ಕಾಂಗ್ರೆಸ್ ಗ್ಯಾರಂಟಿಗಳಲ್ಲಿ ಒಂದಾದ 1.28 ಕೋಟಿ ಕುಟುಂಬಗಳಿಗೆ ಪ್ರತಿ ತಿಂಗಳು 2,000 ರೂ ಹಣ ಸಂದಾಯ ಮಾಡುವ ಗೃಹಲಕ್ಷ್ಮಿ ಯೋಜನೆಗೆ ಜುಲೈ 19 ರಿಂದ ನೋಂದಣಿ ಆರಂಭವಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಡಿತರ ಚೀಟಿಯಲ್ಲಿ ಗುರುತಿಸಿರುವ ಮನೆ ಯಜಮಾನಿಗೆ ಹಣ ಸಂದಾಯ ಆಗಲಿದೆ. ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರ, ಕರ್ನಾಟಕ ಒನ್, ಬಿಬಿಎಂಪಿ ಕಚೇರಿಗಳಲ್ಲಿ ನೋಂದಣಿ ಮಾಡಿಕೊಳ್ಳಬಹುದು. ನೋಂದಣಿಗೆ ಯಾವುದೇ ಕಾಲಮಿತಿ ಇರುವುದಿಲ್ಲ. ಆಧಾರ್ ಲಿಂಕ್ ಆಗದ ಪಾಸ್ ಬುಕ್ ಗೂ ಹಣ ನೀಡಲಾಗುತ್ತದೆ. ಇದಕ್ಕಾಗಿ ಪಾಸ್ ಬುಕ್ ವೆರಿಫಿಕೇಷನ್ ನಡೆಸಲಾಗುತ್ತದೆ. ತಹಶೀಲ್ದಾರ್ ಇದರ ಪರಿಶೀಲನೆ ನಡೆಸುತ್ತಾರೆ” ಎಂದು ಮಾಹಿತಿ ನೀಡಿದರು.
1.28 ಕೋಟಿ ಕುಟುಂಬಗಳಿಗೆ ಹಣ ಸಂದಾಯವಾಗಲಿದೆ. ಎಸ್ ಎಂ ಎಸ್ ಮೂಲಕ ಹಣ ಸಂದಾಯಕ್ಕೂ ಮೊದಲು ಮಾಹಿತಿ ನೀಡಲಾಗುತ್ತದೆ. ನಿಗದಿತ ಸಮಯ ಮೀರಿದ ಫಲಾನುಭವಿಗಳು ಸಂಜೆ 5 ರ ಬಳಿಕ ಹಣ ಪಡೆದುಕೊಳ್ಳಬಹುದು.
ಪ್ರತಿ ಫಲಾನುಭವಿಯ ನೋಂದಾವಣಿಗೆ ನಿಗದಿ ಮಾಡಿರುವ ದಿನಾಂಕ ಸಮಯ ಮತ್ತು ಸ್ಥಳದ ಮಾಹಿತಿ ಪಡೆಯಲು ಕ್ರಮ ವಹಿಸಲಾಗುವುದು. 1902 ಸಂಖ್ಯೆಗೆ ಕರೆ ಮಾಡಿ ಅಥವಾ 8147500500 ಸಂಖ್ಯೆಗೆ ಎಸ್ಎಂಎಸ್ ಮಾಡಿ ಮಾಹಿತಿ ಪಡೆಯಬಹುದು ಎಂದರು.
ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಲು ರಾಷ್ಟ್ರೀಯ ನಾಯಕರನ್ನು ಆಹ್ವಾನ ಮಾಡಲಾಗಿದೆ. ಈ ಸಂಬಂಧ ರಾಷ್ಟ್ರೀಯ ನಾಯಕರಿಗೆ ಸಿಎಂ ಸಿದ್ದರಾಮಯ್ಯ ಅವರು ಪತ್ರ ಬರೆದಿದ್ದಾರೆ. ಆಗಸ್ಟ್ 16 ಅಥವಾ 17ರಂದು ಯಜಮಾನಿ ಖಾತೆಗೆ ಹಣ ಹಾಕುತ್ತೇವೆ ಎಂದು ತಿಳಿಸಿದರು.
ಆದಾಯ ತೆರಿಗೆ ಪಾವತಿ ವ್ಯಾಪ್ತಿ ಹೊರಗಿರುವ ಸರ್ಕಾರಿ ಪಿಂಚಣಿದಾರರು, ಕುಟುಂಬ ಸದಸ್ಯರಿಗೂ ಗೃಹಲಕ್ಷ್ಮಿ ಯೋಜನೆ ದೊರೆಯಲಿದೆ. ಆದರೆ ಫಲಾನುಭವಿ ಮಹಿಳೆ ಅಥವಾ ಆಕೆಯ ಪತಿ ಆದಾಯ ತೆರಿಗೆ ಪಾವತಿದಾರರಾಗಿದ್ದರೆ ಅವರಿಗೆ ಯೋಜನೆಯ ಲಾಭ ಸಿಗುವುದಿಲ್ಲ ಎಂದು ಹೇಳಿದರು.
ಪ್ರಜಾಪ್ರತಿನಿಧಿ (ಸರ್ಕಾರದಿಂದ ಗುರುತಿಸಲ್ಪಟ್ಟ ಸ್ವಯಂಸೇವಕರು) ಸೇವಕರಿಂದಲೂ ನೋಂದಣಿ ಕಾರ್ಯ ನಡೆಯಲಿದೆ. ನೋಂದಣಿಗೆ ಯಾವುದೇ ಹಣ ಪಾವತಿ ಮಾಡುವಂತಿಲ್ಲ ಎಂದು ಅವರು ಹೇಳಿದರು.
ಕಾಂಗ್ರೆಸ್ನ 5 ಗ್ಯಾರಂಟಿಗಳಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಒದಗಿಸುವ ಶಕ್ತಿ ಯೋಜನೆ, 10 ಕೆಜಿ ಅಕ್ಕಿ ನೀಡುವ ಅನ್ನಭಾಗ್ಯ ಯೋಜನೆ ಮತ್ತು 200 ಯೂನಿಟ್ವರೆಗೂ ಉಚಿತ ವಿದ್ಯುತ್ ನೀಡುವ ಗೃಹ ಜ್ಯೋತಿ ಯೋಜನೆಗಳು ಜಾರಿಯಾಗಿವೆ. ನಾಲ್ಕನೇಯ ಯೋಜನೆಯಾಗ ಗೃಹಲಕ್ಷ್ಮಿ ಯೋಜನೆ ಆಗಸ್ಟ್ನಲ್ಲಿ ಜಾರಿಯಾದರೆ, ನಿರುದ್ಯೋಗಿ ಪದವೀಧರರಿಗೆ ನೀಡುವ ಮಾಸಿಕ ನಿರುದ್ಯೋಗ ಭತ್ಯೆಯ ಯೋಜನೆ ಕೂಡ ಶೀಘ್ರದಲ್ಲಿಯೇ ಆರಂಭವಾಗಲಿದೆ.