Homeಪುಸ್ತಕ ವಿಮರ್ಶೆ2023ರ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ ಪಡೆದ ’ಫೂ ಮತ್ತು ಇತರ ಕಥೆಗಳು’; ಇಕ್ಕಳಗಳಲ್ಲಿ...

2023ರ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ ಪಡೆದ ’ಫೂ ಮತ್ತು ಇತರ ಕಥೆಗಳು’; ಇಕ್ಕಳಗಳಲ್ಲಿ ಸಿಕ್ಕಿ ಹಾಕಿಕೊಳ್ಳದೆ ಹರಿವ ನೀರಿನಂತಿರುವ ಕಥೆಗಳು

- Advertisement -
- Advertisement -

ಕಥಾ ಸಂಕಲನವೊಂದರೆ ವಿಚಿತ್ರವೆನಿಸುವ ಶೀರ್ಷಿಕೆ ’ಫೂ’; ಅದೇ ಶೀರ್ಷಿಕೆಯ ಮೊದಲ ಕಥೆ ಓದಿದ ನಂತರ ಅದು ವಿಶಿಷ್ಟವಾಗಿ ಮನದಲ್ಲಿ ಅಚ್ಚಾಗುತ್ತದೆ. ಇಲ್ಲಿ ಒಟ್ಟು ಏಳು ಕಥೆಗಳಿವೆ. ’ಫೂ’ ಕಥೆಯ ಜಯತ್ತೆಯೊಳಗೆ ತಾಯಿ ಜೀವವೊಂದು ವ್ಯವಸ್ಥೆಯ ಸಮ್ಮತಿಗಾಗಿ ಬಿಟ್ಟಗಣ್ಣಿನಲ್ಲೇ ಕಾಯುತ್ತಿರುವಂತಿದೆ. ಹೆಣ್ಣು ಹೆಣ್ತನ ಚೆಲುವುಗಳ ಬಗ್ಗೆ ಬೇರುಬಿಟ್ಟ ಸ್ಥಾಪಿತ ಸಾಮಾಜಿಕ ಗ್ರಹಿಕೆಗಳು, ಕೌಟುಂಬಿಕ ಸಂಬಂಧಗಳೊಳಗಿನ ಮಮಕಾರಗಳನ್ನೂ ಮುರುಟಿ ಹೋಗುವಂತೆ ಮಾಡುವುದು ಈ ಕತೆ ಓದುಗರ ಬಿಚ್ಚಿಡುವ ದುರಂತ. ಇದು ಇಂಡಿಯನ್ ಅಮೆರಿಕನ್ ಕಥೆಗಾರ್ತಿ ಜುಂಪಾ ಲಾಹಿರಿಯ ’ಟ್ರೀಟ್ಮೆಂಟ್ ಆಫ್ ಬೀಬಿ ಹಲ್ದಾರ್’ ಕತೆಯನ್ನು ನೆನಪಿಸುತ್ತದೆ. ಫೂ ಕತೆಯ ಕಸುಬುದಾರಿಕೆ ಏನೆಂದರೆ ಜಯತ್ತೆಯ ಅವಿವಾಹಿತ ಬದುಕಿನ ದೌರ್ಭಾಗ್ಯವನ್ನು ಮಗುವಿನ ಕಣ್ಣುನೋಟದಲ್ಲಿ ನಿರೂಪಿಸಿ ಆಕೆಯ ಒಡಲ ಬೇಗುದಿಯನ್ನ ಮುಟ್ಟಿಯೂ ಮುಟ್ಟದೆ ಕಲೆಯಾಗಿ ಅರಳಿಸಿರುವುದು. ಮಗುವಿನ ಮುಗ್ಧ ಕಣ್ಣುಗಳ ನಿರೂಪಣೆ ಇಲ್ಲಿಯ ಕ್ರೌರ್ಯಕ್ಕೊಂದು ವಿಚಿತ್ರ ಮತ್ತು ಯಾತನದಾಯಕವಾದ ಚೆಲುವನ್ನು ತಂದಿದೆ. ಕಥೆ ಮುಗಿದ ಮೇಲೆ ಓದುಗನಿಗೆ ಜಯತ್ತೆಯ ದೈಹಿಕ ವಿರೂಪ ಮರೆಯಾಗಿ, ಮಗುವಿನೊಂದಿಗಿನ ಅವಳ ಮಧುರ ಗೆಳೆತನ ಮತ್ತು ಅತ್ತಿಗೆ ಅಣ್ಣರ ಮಾನಸಿಕ ವಿಕಾರವಷ್ಟೇ ನೆನಪಲ್ಲುಳಿಯುವುದು ಈ ಕತೆಯ ನಿರೂಪಣಾ ತಂತ್ರದ ಗೆಲುವು.

ಈ ಸಂಕಲನದುದ್ದಕ್ಕೂ ಜೀವಸೃಷ್ಟಿಯ ಭಾಗವಾಗುವ ತಾಯ್ತನದ ಹಂಬಲ ಮತ್ತು ಕಾಳಜಿ ಭಿನ್ನ ತುಯ್ತ ಸಂಕಟಗಳೊಂದಿಗೆ ಭಿನ್ನಭಿನ್ನ ರೂಪಗಳಲಿ, ಜಯತ್ತೆ, ರಂಗಮ್ಮ ಮತ್ತು ಶೈಲ್ಯಾನ ತಾಯಿಯರ ಪಾತ್ರಗಳಲ್ಲಿ ಪ್ರಕಟವಾಗಿದೆ. ’ಫೂ’ ಕಥೆಯ ಜಯತ್ತೆಯದು ಲೋಕ ನಿರ್ಮಿತ ಕಟ್ಟಳೆಗಳಿಂದ ಬೆಂದುಹೋಗುವ ದುರಂತವಾದರೆ, ಪಾತಿ ಮತ್ತು ಗೆಳೆಯನದು (’ಪಾತಿ’ಕತೆ) ಲೋಕದ ಧಾವಂತಗಳ ಗೊಡವೆಯೇ ಇಲ್ಲದೆ ಅರಳುವ ಪ್ರೇಮ ಸಂಬಂಧ. ’ಪಾತಿ’ ಕತೆ ಕೊನೆಕೊನೆಗೆ ಸಾಗಿದಂತೆ ಈ ಲೋಕ ಕಟ್ಟಿರುವ ಕಥೆಗಳಂತೆ ಕೊನೆಯಾಗಬಹುದು ಎಂಬ ಓದುಗನ ನಿರೀಕ್ಷೆಗಳನ್ನು ಲಟಲಟನೆ ಮುರಿದುಹಾಕುತ್ತದೆ. ಈ ಕಥೆಯು ಕಥಾಪ್ರಕಾರ, ಸಂಬಂಧಗಳ ಚೌಕಟ್ಟು, ಧರ್ಮಗಳ ಗೋಡೆ ಹೀಗೆ ಹಲವು ನಿಬಂಧನೆಗಳನ್ನು ಏಕಕಾಲಕ್ಕೆ ಮುರಿದುಕಟ್ಟಿದೆ. ಇದೊಂದು ಹರಿವ ನದಿ. ಫೂ ಕಥೆ ಎತ್ತುವ ಕೆಲವು ಪ್ರಶ್ನೆಗಳಿಗೆ ಇಲ್ಲಿ ಉತ್ತರಗಳನ್ನು ಕಾಣಬಹುದು. ಸಾಂಸ್ಕೃತಿಕ ಬಹುರೂಪತೆಯ ಮುಖ್ಯಚಹರೆಯಾಗಿ ಇದು ತೋರುತ್ತಿದೆ.

’ತೇರು ಸಾಗಿತಮ್ಮ ನೋಡಿರೆ’ ಕಥೆ ವಿನೋದಮಯವೆಂಬಂತೆ ಸಾಗುತ್ತಲೇ ಮುಖ್ಯ ತಿರುವುಗಳಲ್ಲಿ ಉತ್ತರ ಕರ್ನಾಟಕದ ಭಜನೆ ತತ್ವಪದಗಳಲ್ಲಿ ಕಾಣಬಹುದಾದ ಬದುಕಿನ ಕ್ಷಣಿಕತೆ ಮತ್ತು ಅರ್ಥದ ಹುಡುಕಾಟದ ಮಿಂಚುಗಳನ್ನು ಕಾಣಿಸುತ್ತದೆ. ನಮ್ಮ ಬದುಕಿಗೆ ಕೈ ದೀವಿಗೆಗಳನ್ನು ನೀಡಿ ಹೋಗಿರುವ ತತ್ವಪದಕಾರರ ಸೂಕ್ಷ್ಮಮತಿತ್ವ ಮತ್ತು ಬದುಕಿನ ದರ್ಶನ ಊರ ಜನರ ದೃಷ್ಟಿಯಲ್ಲಿ ಹುಚ್ಚನಾಗಿರುವ ಶೈಲ್ಯಾನಲ್ಲಿ ಕಾಣುತ್ತದೆ. ಅತಿ ಲೌಕಿಕತೆಯ ಜಂಜಾಟದಲ್ಲಿ ತೀಡಲ್ಪಟ್ಟ ಊರ ಜಡಮತಿಗಳ ಕಣ್ಣಿಗೆ ಚಿಕ್ಕ ವಯಸ್ಸಿನ ಶೈಲ್ಯಾನಲ್ಲಿ ಅದು ಕಾಣುವುದು ಕಷ್ಟ.

’ವಜ್ರಮುನಿ’ ಕತೆಯ ಭಗವಂತಪ್ಪನೆಂಬ ಕೋಪಿಷ್ಟ ತಂದೆಗೆ ಇಸ್ಪೀಟ್ ಆಟದ ಹುಚ್ಚು. ಹೊಲ ದನ ಕರುಗಳನ್ನೆಲ್ಲ ಅದಕ್ಕಾಗಿ ಮಾರಿ ಮುಗಿಸಿದ ನಂತರ ಆತನಲ್ಲಿ ಕಾಣುವ ಬದಲಾವಣೆ ಕುತೂಹಲಕಾರಿಯಾಗಿದೆ. ಬದುಕು ತನ್ನ ನಿಯಂತ್ರಣದಾಚೆ ಚಲಿಸಿದಾಕ್ಷಣ ಮನುಷ್ಯನ ಯಕಶ್ಚಿತತೆಯ ಅರಿವಾದಂತಿದೆ. ಬೆಂಕಿಯಂತೆ ಬಾಳಿದ ಭಗವಂತಪ್ಪನಂತ ಹಳ್ಳಿಯ ಜೀವ ಇಳಿವಯಸಿನಲ್ಲಿ ಮಾಗಿ ಬಾಗಿ ಬದುಕಿದ ಘಟನಾವಳಿಗಳು, ತನ್ನ ನಿಯಂತ್ರಣದಾಚೆ ಕಥೆಯಾಗತೊಡಗಿರುವ ಪ್ರಕ್ರಿಯೆಯನ್ನು ಧ್ಯಾನದಂತೆ ಗ್ರಹಿಸುತ್ತದೆ. ತನ್ನ ಈ ಕಥೆ ಪೂರ್ಣ ಪ್ರಮಾಣದ ಕಥೆಯಾಗುವುದು- ಈಗ ತೀರಿಹೋಗಿ ಕಥೆಯಾಗಿ ಮಾತ್ರ ಉಳಿದಿರುವ ತನ್ನ ಪೂರ್ವಜರಂತೆ- ತಾನೂ ಕೂಡ ತೀರಿಹೋದಾಗ ಎಂಬುದನ್ನರಿತ ಆತ ದುಗುಡಕ್ಕೊಳಕಾಗುತ್ತಾನೆ; ಲೋಕದ ಗೊಡವೆಯಲ್ಲಿ ತನ್ನ ಪೂರ್ವಜರ ಮತ್ತು ಸಂಗಡಿಗರ ಕಥೆಗಳೂ ತೀರಿಹೋದಾವೆಂಬ ಆತಂಕ ಬಾಧಿಸುತ್ತದೆ. ಮನುಷ್ಯರ ಒಳಗಣ್ಣೆಂಬುದು ಎಷ್ಟು ಸೂಕ್ಷ್ಮಾತಿಸೂಕ್ಷ್ಮವಲ್ಲವೇ? ಸೃಷ್ಟಿಯ ಅಗಾಧತೆಯನ್ನು ಅರಿಯಲು ಬೇಕಾದ ಕಣ್ಣಿದ್ದಾಗ ಇಂಥ ಪಾತ್ರಗಳು ಕಥೆಗಾರನಿಗೆ ಕಾಣುತ್ತವೆ. ಲೋಕದ ತಿರುಗಾಟ ಸಾಕಾಗಿ ಬೇರುಗಳನ್ನರಸಿ ಬಂದಿರುವ ಮಗ ಮತ್ತು ತನ್ನ ಪೂರ್ವಜರ ಬದುಕನ್ನ ಕಥೆಗಳಲ್ಲೇ ದರ್ಶಿಸುತ್ತಿರುವ ಭಗವಂತಪ್ಪನ ಚಿತ್ರಣ ಐರಿಷ್ ಕವಿ ಶೇಮಸ್ ಹೀನಿಯ ’ಅಗೆಯುವಿಕೆ’ (ಡಿಗ್ಗಿಂಗ್) ಕವನದ ಚಿತ್ರಣವನ್ನ ಕಣ್ಮುಂದೆ ತರುತ್ತದೆ. ತಮ್ಮ ತಿಳಿವಿನ ಮಿತಿಗಳನ್ನು ದಾಟಿಹೋಗಿ ಸೃಷ್ಟಿಯ ಅಚ್ಚರಿ ಆಘಾತಗಳನ್ನ ಬದುಕು ಕಾಣಿಸುವ ಕ್ಷಣ, ತಮ್ಮ ಬದುಕು ಕಥೆಯಾಗುತ್ತಿರುವುದರ ಅರಿವು ಮನುಷ್ಯರಲ್ಲಿ ಹುಟ್ಟುವುದನ್ನ ’ದೀಪದ ಮಲ್ಲಿ’ ಎಂಬ ಜಾನಪದ ಕಥೆಯ ಮೂಲಕ ಎ.ಕೆ. ರಾಮಾನುಜನ್ ತಮ್ಮ ಲೇಖನವೊಂದರಲ್ಲಿ (ಪ್ರತಿವ್ಯವಸ್ಥೆಯೆಡೆಗೆ..) ವಿಶ್ಲೇಷಿಸುತ್ತಾರೆ. ಭಗವಂತಪ್ಪ ಮತ್ತು ಮಗನ ನಡುವೆ ಘಟಿಸುವ ಅರಿವಿನ ವಿನಿಮಯ ರಾಮಾನುಜನ್‌ರ ವಿಶ್ಲೇಷಣೆಯನ್ನ ಇನ್ನಷ್ಟು ವಿವರಿಸುವ ರೂಪಕದಂತಿದೆ.

ಇದನ್ನೂ ಓದಿ: ’ನದಿಯೊಂದು ನಿದ್ರಿಸಿದಾಗ’: ವಿಶಿಷ್ಟ ಆಚರಣೆಗಳು, ನಂಬಿಕೆಗಳು, ಪೂರ್ವಜರ ಆರಾಧನೆಯೇ ಕಾಪಾಡುವ ಬುಡಕಟ್ಟು ಚಿತ್ರಣ

’ಕನಸಿನ ವಾಸನೆ’ ಕಥೆಯಲ್ಲಿ ದಿನಬೆಳಗಾದರೆ ಲೈಂಗಿಕ ಉನ್ಮಾದಗಳಲ್ಲಿ ತೇಲಾಡುತ್ತಿದ್ದ ಲಚುಮನಿಗೆ ರಂಗಮ್ಮ ನೀಡುವ ಕೆರದ ಏಟು ಪಾಪಪ್ರಜ್ಞೆಯಲ್ಲಿ ಅಟ್ಟಾಡಿಸುತ್ತದೆ; ಮಗುವಿನ ಮುಗ್ಧತೆಯನ್ನು ಹುಟ್ಟುಹಾಕುತ್ತದೆ. ಕೊನೆಗೆ ರಂಗಮ್ಮನ ತಾಯ್ತನ ಅವನನ್ನ ಪೊರೆಯುತ್ತದೆ. ದೇಹದ ಬಯಕೆಗಳಲ್ಲಿ ಮಿಂದೇಳುತ್ತಿದ್ದ ಲಚುಮ ಮಠಭಜನೆ ಎಂದು ಸುತ್ತಾಡುತ್ತಾ ಮಕ್ಕಳಾದಿಯಾಗಿ ಎಲ್ಲರಿಗೂ ಕೈಮುಗಿಯುತ್ತ ಅಡ್ಡಾಡುವುದನ್ನು ಕಂಡರೆ ಕೆ. ವೈ.ನಾರಾಯಣಸ್ವಾಮಿಯವರ ’ವಿನುರ ವೇಮ’ ನಾಟಕದ ವೇಮನ ಅರೆ ಕ್ಷಣ ಕಣ್ಮುಂದೆ ಬಂದುಹೋಗುತ್ತಾನೆ. ಇನ್ನೊಂದು ದಿಕ್ಕಿನಲ್ಲಿ ಸಂಸ್ಕಾರದ ಪ್ರಾಣೇಶಾಚಾರ್ಯನ ಪ್ರತಿಪಾತ್ರದಂತೆ (ತಲೆಕೆಳಗಾದ) ಕಾಣುತ್ತಾನೆ. ಓದುಗನಿಗೆ ಮಾತ್ರ ಲಚುಮ ಲಚುಮನೇ.

ಹಳ್ಳಿಯ ಕ್ಷುದ್ರರಾಜಕಾರಣ ಅಸೂಯೆ ದಾಯಾದಿತನ ಸಣ್ಣತನಗಳ ನಡುವೆ ಸತ್ತುಹೋಗುವ ಪ್ರಾಮಾಣಿಕತೆ ಮತ್ತು ಮುಗ್ಧತೆಯನ್ನು, ಅದರ ಪರಿಣಾಮವಾಗಿ ಹುಟ್ಟುವ ಸಿಟ್ಟು ವ್ಯಗ್ರತೆಯನ್ನ ’ಖತಲ್ ರಾತ್ರಿ’ ಕತೆ ಸೆರೆ ಹಿಡಿದಿದೆ. ಡಿಜಿಟಲ್ ಯುಗದ ಮೊಬೈಲ್ ಪರದೆಯ ಹೈಪರ್ ರಿಯಾಲಿಟಿಯಲ್ಲಿ ಹುಟ್ಟಿ ಸಾಯುವ ಸಂಬಂಧಗಳು, ಬೃಹತ್ ನಗರಗಳ ಬಂದಿಖಾನೆಯಂಥ ರೂಮುಗಳಲ್ಲಿ ಕಾಡುವ ಒಬ್ಬಂಟಿತನ, ಅನಾಥ ಪ್ರಜ್ಞೆಯ ಪರಿಣಾಮದಲ್ಲಿ ’ಮಿಣುಕು ಹುಳು’ ಕಥೆ ಹುಟ್ಟಿದಂತಿದೆ. ಹಳ್ಳಿಗಳಿಂದ ಬೃಹತ್ ನಗರಗಳಿಗೆ ವಲಸೆ ಹೋಗಿ ನಿರ್ಜೀವ ನೆರಳಿನಂತಾದವರ ಧಾವಂತದ ಬದುಕಿನ ಪಡಿಪಾಟಲು ಇಲ್ಲಿದೆ. ’ಜಗತ್ತು ಕೊನೆಗೊಳ್ಳುವುದು ಸ್ಫೋಟದೊಂದಿಗಲ್ಲ ಚೀತ್ಕಾರದೊಂದಿಗೆ’ ಎನ್ನುವ ಇಂಗ್ಲಿಷ್ ಕವಿ ಯೇಲಿಯಟ್‌ನ ’ಟೊಳ್ಳು ಮನುಷ್ಯರು’ (Hallow Men) ಕವನದಲ್ಲಿಯ ಚೀತ್ಕಾರಗಳು ಈ ಕಥೆಯಲ್ಲಿ ಪ್ರತಿಧ್ವನಿಸುತ್ತಿವೆ.

ಈ ಪುಸ್ತಕದಲ್ಲಿನ ಮೊದಲ ಕಥೆ (ಫೂ) ಹೆಣ್ಣೊಬ್ಬಳ ದೇಹದ ಮಿತಿಗಳು ಮತ್ತು ಅಪ್ಪಟ ಹಳ್ಳಿಯ ಸಾಮಾಜಿಕ ಕಟ್ಟುಪಾಡುಗಳು ಹುಟ್ಟಿಸುವ ದುರಂತದ ಕಥೆ. ಕೊನೆಯದು (ಮಿಣುಕುಹುಳು) ಮನಸ್ಸಿನ ನಾಗಾಲೋಟದಿಂದಾಗಿ ಹಳ್ಳಿಯಿಂದ ಹೊರಟು ಪಟ್ಟಣದಲ್ಲಿ ನೆಲೆ ನಿಲ್ಲದೇ ಸತ್ಯೋತ್ತರ ಕಾಲದ ಪಾಪಪ್ರಜ್ಞೆಯಲ್ಲಿರುವವರ ಪಡಿಪಾಟಲಿನ ಚಿತ್ರಣ. ಏಳು ಕಥೆಗಳಲ್ಲಿ ಮೊದಲನೆಯದು ಕಥೆ ಹುಟ್ಟಲು ಸಶಕ್ತವಾದ ಹಳ್ಳಿಯ ಪರಿಸರವನ್ನ ಹಿಡಿದಿದೆ. ಕೇಂದ್ರದಲ್ಲಿರುವ ಕಥೆ (ವಜ್ರಮುನಿ)- ಕಥೆಗಳು ಹುಟ್ಟುವ ಕೊನೆಗೊಳ್ಳುವ, ಕೊನೆಗೊಳ್ಳುವಾಗ ಮನುಷ್ಯನಿಗೆ ಬರುವ ದುರಂತ ಪ್ರಜ್ಞೆಯ ಜಿಜ್ಞಾಸೆಯಂತಿದೆ. ಕೊನೆಯ ಕಥೆಯಲ್ಲಿರುವುದು (ಮಿಣುಕುಹುಳು) ಅತಿ ವೇಗ ಮತ್ತು ಧಾವಂತಕ್ಕೆ ತುತ್ತಾಗಿ ಕಥೆಗಳು ಉಸಿರುಗಟ್ಟಿ ಸಾಯುವ ಬೃಹತ್ ನಗರಗಳ ಸತ್ವಹೀನ ಪರಿಸರದ ಚಿತ್ರಣ. ಹೀಗೆ ಈ ಕಥೆಗಳನ್ನು ಜೋಡಿಸಿರುವ ಕ್ರಮದಲ್ಲಿ ಒಂದು ಬಂಧ ಮತ್ತು ಶಿಲ್ಪ ಮೂಡಿದೆ. ಹಳ್ಳಿಯ ಸಾಮಾಜಿಕ ಕೇಡುಗಳಿಗೆ ಪಟ್ಟಣದ ಬದುಕು ಉತ್ತರವಲ್ಲವೆಂಬ ಹೊಳಹು ಇಲ್ಲಿದೆ. ನಡುವೆ ಬರುವ ಕಥೆಗಳಲ್ಲಿಯ ಹುಚ್ಚು ಶೈಲ್ಯಾ, ಭಗವಂತಪ್ಪ, ಪಾತಿ, ಪಂಪ್ ಲಚುಮ ’ಅರಿವೆಂಬುದು ಸ್ಥಿರವಲ್ಲ ಮನುಜ, ಅದು ಹರಿವು’ ಎಂಬ ಬೆಳಕಿನ ಹಾಡನ್ನು ಹಾಡುತ್ತಿರುವಂತಿದೆ.

ಕಥೆಯ ರಚನೆಯ ಚೌಕಟ್ಟಿನಲ್ಲಿ ಕಥಾವಸ್ತು-ತಾತ್ವಿಕತೆಯ ಏಕರೂಪತೆಯನ್ನು ಮೀರಿನಿಲ್ಲುವ ತುಡಿತ ಇಡೀ ಸಂಕಲನದಲ್ಲಿ ಕಾಣುತ್ತದೆ. ಇದರಾಚೆಗೂ ಈ ಕಥೆಗಳಲ್ಲಿ ಕಾಣುವ ಸಾಮಾನ್ಯ ತತ್ವವೆಂದರೆ ಅಂಚಿನಲ್ಲೇ ಉಳಿದುಕೊಂಡಿರುವ ಜೀವಗಳ ಧ್ವನಿಯಾಗಿರುವುದು. ಹಳ್ಳಿ-ಪಟ್ಟಣ, ಸ್ನೇಹಿತ-ಪ್ರಿಯತಮ, ಹಿಂದೂ-ಮುಸ್ಲಿಂ, ಹಿರಿಯ-ಕಿರಿಯ ಯಾವ ಇಕ್ಕಳಗಳಲ್ಲೂ ಸಿಕ್ಕಿಹಾಕಿಕೊಳ್ಳದೆ ಹರಿವ ನೀರಿನಂತೆ ಇಲ್ಲಿಯ ಕಥೆಗಳಿವೆ. ಈ ಕಥೆಗಳು ಮಡಿವಂತಿಕೆಯಿಂದ ಮುಕ್ತವಾಗಿರುವುದರಿಂದ, ಹೈದರಾಬಾದ್ ಕರ್ನಾಟಕದ ಪರಿಸರವನ್ನು ಕಟ್ಟಿಕೊಡುವ ನುಡಿಗಟ್ಟಿನಿಂದ, ಮನುಷ್ಯರ ಸಣ್ಣತನ ಕೇಡು ಪ್ರೇಮ ಕಾಮ ಬಡತನ ಬಂಧನ ಮಮತೆ ಹೋರಾಟಗಳೆಲ್ಲದರ ಸೂಕ್ಷ್ಮ ಚಿತ್ರಣದಿಂದ ಜೀವಂತಿಕೆಯಲ್ಲಿ ಮೈದಾಳಿವೆ. ಹಳ್ಳಿ ಬದುಕಿನಲ್ಲಿಯ ಸಾಮಾಜಿಕ ವಿಸಂಗತಿಗಳು, ನಂಬಿಕೆಗಳು, ಕೇಡುಗಳ ಸಹಜವಾದ ಅನಾವರಣವಿದೆ. ವ್ಯಂಗ್ಯ ವಿಷಾದ ಮತ್ತು ಪ್ರತಿರೋಧ ಒಳ ದ್ರವ್ಯದಂತೆ ತುಂಬಾ ಸೂಕ್ಷ್ಮವಾಗಿ ಈ ಕಥೆಗಳಲ್ಲಿ ಹರಿಯುತ್ತಿದೆ. ಇಂಗ್ಲಿಷಲ್ಲಿ ’ಫೂ’ ಎಂದರೆ ಥೂ ಎಂದರ್ಥ. ಜನಸಾಮಾನ್ಯರನ್ನ ದಿಕ್ಕುಗೆಡಿಸಿರುವ ಆಧುನಿಕತೆ ಮತ್ತು ನಾಗರಿಕತೆಯ ಸಂಕಥನಗಳನ್ನ ತನ್ನ ನೆಲಮೂಲದ ಚೈತನ್ಯಗಳ ಮೂಲಕವೇ ಮುಖಾಮುಖಿಯಾಗುವ ತ್ರಾಣ ಈ ಕಥೆಗಳ ನಿರೂಪಣೆಯಲ್ಲಿದೆ.

ಫೂ ಮತ್ತು ಇತರ ಕತೆಗಳು
ಲೇಖಕರು: ಮಂಜುನಾಯಕ ಚಳ್ಳೂರು
ಬೆಲೆ: ರೂ 80/-
ಪ್ರಕಾಶಕರು: ಅಹರ್ನಿಶಿ ಪ್ರಕಾಶನ, ಶಿವಮೊಗ್ಗ

ಡಾ. ಸಿ. ಬಿ. ಐನಳ್ಳಿ

ಡಾ.ಸಿ.ಬಿ.ಐನಳ್ಳಿ
ಧಾರವಾಡದ ಕರ್ನಾಟಕ ಕಲಾ ಮಹಾವಿದ್ಯಾಲಯದಲ್ಲಿ ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...