Homeಮುಖಪುಟಪ್ರಜಾಪ್ರಭುತ್ವದ ಬಗ್ಗೆ ಪ್ರಜಾಸತ್ತಾತ್ಮಕವಲ್ಲದ ಒಂದು ಪ್ರಕರಣ

ಪ್ರಜಾಪ್ರಭುತ್ವದ ಬಗ್ಗೆ ಪ್ರಜಾಸತ್ತಾತ್ಮಕವಲ್ಲದ ಒಂದು ಪ್ರಕರಣ

- Advertisement -
- Advertisement -

ಪ್ರಜಾಪ್ರಭುತ್ವ ದುರ್ಬಲವಾಗುತ್ತ ಹೋದಂತೆ, ಸಾರ್ವಜನಿಕ ಚರ್ಚೆಗಳಲ್ಲಿ ಆಳಅಗಲವಿಲ್ಲದಂತಾಗುತ್ತದೆ ಮತ್ತು ಅಸಂಗತವಾಗುತ್ತ ಹೋಗುತ್ತದೆ. ಇದರ ಒಂದು ನಿದರ್ಶನ ಕಳೆದ ವಾರ ಕಂಡಿತು. ಅನ್‌ಅಕ್ಯಾಡೆಮಿ ಎಂಬ ಹೆಸರಿನ ಆನ್‌ಲೈನ್ ಕೋಚಿಂಗ್ ಸಂಸ್ಥೆಯ ಒಬ್ಬ ಶಿಕ್ಷಕ ಕರಣ್ ಸಂಗವಾನ್ ಕಾನೂನಿನ ವಿಷಯದ ಬಗ್ಗೆ ಇದ್ದ ತನ್ನ ಉಪನ್ಯಾಸದಲ್ಲಿ ತನ್ನ ವಿದ್ಯಾರ್ಥಿಗಳಿಗೆ ಕೇವಲ ಸುಶಿಕ್ಷಿತ ಅಭ್ಯರ್ಥಿಗಳಿಗೆ ಮಾತ್ರ ಮತ ಹಾಕಬೇಕು ಎಂದು ಹೇಳಿದರು. ಆ ಲೆಕ್ಚರ್ ಯೂಟ್ಯೂಬ್‌ನಲ್ಲಿ ಲಭ್ಯವಿತ್ತು. ಇದರಿಂದಲೇ ವಿವಾದ ಸೃಷ್ಟಿಯಾಯಿತು. ಆಮ್ ಆದ್ಮಿ ಪಾರ್ಟಿ ಮತ್ತು ಬಿಜೆಪಿಯ ಬೆಂಬಲಿಗರು ಯುದ್ಧಕ್ಕೆ ಅಣಿಯಾದರು. ಇದರಿಂದ ಹೆದರಿದ ಸಂಸ್ಥೆಯ ಮಾಲೀಕ ರೊಮನ್ ಸೈನಿಯು ಟ್ವಿಟರ್‌ನಲ್ಲಿ ಒಂದು ಪೋಸ್ಟ್ ಬರೆದು ಕೈತೊಳೆದುಕೊಂಡರು, ಅವರನ್ನು ಸಂಸ್ಥೆಯಿಂದ ದೂರವಾಗಿಸಲಾಯಿತು.

ಈ ಚರ್ಚೆಯಲ್ಲಿ ಎರಡೂ ಕಡೆಯಿಂದ ಪ್ರಜಾಸತ್ತಾತ್ಮಕವಲ್ಲದ ವಾದಗಳನ್ನು ಮಂಡಿಸಲಾಯಿತು. ಕರಣ್ ಸಂಗವಾನ್ ಪರವಾಗಿ ವಾದಿಸುವವರು, ರಾಜಕೀಯದಲ್ಲಿ ಶಿಕ್ಷಿತ ಜನರು ಬರುವ ಅವಶ್ಯಕತೆ ಇದೆ ಹಾಗೂ ತನ್ನ ವಿದ್ಯಾರ್ಥಿಗಳಿಗೆ ಈ ವಿಷಯವನ್ನು ಹೇಳುವ ಅವಶ್ಯಕತೆ ಇದೆ ಎಂದು ವಾದಿಸಿದರು. ಇದನ್ನು ವಿರೋಧಿಸುವ ಜನರು ಔಪಚಾರಿಕ ಶಿಕ್ಷಣದ ಬೇಡಿಕೆ ಇಡುವುದು ಪ್ರಜಾಸತ್ತಾತ್ಮಕವಲ್ಲ, ಹಾಗಾಗಿ ಸಂಸ್ಥೆಯಿಂದ ಈ ಅಧ್ಯಾಪಕನನ್ನು ತೆಗೆದುಹಾಕುವುದು ಖಂಡಿತವಾಗಿಯೂ ಸರಿಯಾದ ಕ್ರಮ ಎಂದು ವಾದಿಸಿದರು. ಈ ಎರಡೂ ವಾದಗಳು ಆಧಾರಹೀನವಾಗಿವೆ, ಈ ಎರಡೂ ನಿಷ್ಕರ್ಷಗಳು ಅಪಾಯಕಾರಿಯಾಗಿವೆ.

ಮೊದಲಿಗೆ ಅಧ್ಯಾಪಕರ ಸಮರ್ಥನೆಯಲ್ಲಿ ನೀಡಲಾಗುತ್ತಿರುವ ವಾದಗಳನ್ನು ನೋಡುವ. ರಾಜಕಾರಣಿ ಸರಕಾರದಲ್ಲಿರಲಿ ಅಥವಾ ವಿರೋಧ ಪಕ್ಷದಲ್ಲಿರಲಿ, ಅವರಿಗೆ ಎಷ್ಟೆಲ್ಲ ದೊಡ್ಡದೊಡ್ಡ ತೀರ್ಮಾನಗಳನ್ನು ತೆಗೆದುಕೊಳ್ಳಬೇಕಾಗಿರುತ್ತೆ ಎಂಬುದನ್ನು ನೋಡಿದಾಗ, ತಿಳಿವಳಿಕೆಯುಳ್ಳ ನಾಯಕರ ಅವಶ್ಯಕತೆ ಇದೆ ಎಂಬುದರಲ್ಲಿ ಯಾವ ಪ್ರಶ್ನೆಯೂ ಉದ್ಭವಿಸುವುದಿಲ್ಲ. ಪ್ರಶ್ನೆ ಇರುವುದು, ಔಪಚಾರಿಕ ಶಿಕ್ಷಣ ಎಂಬುದು ತಿಳಿವಳಿಕೆಯ ಗ್ಯಾರಂಟಿಯೇ? ಆಯ್ತು, ಗ್ಯಾರಂಟಿ ಬೇಡ, ತಿಳಿವಳಿಕೆಯುಳ್ಳವರಾಗಿರಲು ಔಪಚಾರಿಕವಾದ ಡಿಗ್ರಿಗಳ ಅವಶ್ಯಕತೆ ಇದೆಯೇ? ಒಂದು ವೇಳೆ ನಾವು ನಮ್ಮ ಸುತ್ತಮುತ್ತ ನೋಡಿದಲ್ಲಿ ನಮಗೆ ಸ್ಪಷ್ಟವಾಗುವುದೇನೆಂದರೆ ಡಿಗ್ರಿಗಳು ಅಕ್ಷರ ಜ್ಞಾನ ನೀಡಬಲ್ಲವು, ಪುಸ್ತಕ್ತದ ಮಾಹಿತಿ ನೀಡಬಲ್ಲವು, ಕೆಲವು ವಿಶೇಷ ಡಿಗ್ರಿಗಳು ಕೌಶಲ್ಯ ನೀಡಬಲ್ಲವು ಆದರೆ ಡಿಗ್ರಿಗಳು ತಿಳಿವಳಿಕೆ ನೀಡುವುದಿಲ್ಲ.

ರಾಜಕೀಯ ತಿಳಿವಳಿಕೆಯ ಸ್ವರೂಪ ಬೇರೆ ರೀತಿಯದ್ದಾಗಿರುತ್ತದೆ. ಯಾವ ತಿಳಿವಳಿಕೆಯ ನಿರೀಕ್ಷೆ ಕ್ರಿಕೆಟ್ ತಂಡದ ಕ್ಯಾಪ್ಟನ್‌ನಿಂದ ಮಾಡಲಾಗುತ್ತೋ ಅಥವಾ ಬ್ಯಾಟ್ಸ್‌ಮನ್‌ನಿಂದ ಯಾವ ಟೆಂಪರಾಮೆಂಟ್ ನಿರೀಕ್ಷಿಸಲಾಗುತ್ತೋ ಅಥವಾ ಬೌಲರ್‌ಗಳಿಂದ ನಿರೀಕ್ಷಿಸಲಾಗುವ ಚತುರತೆ, ಇವ್ಯಾವುವನ್ನೂ ಡಿಗ್ರಿಗಳಿಂದ ಪಡೆದುಕೊಳ್ಳಲು ಆಗುವುದಿಲ್ಲ. ಅದೇ ರೀತಿಯಲ್ಲಿ ರಾಜಕೀಯ ನಾಯಕರ ತಿಳಿವಳಿಕೆಗೆ ಬೇಕಾಗುವ ಗುಣಗಳಿಗೆ, ಕೇಳಿಸಿಕೊಳ್ಳುವ ಕ್ಷಮತೆ, ಸಮಾಜವನ್ನು ಅರಿಯುವ ಸಾಮರ್ಥ್ಯ, ಜನರೊಂದಿಗೆ ಸಂವಾದ ನಡೆಸುವ ಗುಣ ಹಾಗೂ ಅವರ ನೋವಿನ ಅಭಿವ್ಯಕ್ತಿಗೆ ದನಿಯಾಗಿ ಅವುಗಳನ್ನು ಪರಿಹರಿಸುವ ಅಥವಾ ಬಗೆಹರಿಸುವ ಸಾಮರ್ಥ್ಯ ಇರಬೇಕಾಗುತ್ತದೆ. ಇವೆಲ್ಲ, ಜನರ ನಡುವೆ ಇದ್ದು, ಜನರ ಕಷ್ಟಸುಖ ಕೇಳಿ ಹಾಗೂ ಅನುಭವದಿಂದ ಪ್ರಾಪ್ತಿಯಾಗುತ್ತದೇ, ಅದರಲ್ಲಿ ಕೆಲವೊಮ್ಮೆ ಔಪಚಾರಿಕ ಶಿಕ್ಷಣದಿಂದ ಲಾಭವೂ ಆಗುತ್ತೆ ಆದರೆ ಬಹಳಷ್ಟು ಬಾರಿ ಅದರ ಅವಶ್ಯಕತೆ ಇರುವುದಿಲ್ಲ.

ರಾಜಕಾರಣಕ್ಕಾಗಿ ಬೇಕಾಗುವ ನೈತಿಕತೆ ಅಥವಾ ನಿಷ್ಠೆ ಅಥವಾ ಜನರ ಬಗ್ಗೆ ಇರಬೇಕಾದ ಪ್ರಾಮಾಣಿಕತೆ- ಇವೆಲ್ಲವುಗಳಿಗೆ ಓದುಬರಹದೊಂದಿಗೆ ಯಾವ ಸಂಬಂಧವೂ ಇಲ್ಲ. ರಾಜಕಾರಣದಲ್ಲಿ ಭ್ರಷ್ಟಾಚಾರ, ಮೋಸ ಹಾಗೂ ಅನೈತಿಕತೆಯ ಬಹುತೇಕ ಪ್ರಕರಣಗಳಲ್ಲಿ ಅಪರಾಧಿಗಳು ಬಹಳಷ್ಟು ಓದಿಕೊಂಡವರೇ- ಶಿಕ್ಷಣ ಪಡೆದಿರುವವರೇ ಆಗಿರುತ್ತಾರೆ. ಕೇವಲ ರಾಜಕಾರಣದಲ್ಲಷ್ಟೇ ಅಲ್ಲ, ಜೀವನದ ಯಾವುದೇ ಕ್ಷೇತ್ರದಲ್ಲಿ ಔಪಚಾರಿಕ ಶಿಕ್ಷಣ ಮತ್ತು ಡಿಗ್ರಿಗಳಿಗೂ ಹಾಗೂ ನೈತಿಕತೆಗೂ ಯಾವ ಸಂಬಂಧವೂ ಇಲ್ಲ.

ಇದನ್ನೂ ಓದಿ: ನಾಗಪುರ ಶಿಕ್ಷಣ ನೀತಿ NEPಯನ್ನು ಕರ್ನಾಟಕ ಸರ್ಕಾರ ಅನುಷ್ಠಾನ ಮಾಡುವುದಿಲ್ಲ: ಡಿ.ಕೆ.ಶಿವಕುಮಾರ್

ರಾಜಕಾರಣಿಗಳಲ್ಲಿ ಇರಬೇಕೆನ್ನುವ ಶಿಕ್ಷಣದ ಪರವಾಗಿ ವಾದ ಮಂಡಿಸುವುದು ಇನ್ನೊಂದು ರೀತಿಯಲ್ಲೂ ಅರ್ಥಹೀನವಾಗಿದೆ, ಒಂದು ವೇಳೆ ಶಿಕ್ಷಣ ನಾಯಕರಲ್ಲಿ ಗುಣಗಳನ್ನು ವಿಕಸನಗೊಳಿಸುತ್ತೆ ಎಂಬುದು ನಿಜವಾದಲ್ಲಿ, ಜನರು ಸ್ವಾಭಾವಿಕವಾಗಿಯೇ ಯಾರ ಮಾತನ್ನೂ ಕೇಳದೆಯೇ ಶಿಕ್ಷಿತ ಜನರನ್ನು ಆಯ್ಕೆ ಮಾಡುತ್ತಾರೆ, ಇದಕ್ಕಾಗಿ ಪ್ರಚಾರ-ಪ್ರಸಾರದ ಅವಶ್ಯಕತೆಯೇನಿದೆ? ಒಬ್ಬ ರಾಜಕಾರಿಣಿಯ ಎಲ್ಲಕ್ಕಿಂತ ದೊಡ್ಡ ಯೋಗ್ಯತೆಯೆಂದರೆ ಅವರ ಮತದಾರರು ಅವರನ್ನು ಇಷ್ಟಪಡುವುದು, ಅವರನ್ನು ತಮ್ಮ ನೋವುನಲಿವುಗಳ ಗಳಿಗೆಗಳಲ್ಲಿ ಜೊತೆಗಾರ ಎಂದುಕೊಳ್ಳುವುದು. ಒಬ್ಬ ರಾಜಕಾರಣಿಯ ಪರೀಕ್ಷೆ, ಶಾಲೆ ಅಥವಾ ಯುನಿವರ್ಸಿಟಿಯ ಪರೀಕ್ಷೆಗಳಲ್ಲಿ ಆಗದೆ ಚುನಾವಣೆಯ ಪರೀಕ್ಷೆಯಲ್ಲಿ ಆಗುತ್ತದೆ. ಈ ಪರೀಕ್ಷೆಯನ್ನು ಹೊರತುಪಡಿಸಿ ಅವರ ಮೇಲೆ ಔಪಚಾರಿಕ ಡಿಗ್ರಿ ಇರಬೇಕೆಂದು ನಿರೀಕ್ಷಿಸುವುದು ಅಥವಾ ಆ ರೀತಿ ಕಟ್ಟಳೆಗೆ ಒಳಪಡಿಸುವುದು ವ್ಯರ್ಥದ ಕೆಲಸವಾಗಿದೆ. ಒಟ್ಟಾರೆಯಾಗಿ, ಲೋಕತಾಂತ್ರಿಕ ಮತ್ತು ತಾರ್ಕಿಕವಾಗಿ ಎರಡೂ ಆಧಾರಗಳ ಮೇಲೆ ಕರಣ್ ಸಂಗವಾನ್ ಅವರ ಹೇಳಿಕೆಯೊಂದಿಗೆ ಅಸಮ್ಮತಿ ಇಟ್ಟುಕೊಳ್ಳಬಹುದಾಗಿದೆ.

ಈಗ ಚರ್ಚೆಯ ಇನ್ನೊಂದು ಬದಿಯನ್ನು ನೋಡುವ. ಕರಣ್ ಸಂಗವಾನ್ ಮೇಲೆ ಕ್ರಮ ಕೈಗೊಳ್ಳಬೇಕಾಗುವಂಥ ಅಥವಾ ಅವರ ಕಾಂಟ್ರಾಕ್ಟ್‌ಅನ್ನೇ ರದ್ದುಗೊಳಿಸುವಂಥದ್ದೇನಾದರೂ ಹೇಳಿದರೆ? ಅವರು ಒಂದು ವೇಳೆ ಗಣಿತ ಅಥವಾ ಫಿಸಿಕ್ಸ್‌ನ ಲೆಕ್ಚರ್ ನೀಡುತ್ತಿದ್ದರು ಎಂದಾಗಿದ್ದಲ್ಲಿ ಹೌದು ಅವರು ವಿಷಯಕ್ಕೆ ಸಂಬಂಧವಿಲ್ಲದ ಅನಗತ್ಯವಾದ ಮಾತುಗಳನ್ನು ಆಡುತ್ತಿದ್ದಾರೆ ಎನ್ನಬಹುದಾಗಿತ್ತು. ಆದರೆ ಕಾನೂನಿನ ವಿಷಯದ ಬಗ್ಗೆ ಮಾತನಾಡುವಾಗ ಸಮಾಜ ಮತ್ತು ಪ್ರಜಾಪ್ರಭುತ್ವ ಚರ್ಚೆ ಆಗುವುದು ಸಹಜವಾಗಿದೆ. ಅಧ್ಯಾಪಕರು ತಮ್ಮ ವಿದ್ಯಾರ್ಥಿಗಳೊಂದಿಗೆ ಮಾತನಾಡುವಾಗ ಒಂದು ಚೌಕಟ್ಟಿನ ಒಳಗೆ ತಮ್ಮ ಅಭಿಪ್ರಾಯ ಮಂಡಿಸುವ ಅಧಿಕಾರ ಅವರಿಗಿರುತ್ತದೆ. ಚರ್ಚೆಯನ್ನು ನಡೆಸುವ ಕಾರಣದಿಂದಲೂ ಅಧ್ಯಾಪಕರು ಯಾವುದೇ ನಿಲುವು ತೆಗೆದುಕೊಳ್ಳಬಹುದು. ಏನೇ ಇರಲಿ, ಅಸಂಸದೀಯವಾದಂತಹ, ಅಪರಾಧವಾಗಬಹುದಾದ, ಪ್ರಚೋದನಾಕಾರಿಯಾದಂತಹ, ಸಂವಿಧಾನ ವಿರೋಧಿಯಾದಂತಹ ಅಥವಾ ದೇಶದ್ರೋಹ ಎನ್ನಿಸಿಕೊಳ್ಳುವ ಯಾವ ಮಾತನ್ನೂ ಕರಣ್ ಸಂಗವಾನ್ ಹೇಳಿಲ್ಲ. ಇಂಥದ್ದರಲ್ಲಿ ಕೇವಲ ಒಂದು ರಾಜಕೀಯ ನಿಲುವು ಹೊಂದಿರುವ ಜನರ ಒತ್ತಡಕ್ಕೆ ಮಣಿದು ಅಧ್ಯಾಪಕನ ಮೇಲೆ ಕ್ರಮ ಕೈಗೊಳ್ಳುವುದು ಹಾಗೂ ಅದರಲ್ಲೂ ಅವರ ಸಮರ್ಥನೆಯ ಮಾತುಗಳನ್ನು ಕೇಳದೇ ಕ್ರಮ ಕೈಗೊಳ್ಳುವುದು ಎಷ್ಟು ಸರಿ? ಒಂದು ವೇಳೆ ಕರಣ್ ಸಂಗವಾನ್ ಅವರ ವಾದ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದ್ದರೂ ಅವರನ್ನು ಕೆಲಸದಿಂದ ವಜಾಗೊಳಿಸುವುದೂ ಪ್ರಜಾಸತ್ತಾತ್ಮಕವಾದುದ್ದಲ್ಲ.

ಈ ವಿಷಯದಲ್ಲಿ ಪರ ಮತ್ತು ವಿರುದ್ಧವಾಗಿ ನೀಡಿರುವ ವಾದಗಳು ಮಾತ್ರ ಅಸಂಬದ್ಧವಾಗಿಲ್ಲ, ಈ ವಿಷಯದ ಮೇಲಿನ ಚರ್ಚೆಯೇ ಅಸಂಬದ್ಧವಾಗಿದೆ. ವಾಸ್ತವವೇನೆಂದರೆ, ರಾಜಕಾರಣಿಗಳು ಶಿಕ್ಷಿತರಾಗಿರುವುದು ಅಥವಾ ಇಲ್ಲವಾಗಿರುವುದು ಇಂದು ನಮ್ಮ ದೇಶದಲ್ಲಿ ಒಂದು ವಿಷಯವೇ ಆಗಿಲ್ಲ. ಸತ್ಯವೇನೆಂದರೆ, 50 ಮತ್ತು 60ರ ದಶಕಗಳಲ್ಲಿ ಕೆಲವು ಶಿಕ್ಷಣ ಪಡೆಯದ ಜನರು ನಮ್ಮ ವಿಧಾನಸಭೆಗಳಿಗೆ ಮತ್ತು ಸಂಸತ್ತಿಗೆ ಆಯ್ಕೆ ಆಗಿರಬಹುದು. ಆದರೆ ಈಗ ಅವರ ಸಂಖ್ಯೆ ನಗಣ್ಯವಾಗಿದೆ. ನಾವು ಆಯ್ಕೆ ಮಾಡಿದ ನಾಯಕರು ಒಳ್ಳೆಯವರಾಗಿರಬಹುದು ಅಥವಾ ಕೆಟ್ಟವರಾಗಿರಬಹುದು, ಕರ್ತವ್ಯ ನಿರ್ವಹಿಸುವರು ಅಥವಾ ಕೆಲಸಕ್ಕೆ ಬಾರದಿರದವರಾಗಿರಬಹುದು, ಪ್ರಾಮಾಣಿಕರಾಗಿರಬಹುದು ಅಥವಾ ದುಷ್ಟರಾಗಿರಬಹುದು ಆದರೆ ಬಹುತೇಕ ಎಲ್ಲರೂ ಡಿಗ್ರಿ ಹೊಂದಿದವರಾಗಿದ್ದಾರೆ. ಇಂಥದ್ದರಲ್ಲಿ, ನಾಯಕರು ಶಿಕ್ಷಿತರಾಗಿರಬೇಕು ಅಥವಾ ಇಲ್ಲ ಎಂಬುದು ಚರ್ಚೆ ನಡೆಯುವುದು ತನ್ನಲ್ಲೇ ಒಂದು ತಿಳಿವಳಿಕೆಯಿಲ್ಲದ ಸೂಚನೆಯಾಗಿದೆ.

ನಿಜವಾದ ಸಮಸ್ಯೆ ಇದಕ್ಕಿಂತ ಆಳವಾಗಿದೆ. ನಮ್ಮ ಕಾಲದ ವಿಡಂಬನೆಯೇನೆಂದರೆ ನಾವು ಒಂದು ಸಾಧಾರಣವಾದ ವಿಡಿಯೋದಲ್ಲಿ ನೀಡಿದ ಲೆಕ್ಚರ್ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ, ಆದರೆ ಬಹಿರಂಗವಾಗಿ ಹಿಂಸೆಯನ್ನು ಪ್ರಚೋದಿಸುವ, ಹಿಂಸೆಯ ವಕಾಲತ್ತು ಮಾಡುತ್ತಿರುವ, ದೇಶದ ನಾಗರಿಕರನ್ನು ಪರಸ್ಪರ ದ್ವೇಷಿಸುವಂತೆ ಪ್ರಚೋದಿಸುವ, ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿ ಎಂದು ಮನವಿ ಮಾಡುವ ಹಾಗೂ ಒಂದು ನಿರ್ದಿಷ್ಟ ಸಮುದಾಯದ ವಿರುದ್ಧ ನರಸಂಹಾರದ ಬೆದರಿಕೆ ಹಾಕುತ್ತಿರುವ ದೇಶಾದ್ಯಂತ ಹರಿದಾಡುತ್ತಿರುವ ವಿಡಿಯೋ ಬಗ್ಗೆ ಚರ್ಚೆ ನಡೆಸುತ್ತಿಲ್ಲ. ಒಬ್ಬ ಅಧ್ಯಾಪಕ ಕಾನೂನಿನ ಪಾಠದ ತರಗತಿಯಲ್ಲಿ ಕಾನೂನಿನ ಪರಿಧಿಯೊಳಗಿದ್ದು, ತನ್ನ ವಿಚಾರಗಳನ್ನು ಇರಿಸಿದಾಗ ವಿವಾದವಾಗುತ್ತೆ, ಆದರೆ ಸರಕಾರಿ ಪದದಲ್ಲಿ ಇರುವ ಪ್ರಧಾನಮಂತ್ರಿ ಸಲಹೆಗಾರ ಆಗಿರುವ ವ್ಯಕ್ತಿಯೊಬ್ಬನು ಸಂವಿಧಾನವನ್ನು ತಿರಸ್ಕರಿಸುವ ಮಾತನಾಡಿದಾಗ ಅಲ್ಲಿ ಆ ವಿಷಯದ ಬಗ್ಗೆ ಮೌನ ಕಂಡುಬಂದಿದೆ. ತಪ್ಪು ವಾದ ಮಂಡಿಸುವವರ ಮೇಲೆ ತುರ್ತು ಕ್ರಮ ಕೈಗೊಳ್ಳಲಾಗಿದೆ ಆದರೆ ನಿಂದಿಸುವವರನ್ನು ಸನ್ಮಾನಿಸಲಾಗುತ್ತಿದೆ, ಗುಂಡು ಹಾರಿಸುವವರ ಬಗ್ಗೆ ಎಲ್ಲರ ಕಣ್ಣು ಮತ್ತು ನಾಲಿಗೆ ಸುಮ್ಮನಾಗಿವೆ. ಪ್ರಜಾಪ್ರಭುತ್ವ ನಿಧಾನವಾಗಿ ಸಾಯುವುದು ಹೀಗೇಯೆ.

ಕನ್ನಡಕ್ಕೆ: ರಾಜಶೇಖರ ಅಕ್ಕಿ

ಯೋಗೇಂದ್ರ ಯಾದವ್

ಯೋಗೇಂದ್ರ ಯಾದವ್
ಸ್ವರಾಜ್ ಇಂಡಿಯಾ ಸಂಸ್ಥಾಪಕರಲ್ಲೊಬ್ಬರು, ರಾಜಕೀಯ ಚಿಂತಕರು. ಪ್ರಸ್ತುತ ರಾಜಕೀಯ ಸಂಗತಿಗಳ ಬಗ್ಗೆ, ಪ್ರಜಾಪ್ರಭುತ್ವವನ್ನು ಉಳಿಸುವ ತಮ್ಮ ಚಿಂತನೆಗಳನ್ನು ಹಲವು ಪತ್ರಿಕೆಗಳಲ್ಲಿ ಸಕ್ರಿಯವಾಗಿ ಮಂಡಿಸುತ್ತಾರೆ. ‘ಮೇಕಿಂಗ್ ಸೆನ್ಸ್ ಆಫ್ ಇಂಡಿಯನ್ ಡೆಮಾಕ್ರಸಿ’ ಪುಸ್ತಕ ರಚಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಾಂತಿಯುತ ಪ್ರತಿಭಟನೆಗಳನ್ನು ಮೋದಿ ಸರ್ಕಾರ ಹತ್ತಿಕ್ಕುತ್ತಿದೆ: ರಾಹುಲ್ ಗಾಂಧಿ

ದೆಹಲಿಯ ಜಂತರ್ ಮಂತರ್‌ನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪರಿಸರ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಅವರನ್ನು ಬಲವಂತವಾಗಿ ಆಸ್ಪತ್ರೆಗೆ ಸಾಗಿಸಿದ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಮೌನ ಮುರಿದಿದ್ದಾರೆ. "ಶಾಂತಿಯುತ ಪ್ರತಿಭಟನೆಗಳನ್ನು...

ಸೋನಮ್ ವಾಂಗ್‌ಚುಕ್ ಬಲವಂತದ ಬಂಧನ; ಕಣ್ಣೀರಿಟ್ಟು ಉಪವಾಸ ಸತ್ಯಾಗ್ರಹ ಆರಂಭಿಸಿದ ಅಭಿಜೀತ್ ದಿಪ್ಕೆ

ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ ಕೈಗೊಂಡಿರುವ ಸೋನಮ್ ವಾಂಗ್‌ಚುಕ್ ಅವರನ್ನು ದೆಹಲಿ ಪೊಲೀಸ್ ಸಿಬ್ಬಂದಿ ಬಲವಂತವಾಗಿ, ಬಲಪ್ರಯೋಗದ ಮೂಲಕ ಆಸ್ಪತ್ರೆಗೆ ಕರೆದೊಯ್ಯುವಾಗ ಜಂತರ್ ಮಂತರ್‌ನ ಪ್ರತಿಭಟನಾ ಸ್ಥಳದಲ್ಲಿ ಗದ್ದಲ ಉಂಟಾಯಿತು....

ಜಮ್ಮು-ಕಾಶ್ಮೀರ| ಭದ್ರತಾ ಸಿಬ್ಬಂದಿ ಗುಂಡಿಗೆ ವ್ಯಕ್ತಿ ಸಾವು; ಭುಗಿಲೆದ್ದ ಪ್ರತಿಭಟನೆ

ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯ ಭದೇರ್ವಾದ ಜೈ ಕಣಿವೆ ಪ್ರದೇಶದಲ್ಲಿ ಗುರುವಾರ ತಡರಾತ್ರಿ ನಡೆದ ಗುಂಡಿನ ದಾಳಿಯಲ್ಲಿ 30 ವರ್ಷದ ನಾಗರಿಕನೊಬ್ಬ ಸಾವನ್ನಪ್ಪಿ ಇಬ್ಬರು ಗಾಯಗೊಂಡಿದ್ದು ವ್ಯಾಪಕ ಪ್ರತಿಭಟನೆಗಳಿಗೆ ಕಾರಣವಾಗಿದೆ. ಮೃತರನ್ನು...

ಸಿಜೆಪಿ ಪ್ರತಿಭಟನೆ ಮೇಲೆ ಕೇಂದ್ರದ ಬಲಪ್ರಯೋಗ: ಸೋನಮ್ ವಾಂಗ್‌ಚುಕ್ ಅವರನ್ನು ಬಂಧಿಸಿ ಆಸ್ಪತ್ರೆಗೆ ಕರೆದೊಯ್ದ ಪೊಲೀಸರು

ದೆಹಲಿಯ ಜಂತರ್ ಮಂತರ್‌ನಲ್ಲಿ 21 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಪರಿಸರ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಅವರನ್ನು ಪ್ರತಿಭಟನಾ ಸ್ಥಳದಿಂದ ಪೊಲೀಸರು ಬಲವಂತವಾಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಶನಿವಾರ ಬೆಳಿಗ್ಗೆ ಪೊಲೀಸರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ...

ಪ್ರಶ್ನೆಪತ್ರಿಕೆ ಸೋರಿಕೆಗೆ ಇಡೀ ವ್ಯವಸ್ಥೆಯನ್ನೇ ದೂಷಿಸಿದ ವಿಪಕ್ಷ ನಾಯಕ ರಾಹುಲ್ ಗಾಂಧಿ

ರಾಜಕೀಯ ಪಕ್ಷ ಅಥವಾ ಸಂಘಟನೆಯು ಯಾವುದೇ ಶಿಕ್ಷಣ ಸಂಸ್ಥೆಗಳ ಮೇಲೆ ಹಿಡಿತ ಸಾಧಿಸಬಾರದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (ಜು.17) ರಂದು ಹೇಳಿದ್ದಾರೆ. ಪ್ರಶ್ನೆಪತ್ರಿಕೆ ಸೋರಿಕೆಯ ವಿಷಯದ ಬಗ್ಗೆ ರಾಜಕೀಯ ಒಮ್ಮತಕ್ಕೆ ಕರೆ...

ಧರ್ಮದ ಕಾರಣಕ್ಕೆ ಹೈದರಾಬಾದ್ ಮೂಲದ ಮುಸ್ಲಿಂ ವ್ಯಕ್ತಿಗೆ ಹಲವು ಬಾರಿ ಇರಿತ: ಅಮೆರಿಕದ ಮಾಲ್‌ನಲ್ಲಿ ಕೃತ್ಯ

ಅಮೆರಿಕದ ಉತಾಹ್‌ನಲ್ಲಿರುವ ಶಾಪಿಂಗ್ ಮಾಲ್‌ನಲ್ಲಿ ಹೈದರಾಬಾದ್ ಮೂಲದ ಮುಸ್ಲಿಂ ವ್ಯಕ್ತಿಯೊಬ್ಬನಿಗೆ ಹಲವು ಬಾರಿ ಇರಿತದ ಆರೋಪ ಹೊರಿಸಲಾಗಿದೆ. ಹೈದರಾಬಾದ್‌ ನಗರದ ಟೋಲಿಚೌಕಿಯ ನಿವಾಸಿ ಸೈಯದ್ ಸೊಹೈಲ್ ಉದ್ದೀನ್, ಉತಾಹ್‌ನ ಸಾಲ್ಟ್ ಲೇಕ್ ಕೌಂಟಿಯ...

47 ವರ್ಷಗಳ ನಂತರ ಸಾಮೂಹಿಕ ಅತ್ಯಾಚಾರ ಪ್ರಕರಣದ ಶಿಕ್ಷೆ ಎತ್ತಿಹಿಡಿದ ಅಲಹಾಬಾದ್ ಹೈಕೋರ್ಟ್

1979 ರಲ್ಲಿ ನಡೆದಿದ್ದ ಅಪ್ರಾಪ್ತೆ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ 71 ವರ್ಷದ ವ್ಯಕ್ತಿಯ ಶಿಕ್ಷೆಯನ್ನು ಅಲಹಾಬಾದ್ ಹೈಕೋರ್ಟ್ ಎತ್ತಿಹಿಡಿದಿದೆ. ಆದರೆ, ಕ್ರಿಮಿನಲ್ ಮೇಲ್ಮನವಿಯ 43 ವರ್ಷಗಳ ಸುದೀರ್ಘ ವಿಚಾರಣೆ ಮತ್ತು ಆತನ...

ಪಶ್ಚಿಮ ಬಂಗಾಳ: ಮುರ್ಷಿದಾಬಾದ್‌ನಲ್ಲಿ ಶಾಲಾ ವ್ಯಾನ್‌ಗೆ ರೈಲು ಡಿಕ್ಕಿ: ಇಬ್ಬರು ವಿದ್ಯಾರ್ಥಿಗಳು ಸೇರಿ 3 ಮಂದಿ ಸಾವು

ಮುರ್ಷಿದಾಬಾದ್: ದೇಶದಲ್ಲಿ ರೈಲ್ವೆ ಸುರಕ್ಷತೆಯ ಕುರಿತು ಸರ್ಕಾರಗಳು ದೊಡ್ಡ ದೊಡ್ಡ ಭರವಸೆ ಹಾಗೂ ಯೋಜನೆಗಳನ್ನು ಮಂಡಿಸುತ್ತಿದ್ದರೂ, ತಳಮಟ್ಟದ ವಾಸ್ತವ ಮಾತ್ರ ಇಂದಿಗೂ ಅತ್ಯಂತ ಭೀಕರವಾಗಿದೆ ಎಂಬುದಕ್ಕೆ ಪಶ್ಚಿಮ ಬಂಗಾಳದಲ್ಲಿ ನಡೆದ ಈ ಘೋರ...

ವಿಜಯ್ ನೇತೃತ್ವದ ಟಿವಿಕೆ ಸರ್ಕಾರವನ್ನು ಅಸ್ಥಿರಗೊಳಿಸಲು ‘ಪ್ರಾಜೆಕ್ಟ್ ಮೇಘಾಲಯ’ ಸಂಚು ಆರೋಪ : ಪತ್ರಕರ್ತನ ವಿಚಾರಣೆ

ತಮಿಳುನಾಡಿನ ಆಡಳಿತಾರೂಢ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಶಾಸಕ ಎನ್. ಇಲೈಯರಾಜ ಅವರಿಗೆ ಹಣದ ಆಮಿಷವೊಡ್ಡಲು ಯತ್ನಿಸಿದ ಆರೋಪ ಪ್ರಕರಣ ಸಂಬಂಧ ಚೆನ್ನೈ ಪೊಲೀಸರು 'ಪುದಿಯಾ ತಲೈಮುರೈ' ವಾಹಿನಿಯ ಪತ್ರಕರ್ತ ವಿಜಯನ್...

ಜಂತರ್ ಮಂತರ್ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಕೇಜ್ರಿವಾಲ್ ಭೇಟಿ

ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿರುವ ನೀಟ್ (NEET) ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಜಂತರ್ ಮಂತರ್‌ನಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಖ್ಯಾತ ಶಿಕ್ಷಣ ತಜ್ಞ ಹಾಗೂ ಪರಿಸರ...