ಬೆಂಗಳೂರಿನ ಅಪಾರ್ಟ್ಮೆಂಟ್ ನಿವಾಸಿಯೊಬ್ಬರು ಮಹಿಳಾ ಸೆಕ್ಯುರಿಟಿ ಗಾರ್ಡ್ಗೆ ಈಜುಕೊಳದ ಕೊಳಚೆ ನೀರು ಕುಡಿಯುವಂತೆ ಒತ್ತಾಯಿಸಿ ಹಿಂಸೆ ನೀಡಿದ ಅಮಾನವೀಯ ಘಟನೆ ನಡೆದಿದೆ. ಈ ಘಟನೆಯಿಂದ ನೊಂದ ಮಹಿಳೆಯು ಕೆಲಸ ತೊರೆದಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ.
ಖಾಸಗಿ ಕನ್ಸಲ್ಟಂಟ್ ಕಂಪನಿ ಮೂಲಕ ಸೆಕ್ಯುರಿಟಿ ಗಾರ್ಡ್ ಕೆಲಸಕ್ಕೆ ಸೇರಿದ 25 ವರ್ಷದ ಮಹಿಳೆಯೊಬ್ಬರು ಜೂನ್ 14ರಂದು ಬೊಮ್ಮನಹಳ್ಳಿಯ ದೇವರಚಿಕ್ಕನಹಳ್ಳಿ ರಸ್ತೆಯಲ್ಲಿರುವ ಅಪಾರ್ಟ್ಮೆಂಟ್ನಲ್ಲಿ ಸೆಕ್ಯುರಿಟಿ ಗಾರ್ಡ್ ಕೆಲಸ ಮಾಡುತ್ತಿರುತ್ತಾರೆ. ಈ ವೇಳೆ, ಅಪಾರ್ಟ್ಮೆಂಟ್ ಈಜುಕೊಳದಲ್ಲಿ ಸ್ನಾನ ಮಾಡಲು ಬಂದ ಅಪಾರ್ಟ್ಮೆಂಟ್ನ ಆಕಾಶ್ ಎಂಬ ನಿವಾಸಿಯೊಬ್ಬರು ಈಜುಕೊಳದಲ್ಲಿರುವ ಗಲೀಜು ನೀರು ನೋಡಿ ಕುಪಿತಗೊಂಡು ಅದೇ ನೀರನ್ನು ಬಾಟಲಿಯಲ್ಲಿ ಹಿಡಿದು ಕುಡಿಸಿಲು ಒತ್ತಾಯಿಸಿದ ಎಂದು ಆರೋಪಿಸಲಾಗಿದೆ.
ಈ ವೇಳೆ, ಮಹಿಳೆ ತಾನು ಸೆಕ್ಯೂರಿಟಿ ಡ್ಯೂಟಿಯಲ್ಲಿರುವುದಾಗಿ ಹಾಗೂ ಈಜುಕೊಳದ ನಿರ್ವಹಣೆಗೂ ತನಗೂ ಸಂಬಂಧವಿಲ್ಲ ಎಂದು ತಿಳಿಸಿದರೂ ಕೂಡ ಮಹಿಳೆಯನ್ನು ಅಪಾರ್ಟ್ಮೆಂಟ್ ನಿವಾಸಿಯೊಬ್ಬ ಬಲವಂತವಾಗಿ ಹಿಡಿದುಕೊಂಡು ನೀರು ಕುಡಿಸಲು ಮುಂದಾದರು ಎಂದು ಆರೋಪಿಸಿದ್ದಾರೆ.
ಈ ಅವಮಾನ ತಾಳಲಾರದೆ ಮಹಿಳೆಯು ಕೆಲಸ ತೊರೆದಿದ್ದಾರೆ. ಆರೋಪಿ ಆಕಾಶ್ ಎಂಬುವವರ ವಿರುದ್ಧ ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಸೋಮವಾರ ದೂರು ದಾಖಲಿಸಿದ್ದಾರೆ.
“ಜೂನ್ 14 ರಂದು ಬೆಳಗ್ಗೆ 11.30 ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಈಜುಕೊಳದ ಗೇಟ್ ಅನ್ನು ಮುಚ್ಚಿ ಆ ಸ್ಥಳದಿಂದ ನಾನು ಹೊರಬರದಂತೆ ತಡೆದಿದ್ದಾರೆ. ವಿನಾಕಾರಣ ನನ್ನನ್ನು ಅವಮಾನಿಸಿದ್ದಾರೆ” ಎಂದು ಪೊಲೀಸ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸಂತ್ರಸ್ತೆ ಭದ್ರತಾ ಮೇಲ್ವಿಚಾರಕ ಅನಿಕೇಶ್ ಚಕ್ರವರ್ತಿ ಮತ್ತು ನಿರ್ವಹಣಾ ವ್ಯವಸ್ಥಾಪಕ ಮಲ್ಲಿಕಾರ್ಜುನ್ ಅವರಿಗೆ ದೂರು ನೀಡಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
“ತನಿಖಾಧಿಕಾರಿಯ ಮುಂದೆ ಹಾಜರಾಗುವಂತೆ ಆರೋಪಿಗೆ ನೋಟಿಸ್ ಕಳುಹಿಸಲಾಗಿದೆ. ನಿರ್ವಹಣಾ ವ್ಯವಸ್ಥಾಪಕರಿಗೆ ವಿಷಯ ತಿಳಿಸಲಾಗಿದೆ. ಅವರು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು” ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ಇದನ್ನೂ ಓದಿ; ಗಂಗಾವತಿ: ಹೆರಿಗೆ ಮಾಡುವುದಕ್ಕೆ ಲಂಚ, ಲೈಂಗಿಕ ಕಿರುಕುಳದ ಆರೋಪ; ಕನಿಷ್ಟ ತನಿಖೆಯಾದರೂ ಇಲ್ಲವೇಕೆ?


