ಶಾಹಿ ಈದ್ಗಾ ಮಸೀದಿಯ ವಿವಾದಿತ ಭೂಮಿಯನ್ನು ಹಿಂದೂಗಳ ಪಾಲಿಗೆ ಹಸ್ತಾಂತರಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ಬುಧವಾರ ತಿರಸ್ಕರಿಸಿದೆ.
ಅರ್ಜಿದಾರರು ಶಾಹಿ ಈದ್ಗಾ ಮಸೀದಿಯ ವಿವಾದಿತ ನಿವೇಶನದ ಮಾಲೀಕತ್ವವನ್ನು ಹಿಂದೂಗಳಿಗೆ ನೀಡಬೇಕು ಎಂದು ಕೋರಿದ್ದರು. ಈ ಕುರಿತು ಬುಧವಾರ ನ್ಯಾಯಾಲಯದ ತೀರ್ಪು ನೀಡಿದೆ.
ಮುಖ್ಯ ನ್ಯಾಯಮೂರ್ತಿ ಪ್ರಿತಿಂಕರ್ ದಿವಾಕರ್ ಮತ್ತು ನ್ಯಾಯಮೂರ್ತಿ ಅಶುತೋಷ್ ಶ್ರೀವಾಸ್ತವ ಅವರಿದ್ದ ವಿಭಾಗೀಯ ಪೀಠ ಈ ತೀರ್ಪು ಪ್ರಕಟಿಸಿದೆ. ಈ ಪ್ರಕರಣದಲ್ಲಿ ಎರಡೂ ಕಡೆಯವರು ತಮ್ಮ ತಮ್ಮ ವಾದ ಮಂಡಿಸಿ, ವಿಚಾರಣೆ ಪೂರ್ಣಗೊಂಡ ಬಳಿಕ ನ್ಯಾಯಾಲಯ ತನ್ನ ತೀರ್ಪನ್ನು ಸೆಪ್ಟೆಂಬರ್ 4ರಂದು ಕಾಯ್ದಿರಿಸಿತ್ತು.
ಸುಪ್ರೀಂಕೋರ್ಟ್ ವಕೀಲ ಮೆಹಕ್ ಮಹೇಶ್ವರಿ ಅವರು 2020ರಲ್ಲಿ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥವಾಗುವವರೆಗೆ ಹಿಂದೂಗಳು ವಿವಾದಿತ ಸ್ಥಳದಲ್ಲಿ ಪೂಜೆ ಸಲ್ಲಿಸಬೇಕು. ಪಿಐಎಲ್ ಅದರ ಪ್ರಸ್ತುತ ರೂಪದಲ್ಲಿ ವಿವಾದಿತ ಆವರಣದ ವೈಜ್ಞಾನಿಕ ತನಿಖೆಯನ್ನು ಆರ್ಕಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ (ASI) ನಡೆಸಬೇಕು ಎಂದು ಒತ್ತಾಯಿಸಿದೆ.
”ಈ ಹಿಂದೆ ವಿವಾದಿತ ಸ್ಥಳದಲ್ಲಿ ದೇವಸ್ಥಾನವಿದ್ದು, ಅದನ್ನು ಕೆಡವಿ ಶಾಹಿ ಈದ್ಗಾ ಮಸೀದಿ ನಿರ್ಮಿಸಲಾಗಿದೆ” ಎಂದು ಹಿಂದೂ ಪರ ಇರುವವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಹೇಳಲಾಗಿದೆ.
”ಈಗ ಮಸೀದಿ ಇರುವ ಸ್ಥಳದಲ್ಲಿ ದ್ವಾಪರ ಯುಗದಲ್ಲಿ ಕಂಸನ ಕಾರಾಗೃಹವಿದ್ದು, ಇಲ್ಲಿ ಕಂಸನು ಶ್ರೀಕೃಷ್ಣನ ತಂದೆ-ತಾಯಿಗಳನ್ನು ಬಂಧಿಸಿದ್ದನು . ಈ ಜೈಲಿನಲ್ಲಿಯೇ ಶ್ರೀಕೃಷ್ಣನ ಹುಟ್ಟಿದ್ದಾನೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಆದ್ದರಿಂದ ಇದು ದೇವರ ನಿಜವಾದ ಜನ್ಮಸ್ಥಳವಾಗಿದೆ” ಎಂದು ಅರ್ಜಿದಾರರ ವಾದವಾಗಿದೆ.
ಈ ಹಿಂದೆ ವಿಚಾರಣೆ ವೇಳೆ ವಕೀಲರು ಗೈರು ಹಾಜರಾದ ಕಾರಣ ಈ ಅರ್ಜಿಯನ್ನು ಈಗಾಗಲೇ ಒಮ್ಮೆ ತಿರಸ್ಕರಿಸಲಾಗಿದೆ. ಈ ಪಿಐಎಲ್ನ್ನು 19 ಜನವರಿ 2021 ರಂದು ತಿರಸ್ಕರಿಸಲಾಯಿತು. ಹೈಕೋರ್ಟ್ ಈ PIL ಅನ್ನು ಮಾರ್ಚ್ 2022ರಲ್ಲಿ ಮರು-ಸಂಗ್ರಹಿಸಿತ್ತು. ಅದನ್ನು ಮತ್ತೊಮ್ಮೆ ವಿಚಾರಣೆಗೆ ಹಾಜರುಪಡಿಸಲು ಹೈಕೋರ್ಟ್ ಸೂಚನೆಗಳನ್ನು ನೀಡಿತ್ತು.
ಇದನ್ನೂ ಓದಿ: ಮಹಿಷ ದಸರಾ ನಿಲ್ಲಿಸಬೇಕು ಎನ್ನಲು ಪ್ರತಾಪ್ ಸಿಂಹ ಯಾರು?: ಬಿಜೆಪಿ ಮುಖಂಡರಿಂದ ವಾಗ್ದಾಳಿ


