ಮಣಿಪುರ ವಿಚಾರಕ್ಕೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿನಲ್ಲಿ ಮೌನವಾಗಿರಲು ನಿರ್ಧರಿಸಿದ್ದು, ಇದಕ್ಕಾಗಿ ಅವಿಶ್ವಾಸ ಗೊತ್ತುವಳಿ ಮಂಡಿಸುವುದು ನಮಗೆ ಅನಿವಾರ್ಯವಾಗಿತ್ತು ಎಂದು ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಹೇಳಿದ್ದಾರೆ.
ಮಂಗಳವಾರ ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯ ವೇಳೆ ಮಾತನಾಡಿದ ಕಾಂಗ್ರೆಸ್ ಸಂಸದ ಗೌರವ್ ಗೊಗೋಯ್, ಮಣಿಪುರ ವಿಷಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು “ಮೌನವನ್ನು ಮುರಿಯಲು ವಿರೋಧ ಪಕ್ಷದ ಐಎನ್ ಡಿಐ(INDIA) ಮೈತ್ರಿಕೂಟವು ಈ ನಿರ್ಣಯವನ್ನು ಮಂಡಿಸಿದೆ ಎಂದು ಹೇಳಿದ್ದಾರೆ.
ಮಣಿಪುರಕ್ಕೆ ನ್ಯಾಯದ ವಿಚಾರದಲ್ಲಿ ಈ ಸದನವು ಸರ್ಕಾರದಲ್ಲಿ ಅವಿಶ್ವಾಸವನ್ನು ವ್ಯಕ್ತಪಡಿಸುತ್ತದೆ ಎಂಬ ಪ್ರಸ್ತಾವನೆಯನ್ನು ನಾನು ಮಂಡಿಸುತ್ತೇನೆ. ಮಣಿಪುರವು ನ್ಯಾಯವನ್ನು ಬಯಸುತ್ತದೆ ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.
ಲೋಕಸಭೆಯಲ್ಲಿ ಮಾತನಾಡಿದ ಗೊಗೊಯ್, ಪ್ರತಿಪಕ್ಷ ಐ.ಎನ್.ಡಿ.ಐ.ಎ.ಮೈತ್ರಿಕೂಟ ಮಣಿಪುರ ರಾಜ್ಯಕ್ಕೆ ನ್ಯಾಯ ಬೇಕು ಎಂದು ಅವಿಶ್ವಾಸ ನಿರ್ಣಯ ಮಂಡಿಸಿದೆ.ನಮ್ಮಲ್ಲಿ ಅವರಿಗೆ ಮೂರು ಪ್ರಶ್ನೆಗಳಿವೆ,ಪ್ರಧಾನಿ ಇಲ್ಲಿಯವರೆಗೆ ಮಣಿಪುರಕ್ಕೆ ಏಕೆ ಭೇಟಿ ನೀಡಲಿಲ್ಲ? ಪ್ರಧಾನಿ ಮಣಿಪುರದ ಬಗ್ಗೆ ಮಾತನಾಡಲು ಸುಮಾರು 80 ದಿನಗಳು ಏಕೆ ಬೇಕಾಯಿತು? ಮಣಿಪುರಕ್ಕೆ ಸಂಬಂಧಿಸಿ ಕೇವಲ 30 ಸೆಕೆಂಡುಗಳು ಮಾತ್ರ ಮಾತನಾಡಿದ್ದೇಕೆ? ಮಣಿಪುರದ ಮುಖ್ಯಮಂತ್ರಿಯನ್ನು ಇಲ್ಲಿಯವರೆಗೆ ಏಕೆ ವಜಾ ಮಾಡಿಲ್ಲ?ಎಂದು ಗೊಗೊಯ್ ಪ್ರಶ್ನಿಸಿದ್ದಾರೆ.
ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದ ಬಳಿಕ ನೂರಾರು ಜನರು ಸಾವನ್ನಪ್ಪಿದ್ದು, ಮಣಿಪುರದಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಹೇಳಿದ್ದಾರೆ.ಪ್ರಧಾನಿ ಅವರು ಡಬಲ್ ಇಂಜಿನ್ ಸರ್ಕಾರ, ಮಣಿಪುರದಲ್ಲಿ ವಿಫಲವಾಗಿದೆ ಎಂದು ಒಪ್ಪಿಕೊಳ್ಳಬೇಕು. ಮಣಿಪುರದಲ್ಲಿ 150 ಜನರು ಸಾವನ್ನಪ್ಪಿದರು, ಸುಮಾರು 5,000 ಮನೆಗಳಿಗೆ ಬೆಂಕಿ ಹಚ್ಚಲಾಯಿತು, ಸುಮಾರು 60,000 ಜನರು ಪರಿಹಾರ ಶಿಬಿರಗಳಲ್ಲಿದ್ದಾರೆ ಮತ್ತು ಸುಮಾರು 6,500 ಎಫ್ಐಆರ್ಗಳನ್ನು ದಾಖಲಿಸಲಾಗಿದೆ ಎಂದು ಗೊಗೊಯ್ ಹೇಳಿದರು.
ಇದನ್ನು ಓದಿ: ಸಚಿವ ಚೆಲುವರಾಯಸ್ವಾಮಿ ವಿರುದ್ಧ ಅಧಿಕಾರಿಗಳ ಪತ್ರ ಪ್ರಕರಣ: ಸಿಐಡಿ ತನಿಖೆಗೆ ಸಿಎಂ ಆದೇಶ