲಿಗೆ ಅನಾಮಿಕವಾದ ಶತ್ರುಗಳ (ಭಯೋತ್ಪಾದಕರು, ಅನ್ಯಗ್ರಹ ಜೀವಿಗಳು ಮತ್ತೀಗ ವೈರಸ್ ಕೂಡಾ) ಭಯ ಹುಟ್ಟಿಸಿ, ಮತ್ತು ನಂತರ ಕಠಿಣವಾದ ನಿಯಂತ್ರಣಗಳನ್ನು ಹೇರುವುದರ ಮೂಲಕ ನಾಗರಿಕರಿಗೆ ಈ ಕಾಲ್ಪನಿಕ ಶತ್ರುಗಳ ವಿರುದ್ಧ ರಕ್ಷಣೆಯ ಭರವಸೆ ನೀಡಿ, ತ್ವರಿತವಾಗಿ ಮೇಲೇರುತ್ತಾನೆ. ಈ ಪ್ರಕ್ರಿಯೆಯಲ್ಲಿ ಖಾಸಗಿತನ, ಸ್ವಾಯತ್ತತೆ, ವ್ಯಕ್ತಿಗಳ ಮಾನಸಿಕ ಸ್ವಸ್ಥತೆ ಕೂಡಾ ಬಲಿಪಶುಗಳಾಗುತ್ತವೆ. ಆಗ ಪ್ರಭುತ್ವವನ್ನು ವ್ಯಕ್ತಿಗಳ ಯಾವುದೇ ಸಾಂಪ್ರದಾಯಿಕ ಹಕ್ಕುಗಳಿಗಿಂತ ಹೆಚ್ಚು ಮಹತ್ವದ್ದು ಎಂಬುದಾಗಿ ನೋಡಲಾಗುತ್ತದೆ.

ಇದನ್ನೂ ಓದಿ: ಕ್ರಿಮಿನಲ್ ಆರೋಪ ಎದುರಿಸುತ್ತಿರುವ ಟ್ರಂಪ್

ಇಪ್ಪತ್ತೊಂದನೇ ಶತಮಾನದ ಬ್ರಾಂಡಿನ ಸರ್ವಾಧಿಪತ್ಯವು ಬಹುಸಂಖ್ಯಾತರನ್ನು ರಕ್ಷಿಸುವ ಹೆಸರಿನಲ್ಲಿ ಜನತೆಯ ಮೇಲೆ ನಿಯಂತ್ರಣ ಸಾಧಿಸುತ್ತದೆ. ಅದು ಜೊತೆಗೆಯೇ ಅಲ್ಪಸಂಖ್ಯಾತರ ರಾಕ್ಷಸೀಕರಣ ಕೂಡಾ ಮಾಡುತ್ತದೆ. ಕೊರೊನಾ ಮಹಾಮಾರಿ ಮತ್ತು ಆಗ ವಿವಿಧ ದೇಶಗಳಲ್ಲಿ ಹೇರಲಾದ ನಿಯಂತ್ರಣಗಳನ್ನು ಚರ್ಚಿಸುವ ಮೂಲಕ ಡೆಸ್ಮೆಟ್ ಅವರು, ಹೇಗೆ ಅಪಾಯಗಳ ಪರಿಹಾರ, ತಡೆ, ಶಮನಕ್ಕಾಗಿ ಸಾಮಾಜಿಕ ಮತ್ತು ರಾಜಕೀಯವಾಗಿ ತೆತ್ತಬೇಕಾದ ಬೆಲೆ – ಜನರು ಸ್ವಂತವಾಗಿ ಈ ಅಪಾಯಗಳನ್ನು ಎದುರಿಸಬೇಕಾಗಿದ್ದಲ್ಲಿ ತೆತ್ತಬೇಕಿದ್ದ ಬೆಲೆಗಿಂತ ಹೆಚ್ಚಾಗಿರುತ್ತದೆ ಎಂಬುದನ್ನು ತೋರಿಸಿಕೊಡುತ್ತಾರೆ.

ಮೆಥಿಯಸ್ ಡೆಸ್ಮೆಟ್

ಸಂಕ್ಷಿಪ್ತವಾಗಿ, ಇಪ್ಪತ್ತನೇ ಶತಮಾನದ ಸರ್ವಾಧಿಪತ್ಯವು ತಥಾಕಥಿತ ಐತಿಹಾಸಿಕ ಅನ್ಯಾಯದ ಗ್ರಹಿಕೆಯಿಂದ ಬೆಳೆದು ಬಂದಿದ್ದರೆ, ಅದರ ಇಪ್ಪತ್ತೊಂದನೇ ಶತಮಾನದ ಆವೃತ್ತಿಯು- ಜನರ ಪ್ರತ್ಯೇಕೀಕರಣದ ಗ್ರಹಿಕೆ, ಭಯ ಮತ್ತು ಅಪಾಯಗಳನ್ನು ಎದುರಿಸಲು ಅವರ ತೀವ್ರ ಹಿಂಜರಿಕೆಗಳಿಂದ ಹುಟ್ಟಿಕೊಂಡಿದೆ.

ಕಳೆದ ಶತಮಾನದ ಸರ್ವಾಧಿಕಾರಿಗಳು ಕಾರಣವಾದ ಹಿಂಸೆಯು ಕಣ್ಣಿಗೆ ಹೆಚ್ಚು ಕಾಣುವಂತದ್ದೂ, ಬಣ್ಣದಲ್ಲಿ ಹೆಚ್ಚು ರಕ್ತಕೆಂಪೂ ಆಗಿತ್ತು. ಆದರೆ, ಇಪ್ಪತ್ತೊಂದನೇ ಶತಮಾನದ ಪರಮೋಚ್ಚ ನಾಯಕರು ಛೂಬಿಟ್ಟಿರುವ ಹಿಂಸಾಚಾರವು ಕೇವಲ ರಕ್ತಸಿಕ್ತವಾಗಿರುವುದಲ್ಲ. ಅದು ತಂತ್ರಜ್ಞ (technocratic) ಪ್ರಭುತ್ವದ ಕ್ರೂರವಾದ ನಿಯಂತ್ರಣಗಳನ್ನೂ ಹುಟ್ಟುಹಾಕಿದೆ. ಮತ್ತು ಅದು ದೊಡ್ಡ ಪ್ರಮಾಣದ ಕಲ್ಪಿತ (ಸುಳ್ಳು) ಮಾಹಿತಿಯನ್ನು ಉತ್ಪಾದಿಸುವ ಮೂಲಕ ಸಮರ್ಥನೆಯನ್ನು ಕಂಡುಕೊಳ್ಳುತ್ತಿದೆ.

ನಾವು ಇಪ್ಪತ್ತೊಂದನೇ ಶತಮಾನದ ಮೊದಲ ಕಾಲು ಭಾಗವನ್ನು ಪೂರೈಸುವುದಕ್ಕೆ ಹೆಚ್ಚೇನೂ ದೂರದಲ್ಲಿಲ್ಲ. ಹಿಂದಿನ ಎಲ್ಲಾ ಆಡಳಿತಗಳಂತೆ, ಭಾರತದಲ್ಲಿ ಈಗಿರುವ ಆಡಳಿತವೂ ಇತಿಹಾಸದ ಕತೆಯಾಗಲಿದೆ ಎಂದು ನಮಗೆ ಗೊತ್ತಿದೆ. ಆದರೆ, ಇದು ನಿರ್ದಿಷ್ಟವಾಗಿ ಯಾವಾಗ ಅಥವಾ ಎಷ್ಟು ಬೇಗನೇ ಸಂಭವಿಸಬಹುದು ಎಂದು ನಮಗೆ ಗೊತ್ತಿಲ್ಲ ಎಂಬುದು ನಿಜ. ಆದರೆ, ಅದು ಮುಗಿದಾಗ ವಿದ್ವಾಂಸರು ಮತ್ತು ಇತಿಹಾಸಕಾರರು 2014ರಿಂದ ಭಾರತವು ಎದುರಿಸಿದ ಸರ್ವಾಧಿಪತ್ಯದ ಉಗಮ ಮತ್ತು ಅದರ ಸ್ಪಷ್ಟವಾದ ಗುಣಸ್ವಭಾವಗಳನ್ನು ಕುರಿತು ಚಿಂತನೆ ಮಾಡಬೇಕು. ಆಗ ಅವರು ಭಾರತದ ಸರ್ವಾಧಿಪತ್ಯದ ತಳಿಯು ಇಪ್ಪತ್ತನೇ ಶತಮಾನದ ಸರ್ವಾಧಿಪತ್ಯ ಮತ್ತು ಇಪ್ಪತ್ತೊಂದನೇ ಶತಮಾನದ ಸರ್ವಾಧಿಪತ್ಯಗಳ ವಿಚಿತ್ರ ಮಿಶ್ರಣವಾಗಿರುವುದನ್ನು ಕಂಡುಕೊಳ್ಳುವ ಹೆಚ್ಚಿನ ಸಾಧ್ಯತೆಯಿದೆ.

ಭಾರತದಲ್ಲಿ ಜೀವನ ಮತ್ತು ಅಭಿವ್ಯಕ್ತಿಯ ಪ್ರತಿಯೊಂದು ರೂಪದಲ್ಲಿ- ಹಲವು ಶತಮಾನಗಳು ಜೊತೆಯಾಗಿ ಬದುಕಿವೆ. ಈ ಹಾದಿಯಲ್ಲಿ ನಾವು ದಬ್ಬಾಳಿಕೆ, ಪಿತೃಪ್ರಧಾನತೆ, ತಾರತಮ್ಯ ಮತ್ತು ಸರ್ವಾಧಿಕಾರಗಳನ್ನು ಎದುರಿಸಿದ್ದೇವೆ. ಅರೆಂಟ್ ಮತ್ತು ಡಿಸ್ಮೆಟ್ ಅವರ ಕೃತಿಗಳು- ಭಾರತವನ್ನು ಪ್ರಜಾಪ್ರಭುತ್ವದ ಮಾತೆ ಎಂದು ಹೇಳಿಕೊಳ್ಳುವವರು, ತಾಯಿ ಮತ್ತು ಮಗಳನ್ನು ಭಯ ಮತ್ತು ಕಡು ದುಃಖದಲ್ಲಿ ನಿಲ್ಲುವಂತೆ ಮಾಡಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಮಗೆ ನೆರವಾಗಬಹುದು.

ಕನ್ನಡಕ್ಕೆ: ನಿಖಿಲ್ ಕೋಲ್ಪೆ

ಪ್ರೊ. ಜಿ ಎನ್ ದೇವಿ

ಜಿ.ಎನ್. ದೇವಿ
ಜಿ.ಎನ್. ದೇವಿಯವರು ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್‌ನ- ನ್ಯಾಷನಲ್ ಸೆಂಟರ್ ಫಾರ್ ಬಯಾಲಾಜಿಕಲ್ ಸೈನ್ಸಸ್‌ನ ಒಬೈದ್ ಸಿದ್ದಿಕಿ ಪೀಠದ ಪ್ರಾಧ್ಯಾಪಕರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರಾವಳಿ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ

ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಕರಾವಳಿ ವ್ಯಾಪ್ತಿಯ ಬಂದರುಗಳು, ಮೀನು ಮಾರುಕಟ್ಟೆಗಳು, ಬ್ರೇಕ್‌ವಾಟರ್‌ಗಳು ಹಾಗೂ ಜೆಟ್ಟಿಗಳಿಗೆ...

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...