ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರನ್ನು ಟೀಕಿಸಿ ಪೋಸ್ಟರ್ ಹಾಕಿದ ಆಟೋ ಚಾಲಕನಿಗೆ ಬಿಜೆಪಿ ಮಾಜಿ ಕಾರ್ಪೊರೇಟರ್ ಹಲ್ಲೆ ನಡೆಸಿರುವ ಬಗ್ಗೆ ಬೆಂಗಳೂರಿನಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ ಪೂಲಿಂಗ್ (Car pooling) ಅನುಮತಿ ನೀಡಿ ಎಂದು ಸಿಎಂಗೆ ಸಂಸದ ತೇಜಸ್ವಿ ಸೂರ್ಯ ಪತ್ರ ಬರೆದಿದ್ದರು. ಈ ಹಿನ್ನೆಲೆ ಧಿಕ್ಕಾರದ ಪೋಸ್ಟರ್ ಹಾಕಿ ಖಾಸಗಿ ಸಾರಿಗೆ ಸಂಘಟನೆ ಅಭಿಯಾನ ಶುರು ಮಾಡಿತ್ತು. ಇದರ ಭಾಗವಾಗಿ ಆಟೋಗಳ ಮೇಲೆ ಅವಿವೇಕಿ ತೇಜಸ್ವಿ ಸೂರ್ಯಗೆ ಧಿಕ್ಕಾರ ಎಂದು ಪೋಸ್ಟರ್ ಅಂಟಿಸಲಾಗಿತ್ತು.
ಇಂಡಿಯ ಟುಡೇ ಈ ಕುರಿತು ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಆಟೋ ರಿಕ್ಷಾಗಳ ಹಿಂಭಾಗಕ್ಕೆ ಡ್ರೈವರ್ಗಳು ಪೋಸ್ಟರ್ಗಳನ್ನು ಅಂಟಿಸುತ್ತಿರುವುದು ಕಂಡು ಬಂದಿದೆ.
ಹನುಮಂತನಗರದ ಶಂಕರ್ ನಾಗ್ ಸರ್ಕಲ್ ಬಳಿ ಶನಿವಾರ ಸುಮಾರು 7 ಗಂಟೆ ಹೊತ್ತಿಗೆ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಪೋಸ್ಟರ್ ಅಂಟಿಸಿದ್ದ ಆಟೋ ಚಾಲಕನೋರ್ವ ಪ್ಯಾಸೆಂಜರ್ ಬರುವಿಕೆಗಾಗಿ ಕಾಯುತ್ತಿದ್ದ. ಇದೇ ವೇಳೆ 4 ಜನ ಬಂದು ಪೋಸ್ಟರ್ ಕಿತ್ತಾಕುವಂತೆ ಅವಾಜ್ ಹಾಕಿದ್ದಾರೆ. ಚಾಲಕ ಒಪ್ಪದೆ ಇದ್ದ ಹಿನ್ನೆಲೆ ತಾವೇ ಪೋಸ್ಟರ್ ಕಿತ್ತು ಹಾಕಿದ್ದಾರೆ. ಬಳಿಕ ವೆಂಕಟೇಶ್ಗೆ ಕಾಲ್ ಮಾಡಿದ್ದಾರೆ. ಆಗ ಸ್ಥಳಕ್ಕೆ ಬಂದ ಮಾಜಿ ಕಾರ್ಪೊರೇಟರ್ ಸಂಗಾತಿ ವೆಂಕಟೇಶ್, ನಮ್ಮ ಸಂಸದರ ಫೋಟೋ ಯಾಕೆ ಈ ರೀತಿ ಹಾಕಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ. ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ಆಟೋ ಚಾಲಕನಿಗೆ ನಿಂದಿಸಿ ಬೆದರಿಕೆ ಹಾಕಿದ್ದಾರೆ ಎಂದು ಚಾಲಕ ಆರೋಪಿಸಿದ್ದಾರೆ.
ಈ ಬಗ್ಗೆ ಸಂತ್ರಸ್ತ ಆಟೋ ಡ್ರೈವರ್, ಬಿಜೆಪಿಯ ಮಾಜಿ ಕಾರ್ಪೊರೇಟರ್ ವೆಂಕಟೇಶ್ ಮತ್ತು ಆತನ ಬೆಂಬಲಿಗರ ವಿರುದ್ಧ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
ಕಾರ್ ಪೂಲಿಂಗ್ ಎಂದರೆ ಒಂದು ಕಾರಿನಲ್ಲಿ ಒಬ್ಬ ವ್ಯಕ್ತಿ ಮಾತ್ರ ಹೋಗುವ ಬದಲು ಅದೇ ಮಾರ್ಗದಲ್ಲಿ ಇತರರನ್ನೂ ಜೊತೆಗೆ ಸೇರಿಸಿಕೊಂಡು ಕರೆದೊಯ್ಯಬಹುದು. ಕಾರ್ ಪೂಲಿಂಗ್ ವಿಚಾರವಾಗಿ ತೇಜಸ್ವಿ ಸೂರ್ಯ ಸಿಎಂಗೆ ಪತ್ರ ಬರೆದಿದ್ದರು. ಕಾರ್ ಪೂಲಿಂಗ್ ನಿಷೇಧ ಮಾಡದಂತೆ ಮನವಿ ಮಾಡಿದ್ದರು.
ಇದನ್ನು ಓದಿ: ಕಂಬಳಕ್ಕೆ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಅತಿಥಿ: ವಿವಾದ ಸೃಷ್ಟಿ