Homeಪುಸ್ತಕ ವಿಮರ್ಶೆ2023ರ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ ಪಡೆದ ’ಫೂ ಮತ್ತು ಇತರ ಕಥೆಗಳು’; ಇಕ್ಕಳಗಳಲ್ಲಿ...

2023ರ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ ಪಡೆದ ’ಫೂ ಮತ್ತು ಇತರ ಕಥೆಗಳು’; ಇಕ್ಕಳಗಳಲ್ಲಿ ಸಿಕ್ಕಿ ಹಾಕಿಕೊಳ್ಳದೆ ಹರಿವ ನೀರಿನಂತಿರುವ ಕಥೆಗಳು

- Advertisement -
- Advertisement -

ಕಥಾ ಸಂಕಲನವೊಂದರೆ ವಿಚಿತ್ರವೆನಿಸುವ ಶೀರ್ಷಿಕೆ ’ಫೂ’; ಅದೇ ಶೀರ್ಷಿಕೆಯ ಮೊದಲ ಕಥೆ ಓದಿದ ನಂತರ ಅದು ವಿಶಿಷ್ಟವಾಗಿ ಮನದಲ್ಲಿ ಅಚ್ಚಾಗುತ್ತದೆ. ಇಲ್ಲಿ ಒಟ್ಟು ಏಳು ಕಥೆಗಳಿವೆ. ’ಫೂ’ ಕಥೆಯ ಜಯತ್ತೆಯೊಳಗೆ ತಾಯಿ ಜೀವವೊಂದು ವ್ಯವಸ್ಥೆಯ ಸಮ್ಮತಿಗಾಗಿ ಬಿಟ್ಟಗಣ್ಣಿನಲ್ಲೇ ಕಾಯುತ್ತಿರುವಂತಿದೆ. ಹೆಣ್ಣು ಹೆಣ್ತನ ಚೆಲುವುಗಳ ಬಗ್ಗೆ ಬೇರುಬಿಟ್ಟ ಸ್ಥಾಪಿತ ಸಾಮಾಜಿಕ ಗ್ರಹಿಕೆಗಳು, ಕೌಟುಂಬಿಕ ಸಂಬಂಧಗಳೊಳಗಿನ ಮಮಕಾರಗಳನ್ನೂ ಮುರುಟಿ ಹೋಗುವಂತೆ ಮಾಡುವುದು ಈ ಕತೆ ಓದುಗರ ಬಿಚ್ಚಿಡುವ ದುರಂತ. ಇದು ಇಂಡಿಯನ್ ಅಮೆರಿಕನ್ ಕಥೆಗಾರ್ತಿ ಜುಂಪಾ ಲಾಹಿರಿಯ ’ಟ್ರೀಟ್ಮೆಂಟ್ ಆಫ್ ಬೀಬಿ ಹಲ್ದಾರ್’ ಕತೆಯನ್ನು ನೆನಪಿಸುತ್ತದೆ. ಫೂ ಕತೆಯ ಕಸುಬುದಾರಿಕೆ ಏನೆಂದರೆ ಜಯತ್ತೆಯ ಅವಿವಾಹಿತ ಬದುಕಿನ ದೌರ್ಭಾಗ್ಯವನ್ನು ಮಗುವಿನ ಕಣ್ಣುನೋಟದಲ್ಲಿ ನಿರೂಪಿಸಿ ಆಕೆಯ ಒಡಲ ಬೇಗುದಿಯನ್ನ ಮುಟ್ಟಿಯೂ ಮುಟ್ಟದೆ ಕಲೆಯಾಗಿ ಅರಳಿಸಿರುವುದು. ಮಗುವಿನ ಮುಗ್ಧ ಕಣ್ಣುಗಳ ನಿರೂಪಣೆ ಇಲ್ಲಿಯ ಕ್ರೌರ್ಯಕ್ಕೊಂದು ವಿಚಿತ್ರ ಮತ್ತು ಯಾತನದಾಯಕವಾದ ಚೆಲುವನ್ನು ತಂದಿದೆ. ಕಥೆ ಮುಗಿದ ಮೇಲೆ ಓದುಗನಿಗೆ ಜಯತ್ತೆಯ ದೈಹಿಕ ವಿರೂಪ ಮರೆಯಾಗಿ, ಮಗುವಿನೊಂದಿಗಿನ ಅವಳ ಮಧುರ ಗೆಳೆತನ ಮತ್ತು ಅತ್ತಿಗೆ ಅಣ್ಣರ ಮಾನಸಿಕ ವಿಕಾರವಷ್ಟೇ ನೆನಪಲ್ಲುಳಿಯುವುದು ಈ ಕತೆಯ ನಿರೂಪಣಾ ತಂತ್ರದ ಗೆಲುವು.

ಈ ಸಂಕಲನದುದ್ದಕ್ಕೂ ಜೀವಸೃಷ್ಟಿಯ ಭಾಗವಾಗುವ ತಾಯ್ತನದ ಹಂಬಲ ಮತ್ತು ಕಾಳಜಿ ಭಿನ್ನ ತುಯ್ತ ಸಂಕಟಗಳೊಂದಿಗೆ ಭಿನ್ನಭಿನ್ನ ರೂಪಗಳಲಿ, ಜಯತ್ತೆ, ರಂಗಮ್ಮ ಮತ್ತು ಶೈಲ್ಯಾನ ತಾಯಿಯರ ಪಾತ್ರಗಳಲ್ಲಿ ಪ್ರಕಟವಾಗಿದೆ. ’ಫೂ’ ಕಥೆಯ ಜಯತ್ತೆಯದು ಲೋಕ ನಿರ್ಮಿತ ಕಟ್ಟಳೆಗಳಿಂದ ಬೆಂದುಹೋಗುವ ದುರಂತವಾದರೆ, ಪಾತಿ ಮತ್ತು ಗೆಳೆಯನದು (’ಪಾತಿ’ಕತೆ) ಲೋಕದ ಧಾವಂತಗಳ ಗೊಡವೆಯೇ ಇಲ್ಲದೆ ಅರಳುವ ಪ್ರೇಮ ಸಂಬಂಧ. ’ಪಾತಿ’ ಕತೆ ಕೊನೆಕೊನೆಗೆ ಸಾಗಿದಂತೆ ಈ ಲೋಕ ಕಟ್ಟಿರುವ ಕಥೆಗಳಂತೆ ಕೊನೆಯಾಗಬಹುದು ಎಂಬ ಓದುಗನ ನಿರೀಕ್ಷೆಗಳನ್ನು ಲಟಲಟನೆ ಮುರಿದುಹಾಕುತ್ತದೆ. ಈ ಕಥೆಯು ಕಥಾಪ್ರಕಾರ, ಸಂಬಂಧಗಳ ಚೌಕಟ್ಟು, ಧರ್ಮಗಳ ಗೋಡೆ ಹೀಗೆ ಹಲವು ನಿಬಂಧನೆಗಳನ್ನು ಏಕಕಾಲಕ್ಕೆ ಮುರಿದುಕಟ್ಟಿದೆ. ಇದೊಂದು ಹರಿವ ನದಿ. ಫೂ ಕಥೆ ಎತ್ತುವ ಕೆಲವು ಪ್ರಶ್ನೆಗಳಿಗೆ ಇಲ್ಲಿ ಉತ್ತರಗಳನ್ನು ಕಾಣಬಹುದು. ಸಾಂಸ್ಕೃತಿಕ ಬಹುರೂಪತೆಯ ಮುಖ್ಯಚಹರೆಯಾಗಿ ಇದು ತೋರುತ್ತಿದೆ.

’ತೇರು ಸಾಗಿತಮ್ಮ ನೋಡಿರೆ’ ಕಥೆ ವಿನೋದಮಯವೆಂಬಂತೆ ಸಾಗುತ್ತಲೇ ಮುಖ್ಯ ತಿರುವುಗಳಲ್ಲಿ ಉತ್ತರ ಕರ್ನಾಟಕದ ಭಜನೆ ತತ್ವಪದಗಳಲ್ಲಿ ಕಾಣಬಹುದಾದ ಬದುಕಿನ ಕ್ಷಣಿಕತೆ ಮತ್ತು ಅರ್ಥದ ಹುಡುಕಾಟದ ಮಿಂಚುಗಳನ್ನು ಕಾಣಿಸುತ್ತದೆ. ನಮ್ಮ ಬದುಕಿಗೆ ಕೈ ದೀವಿಗೆಗಳನ್ನು ನೀಡಿ ಹೋಗಿರುವ ತತ್ವಪದಕಾರರ ಸೂಕ್ಷ್ಮಮತಿತ್ವ ಮತ್ತು ಬದುಕಿನ ದರ್ಶನ ಊರ ಜನರ ದೃಷ್ಟಿಯಲ್ಲಿ ಹುಚ್ಚನಾಗಿರುವ ಶೈಲ್ಯಾನಲ್ಲಿ ಕಾಣುತ್ತದೆ. ಅತಿ ಲೌಕಿಕತೆಯ ಜಂಜಾಟದಲ್ಲಿ ತೀಡಲ್ಪಟ್ಟ ಊರ ಜಡಮತಿಗಳ ಕಣ್ಣಿಗೆ ಚಿಕ್ಕ ವಯಸ್ಸಿನ ಶೈಲ್ಯಾನಲ್ಲಿ ಅದು ಕಾಣುವುದು ಕಷ್ಟ.

’ವಜ್ರಮುನಿ’ ಕತೆಯ ಭಗವಂತಪ್ಪನೆಂಬ ಕೋಪಿಷ್ಟ ತಂದೆಗೆ ಇಸ್ಪೀಟ್ ಆಟದ ಹುಚ್ಚು. ಹೊಲ ದನ ಕರುಗಳನ್ನೆಲ್ಲ ಅದಕ್ಕಾಗಿ ಮಾರಿ ಮುಗಿಸಿದ ನಂತರ ಆತನಲ್ಲಿ ಕಾಣುವ ಬದಲಾವಣೆ ಕುತೂಹಲಕಾರಿಯಾಗಿದೆ. ಬದುಕು ತನ್ನ ನಿಯಂತ್ರಣದಾಚೆ ಚಲಿಸಿದಾಕ್ಷಣ ಮನುಷ್ಯನ ಯಕಶ್ಚಿತತೆಯ ಅರಿವಾದಂತಿದೆ. ಬೆಂಕಿಯಂತೆ ಬಾಳಿದ ಭಗವಂತಪ್ಪನಂತ ಹಳ್ಳಿಯ ಜೀವ ಇಳಿವಯಸಿನಲ್ಲಿ ಮಾಗಿ ಬಾಗಿ ಬದುಕಿದ ಘಟನಾವಳಿಗಳು, ತನ್ನ ನಿಯಂತ್ರಣದಾಚೆ ಕಥೆಯಾಗತೊಡಗಿರುವ ಪ್ರಕ್ರಿಯೆಯನ್ನು ಧ್ಯಾನದಂತೆ ಗ್ರಹಿಸುತ್ತದೆ. ತನ್ನ ಈ ಕಥೆ ಪೂರ್ಣ ಪ್ರಮಾಣದ ಕಥೆಯಾಗುವುದು- ಈಗ ತೀರಿಹೋಗಿ ಕಥೆಯಾಗಿ ಮಾತ್ರ ಉಳಿದಿರುವ ತನ್ನ ಪೂರ್ವಜರಂತೆ- ತಾನೂ ಕೂಡ ತೀರಿಹೋದಾಗ ಎಂಬುದನ್ನರಿತ ಆತ ದುಗುಡಕ್ಕೊಳಕಾಗುತ್ತಾನೆ; ಲೋಕದ ಗೊಡವೆಯಲ್ಲಿ ತನ್ನ ಪೂರ್ವಜರ ಮತ್ತು ಸಂಗಡಿಗರ ಕಥೆಗಳೂ ತೀರಿಹೋದಾವೆಂಬ ಆತಂಕ ಬಾಧಿಸುತ್ತದೆ. ಮನುಷ್ಯರ ಒಳಗಣ್ಣೆಂಬುದು ಎಷ್ಟು ಸೂಕ್ಷ್ಮಾತಿಸೂಕ್ಷ್ಮವಲ್ಲವೇ? ಸೃಷ್ಟಿಯ ಅಗಾಧತೆಯನ್ನು ಅರಿಯಲು ಬೇಕಾದ ಕಣ್ಣಿದ್ದಾಗ ಇಂಥ ಪಾತ್ರಗಳು ಕಥೆಗಾರನಿಗೆ ಕಾಣುತ್ತವೆ. ಲೋಕದ ತಿರುಗಾಟ ಸಾಕಾಗಿ ಬೇರುಗಳನ್ನರಸಿ ಬಂದಿರುವ ಮಗ ಮತ್ತು ತನ್ನ ಪೂರ್ವಜರ ಬದುಕನ್ನ ಕಥೆಗಳಲ್ಲೇ ದರ್ಶಿಸುತ್ತಿರುವ ಭಗವಂತಪ್ಪನ ಚಿತ್ರಣ ಐರಿಷ್ ಕವಿ ಶೇಮಸ್ ಹೀನಿಯ ’ಅಗೆಯುವಿಕೆ’ (ಡಿಗ್ಗಿಂಗ್) ಕವನದ ಚಿತ್ರಣವನ್ನ ಕಣ್ಮುಂದೆ ತರುತ್ತದೆ. ತಮ್ಮ ತಿಳಿವಿನ ಮಿತಿಗಳನ್ನು ದಾಟಿಹೋಗಿ ಸೃಷ್ಟಿಯ ಅಚ್ಚರಿ ಆಘಾತಗಳನ್ನ ಬದುಕು ಕಾಣಿಸುವ ಕ್ಷಣ, ತಮ್ಮ ಬದುಕು ಕಥೆಯಾಗುತ್ತಿರುವುದರ ಅರಿವು ಮನುಷ್ಯರಲ್ಲಿ ಹುಟ್ಟುವುದನ್ನ ’ದೀಪದ ಮಲ್ಲಿ’ ಎಂಬ ಜಾನಪದ ಕಥೆಯ ಮೂಲಕ ಎ.ಕೆ. ರಾಮಾನುಜನ್ ತಮ್ಮ ಲೇಖನವೊಂದರಲ್ಲಿ (ಪ್ರತಿವ್ಯವಸ್ಥೆಯೆಡೆಗೆ..) ವಿಶ್ಲೇಷಿಸುತ್ತಾರೆ. ಭಗವಂತಪ್ಪ ಮತ್ತು ಮಗನ ನಡುವೆ ಘಟಿಸುವ ಅರಿವಿನ ವಿನಿಮಯ ರಾಮಾನುಜನ್‌ರ ವಿಶ್ಲೇಷಣೆಯನ್ನ ಇನ್ನಷ್ಟು ವಿವರಿಸುವ ರೂಪಕದಂತಿದೆ.

ಇದನ್ನೂ ಓದಿ: ’ನದಿಯೊಂದು ನಿದ್ರಿಸಿದಾಗ’: ವಿಶಿಷ್ಟ ಆಚರಣೆಗಳು, ನಂಬಿಕೆಗಳು, ಪೂರ್ವಜರ ಆರಾಧನೆಯೇ ಕಾಪಾಡುವ ಬುಡಕಟ್ಟು ಚಿತ್ರಣ

’ಕನಸಿನ ವಾಸನೆ’ ಕಥೆಯಲ್ಲಿ ದಿನಬೆಳಗಾದರೆ ಲೈಂಗಿಕ ಉನ್ಮಾದಗಳಲ್ಲಿ ತೇಲಾಡುತ್ತಿದ್ದ ಲಚುಮನಿಗೆ ರಂಗಮ್ಮ ನೀಡುವ ಕೆರದ ಏಟು ಪಾಪಪ್ರಜ್ಞೆಯಲ್ಲಿ ಅಟ್ಟಾಡಿಸುತ್ತದೆ; ಮಗುವಿನ ಮುಗ್ಧತೆಯನ್ನು ಹುಟ್ಟುಹಾಕುತ್ತದೆ. ಕೊನೆಗೆ ರಂಗಮ್ಮನ ತಾಯ್ತನ ಅವನನ್ನ ಪೊರೆಯುತ್ತದೆ. ದೇಹದ ಬಯಕೆಗಳಲ್ಲಿ ಮಿಂದೇಳುತ್ತಿದ್ದ ಲಚುಮ ಮಠಭಜನೆ ಎಂದು ಸುತ್ತಾಡುತ್ತಾ ಮಕ್ಕಳಾದಿಯಾಗಿ ಎಲ್ಲರಿಗೂ ಕೈಮುಗಿಯುತ್ತ ಅಡ್ಡಾಡುವುದನ್ನು ಕಂಡರೆ ಕೆ. ವೈ.ನಾರಾಯಣಸ್ವಾಮಿಯವರ ’ವಿನುರ ವೇಮ’ ನಾಟಕದ ವೇಮನ ಅರೆ ಕ್ಷಣ ಕಣ್ಮುಂದೆ ಬಂದುಹೋಗುತ್ತಾನೆ. ಇನ್ನೊಂದು ದಿಕ್ಕಿನಲ್ಲಿ ಸಂಸ್ಕಾರದ ಪ್ರಾಣೇಶಾಚಾರ್ಯನ ಪ್ರತಿಪಾತ್ರದಂತೆ (ತಲೆಕೆಳಗಾದ) ಕಾಣುತ್ತಾನೆ. ಓದುಗನಿಗೆ ಮಾತ್ರ ಲಚುಮ ಲಚುಮನೇ.

ಹಳ್ಳಿಯ ಕ್ಷುದ್ರರಾಜಕಾರಣ ಅಸೂಯೆ ದಾಯಾದಿತನ ಸಣ್ಣತನಗಳ ನಡುವೆ ಸತ್ತುಹೋಗುವ ಪ್ರಾಮಾಣಿಕತೆ ಮತ್ತು ಮುಗ್ಧತೆಯನ್ನು, ಅದರ ಪರಿಣಾಮವಾಗಿ ಹುಟ್ಟುವ ಸಿಟ್ಟು ವ್ಯಗ್ರತೆಯನ್ನ ’ಖತಲ್ ರಾತ್ರಿ’ ಕತೆ ಸೆರೆ ಹಿಡಿದಿದೆ. ಡಿಜಿಟಲ್ ಯುಗದ ಮೊಬೈಲ್ ಪರದೆಯ ಹೈಪರ್ ರಿಯಾಲಿಟಿಯಲ್ಲಿ ಹುಟ್ಟಿ ಸಾಯುವ ಸಂಬಂಧಗಳು, ಬೃಹತ್ ನಗರಗಳ ಬಂದಿಖಾನೆಯಂಥ ರೂಮುಗಳಲ್ಲಿ ಕಾಡುವ ಒಬ್ಬಂಟಿತನ, ಅನಾಥ ಪ್ರಜ್ಞೆಯ ಪರಿಣಾಮದಲ್ಲಿ ’ಮಿಣುಕು ಹುಳು’ ಕಥೆ ಹುಟ್ಟಿದಂತಿದೆ. ಹಳ್ಳಿಗಳಿಂದ ಬೃಹತ್ ನಗರಗಳಿಗೆ ವಲಸೆ ಹೋಗಿ ನಿರ್ಜೀವ ನೆರಳಿನಂತಾದವರ ಧಾವಂತದ ಬದುಕಿನ ಪಡಿಪಾಟಲು ಇಲ್ಲಿದೆ. ’ಜಗತ್ತು ಕೊನೆಗೊಳ್ಳುವುದು ಸ್ಫೋಟದೊಂದಿಗಲ್ಲ ಚೀತ್ಕಾರದೊಂದಿಗೆ’ ಎನ್ನುವ ಇಂಗ್ಲಿಷ್ ಕವಿ ಯೇಲಿಯಟ್‌ನ ’ಟೊಳ್ಳು ಮನುಷ್ಯರು’ (Hallow Men) ಕವನದಲ್ಲಿಯ ಚೀತ್ಕಾರಗಳು ಈ ಕಥೆಯಲ್ಲಿ ಪ್ರತಿಧ್ವನಿಸುತ್ತಿವೆ.

ಈ ಪುಸ್ತಕದಲ್ಲಿನ ಮೊದಲ ಕಥೆ (ಫೂ) ಹೆಣ್ಣೊಬ್ಬಳ ದೇಹದ ಮಿತಿಗಳು ಮತ್ತು ಅಪ್ಪಟ ಹಳ್ಳಿಯ ಸಾಮಾಜಿಕ ಕಟ್ಟುಪಾಡುಗಳು ಹುಟ್ಟಿಸುವ ದುರಂತದ ಕಥೆ. ಕೊನೆಯದು (ಮಿಣುಕುಹುಳು) ಮನಸ್ಸಿನ ನಾಗಾಲೋಟದಿಂದಾಗಿ ಹಳ್ಳಿಯಿಂದ ಹೊರಟು ಪಟ್ಟಣದಲ್ಲಿ ನೆಲೆ ನಿಲ್ಲದೇ ಸತ್ಯೋತ್ತರ ಕಾಲದ ಪಾಪಪ್ರಜ್ಞೆಯಲ್ಲಿರುವವರ ಪಡಿಪಾಟಲಿನ ಚಿತ್ರಣ. ಏಳು ಕಥೆಗಳಲ್ಲಿ ಮೊದಲನೆಯದು ಕಥೆ ಹುಟ್ಟಲು ಸಶಕ್ತವಾದ ಹಳ್ಳಿಯ ಪರಿಸರವನ್ನ ಹಿಡಿದಿದೆ. ಕೇಂದ್ರದಲ್ಲಿರುವ ಕಥೆ (ವಜ್ರಮುನಿ)- ಕಥೆಗಳು ಹುಟ್ಟುವ ಕೊನೆಗೊಳ್ಳುವ, ಕೊನೆಗೊಳ್ಳುವಾಗ ಮನುಷ್ಯನಿಗೆ ಬರುವ ದುರಂತ ಪ್ರಜ್ಞೆಯ ಜಿಜ್ಞಾಸೆಯಂತಿದೆ. ಕೊನೆಯ ಕಥೆಯಲ್ಲಿರುವುದು (ಮಿಣುಕುಹುಳು) ಅತಿ ವೇಗ ಮತ್ತು ಧಾವಂತಕ್ಕೆ ತುತ್ತಾಗಿ ಕಥೆಗಳು ಉಸಿರುಗಟ್ಟಿ ಸಾಯುವ ಬೃಹತ್ ನಗರಗಳ ಸತ್ವಹೀನ ಪರಿಸರದ ಚಿತ್ರಣ. ಹೀಗೆ ಈ ಕಥೆಗಳನ್ನು ಜೋಡಿಸಿರುವ ಕ್ರಮದಲ್ಲಿ ಒಂದು ಬಂಧ ಮತ್ತು ಶಿಲ್ಪ ಮೂಡಿದೆ. ಹಳ್ಳಿಯ ಸಾಮಾಜಿಕ ಕೇಡುಗಳಿಗೆ ಪಟ್ಟಣದ ಬದುಕು ಉತ್ತರವಲ್ಲವೆಂಬ ಹೊಳಹು ಇಲ್ಲಿದೆ. ನಡುವೆ ಬರುವ ಕಥೆಗಳಲ್ಲಿಯ ಹುಚ್ಚು ಶೈಲ್ಯಾ, ಭಗವಂತಪ್ಪ, ಪಾತಿ, ಪಂಪ್ ಲಚುಮ ’ಅರಿವೆಂಬುದು ಸ್ಥಿರವಲ್ಲ ಮನುಜ, ಅದು ಹರಿವು’ ಎಂಬ ಬೆಳಕಿನ ಹಾಡನ್ನು ಹಾಡುತ್ತಿರುವಂತಿದೆ.

ಕಥೆಯ ರಚನೆಯ ಚೌಕಟ್ಟಿನಲ್ಲಿ ಕಥಾವಸ್ತು-ತಾತ್ವಿಕತೆಯ ಏಕರೂಪತೆಯನ್ನು ಮೀರಿನಿಲ್ಲುವ ತುಡಿತ ಇಡೀ ಸಂಕಲನದಲ್ಲಿ ಕಾಣುತ್ತದೆ. ಇದರಾಚೆಗೂ ಈ ಕಥೆಗಳಲ್ಲಿ ಕಾಣುವ ಸಾಮಾನ್ಯ ತತ್ವವೆಂದರೆ ಅಂಚಿನಲ್ಲೇ ಉಳಿದುಕೊಂಡಿರುವ ಜೀವಗಳ ಧ್ವನಿಯಾಗಿರುವುದು. ಹಳ್ಳಿ-ಪಟ್ಟಣ, ಸ್ನೇಹಿತ-ಪ್ರಿಯತಮ, ಹಿಂದೂ-ಮುಸ್ಲಿಂ, ಹಿರಿಯ-ಕಿರಿಯ ಯಾವ ಇಕ್ಕಳಗಳಲ್ಲೂ ಸಿಕ್ಕಿಹಾಕಿಕೊಳ್ಳದೆ ಹರಿವ ನೀರಿನಂತೆ ಇಲ್ಲಿಯ ಕಥೆಗಳಿವೆ. ಈ ಕಥೆಗಳು ಮಡಿವಂತಿಕೆಯಿಂದ ಮುಕ್ತವಾಗಿರುವುದರಿಂದ, ಹೈದರಾಬಾದ್ ಕರ್ನಾಟಕದ ಪರಿಸರವನ್ನು ಕಟ್ಟಿಕೊಡುವ ನುಡಿಗಟ್ಟಿನಿಂದ, ಮನುಷ್ಯರ ಸಣ್ಣತನ ಕೇಡು ಪ್ರೇಮ ಕಾಮ ಬಡತನ ಬಂಧನ ಮಮತೆ ಹೋರಾಟಗಳೆಲ್ಲದರ ಸೂಕ್ಷ್ಮ ಚಿತ್ರಣದಿಂದ ಜೀವಂತಿಕೆಯಲ್ಲಿ ಮೈದಾಳಿವೆ. ಹಳ್ಳಿ ಬದುಕಿನಲ್ಲಿಯ ಸಾಮಾಜಿಕ ವಿಸಂಗತಿಗಳು, ನಂಬಿಕೆಗಳು, ಕೇಡುಗಳ ಸಹಜವಾದ ಅನಾವರಣವಿದೆ. ವ್ಯಂಗ್ಯ ವಿಷಾದ ಮತ್ತು ಪ್ರತಿರೋಧ ಒಳ ದ್ರವ್ಯದಂತೆ ತುಂಬಾ ಸೂಕ್ಷ್ಮವಾಗಿ ಈ ಕಥೆಗಳಲ್ಲಿ ಹರಿಯುತ್ತಿದೆ. ಇಂಗ್ಲಿಷಲ್ಲಿ ’ಫೂ’ ಎಂದರೆ ಥೂ ಎಂದರ್ಥ. ಜನಸಾಮಾನ್ಯರನ್ನ ದಿಕ್ಕುಗೆಡಿಸಿರುವ ಆಧುನಿಕತೆ ಮತ್ತು ನಾಗರಿಕತೆಯ ಸಂಕಥನಗಳನ್ನ ತನ್ನ ನೆಲಮೂಲದ ಚೈತನ್ಯಗಳ ಮೂಲಕವೇ ಮುಖಾಮುಖಿಯಾಗುವ ತ್ರಾಣ ಈ ಕಥೆಗಳ ನಿರೂಪಣೆಯಲ್ಲಿದೆ.

ಫೂ ಮತ್ತು ಇತರ ಕತೆಗಳು
ಲೇಖಕರು: ಮಂಜುನಾಯಕ ಚಳ್ಳೂರು
ಬೆಲೆ: ರೂ 80/-
ಪ್ರಕಾಶಕರು: ಅಹರ್ನಿಶಿ ಪ್ರಕಾಶನ, ಶಿವಮೊಗ್ಗ

ಡಾ. ಸಿ. ಬಿ. ಐನಳ್ಳಿ

ಡಾ.ಸಿ.ಬಿ.ಐನಳ್ಳಿ
ಧಾರವಾಡದ ಕರ್ನಾಟಕ ಕಲಾ ಮಹಾವಿದ್ಯಾಲಯದಲ್ಲಿ ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಗಳ ವಿಚ್ಛೇದನ: ಸಿಹಿ ಹಂಚಿ, ಮೆರವಣಿಗೆಯಲ್ಲಿ ಆಕೆಯನ್ನು ಮನೆಗೆ ಕರೆತಂದ ನೀವೃತ್ತ ನ್ಯಾಯಾದೀಶ ಮತ್ತು ಕುಟುಂಬ

ಮೀರತ್: ಕೌಟುಂಬಿಕ ನ್ಯಾಯಾಲಯದಲ್ಲಿ ಮಗಳ ವಿಚ್ಛೇದನ ಅಂತಿಮವಾದ ನಂತರ ಆಕೆಯನ್ನು ಡೋಲು, ನೃತ್ಯಗಳ ಮೆರವಣಿಗೆಯಲ್ಲಿ ಸಂಭ್ರಮದಿಂದ ತಂದೆ ಮನೆಗೆ ಕರೆತಂದ ಘಟನೆ ಮೀರನ್ ನಲ್ಲಿ ನಡೆದಿದೆ.  ಪೋಷಕರ ಬೆಂಬಲದ ಅಪರೂಪದ ಮತ್ತು ಹೃದಯಸ್ಪರ್ಶಿ ಪ್ರದರ್ಶನದಲ್ಲಿ,...

“ನೀನು ನಿಜವಾಗಿಯೂ ಅಂಬೇಡ್ಕರ್ ಮಗಳಾ ಎಂದು ತಿಳಿಯಲು ನಾವು ನಿನ್ನ ಡಿಎನ್‌ಎ ಟೆಸ್ಟ್ ಮಾಡುತ್ತೇವೆ” ದೆಹಲಿ ಸಭೆಯಲ್ಲಿ ದಲಿತ ಟ್ರಾನ್ಸ್ ಹೋರಾಟಗಾರ್ತಿ ಗ್ರೇಸ್ ಬಾನುಗೆ ಜಾತಿ ನಿಂದನೆ ಆರೋಪ

ಕೇಂದ್ರ ಸರ್ಕಾರದ ವಿವಾದಾತ್ಮಕ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಕಾಯ್ದೆ, 2026ರ ವಿರುದ್ಧ ಕಳೆದ ಕೆಲ ವಾರಗಳಿಂದ ಇಡೀ ಟ್ರಾನ್ಸ್‌ಜೆಂಡರ್ ಮತ್ತು ಪ್ರಗತಿಪರ ಸಮುದಾಯ ಪ್ರತಿಭಟನೆ ನಡೆಸುತ್ತಿದೆ. ಈ ನಡುವೆ ಶುಕ್ರವಾರ...

‘ಮೋದಿ ಕ್ರಿಶ್ಚಿಯನ್ ಸಂಸ್ಥೆಗಳಲ್ಲಿ ಭಯ ಹುಟ್ಟಿಸಲು ಪ್ರಯತ್ನಿಸುತ್ತಿದ್ದಾರೆ’: ಎಫ್‌ಸಿಆರ್‌ಎ ತಿದ್ದುಪಡಿ ಕುರಿತು ಮಲ್ಲಿಕಾರ್ಜುನ ಖರ್ಗೆ

ಇಡುಕ್ಕಿ (ಕೇರಳ): ಸಾರ್ವಜನಿಕ ಮತ್ತು ಸಾಮಾಜಿಕ ಕಲ್ಯಾಣ ಕ್ಷೇತ್ರದಲ್ಲಿ ಕೆಲಸ ಮಾಡುವ ಕ್ರಿಶ್ಚಿಯನ್ ಸಂಸ್ಥೆಗಳು, ಎನ್‌ಜಿಒಗಳು ಮತ್ತು ನಾಗರಿಕ ಸಮಾಜದ ಮೇಲೆ ದಾಳಿ ಮಾಡಲು ಪ್ರಧಾನಿ ನರೇಂದ್ರ ಮೋದಿ ಎಫ್‌ಸಿಆರ್‌ಎ (ವಿದೇಶಿ ದೇಣಿಗೆ...

ವೈದ್ಯಕೀಯ, ತಾಂತ್ರಿಕ ಶಿಕ್ಷಣದಲ್ಲಿ ಎಸ್‌ಸಿ/ಎಸ್‌ಟಿ ಮೀಸಲಾತಿ ಹೆಚ್ಚಿಸಿದ ಒಡಿಶಾ ಸರ್ಕಾರ, ಒಬಿಸಿ ವಿದ್ಯಾರ್ಥಿಗಳಿಗೆ ಹೊಸ ಕೋಟಾ

ಮಹತ್ವದ ನಿರ್ಧಾರ ಕೈಗೊಂಡಿರುವ ಒಡಿಶಾ ಸರ್ಕಾರ, ವೈದ್ಯಕೀಯ, ಇಂಜಿನಿಯರಿಂಗ್ ಮತ್ತು ಇತರ ತಾಂತ್ರಿಕ ಹಾಗೂ ವೃತ್ತಿಪರ ಶಿಕ್ಷಣ ಕೋರ್ಸ್‌ಗಳಲ್ಲಿ ಪರಿಶಿಷ್ಟ ಪಂಗಡ (ಎಸ್‌ಟಿ), ಪರಿಶಿಷ್ಟ ಜಾತಿ (ಎಸ್‌ಸಿ) ಅಭ್ಯರ್ಥಿಗಳಿಗೆ ಮೀಸಲಾತಿಯನ್ನು ಗಣನೀಯವಾಗಿ ಹೆಚ್ಚಿಸಿದೆ....

ಶಾಲಾ ವಾರ್ಷಿಕೋತ್ಸವದಲ್ಲಿ ಲವಲವಿಕೆಯಿಂದ ಭಾಗವಹಿಸಿದ್ದ 6 ಮಕ್ಕಳು, ತಡರಾತ್ರಿ ಹೊತ್ತಿಗೆ ಶವವಾದರು : ಮಹಾರಾಷ್ಟ್ರದಲ್ಲೊಂದು ಹೃದಯ ವಿದ್ರಾವಕ ಘಟನೆ

ಶಾಲಾ ವಾರ್ಷಿಕೋತ್ಸವದಲ್ಲಿ ಬಹಳ ಉತ್ಸಾಹದಿಂದ ಭಾಗವಹಿಸಿದ್ದ ಆರು ಮಂದಿ ಮಕ್ಕಳು, ತಡ ರಾತ್ರಿ ಹೊತ್ತಿಗೆ ಶವವಾದ ಹೃದಯ ವಿದ್ರಾವಕ ಘಟನೆಯೊಂದು ಮಹಾರಾಷ್ಟ್ರದ ದಿಂಡೋರಿಯಲ್ಲಿ ಶುಕ್ರವಾರ (ಏ.3) ನಡೆದಿದೆ. ನಾಸಿಕ್‌ ನಗರದಿಂದ 20 ಕಿಲೋ...

ಕೇರಳ: ಕೊಲ್ಲಂನಲ್ಲಿ ಟಿವಿ ಚಾನೆಲ್ ಕಚೇರಿ ಮೇಲೆ ಸ್ಫೋಟಕ ವಸ್ತು ಎಸೆತ

ಕೊಲ್ಲಂ: ಇಲ್ಲಿನ ಟಿವಿ ಚಾನೆಲ್ ಒಂದರ ಕಚೇರಿಯ ಮೇಲೆ ಭಾನುವಾರ ಬೆಳಿಗ್ಗೆ ಸ್ಫೋಟಕ ವಸ್ತು ಎಸೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಆ ಪ್ರದೇಶ ಮತ್ತು ಚಾನೆಲ್ ಕಚೇರಿಯ ಸಿಸಿಟಿವಿ ದೃಶ್ಯಗಳಲ್ಲಿ ಇಬ್ಬರು...

ಹತ್ಯೆಯಾದ ಇರಾನ್ ಕಮಾಂಡರ್ ಖಾಸಿಮ್ ಸುಲೈಮಾನಿ ಅವರ ಸೊಸೆ, ಮೊಮ್ಮಗಳನ್ನು ಬಂಧಿಸಿದ ಅಮೆರಿಕ

ನವದೆಹಲಿ: ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಶುಕ್ರವಾರ ತಮ್ಮ ಶಾಶ್ವತ ನಿವಾಸಿ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ನ ದಿವಂಗತ ನಾಯಕ ಖಾಸಿಮ್ ಸೊಲೈಮಾನಿ ಅವರ...

ಇರಾನ್ ಮೇಲೆ ಬೃಹತ್ ದಾಳಿ: ಹಲವು ಉನ್ನತ ನಾಯಕರನ್ನು ಕೊಲ್ಲಲಾಗಿದೆ ಎಂದು ವಿಡಿಯೋ ಹಂಚಿಕೊಂಡ ಟ್ರಂಪ್

ಟೆಹ್ರಾನ್ ಮೇಲೆ ನಡೆದ ದಾಳಿಯ ವೀಡಿಯೊವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಂಚಿಕೊಂಡಿದ್ದು, ಹಲವಾರು ಇರಾನ್ ಮಿಲಿಟರಿ ನಾಯಕರ ಸಾವಿಗೆ ಅದು ಕಾರಣ ಎಂದು ಹೇಳಿಕೊಂಡಿದ್ದಾರೆ. "ಟೆಹ್ರಾನ್‌ನಲ್ಲಿ ನಡೆದ ಈ ಬೃಹತ್ ದಾಳಿಯೊಂದಿಗೆ, ಇರಾನ್‌ನ...

ಅಸ್ಸಾಂ ಚುನಾವಣೆ : ನುಸುಳುಕೋರರಿಂದ ಯುವ ಕಲ್ಯಾಣಕ್ಕೆ ವರಸೆ ಬದಲಿಸಿದ ಬಿಜೆಪಿ

ಅಸ್ಸಾಂ ವಿಧಾನಸಭಾ ಚುನಾವಣೆಗೆ ನಾಲ್ಕು ದಿನಗಳು ಬಾಕಿ ಇರುವಾಗ ಬಿಜೆಪಿ ತನ್ನ ಪ್ರಚಾರದ ವರಸೆಯನ್ನು ಬದಲಿಸಿಕೊಂಡಿದೆ. ನುಸುಳುಕೋರರನ್ನು ಹೊರಹಾಕುತ್ತೇವೆ, ಅಕ್ರಮ ವಲಸೆಗೆ ಕಡಿವಾಣ ಹಾಕುತ್ತೇವೆಂದು ಅಬ್ಬರಿಸುತ್ತಿದ್ದ ಬಿಜೆಪಿಗರು, ಈಗ ನುಸುಳಕೋರರ ವಿಷಯವನ್ನು ಬದಿಗೊತ್ತಿದ್ದಾರೆ....

ಕುಡಿದ ಮತ್ತಿನಲ್ಲಿ ಕಾರು ಚಾಲನೆ: ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ 19ವರ್ಷದ ಯುವಕ ಸಾವು 

ಬೆಂಗಳೂರು: ಕುಡಿದ ಮತ್ತಿನಲ್ಲಿ ಹದಿಹರೆಯದ ಯುವಕನೊಬ್ಬ ಚಲಾಯಿಸುತ್ತಿದ್ದ ಕಾರು, 19 ವರ್ಷದ ಯುವಕನ ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಆತ ಸಾವನ್ನಪ್ಪಿದ್ದಾನೆ. ಮಲ್ಲೇಶಪಾಳ್ಯದ ಮಾರುತಿನಗರದ 10 ನೇ ಮುಖ್ಯ ರಸ್ತೆಯಲ್ಲಿ ಶುಕ್ರವಾರ ತಡರಾತ್ರಿ...