ಹಿಂಸಾಪೀಡಿತ ಮಣಿಪುರ ರಾಜ್ಯಕ್ಕೆ ಭೇಟಿ ನೀಡಿರುವ ಸೀತಾರಾಮ ಯೆಚೂರಿ ನೇತೃತ್ವದ ಸಿಪಿಐ(ಎಂ) ಪಕ್ಷದ ನಿಯೋಗವು ರಾಜ್ಯಪಾಲರಾದ ಅನುಸೂಯ ಊಕಿ ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ರಾಜ್ಯದಲ್ಲಿ ನಡೆಯುತ್ತಿರುವ ಗಲಭೆಯಿಂದ ನಿರಾಶ್ರಿತರಾಗಿ ವಿವಿಧ ಶಿಬಿರಗಳಲ್ಲಿ ಆಶ್ರಯ ಪಡೆಯುತ್ತಿರುವವರ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಿದ್ದಾರೆ. ಈ ಬಗ್ಗೆ ರಾಜ್ಯ ಭವನ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ.
ಸೀತಾರಾಮ ಯೆಚೂರಿ ಅವರು ಟ್ವೀಟ್ ಮಾಡಿದ್ದು, ”ಸಿಪಿಐ(ಎಂ) ನಿಯೋಗವು ಮಣಿಪುರದ ಗೌರವಾನ್ವಿತ ರಾಜ್ಯಪಾಲರಾದ ಅನುಸೂಯ ಊಕಿ ಅವರನ್ನು ಭೇಟಿ ಮಾಡಿದೆ. ಅವರೊಂದಿಗೆ ಒಂದು ಗಂಟೆ ಸುದೀರ್ಘ ಚರ್ಚೆ ನಡೆಸಿದರು. ಪರಿಹಾರ ಶಿಬಿರಗಳಲ್ಲಿನ ಭೀಕರ ಪರಿಸ್ಥಿತಿಗಳನ್ನು ಸುಧಾರಿಸಲು ತಾವು ಮಧ್ಯಸ್ಥಿಕೆವಹಿಸಬೇಕು ಎಂದು ವಿನಾಂತಿಸಿದ್ದೇವೆ” ಎಂದು ತಿಳಿಸಿದ್ದಾರೆ.
The CPI(M) delegation called upon the Hon’ble Governor of Manipur Smt. Anusuiya Uikey & had an hour long discussion.
Requested her intervention in ensuring that the appalling conditions in the relief camps are improved. pic.twitter.com/iJQLK3yDVH— Sitaram Yechury (@SitaramYechury) August 18, 2023
ಯೆಚೂರಿ ನೇತೃತ್ವದ ತಂಡವು ಶುಕ್ರವಾರ ಚುರಚಂದಪುರ ಹಾಗೂ ಮೊಯಿರಂಗ್ ಪ್ರದೇಶದಲ್ಲಿರುವ ನಿರಾಶ್ರಿತರ ಶಿಬಿರಗಳಿಗೆ ಭೇಟಿ ನೀಡಿದ್ದು, ಅಲ್ಲಿ ರಾಜ್ಯ ಸರ್ಕಾರ ಸ್ಥಳೀಯ ಆಡಳಿತ ಮಾಡಿರುವ ವ್ಯವಸ್ಥೆ ಹಾಗೂ ಅದರ ನಿರ್ವಹಣೆ ತೃಪ್ತಿದಾಯಕವಾಗಿಲ್ಲ ಎಂದು ರಾಜ್ಯಪಾಲರ ಬಳಿ ಹೇಳಿದ್ದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
”ಈ ನಿರಾಶ್ರಿತರ ಶಿಬಿರಗಳಲ್ಲಿ ಮಕ್ಕಳು ಹಾಗೂ ಹಾಲುಣಿಸುವ ಮಹಿಳೆಯರಿಗೆ ಪೌಷ್ಟಿಕ ಆಹಾರ ಸಿಗುತ್ತಿಲ್ಲ. ಶಿಬಿರಗಳಲ್ಲಿ ಮಕ್ಕಳ ಜನನ ಕೂಡ ಆಗುತ್ತಿವೆ” ಎನ್ನುವ ವಿಚಾರವನ್ನು ನಿಯೋಗವು ರಾಜ್ಯಪಾಲರ ಗಮನಕ್ಕೆ ತಂದಿದೆ. ಅಲ್ಲದೆ, ”ಇಂತಹ ಪರಿಸ್ಥಿತಿಯಲ್ಲಿ ಈ ನಿರಾಶ್ರಿತರು ಅಶಾಭಾವನೆಯಿಂದ ಬದುಕುವುದಾದರೂ ಹೇಗೆ?” ಎಂದು ಪ್ರಶ್ನಿಸಿದೆ.
ಮೂರು ದಿನಗಳ ಭೇಟಿಗಾಗಿ ಈ ನಿಯೋಗವು ಶುಕ್ರವಾರ ಮಣಿಪುರಕ್ಕೆ ಬಂದಿಳಿದಿದೆ. ನಿರಾಶ್ರಿತ ಶಿಭಿರಗಳಿಗೆ ಭೇಟಿ ನೀಡಿದೆ.
”ಈಗ ಇರುವ ಪರಿಸ್ಥಿತಿಗೆ ರಾಜಕೀಯ ಪರಿಹಾರ ಮಾತ್ರ ಸಾಧ್ಯ. ಪೊಲೀಸ್ ಠಾಣೆಗಳಿಂದ ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡುವ ವಿಷಯ ನಿಜಕ್ಕೂ ಆಘಾತಕಾರಿ” ಎಂದು ಯೆಚೂರಿ ಹೇಳಿದ್ದಾರೆ.
”ಸದ್ಯದ ಸಂಘರ್ಷ ತಡೆಯಲು ಎಲ್ಲಾ ನಾಯಕರು ಪಕ್ಷಭೇದವಿಲ್ಲದೆ ರಾಜ್ಯ ಸರ್ಕಾರದೊಂದಿಗೆ ಸಹಕರಿಸಬೇಕು. ಹಿಂಸೆ ಎಲ್ಲದಕ್ಕೂ ಪರಿಹಾರವಲ್ಲ” ಎಂದು ಊಕಿ ಅವರು ನಿಯೋಗದೊಂದಿಗೆ ಹೇಳಿದ್ದಾರೆ.
ಅಲ್ಲದ ಮಣಿಪುರದಲ್ಲಿ ಶಾಂತಿ ನೆಲೆಸುವಂತೆ ಮಾಡಲು ತಾವು ವೈಯಕ್ತಿಕವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ನಾಯಕರನ್ನು ಭೇಟಿ ಮಾಡಿದ್ದಾಗಿ ರಾಜ್ಯಪಾಲರು ನಿಯೋಗಕ್ಕೆ ಹೇಳಿದ್ದಾರೆ.
ಇದನ್ನೂ ಓದಿ: ಮಣಿಪುರದಲ್ಲಿ ಮುಂದುವರೆದ ಹಿಂಸಾಚಾರ: ಕುಕಿ ಸಮುದಾಯದ ಮೂವರ ಹತ್ಯೆ