Homeಪುಸ್ತಕ ವಿಮರ್ಶೆ2023ರ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ ಪಡೆದ ’ಫೂ ಮತ್ತು ಇತರ ಕಥೆಗಳು’; ಇಕ್ಕಳಗಳಲ್ಲಿ...

2023ರ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ ಪಡೆದ ’ಫೂ ಮತ್ತು ಇತರ ಕಥೆಗಳು’; ಇಕ್ಕಳಗಳಲ್ಲಿ ಸಿಕ್ಕಿ ಹಾಕಿಕೊಳ್ಳದೆ ಹರಿವ ನೀರಿನಂತಿರುವ ಕಥೆಗಳು

- Advertisement -
- Advertisement -

ಕಥಾ ಸಂಕಲನವೊಂದರೆ ವಿಚಿತ್ರವೆನಿಸುವ ಶೀರ್ಷಿಕೆ ’ಫೂ’; ಅದೇ ಶೀರ್ಷಿಕೆಯ ಮೊದಲ ಕಥೆ ಓದಿದ ನಂತರ ಅದು ವಿಶಿಷ್ಟವಾಗಿ ಮನದಲ್ಲಿ ಅಚ್ಚಾಗುತ್ತದೆ. ಇಲ್ಲಿ ಒಟ್ಟು ಏಳು ಕಥೆಗಳಿವೆ. ’ಫೂ’ ಕಥೆಯ ಜಯತ್ತೆಯೊಳಗೆ ತಾಯಿ ಜೀವವೊಂದು ವ್ಯವಸ್ಥೆಯ ಸಮ್ಮತಿಗಾಗಿ ಬಿಟ್ಟಗಣ್ಣಿನಲ್ಲೇ ಕಾಯುತ್ತಿರುವಂತಿದೆ. ಹೆಣ್ಣು ಹೆಣ್ತನ ಚೆಲುವುಗಳ ಬಗ್ಗೆ ಬೇರುಬಿಟ್ಟ ಸ್ಥಾಪಿತ ಸಾಮಾಜಿಕ ಗ್ರಹಿಕೆಗಳು, ಕೌಟುಂಬಿಕ ಸಂಬಂಧಗಳೊಳಗಿನ ಮಮಕಾರಗಳನ್ನೂ ಮುರುಟಿ ಹೋಗುವಂತೆ ಮಾಡುವುದು ಈ ಕತೆ ಓದುಗರ ಬಿಚ್ಚಿಡುವ ದುರಂತ. ಇದು ಇಂಡಿಯನ್ ಅಮೆರಿಕನ್ ಕಥೆಗಾರ್ತಿ ಜುಂಪಾ ಲಾಹಿರಿಯ ’ಟ್ರೀಟ್ಮೆಂಟ್ ಆಫ್ ಬೀಬಿ ಹಲ್ದಾರ್’ ಕತೆಯನ್ನು ನೆನಪಿಸುತ್ತದೆ. ಫೂ ಕತೆಯ ಕಸುಬುದಾರಿಕೆ ಏನೆಂದರೆ ಜಯತ್ತೆಯ ಅವಿವಾಹಿತ ಬದುಕಿನ ದೌರ್ಭಾಗ್ಯವನ್ನು ಮಗುವಿನ ಕಣ್ಣುನೋಟದಲ್ಲಿ ನಿರೂಪಿಸಿ ಆಕೆಯ ಒಡಲ ಬೇಗುದಿಯನ್ನ ಮುಟ್ಟಿಯೂ ಮುಟ್ಟದೆ ಕಲೆಯಾಗಿ ಅರಳಿಸಿರುವುದು. ಮಗುವಿನ ಮುಗ್ಧ ಕಣ್ಣುಗಳ ನಿರೂಪಣೆ ಇಲ್ಲಿಯ ಕ್ರೌರ್ಯಕ್ಕೊಂದು ವಿಚಿತ್ರ ಮತ್ತು ಯಾತನದಾಯಕವಾದ ಚೆಲುವನ್ನು ತಂದಿದೆ. ಕಥೆ ಮುಗಿದ ಮೇಲೆ ಓದುಗನಿಗೆ ಜಯತ್ತೆಯ ದೈಹಿಕ ವಿರೂಪ ಮರೆಯಾಗಿ, ಮಗುವಿನೊಂದಿಗಿನ ಅವಳ ಮಧುರ ಗೆಳೆತನ ಮತ್ತು ಅತ್ತಿಗೆ ಅಣ್ಣರ ಮಾನಸಿಕ ವಿಕಾರವಷ್ಟೇ ನೆನಪಲ್ಲುಳಿಯುವುದು ಈ ಕತೆಯ ನಿರೂಪಣಾ ತಂತ್ರದ ಗೆಲುವು.

ಈ ಸಂಕಲನದುದ್ದಕ್ಕೂ ಜೀವಸೃಷ್ಟಿಯ ಭಾಗವಾಗುವ ತಾಯ್ತನದ ಹಂಬಲ ಮತ್ತು ಕಾಳಜಿ ಭಿನ್ನ ತುಯ್ತ ಸಂಕಟಗಳೊಂದಿಗೆ ಭಿನ್ನಭಿನ್ನ ರೂಪಗಳಲಿ, ಜಯತ್ತೆ, ರಂಗಮ್ಮ ಮತ್ತು ಶೈಲ್ಯಾನ ತಾಯಿಯರ ಪಾತ್ರಗಳಲ್ಲಿ ಪ್ರಕಟವಾಗಿದೆ. ’ಫೂ’ ಕಥೆಯ ಜಯತ್ತೆಯದು ಲೋಕ ನಿರ್ಮಿತ ಕಟ್ಟಳೆಗಳಿಂದ ಬೆಂದುಹೋಗುವ ದುರಂತವಾದರೆ, ಪಾತಿ ಮತ್ತು ಗೆಳೆಯನದು (’ಪಾತಿ’ಕತೆ) ಲೋಕದ ಧಾವಂತಗಳ ಗೊಡವೆಯೇ ಇಲ್ಲದೆ ಅರಳುವ ಪ್ರೇಮ ಸಂಬಂಧ. ’ಪಾತಿ’ ಕತೆ ಕೊನೆಕೊನೆಗೆ ಸಾಗಿದಂತೆ ಈ ಲೋಕ ಕಟ್ಟಿರುವ ಕಥೆಗಳಂತೆ ಕೊನೆಯಾಗಬಹುದು ಎಂಬ ಓದುಗನ ನಿರೀಕ್ಷೆಗಳನ್ನು ಲಟಲಟನೆ ಮುರಿದುಹಾಕುತ್ತದೆ. ಈ ಕಥೆಯು ಕಥಾಪ್ರಕಾರ, ಸಂಬಂಧಗಳ ಚೌಕಟ್ಟು, ಧರ್ಮಗಳ ಗೋಡೆ ಹೀಗೆ ಹಲವು ನಿಬಂಧನೆಗಳನ್ನು ಏಕಕಾಲಕ್ಕೆ ಮುರಿದುಕಟ್ಟಿದೆ. ಇದೊಂದು ಹರಿವ ನದಿ. ಫೂ ಕಥೆ ಎತ್ತುವ ಕೆಲವು ಪ್ರಶ್ನೆಗಳಿಗೆ ಇಲ್ಲಿ ಉತ್ತರಗಳನ್ನು ಕಾಣಬಹುದು. ಸಾಂಸ್ಕೃತಿಕ ಬಹುರೂಪತೆಯ ಮುಖ್ಯಚಹರೆಯಾಗಿ ಇದು ತೋರುತ್ತಿದೆ.

’ತೇರು ಸಾಗಿತಮ್ಮ ನೋಡಿರೆ’ ಕಥೆ ವಿನೋದಮಯವೆಂಬಂತೆ ಸಾಗುತ್ತಲೇ ಮುಖ್ಯ ತಿರುವುಗಳಲ್ಲಿ ಉತ್ತರ ಕರ್ನಾಟಕದ ಭಜನೆ ತತ್ವಪದಗಳಲ್ಲಿ ಕಾಣಬಹುದಾದ ಬದುಕಿನ ಕ್ಷಣಿಕತೆ ಮತ್ತು ಅರ್ಥದ ಹುಡುಕಾಟದ ಮಿಂಚುಗಳನ್ನು ಕಾಣಿಸುತ್ತದೆ. ನಮ್ಮ ಬದುಕಿಗೆ ಕೈ ದೀವಿಗೆಗಳನ್ನು ನೀಡಿ ಹೋಗಿರುವ ತತ್ವಪದಕಾರರ ಸೂಕ್ಷ್ಮಮತಿತ್ವ ಮತ್ತು ಬದುಕಿನ ದರ್ಶನ ಊರ ಜನರ ದೃಷ್ಟಿಯಲ್ಲಿ ಹುಚ್ಚನಾಗಿರುವ ಶೈಲ್ಯಾನಲ್ಲಿ ಕಾಣುತ್ತದೆ. ಅತಿ ಲೌಕಿಕತೆಯ ಜಂಜಾಟದಲ್ಲಿ ತೀಡಲ್ಪಟ್ಟ ಊರ ಜಡಮತಿಗಳ ಕಣ್ಣಿಗೆ ಚಿಕ್ಕ ವಯಸ್ಸಿನ ಶೈಲ್ಯಾನಲ್ಲಿ ಅದು ಕಾಣುವುದು ಕಷ್ಟ.

’ವಜ್ರಮುನಿ’ ಕತೆಯ ಭಗವಂತಪ್ಪನೆಂಬ ಕೋಪಿಷ್ಟ ತಂದೆಗೆ ಇಸ್ಪೀಟ್ ಆಟದ ಹುಚ್ಚು. ಹೊಲ ದನ ಕರುಗಳನ್ನೆಲ್ಲ ಅದಕ್ಕಾಗಿ ಮಾರಿ ಮುಗಿಸಿದ ನಂತರ ಆತನಲ್ಲಿ ಕಾಣುವ ಬದಲಾವಣೆ ಕುತೂಹಲಕಾರಿಯಾಗಿದೆ. ಬದುಕು ತನ್ನ ನಿಯಂತ್ರಣದಾಚೆ ಚಲಿಸಿದಾಕ್ಷಣ ಮನುಷ್ಯನ ಯಕಶ್ಚಿತತೆಯ ಅರಿವಾದಂತಿದೆ. ಬೆಂಕಿಯಂತೆ ಬಾಳಿದ ಭಗವಂತಪ್ಪನಂತ ಹಳ್ಳಿಯ ಜೀವ ಇಳಿವಯಸಿನಲ್ಲಿ ಮಾಗಿ ಬಾಗಿ ಬದುಕಿದ ಘಟನಾವಳಿಗಳು, ತನ್ನ ನಿಯಂತ್ರಣದಾಚೆ ಕಥೆಯಾಗತೊಡಗಿರುವ ಪ್ರಕ್ರಿಯೆಯನ್ನು ಧ್ಯಾನದಂತೆ ಗ್ರಹಿಸುತ್ತದೆ. ತನ್ನ ಈ ಕಥೆ ಪೂರ್ಣ ಪ್ರಮಾಣದ ಕಥೆಯಾಗುವುದು- ಈಗ ತೀರಿಹೋಗಿ ಕಥೆಯಾಗಿ ಮಾತ್ರ ಉಳಿದಿರುವ ತನ್ನ ಪೂರ್ವಜರಂತೆ- ತಾನೂ ಕೂಡ ತೀರಿಹೋದಾಗ ಎಂಬುದನ್ನರಿತ ಆತ ದುಗುಡಕ್ಕೊಳಕಾಗುತ್ತಾನೆ; ಲೋಕದ ಗೊಡವೆಯಲ್ಲಿ ತನ್ನ ಪೂರ್ವಜರ ಮತ್ತು ಸಂಗಡಿಗರ ಕಥೆಗಳೂ ತೀರಿಹೋದಾವೆಂಬ ಆತಂಕ ಬಾಧಿಸುತ್ತದೆ. ಮನುಷ್ಯರ ಒಳಗಣ್ಣೆಂಬುದು ಎಷ್ಟು ಸೂಕ್ಷ್ಮಾತಿಸೂಕ್ಷ್ಮವಲ್ಲವೇ? ಸೃಷ್ಟಿಯ ಅಗಾಧತೆಯನ್ನು ಅರಿಯಲು ಬೇಕಾದ ಕಣ್ಣಿದ್ದಾಗ ಇಂಥ ಪಾತ್ರಗಳು ಕಥೆಗಾರನಿಗೆ ಕಾಣುತ್ತವೆ. ಲೋಕದ ತಿರುಗಾಟ ಸಾಕಾಗಿ ಬೇರುಗಳನ್ನರಸಿ ಬಂದಿರುವ ಮಗ ಮತ್ತು ತನ್ನ ಪೂರ್ವಜರ ಬದುಕನ್ನ ಕಥೆಗಳಲ್ಲೇ ದರ್ಶಿಸುತ್ತಿರುವ ಭಗವಂತಪ್ಪನ ಚಿತ್ರಣ ಐರಿಷ್ ಕವಿ ಶೇಮಸ್ ಹೀನಿಯ ’ಅಗೆಯುವಿಕೆ’ (ಡಿಗ್ಗಿಂಗ್) ಕವನದ ಚಿತ್ರಣವನ್ನ ಕಣ್ಮುಂದೆ ತರುತ್ತದೆ. ತಮ್ಮ ತಿಳಿವಿನ ಮಿತಿಗಳನ್ನು ದಾಟಿಹೋಗಿ ಸೃಷ್ಟಿಯ ಅಚ್ಚರಿ ಆಘಾತಗಳನ್ನ ಬದುಕು ಕಾಣಿಸುವ ಕ್ಷಣ, ತಮ್ಮ ಬದುಕು ಕಥೆಯಾಗುತ್ತಿರುವುದರ ಅರಿವು ಮನುಷ್ಯರಲ್ಲಿ ಹುಟ್ಟುವುದನ್ನ ’ದೀಪದ ಮಲ್ಲಿ’ ಎಂಬ ಜಾನಪದ ಕಥೆಯ ಮೂಲಕ ಎ.ಕೆ. ರಾಮಾನುಜನ್ ತಮ್ಮ ಲೇಖನವೊಂದರಲ್ಲಿ (ಪ್ರತಿವ್ಯವಸ್ಥೆಯೆಡೆಗೆ..) ವಿಶ್ಲೇಷಿಸುತ್ತಾರೆ. ಭಗವಂತಪ್ಪ ಮತ್ತು ಮಗನ ನಡುವೆ ಘಟಿಸುವ ಅರಿವಿನ ವಿನಿಮಯ ರಾಮಾನುಜನ್‌ರ ವಿಶ್ಲೇಷಣೆಯನ್ನ ಇನ್ನಷ್ಟು ವಿವರಿಸುವ ರೂಪಕದಂತಿದೆ.

ಇದನ್ನೂ ಓದಿ: ’ನದಿಯೊಂದು ನಿದ್ರಿಸಿದಾಗ’: ವಿಶಿಷ್ಟ ಆಚರಣೆಗಳು, ನಂಬಿಕೆಗಳು, ಪೂರ್ವಜರ ಆರಾಧನೆಯೇ ಕಾಪಾಡುವ ಬುಡಕಟ್ಟು ಚಿತ್ರಣ

’ಕನಸಿನ ವಾಸನೆ’ ಕಥೆಯಲ್ಲಿ ದಿನಬೆಳಗಾದರೆ ಲೈಂಗಿಕ ಉನ್ಮಾದಗಳಲ್ಲಿ ತೇಲಾಡುತ್ತಿದ್ದ ಲಚುಮನಿಗೆ ರಂಗಮ್ಮ ನೀಡುವ ಕೆರದ ಏಟು ಪಾಪಪ್ರಜ್ಞೆಯಲ್ಲಿ ಅಟ್ಟಾಡಿಸುತ್ತದೆ; ಮಗುವಿನ ಮುಗ್ಧತೆಯನ್ನು ಹುಟ್ಟುಹಾಕುತ್ತದೆ. ಕೊನೆಗೆ ರಂಗಮ್ಮನ ತಾಯ್ತನ ಅವನನ್ನ ಪೊರೆಯುತ್ತದೆ. ದೇಹದ ಬಯಕೆಗಳಲ್ಲಿ ಮಿಂದೇಳುತ್ತಿದ್ದ ಲಚುಮ ಮಠಭಜನೆ ಎಂದು ಸುತ್ತಾಡುತ್ತಾ ಮಕ್ಕಳಾದಿಯಾಗಿ ಎಲ್ಲರಿಗೂ ಕೈಮುಗಿಯುತ್ತ ಅಡ್ಡಾಡುವುದನ್ನು ಕಂಡರೆ ಕೆ. ವೈ.ನಾರಾಯಣಸ್ವಾಮಿಯವರ ’ವಿನುರ ವೇಮ’ ನಾಟಕದ ವೇಮನ ಅರೆ ಕ್ಷಣ ಕಣ್ಮುಂದೆ ಬಂದುಹೋಗುತ್ತಾನೆ. ಇನ್ನೊಂದು ದಿಕ್ಕಿನಲ್ಲಿ ಸಂಸ್ಕಾರದ ಪ್ರಾಣೇಶಾಚಾರ್ಯನ ಪ್ರತಿಪಾತ್ರದಂತೆ (ತಲೆಕೆಳಗಾದ) ಕಾಣುತ್ತಾನೆ. ಓದುಗನಿಗೆ ಮಾತ್ರ ಲಚುಮ ಲಚುಮನೇ.

ಹಳ್ಳಿಯ ಕ್ಷುದ್ರರಾಜಕಾರಣ ಅಸೂಯೆ ದಾಯಾದಿತನ ಸಣ್ಣತನಗಳ ನಡುವೆ ಸತ್ತುಹೋಗುವ ಪ್ರಾಮಾಣಿಕತೆ ಮತ್ತು ಮುಗ್ಧತೆಯನ್ನು, ಅದರ ಪರಿಣಾಮವಾಗಿ ಹುಟ್ಟುವ ಸಿಟ್ಟು ವ್ಯಗ್ರತೆಯನ್ನ ’ಖತಲ್ ರಾತ್ರಿ’ ಕತೆ ಸೆರೆ ಹಿಡಿದಿದೆ. ಡಿಜಿಟಲ್ ಯುಗದ ಮೊಬೈಲ್ ಪರದೆಯ ಹೈಪರ್ ರಿಯಾಲಿಟಿಯಲ್ಲಿ ಹುಟ್ಟಿ ಸಾಯುವ ಸಂಬಂಧಗಳು, ಬೃಹತ್ ನಗರಗಳ ಬಂದಿಖಾನೆಯಂಥ ರೂಮುಗಳಲ್ಲಿ ಕಾಡುವ ಒಬ್ಬಂಟಿತನ, ಅನಾಥ ಪ್ರಜ್ಞೆಯ ಪರಿಣಾಮದಲ್ಲಿ ’ಮಿಣುಕು ಹುಳು’ ಕಥೆ ಹುಟ್ಟಿದಂತಿದೆ. ಹಳ್ಳಿಗಳಿಂದ ಬೃಹತ್ ನಗರಗಳಿಗೆ ವಲಸೆ ಹೋಗಿ ನಿರ್ಜೀವ ನೆರಳಿನಂತಾದವರ ಧಾವಂತದ ಬದುಕಿನ ಪಡಿಪಾಟಲು ಇಲ್ಲಿದೆ. ’ಜಗತ್ತು ಕೊನೆಗೊಳ್ಳುವುದು ಸ್ಫೋಟದೊಂದಿಗಲ್ಲ ಚೀತ್ಕಾರದೊಂದಿಗೆ’ ಎನ್ನುವ ಇಂಗ್ಲಿಷ್ ಕವಿ ಯೇಲಿಯಟ್‌ನ ’ಟೊಳ್ಳು ಮನುಷ್ಯರು’ (Hallow Men) ಕವನದಲ್ಲಿಯ ಚೀತ್ಕಾರಗಳು ಈ ಕಥೆಯಲ್ಲಿ ಪ್ರತಿಧ್ವನಿಸುತ್ತಿವೆ.

ಈ ಪುಸ್ತಕದಲ್ಲಿನ ಮೊದಲ ಕಥೆ (ಫೂ) ಹೆಣ್ಣೊಬ್ಬಳ ದೇಹದ ಮಿತಿಗಳು ಮತ್ತು ಅಪ್ಪಟ ಹಳ್ಳಿಯ ಸಾಮಾಜಿಕ ಕಟ್ಟುಪಾಡುಗಳು ಹುಟ್ಟಿಸುವ ದುರಂತದ ಕಥೆ. ಕೊನೆಯದು (ಮಿಣುಕುಹುಳು) ಮನಸ್ಸಿನ ನಾಗಾಲೋಟದಿಂದಾಗಿ ಹಳ್ಳಿಯಿಂದ ಹೊರಟು ಪಟ್ಟಣದಲ್ಲಿ ನೆಲೆ ನಿಲ್ಲದೇ ಸತ್ಯೋತ್ತರ ಕಾಲದ ಪಾಪಪ್ರಜ್ಞೆಯಲ್ಲಿರುವವರ ಪಡಿಪಾಟಲಿನ ಚಿತ್ರಣ. ಏಳು ಕಥೆಗಳಲ್ಲಿ ಮೊದಲನೆಯದು ಕಥೆ ಹುಟ್ಟಲು ಸಶಕ್ತವಾದ ಹಳ್ಳಿಯ ಪರಿಸರವನ್ನ ಹಿಡಿದಿದೆ. ಕೇಂದ್ರದಲ್ಲಿರುವ ಕಥೆ (ವಜ್ರಮುನಿ)- ಕಥೆಗಳು ಹುಟ್ಟುವ ಕೊನೆಗೊಳ್ಳುವ, ಕೊನೆಗೊಳ್ಳುವಾಗ ಮನುಷ್ಯನಿಗೆ ಬರುವ ದುರಂತ ಪ್ರಜ್ಞೆಯ ಜಿಜ್ಞಾಸೆಯಂತಿದೆ. ಕೊನೆಯ ಕಥೆಯಲ್ಲಿರುವುದು (ಮಿಣುಕುಹುಳು) ಅತಿ ವೇಗ ಮತ್ತು ಧಾವಂತಕ್ಕೆ ತುತ್ತಾಗಿ ಕಥೆಗಳು ಉಸಿರುಗಟ್ಟಿ ಸಾಯುವ ಬೃಹತ್ ನಗರಗಳ ಸತ್ವಹೀನ ಪರಿಸರದ ಚಿತ್ರಣ. ಹೀಗೆ ಈ ಕಥೆಗಳನ್ನು ಜೋಡಿಸಿರುವ ಕ್ರಮದಲ್ಲಿ ಒಂದು ಬಂಧ ಮತ್ತು ಶಿಲ್ಪ ಮೂಡಿದೆ. ಹಳ್ಳಿಯ ಸಾಮಾಜಿಕ ಕೇಡುಗಳಿಗೆ ಪಟ್ಟಣದ ಬದುಕು ಉತ್ತರವಲ್ಲವೆಂಬ ಹೊಳಹು ಇಲ್ಲಿದೆ. ನಡುವೆ ಬರುವ ಕಥೆಗಳಲ್ಲಿಯ ಹುಚ್ಚು ಶೈಲ್ಯಾ, ಭಗವಂತಪ್ಪ, ಪಾತಿ, ಪಂಪ್ ಲಚುಮ ’ಅರಿವೆಂಬುದು ಸ್ಥಿರವಲ್ಲ ಮನುಜ, ಅದು ಹರಿವು’ ಎಂಬ ಬೆಳಕಿನ ಹಾಡನ್ನು ಹಾಡುತ್ತಿರುವಂತಿದೆ.

ಕಥೆಯ ರಚನೆಯ ಚೌಕಟ್ಟಿನಲ್ಲಿ ಕಥಾವಸ್ತು-ತಾತ್ವಿಕತೆಯ ಏಕರೂಪತೆಯನ್ನು ಮೀರಿನಿಲ್ಲುವ ತುಡಿತ ಇಡೀ ಸಂಕಲನದಲ್ಲಿ ಕಾಣುತ್ತದೆ. ಇದರಾಚೆಗೂ ಈ ಕಥೆಗಳಲ್ಲಿ ಕಾಣುವ ಸಾಮಾನ್ಯ ತತ್ವವೆಂದರೆ ಅಂಚಿನಲ್ಲೇ ಉಳಿದುಕೊಂಡಿರುವ ಜೀವಗಳ ಧ್ವನಿಯಾಗಿರುವುದು. ಹಳ್ಳಿ-ಪಟ್ಟಣ, ಸ್ನೇಹಿತ-ಪ್ರಿಯತಮ, ಹಿಂದೂ-ಮುಸ್ಲಿಂ, ಹಿರಿಯ-ಕಿರಿಯ ಯಾವ ಇಕ್ಕಳಗಳಲ್ಲೂ ಸಿಕ್ಕಿಹಾಕಿಕೊಳ್ಳದೆ ಹರಿವ ನೀರಿನಂತೆ ಇಲ್ಲಿಯ ಕಥೆಗಳಿವೆ. ಈ ಕಥೆಗಳು ಮಡಿವಂತಿಕೆಯಿಂದ ಮುಕ್ತವಾಗಿರುವುದರಿಂದ, ಹೈದರಾಬಾದ್ ಕರ್ನಾಟಕದ ಪರಿಸರವನ್ನು ಕಟ್ಟಿಕೊಡುವ ನುಡಿಗಟ್ಟಿನಿಂದ, ಮನುಷ್ಯರ ಸಣ್ಣತನ ಕೇಡು ಪ್ರೇಮ ಕಾಮ ಬಡತನ ಬಂಧನ ಮಮತೆ ಹೋರಾಟಗಳೆಲ್ಲದರ ಸೂಕ್ಷ್ಮ ಚಿತ್ರಣದಿಂದ ಜೀವಂತಿಕೆಯಲ್ಲಿ ಮೈದಾಳಿವೆ. ಹಳ್ಳಿ ಬದುಕಿನಲ್ಲಿಯ ಸಾಮಾಜಿಕ ವಿಸಂಗತಿಗಳು, ನಂಬಿಕೆಗಳು, ಕೇಡುಗಳ ಸಹಜವಾದ ಅನಾವರಣವಿದೆ. ವ್ಯಂಗ್ಯ ವಿಷಾದ ಮತ್ತು ಪ್ರತಿರೋಧ ಒಳ ದ್ರವ್ಯದಂತೆ ತುಂಬಾ ಸೂಕ್ಷ್ಮವಾಗಿ ಈ ಕಥೆಗಳಲ್ಲಿ ಹರಿಯುತ್ತಿದೆ. ಇಂಗ್ಲಿಷಲ್ಲಿ ’ಫೂ’ ಎಂದರೆ ಥೂ ಎಂದರ್ಥ. ಜನಸಾಮಾನ್ಯರನ್ನ ದಿಕ್ಕುಗೆಡಿಸಿರುವ ಆಧುನಿಕತೆ ಮತ್ತು ನಾಗರಿಕತೆಯ ಸಂಕಥನಗಳನ್ನ ತನ್ನ ನೆಲಮೂಲದ ಚೈತನ್ಯಗಳ ಮೂಲಕವೇ ಮುಖಾಮುಖಿಯಾಗುವ ತ್ರಾಣ ಈ ಕಥೆಗಳ ನಿರೂಪಣೆಯಲ್ಲಿದೆ.

ಫೂ ಮತ್ತು ಇತರ ಕತೆಗಳು
ಲೇಖಕರು: ಮಂಜುನಾಯಕ ಚಳ್ಳೂರು
ಬೆಲೆ: ರೂ 80/-
ಪ್ರಕಾಶಕರು: ಅಹರ್ನಿಶಿ ಪ್ರಕಾಶನ, ಶಿವಮೊಗ್ಗ

ಡಾ. ಸಿ. ಬಿ. ಐನಳ್ಳಿ

ಡಾ.ಸಿ.ಬಿ.ಐನಳ್ಳಿ
ಧಾರವಾಡದ ಕರ್ನಾಟಕ ಕಲಾ ಮಹಾವಿದ್ಯಾಲಯದಲ್ಲಿ ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರ ಬಜೆಟ್ 2026: ‘ಇದು ನನ್ನ ರಾಜಕೀಯ ಜೀವನದ ಅತ್ಯಂತ ನಿರಾಶಾದಾಯಕ ಬಜೆಟ್’: ಸಿಎಂ ಸಿದ್ದರಾಮಯ್ಯ

‘ಮೋದಿ ಸರ್ಕಾರ ಆರ್ಥಿಕ ದೂರದೃಷ್ಟಿಕೋನಗಳಿಲ್ಲದೆ, ದೇಶವನ್ನು ಯಾವ ದಿಕ್ಕಿನತ್ತ ಮುನ್ನಡೆಸಬೇಕು ಎನ್ನುವುದರ ಬಗ್ಗೆ ಸ್ಪಷ್ಟತೆ ಇಲ್ಲದೆ ದಣಿದಿದೆ ಎಂಬುದರ ಸಂಕೇತ ಈ 2026 ಬಜೆಟ್’ ಎಂದು ಸಿಎಂ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.  ಕಲಬುರಗಿ ವಿಮಾನ...

ಕೇಂದ್ರ ಬಜೆಟ್ 2026: ಅಪರೂಪದ ಭೂಮಿಯ ಕಾರಿಡಾರ್‌ನಿಂದ ಹೈಸ್ಪೀಡ್ ರೈಲಿನವರೆಗೆ: ಚುನಾವಣೆ ನಡೆಯಲಿರುವ ರಾಜ್ಯಗಳಿಗೆ ಕೇಂದ್ರ ಬಜೆಟ್ ನಲ್ಲಿ ಸಿಕ್ಕಿದ್ದೇನು?

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಲೋಕಸಭೆಯಲ್ಲಿ ತಮ್ಮ ಸತತ 9 ನೇ ಬಜೆಟ್ ಅನ್ನು ಮಂಡಿಸಿದ್ದಾರೆ. ಈ ಬಜೆಟ್ ನಲ್ಲಿ ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಂತಹ ಚುನಾವಣೆ...

ಬಲೂಚಿಸ್ತಾನ: ಭದ್ರತಾ ಕಾರ್ಯಾಚರಣೆಯಲ್ಲಿ 15 ಪಾಕ್ ಸೈನಿಕರು, 92 ಭಯೋತ್ಪಾದಕರು ಸಾವು

ಬಲೂಚಿಸ್ತಾನ ಪ್ರಾಂತ್ಯದ ಸುಮಾರು 12 ಸ್ಥಳಗಳಲ್ಲಿ ನಡೆದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಲ್ಲಿ ಕನಿಷ್ಠ 15 ಪಾಕಿಸ್ತಾನಿ ಸೈನಿಕರು ಮತ್ತು 92 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಪಾಕಿಸ್ತಾನಿ ಸೇನೆ ತಿಳಿಸಿರುವುದಾಗಿ ಪಿಟಿಐ ವರದಿ...

ಕೇಂದ್ರ ಬಜೆಟ್ 2026 | ಯಾವುದು ಅಗ್ಗ ಮತ್ತು ಯಾವುದು ದುಬಾರಿ..? 

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ (ಫೆಬ್ರವರಿ 1, 2026) ತಮ್ಮ ಒಂಬತ್ತನೇ ಬಜೆಟ್ ಮಂಡಿಸಿದ್ದಾರೆ. ಈ ವರ್ಷದ (2026-27 ಹಣಕಾಸು) ಬಜೆಟ್ ತೀವ್ರಗೊಳ್ಳುತ್ತಿರುವ ಜಾಗತಿಕ ವ್ಯಾಪಾರ ಉದ್ವಿಗ್ನತೆ, ರೂಪಾಯಿ ಮೌಲ್ಯದಲ್ಲಿ...

ಕೇಂದ್ರ ಬಜೆಟ್ 2026| ರಕ್ಷಣಾ ಇಲಾಖೆಗೆ 7.85 ಲಕ್ಷ ಕೋಟಿ ರೂ. ಮೀಸಲು

ಕೇಂದ್ರ ಸರ್ಕಾರದ ಬಜೆಟ್ 2026 ರಲ್ಲಿ ರಕ್ಷಣಾ ವೆಚ್ಚವನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಈ ವಲಯಕ್ಕೆ 7.85 ಲಕ್ಷ ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಇದು ಕಳೆದ ವರ್ಷದ 6.81 ಲಕ್ಷ ಕೋಟಿ ರೂ.ಗಳಿಗಿಂತ ಗಮನಾರ್ಹ...

‘ಭಾರತ ವೆನೆಜುವೆಲಾದ ತೈಲ ಖರೀದಿಸಲಿದೆ’ ಎಂದ ಟ್ರಂಪ್: ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್

ನವದೆಹಲಿ: ಭಾರತ ಇರಾನ್ ಬದಲು ವೆನೆಜುವೆಲಾದಿಂದ ತೈಲ ಖರೀದಿಸಲಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಭಾನುವಾರ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಅಮೆರಿಕದ ನಾಯಕ "ನಮ್ಮ...

ಕೇಂದ್ರ ಬಜೆಟ್ 2026: ಕ್ಯಾನ್ಸರ್ ಸೇರಿದಂತೆ ಇತರ 7 ಕಾಯಿಲೆಗಳ ಔಷಧಿ ಬೆಲೆಯಲ್ಲಿ ಇಳಿಕೆ

ಗಂಭೀರ ಖಾಯಿಲೆಗಳಿಂದ ಬಳುತ್ತಿರುವ ರೋಗಿಗಳಿಗೆ ಗಮನಾರ್ಹ ಪರಿಹಾರವಾಗಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2026 ರ ಬಜೆಟ್‌ನಲ್ಲಿ 17 ವಿಧದ ಕ್ಯಾನ್ಸರ್ ಮತ್ತು ಇತರ ಏಳು ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ಬಳಸುವ ಔಷಧಿಗಳನ್ನು...

ಕೇಂದ್ರ ಬಜೆಟ್ 2026: ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ; ವಿದೇಶಿ ಪ್ರವಾಸದ ಟಿಸಿಎಸ್ ದರ ಶೇ.2ಕ್ಕೆ ಇಳಿಕೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಕೇಂದ್ರ ಬಜೆಟ್ 2026 ಅನ್ನು ಮಂಡಿಸಿದರು. "2025ರ ಏಪ್ರಿಲ್ 1 ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ ಬರಲಿದೆ, ಪ್ರಸ್ತುತ ಶೇ.5 ಮತ್ತು ಶೇ.20...

ಗಾಜಾದಲ್ಲಿ ಇಸ್ರೇಲ್ ನಡೆಸಿದ ಹೊಸ ಕದನ ವಿರಾಮ ಉಲ್ಲಂಘನೆಯಲ್ಲಿ ಮಕ್ಕಳು ಸೇರಿದಂತೆ 31 ಮಂದಿ ಸಾವು

ಮೇ 2024ರ ನಂತರ ಇಸ್ರೇಲ್ ಮೊದಲ ಬಾರಿಗೆ ಈಜಿಪ್ಟ್‌ನೊಂದಿಗೆ ರಫಾ ಕ್ರಾಸಿಂಗ್ ಅನ್ನು ಮತ್ತೆ ತೆರೆಯಲು ಸಜ್ಜಾಗುತ್ತಿರುವ ಒಂದು ದಿನ ಮೊದಲು, ಅಲ್ ಜಜೀರಾ ಜೊತೆ ಮಾತನಾಡಿದ ವೈದ್ಯಕೀಯ ಮೂಲಗಳು, ಬೆಳಗಿನ ಜಾವದಿಂದ...

ಶಬರಿಮಲೆ ಚಿನ್ನ ಕಳವು ಪ್ರಕರಣ: ಎರಡನೇ ಪ್ರಕರಣದಲ್ಲೂ ಜಾಮೀನು ಕೋರಿ ಅರ್ಜಿ ಸಲ್ಲಿಸಿದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ

ಕೊಲ್ಲಂ (ಕೇರಳ): ಶಬರಿಮಲೆ ಚಿನ್ನ ಕಳವು ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ, ತಮ್ಮ ವಿರುದ್ಧ ದಾಖಲಾಗಿರುವ ಎರಡನೇ ಪ್ರಕರಣದಲ್ಲಿ ಶಾಸನಬದ್ಧ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ದ್ವಾರಪಾಲಕ (ರಕ್ಷಕ ದೇವತೆ) ವಿಗ್ರಹ...