Homeಪುಸ್ತಕ ವಿಮರ್ಶೆ’ನದಿಯೊಂದು ನಿದ್ರಿಸಿದಾಗ’: ವಿಶಿಷ್ಟ ಆಚರಣೆಗಳು, ನಂಬಿಕೆಗಳು, ಪೂರ್ವಜರ ಆರಾಧನೆಯೇ ಕಾಪಾಡುವ ಬುಡಕಟ್ಟು ಚಿತ್ರಣ

’ನದಿಯೊಂದು ನಿದ್ರಿಸಿದಾಗ’: ವಿಶಿಷ್ಟ ಆಚರಣೆಗಳು, ನಂಬಿಕೆಗಳು, ಪೂರ್ವಜರ ಆರಾಧನೆಯೇ ಕಾಪಾಡುವ ಬುಡಕಟ್ಟು ಚಿತ್ರಣ

- Advertisement -
- Advertisement -

ನಾಗಲ್ಯಾಂಡ್ ಲೇಖಕಿ ಈಸ್ಟರೀನ್ ಕೀರೆಯವರ ’ನದಿಯೊಂದು ನಿದ್ರಿಸಿದಾಗ’ ಕಾದಂಬರಿ ಓದಿದೆ. 2015ನೇ ಸಾಲಿನ ದ ಹಿಂದೂ (ಪತ್ರಿಕೆ) ಸಾಹಿತ್ಯ ಪ್ರಶಸ್ತಿಯನ್ನ ಪಡೆದುಕೊಂಡ ಕೃತಿ ಮಾಂತ್ರಿಕ ವಾಸ್ತವವಾದವನ್ನು ಬಳಸಿಕೊಂಡು ನಾಗಲ್ಯಾಂಡ್ ಬುಡಕಟ್ಟು ಜನಾಂಗದ ಕಠಿಣ ಬದುಕನ್ನ ಸರಳ ನಿರೂಪಣೆಯ ಮೂಲಕ ತೋರಿಸಿಕೊಟ್ಟಿದೆ. ಬುಡಕಟ್ಟು ಜನಾಂಗ ಎಂದಾಗ ನೆನಪಿಗೆ ಬಂದಿದ್ದು ಪಂಜಾಬಿ ಲೇಖಕ ಹಾಗೂ ಚಳವಳಿಯ ಸಂಗಾತಿ ಸತ್ನಾಮ್ ಬರೆದಿರುವ ಪ್ರವಾಸಕಥನದ ದಾಟಿಯಲ್ಲಿರುವ ’ಜಂಗಲ್ ನಾಮಾ’ ಪುಸ್ತಕ. ಆದಿವಾಸಿ ಸಮುದಾಯಗಳು ನಾಗರಿಕ ಜಗತ್ತಿನೊಂದಿಗೆ ದೂರವಿದ್ದು ಬದುಕುವ ಪರಿ ಅಚ್ಚರಿಯಾದದ್ದು. ಶಿಕ್ಷಣ ಮತ್ತು ಅನೇಕ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿ ಆದಿವಾಸಿಗಳೂ ಕಾಡಿನಲ್ಲೇ ತಮ್ಮ ಬದುಕನ್ನ ಕಟ್ಟಿಕೊಂಡಿದ್ದಾರೆ; ಆಧುನೀಕರಣದ ಹೆಸರಲ್ಲಿ ಕಾಡನ್ನ ಮತ್ತು ಬದುಕನ್ನ ನಾಶಮಾಡುವ ಬಂಡವಾಳಶಾಹಿಗಳ ಕ್ರೂರತೆಯನ್ನ ’ಜಂಗಲ್ ನಾಮಾ’ ಅತ್ಯಂತ ಅಚ್ಚುಕಟ್ಟಾಗಿ ಚಿತ್ರಿಸಿದೆ. ಕೊನೆಗೆ ಸರಕಾರದಿಂದ ಬೇಸತ್ತು ಚಳವಳಿಗೆ ಕಾಲಿಡುವ ಚಿತ್ರಣವನ್ನು ಹಂತಹಂತವಾಗಿ ಕಟ್ಟಿಕೊಡುತ್ತದೆ.

ಆದರೆ ’ನದಿಯೊಂದು ನಿದ್ರಿಸುವಾಗ’ ಕಾದಂಬರಿಯಲ್ಲಿ ಇಲ್ಲಿನ ಜನಾಂಗ ಕೇವಲ ತಮ್ಮ ನಂಬಿಕೆಯೊಂದಿಗೆ ಜೀವಿಸುವ ಚಿತ್ರಣವಿದೆ. ತಮ್ಮನ್ನು ಲೆಕ್ಕಿಸದ, ನಿರ್ಲಕ್ಷಿಸಿದ ಅಲ್ಲಿನ ಆಡಳಿತದ ವಿರುದ್ಧ ಯಾವುದೇ ಪ್ರತಿರೋಧ ನಮಗೆ ಕಾಣಸಿಗುವುದಿಲ್ಲ; ಕಾದಂಬರಿ ಚಲಿಸುವ ದಿಕ್ಕು ಬೇರೆಯೇ ತರಹದ್ದಾಗಿರುವುದರಿಂದ ಪ್ರತಿರೋಧದ ಪ್ರಶ್ನೆಯೇ ಏಳುವುದಿಲ್ಲ. ಕಾದಂಬರಿಯ ಆರಂಭದಲ್ಲಿ ವೀಲಿ ನಿದ್ರಿಸುವ ನದಿಯ ಕನಸನ್ನು ಕಾಣುತ್ತಾನೆ. ಕಾಲಜ್ಞಾನಿಯ ಮಾತಿನಂತೆ ನದಿ ನಿದ್ರಿಸುವಾಗ ನದಿಯ ಮಧ್ಯಭಾಗದಲ್ಲಿ ಮುಳುಗಿ ಹೃದಯದ ಕಲ್ಲನ್ನು ಎತ್ತಿತಂದರೆ ಅದು ಹಣ, ಒಡವೆ, ಆಕಳು ಮತ್ತು ಸುಂದರವಾದ ಹುಡುಗಿಯನ್ನು ಕೊಡುತ್ತದೆಂಬುದು ಕಥಾನಾಯಕ ವೀಲಿಯ ನಂಬಿಕೆ ಮಾತ್ರವಲ್ಲದೇ ಆ ಜನಾಂಗದ ಪ್ರತಿಯೊಬ್ಬರ ನಂಬಿಕೆ. ನಿದ್ರಿಸುವ ನದಿಯನ್ನು ಹುಡುಕುತ್ತಾ ಹೋಗುವ ಕಥಾನಾಯಕನ ಪ್ರಯಾಣದ ಮೂಲಕ, ಯಾವುದೇ ಮೂಲಭೂತ ಅಥವಾ ಆಧುನಿಕ ಸೌಕರ್ಯಗಳಿಲ್ಲದ ಕಾಡಿನ ಹಾಡಿಗಳಲ್ಲಿ ಬುಡಕಟ್ಟು ಸಂಸ್ಕೃತಿಗಳು ಬದುಕನ್ನ ಕಟ್ಟಿಕೊಂಡ ರೀತಿಯನ್ನ ಲೇಖಕಿ ಅತಿ ಸರಳವಾಗಿ ಕಟ್ಟಿಕೊಡುತ್ತಾರೆ.

ಈಸ್ಟರೀನ್ ಕೀರೆ

ಕಾಡಿನ ಜೀವನ ವಿಧಾನ, ಸಾಂಸ್ಕೃತಿಕ ಚೆಲುವಿನಲ್ಲಿ ಭಾಗಿಯಾಗುವುದು, ಮರುಗುವುದು, ಭಯಗೊಳ್ಳುವುದು ಹಾಗೂ ಕೆಲವೊಮ್ಮೆ ಆಶ್ಚರ್ಯಚಕಿತರಾಗುವುದಕ್ಕೆ ಈ ಕೃತಿ ಓದುಗನಿಗೆ ಅವಕಾಶ ನೀಡುತ್ತದೆ; ಆದರೆ, ಉಳ್ಳವನ ಮತ್ತು ಇಲ್ಲದವನ ನಡುವಿನ ಅಂತರ, ಬುಡಕಟ್ಟು ಸಮುದಾಯಗಳ ಬದುಕಿನ ಲೌಖಿಕ ಬಡತನ, ಇವರ ಇಂತಹ ಬದುಕಿಗೆ ಕಾರಣರಾದವರು ಯಾರು ಎಂಬ ವಿಮರ್ಶೆಗೆ ಓದುಗ ಮುಂದಾಗಲು ಬಿಡುವುದಿಲ್ಲ. ಕೃತಿಯ ನಡುವೆ ಕೆಲವೊಂದು ಭಯಾನಕ ಸಂಗತಿಗಳು ಓದುಗನಲ್ಲಿ ದಿಗಿಲು ಹುಟ್ಟಿಸುತ್ತವೆ. ಆತ್ಮದ ಹುಲಿಯೊಂದಿಗೆ ನಡೆಯುವ ಸೆಣಸಾಟ, ಮತ್ತೊಮ್ಮೆ ಕ್ಷುಲ್ಲಕ ಕಾರಣವೊಂದಕ್ಕೆ ಬೇಟೆಗಾರ ಪೇಹುವಿನ ಕೊಲೆ, ನೇಪಾಳಿ ದಂಪತಿಗಳ ಕೊಲೆ, ಕೊನೆಗೆ ವೀಲಿಯ ಸಾವು ಈ ತರಹದ ಭಯಾನಕ ಸಂಗತಿಗಳು ಓದುಗನಿಗೆ ಶಾಕ್ ನೀಡಿ ನೆನಪಲ್ಲಿ ಅಚ್ಚಳಿಯದೇ ಉಳಿಯುತ್ತವೆ. ವೀಲಿಗೆ ಕಾಡಿನಲ್ಲಿ ಹಂತಹಂತವಾಗಿ ಆಶ್ರಯ ನೀಡಿ, ಸಹಾಯ ಮಾಡಿ ಮುಂದಿನ ಪ್ರಯಾಣಕ್ಕೆ ಅಣಿಮಾಡಿಕೊಡುವ ಮಾನವೀಯತೆ ಮತ್ತು ಕರುಣೆ ತುಂಬಿದ ಕುಟುಂಬಗಳು ಕೂಡ ಇಲ್ಲಿ ಕಾಣಸಿಗುತ್ತವೆ.

ಇದನ್ನೂ ಓದಿ: ಸರಮಾಗೋನ ’ಕುರುಡು’ ಕಾದಂಬರಿ: ನಾವು ಕಟ್ಟಿದ ಸ್ವರ್ಗ ದಿಢೀರನೆ ಕುಸಿದಾಗ..!

ನಾಗರಿಕ ಜಗತ್ತು ಯಾವುದನ್ನು ಮೂಢನಂಬಿಕೆಯೆಂದು, ಅತಿಮಾನುಷವೆಂದು ಭಾವಿಸಿದೆಯೋ ಅದನ್ನು ಮಾಂತ್ರಿಕತೆಯ ಮೂಲಕ ವಾಸ್ತವವಾಗಿಸಿದ್ದಾರೆ ಕೀರೆ. ಕರ್ಪ್ಯೂಮಿಯಾ ಹಳ್ಳಿಯಿಂದ ಬಂದಂತಹ ಹೆಂಗಸರು ಶಾಪಗ್ರಸ್ತರು; ಬುಡಕಟ್ಟು ಜನಾಂಗದೊಳಗಡೆನೇ ತಿರಸ್ಕೃತಗೊಂಡು ಕಾಡಿನಲ್ಲಿ ಅವಿವಾಹಿತರಾಗಿ ಬದುಕವಂತಹ ಜನಾಂಗವಿದು. ಇವರಿಗೇನಾದರೂ ಸಿಟ್ಟು ಬಂದು ಬೆರಳು ತೋರಿಸಿದರೆ ಅನರ್ಥ ಸಂಭವಿಸುತ್ತೆಂದು ಅಲ್ಲಿನ ಜನರ ಬಲವಾದ ನಂಬಿಕೆ. ಇವರನ್ನು ದೂರ ಇಟ್ಟ ಜನ ತಮಗೆ ಏನಾದರೂ ಕಾಯಿಲೆ ಬಂದರೆ ಕರ್ಪ್ಯೂಮಿಯಾ ಮಹಿಳೆಯರ ಹತ್ತಿರ ಹೋಗಿ ಉಡುಗೊರೆಯ ರೂಪದಲ್ಲಿ ದವಸ ಧಾನ್ಯಗಳನ್ನು ನೀಡಿ ಗುಣವಾಗುತ್ತಾರೆ. ಏಟಿಯೆಂಬ ಪಾತ್ರ ಕೂಡ ತಿರಸ್ಕೃತಗೊಂಡ ಒಂದು ಕರ್ಪ್ಯೂಮಿಯಾ ಸಮುದಾಯದಿಂದ ಬಂದವಳು. ಅವಳು ತಮ್ಮ ಜನಾಂಗದ ಪೂರ್ವಜರ ದುಷ್ಕೃತ್ಯದಿಂದ, ಮಾನಸಿಕವಾಗಿ, ದೈಹಿಕವಾಗಿ ಹಿಂಸೆಗೆ ಒಳಪಟ್ಟಿದ್ದಾಳೆ; ಪೂರ್ವಗ್ರಹದಿಂದ ನಾವು ಯಾರನ್ನು ಮನುಷ್ಯರಲ್ಲವೆಂದು ಒಪ್ಪಿಕೊಂಡಿದ್ದೇವೆಯೋ ಅಂಥವಳನ್ನು “ನೀವು ಮನುಷ್ಯರೇ” ಎಂದು ವೀಲಿಯ ಮೂಲಕ ತೋರಿಸಿಕೊಡುವುದರಲ್ಲಿ ಕಾದಂಬರಿ ಗೆಲ್ಲುತ್ತದೆ. ಅವಳ ಮೂಢನಂಬಿಕೆಯಿಂದ, ಏಟಿಯನ್ನು ಪಾರು ಮಾಡಿದ ವೀಲಿಗೆ, ಸಂಪತ್ತು ನೀಡುತ್ತದೆ ಎಂದು ಹೃದಯದ ಕಲ್ಲನ್ನು ಹುಡುಕಲು ಹೋಗುವುದು ಕೂಡ ಮೂಢನಂಬಿಕೆಯ ಭಾಗವೇ ಇರಬಹುದೆಂದು ಹೊಳೆಯುವುದಿಲ್ಲ. ಅದು ಅವರ ಬದುಕಿನ ಭಾಗವಾಗಿರುವುದರಿಂದ ನಂಬಿಕೆಯನ್ನ ಮತ್ತು ಮೂಢನಂಬಿಕೆಯನ್ನು ಬೇರ್ಪಡಿಸುವ ಗೋಜಿಗೆ ಹೋಗಿಲ್ಲ; ಹಾಗೆ ಮಾಡಿದರೆ ಪೂರ್ವಜರಿಗೆ ಅನ್ಯಾಯವೆಸಗಿ ಘೋರ ಅಪರಾಧ ಮಾಡಿದಂತಾಗುತ್ತದೆ ಎನ್ನುವದು ಅವರ ಅಭಿಪ್ರಾಯ. ಅದೇ ಈ ಕಾದಂಬರಿಯ ವಿಶೇಷ ವೈರುಧ್ಯ ಅನ್ನಿಸಿಬಿಡುತ್ತದೆ.

ರವಿಕುಮಾರ್ ಹಂಪಿ

ಮನುಷ್ಯತ್ವವುಳ್ಳ ಹಾಗೂ ಸದಾ ಒಳ್ಳೆಯದನ್ನೇ ಯೋಚನೆ ಮಾಡುವಂತಹ ವ್ಯಕ್ತಿ ವೀಲಿ. ಏಟಿಯನ್ನು ಅಂಚಿನಿಂದ ಮುಖ್ಯವಾಹಿನಿಗೆ ತರುವಲ್ಲಿ ಅವಳ ಬದುಕಿನಲ್ಲಾಗುವ ಬದಲಾವಣೆಗೆ ವೀಲಿಯ ಪಾತ್ರ ತುಂಬಾ ಮುಖ್ಯವಾದುದು. ಹೀಗಾಗಿ ಏಟಿಯು ವೀಲಿಗೆ ಯಾವರೀತಿ ಋಣ ಸಂದಾಯ ಮಾಡಬೇಕೆಂದು ತಿಳಿಯದೇ ಹೆಂಡತಿಯಾಗಬೇಕೋ? ವಯಸ್ಸಿನ ಅಂತರ ಲೆಕ್ಕಹಾಕಿ ಮಗಳಾಗಬೇಕೋ? ಎಂಬ ಗೊಂದಲಕ್ಕೆ ಸಿಕ್ಕ ಏಟಿ ವೀಲಿಯ ಆಸೆಯಂತೆ ಕೊನೆಗೆ ಮಗಳಾಗಿಯೇ ಉಳಿಯುತ್ತಾಳೆ.

ಒಟ್ಟಿನಲ್ಲಿ ಕಾದಂಬರಿ ನಾಯಕ ಲೌಖಿಕ ಬದುಕನ್ನ ಅಲೌಖಿಕತೆಯಲ್ಲಿ ಹುಡುಕುವವನು. ಈ ಕಾದಂಬರಿಯಲ್ಲಿ ಬರುವ ಸಮುದಾಯದ ವಿಶಿಷ್ಟ ಆಚರಣೆಗಳು, ನಂಬಿಕೆಗಳು, ಪೂರ್ವಜರ ಆರಾಧನೆ- ಅವೇ ಅವರನ್ನ ಬದುಕಿನುದ್ದಕ್ಕೂ ಮುನ್ನಡೆಸುತ್ತವೆ. ಕಾಡಿನಲ್ಲಿನ ಸಸ್ಯಗಳು, ಪ್ರಾಣಿಗಳು, ಎಂದೂ ಬತ್ತದ ನದಿ, ನದಿಮೀನುಗಳು ಇದ್ದರೆ ಸಾಕು ಒಂದು ಶತಮಾನವನ್ನು ಯಾವುದೇ ತಾಪತ್ರಯವಿಲ್ಲದೇ ನೂಕುವರು ಅವರು. ವಿಶೇಷ ಹಾಗೂ ಸರಳ ನಿರೂಪಣೆಯ ಕ್ರಮದಿಂದಾಗಿ ಓದಿನಲ್ಲಿ ಎಲ್ಲೂ ತೊಡಕು ಮತ್ತು ಗೊಂದಲಗಳಾಗುವುದಿಲ್ಲ. ಕಾದಂಬರಿ ಜೊತೆಗೆ ನಾವು ಕೂಡ ಕಾಡು ಸುತ್ತಿದಂತೆ ಭಾಸವಾಗುತ್ತದೆ. ಬೇರೆ ರಾಜ್ಯದ ಕಾದಂಬರಿಯನ್ನು ಕನ್ನಡಕ್ಕೆ ತರುವಲ್ಲಿ ರವಿ ಹಂಪಿಯವರು ಯಶಸ್ವಿಯಾಗಿದ್ದಾರೆ..

ನದಿಯೊಂದು ನಿದ್ರಿಸಿದಾಗ
ಕಾದಂಬರಿ-ಅನುವಾದ
ಮೂಲ: ವೆನ್ ದ ರಿವರ್ ಸ್ಲೀಪ್ಸ್
(ಈಸ್ಟರೀನ್ ಕೀರೆ)
ಅನುವಾದ: ರವಿ ಹಂಪಿ
ಪ್ರಕಾಶನ: ವೈಷ್ಣವಿ ಪ್ರಕಾಶನ

ಅಮರೇಶ ಗಿಣಿವಾರ

ಅಮರೇಶ ಗಿಣಿವಾರ
ಕಥೆಗಾರ- ಕವಿ ಅಮರೇಶ ಗಿಣಿವಾರ ಅವರು ಸಿಂಧನೂರಿನ ಗಿಣಿವಾರದವರು. ಅವರ ’ಹಿಂಡೆಕುಳ್ಳು’ ಕತೆಗೆ ’ಸಂಗಾತ’ ಯುವ ಕತಾ ಸ್ಫರ್ಧೆಯಲ್ಲಿ ಬಹುಮಾನ ಲಭಿಸಿದೆ. ’ಬಯಲು’ ಕವನ ಸಂಕಲನ, ’ಬಾಂಗ್ಲಾದ ಹಕ್ಕಿಗಳು’ ಅವರ ಇತ್ತೀಚಿನ ಕಥಾಸಂಕಲನ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...