ಹರ್ಯಾಣ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ಮನೋಹರ್ ಲಾಲ್ ಖಟ್ಟರ್ ಅವರು ಉದ್ಯೋಗ ಕೇಳಿದ ಮಹಿಳೆಗೆ ಗೇಲಿ ಮಾಡಿ ಆಕ್ರೋಶಕ್ಕೆ ಕಾರಣರಾಗಿದ್ದಾರೆ.
ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ವಿಡಿಯೋದಲ್ಲಿ ಮಹಿಳೆ ಸಿಎಂ ಮನೋಹರ್ ಲಾಲ್ ಖಟ್ಟರ್ ಅವರಲ್ಲಿ ಗ್ರಾಮದಲ್ಲಿ ಕಾರ್ಖಾನೆ ತೆರೆಯಬೇಕು, ಇದರಿಂದ ನಮಗೆ ಉದ್ಯೋಗ ಸಿಗಲಿದೆ ಎಂದು ಹೇಳಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಕಟ್ಟರ್ ಚಂದ್ರಯಾನ-4 ರ ಜೊತೆ ನಿಮ್ಮನ್ನು ಚಂದ್ರನಲ್ಲಿಗೆ ಕಳುಹಿಸುತ್ತೇನೆ ಎಂದು ಹೇಳಿ ಆಕ್ರೋಶಕ್ಕೆ ಕಾರಣರಾಗಿದ್ದಾರೆ.
ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಿದ್ದಾಗ ನೆರೆದಿದ್ದ ಮಹಿಳೆಯೊಬ್ಬರು ಎಲ್ಲರಿಗೂ ಉದ್ಯೋಗ ಸಿಗುವಂತೆ ಗ್ರಾಮದಲ್ಲಿ ಕಾರ್ಖಾನೆ ಸ್ಥಾಪಿಸುವಂತೆ ಆಗ್ರಹಿಸಿದ್ದರು. ಈ ವೇಳೆ ಮುಂದಿನ ಚಂದ್ರಯಾನದ ವೇಳೆ ನಾವು ನಿಮ್ಮನ್ನು ಚಂದ್ರನ ಬಳಿ ಕಳುಹಿಸುತ್ತೇವೆ ಕುಳಿತುಕೊಳ್ಳಿ ಎಂದು ಹೇಳಿದ್ದಾರೆ.
ಎಎಪಿ ಪಕ್ಷ ಈ ಕುರಿತು ಪ್ರತಿಕ್ರಿಯಿಸಿದ್ದು, ಗ್ರಾಮದ ಜನರಿಗೆ ಉದ್ಯೋಗ ಕೇಳಿದ ಮಹಿಳೆಯ ಜೊತೆ ದುರಂಹಕಾರದಿಂದ ನಡೆದುಕೊಂಡಿದ್ದಾರೆ. ಹರಿಯಾಣದಲ್ಲಿ ಬಿಜೆಪಿ ಆಡಳಿತ ನಡೆಸುತ್ತಿರುವುದು ನಿಜಕ್ಕೂ ರಾಜ್ಯದ ದೌರ್ಭಾಗ್ಯ. ಇಂತಹ ಮುಖ್ಯಮಂತ್ರಿಗೆ ನಾಚಿಕೆಯಾಗಬೇಕು. ಸಾರ್ವಜನಿಕರಿಂದ ಸೇವೆ ಸಲ್ಲಿಸಲು ಆಯ್ಕೆಯಾದವರು ಇಂದು ಸಾರ್ವಜನಿಕರನ್ನು ಗೇಲಿ ಮಾಡುತ್ತಿದ್ದಾರೆ ಎಂದು ಹೇಳಿ ಈ ವಿಡಿಯೋವನ್ನು ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಎಎಪಿ ಹಂಚಿಕೊಂಡಿದೆ.
ಮೋದಿಜಿಯವರ ಕೋಟ್ಯಾಧಿಪತಿ ಸ್ನೇಹಿತರು ತಮ್ಮ ವೈಯಕ್ತಿಕ ಲಾಭಕ್ಕಾಗಿ ಅದೇ ಬೇಡಿಕೆಯನ್ನು ಮಾಡಿದ್ದರೆ, ಖಟ್ಟರ್ ಅವರನ್ನು ಅಪ್ಪಿಕೊಂಡು ಇಡೀ ಸರ್ಕಾರವನ್ನು ಅವರ ಸೇವೆಗೆ ಮೀಸಲಿಡುತ್ತಿದ್ದರು ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಧನ್ ರಾಜ್ ಬನ್ಸಾಲ್ ಮನೋಹರ್ ಲಾಲ್ ಖಟ್ಟರ್ ವಿರುದ್ಧ ಇದೇ ವಿಚಾರಕ್ಕೆ ವಾಗ್ದಾಳಿ ನಡೆಸಿದ್ದಾರೆ.
ಇದನ್ನು ಓದಿ: ಬೈಬಲ್ ಹಂಚುವುದು ಧಾರ್ಮಿಕ ಮತಾಂತರದ ಆಮಿಷವಲ್ಲ: ಅಲಹಾಬಾದ್ ಹೈಕೋರ್ಟ್