ಈಶಾನ್ಯ ದೆಹಲಿಯಲ್ಲಿ 2020ರ ಫೆಬ್ರವರಿಯಲ್ಲಿ ನಡೆದ ಕೋಮು ಹಿಂಸಾಚಾರ ಪ್ರಕರಣಗಳಲ್ಲಿ ದೆಹಲಿ ಪೊಲೀಸರನ್ನು ಪ್ರತಿನಿಧಿಸುತ್ತಿದ್ದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅಮಿತ್ ಪ್ರಸಾದ್ ಅವರು ರಾಜೀನಾಮೆ ನೀಡಿದ್ದು, ಈ ಕುರಿತ ಪತ್ರವನ್ನು ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಅವರಿಗೆ ಸಲ್ಲಿಸಿದ್ದಾರೆ.
ನಾನು 202ರ ದೆಹಲಿ ಗಲಭೆ ಪ್ರಕರಣದಲ್ಲಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ನೇಮಕಗೊಂಡಿದ್ದೆ. ನನ್ನ ಕರ್ತವ್ಯವನ್ನು 3 ವರ್ಷಗಳಲ್ಲಿ ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಕರ್ತವ್ಯ ನಿಭಾಯಿಸಿದ್ದೇನೆ ಎಂದು ಪ್ರಸಾದ್ ತಮ್ಮ ರಾಜೀನಾಮೆ ಪತ್ರದಲ್ಲಿ ಹೇಳಿರುವ ಬಗ್ಗೆ ಲೈವ್ ಲಾ ವರದಿ ಮಾಡಿದೆ. ಈಗ ನಾನು ಪ್ರಾಸಿಕ್ಯೂಟರ್ ಆಗಿ ಮುಂದುವರಿಯಲು ಸಾಧ್ಯವಾಗುವುದಿಲ್ಲ ಮತ್ತು ಆದ್ದರಿಂದ ತಕ್ಷಣವೇ ಜಾರಿಗೆ ಬರುವಂತೆ ನನ್ನ ರಾಜೀನಾಮೆಯನ್ನು ನೀಡುತ್ತಿದ್ದೇನೆ. ದಯವಿಟ್ಟು ನನ್ನ ರಾಜೀನಾಮೆಯನ್ನು ಕೂಡಲೇ ಅಂಗೀಕರಿಸಬೇಕು. ನನಗೆ ನೀಡಿದ ಅವಕಾಶಕ್ಕಾಗಿ ನಾನು ನಿಮಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಬಾರ್ ಮತ್ತು ಬೆಂಚ್ ಪ್ರಕಾರ, ಶ್ರದ್ಧಾ ವಾಕರ್ ಹತ್ಯೆ ಪ್ರಕರಣದಲ್ಲಿ ಪ್ರಸಾದ್ ಅವರು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಕಾರ್ಯನಿರ್ವಹಿಸುತ್ತಾರೆ. ಶ್ರದ್ಧಾ ವಾಕರ್ ಪ್ರಕರಣಕ್ಕೆ ಅವರಿಗೆ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ ಎನ್ನಲಾಗಿದೆ.
ದಿ ವೈರ್ ವರದಿ ಮಾಡಿದಂತೆ 2020ರ ಕೋಮು ಹಿಂಸಾಚಾರಕ್ಕೆ ಸಂಬಂಧಿಸಿ ಅನೇಕ ಪ್ರಕರಣಗಳಿವೆ. ಇದರಲ್ಲಿ ನ್ಯಾಯಾಧೀಶರು ಪಕ್ಷಪಾತ, ಅಸಮರ್ಪಕ ತನಿಖೆಗಾಗಿ ದೆಹಲಿ ಪೊಲೀಸರನ್ನು ಟೀಕಿಸಿದ್ದಾರೆ. ನ್ಯಾಯಾಲಯಗಳು, ಹಲವಾರು ಪ್ರಕರಣಗಳಲ್ಲಿ ಆರೋಪಿಗಳನ್ನು ಖುಲಾಸೆಗೊಳಿಸುವಾಗ ದೆಹಲಿ ಪೊಲೀಸರಲ್ಲಿ ಸಾಕ್ಷಾಧಾರಗಳ ಕೊರತೆ, ಸಾಕ್ಷಿಗಳ ಸೃಷ್ಟಿ, ವಾಸ್ತವತೆಯ ಬಗ್ಗೆ ತರಾಟೆಗೆ ತೆಗೆದುಕೊಂಡಿವೆ. ಕೆಲವು ಪ್ರಕರಣಗಳ ತನಿಖೆಯನ್ನು ಪೊಲೀಸರು ನಡೆಸಿದ ರೀತಿ ವಿಚಿತ್ರವಾಗಿದೆ ಎಂಬುದನ್ನು ಗಮನಿಸಿದೆ.
ಈಶಾನ್ಯ ದೆಹಲಿಯಲ್ಲಿ ಫೆಬ್ರವರಿ 2020ರಲ್ಲಿ ನಡೆದ ಕೋಮು ಹಿಂಸಾಚಾರಕ್ಕೆ ಸಂಬಂಧಿಸಿ ಕನಿಷ್ಠ 758 ಎಫ್ಐಆರ್ಗಳನ್ನು ದಾಖಲಿಸಲಾಗಿದೆ. 2020ರ ಫೆಬ್ರವರಿಯಲ್ಲಿ ನಡೆದ ದೆಹಲಿ ಹಿಂಸಾಚಾರದ ವೇಳೆ 53 ಜನರು ಮೃತಪಟ್ಟಿದ್ದು, 700ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಹಿಂಸಾಚಾರವು ಫೆಬ್ರವರಿ 23 ರಿಂದ 27ರವರೆಗೆ ನಾಲ್ಕು ದಿನಗಳ ಕಾಲ ನಡೆದಿತ್ತು.
ದೆಹಲಿಯಲ್ಲಿ ನಡೆದ ಹಿಂಸಾಚಾರಕ್ಕೆ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರು ನೇರಹೊಣೆ ಎಂದು ಸತ್ಯಶೋಧನ ಸಮಿತಿಯ ವರದಿ ಹೇಳಿತ್ತು. ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾಕ್ರ್ಸಿಸ್ಟ್) ಬಿಡುಗಡೆಗೊಳಿಸಿರುವ ಸತ್ಯಶೋಧನಾ ವರದಿಯು, 53 ಮಂದಿಯನ್ನು ಬಲಿ ಪಡೆದ ಈಶಾನ್ಯ ದೆಹಲಿ ಹಿಂಸಾಚಾರಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಹೊಣೆಗಾರರನ್ನಾಗಿಸಿದೆ. ಹಿಂಸೆ ಉಲ್ಬಣಗೊಳ್ಳಲು ಹಾಗೂ ಈ ಕುರಿತಾದ ಪೊಲೀಸ್ ತನಿಖೆ ಪೂರ್ವಾಗ್ರಹಪೀಡಿತವಾಗಲು ಕೂಡ ಶಾ ಅವರೇ ಕಾರಣ ಎಂದು ಈ ವರದಿ ಆರೋಪಿಸಿತ್ತು.
ಬಿಜೆಪಿ ನಾಯಕರುಗಳಾದ ಕಪಿಲ್ ಮಿಶ್ರಾ ಮತ್ತು ಅನುರಾಗ್ ಠಾಕೂರ್ ಅವರ ಪ್ರಚೋದನಾತ್ಮಕ ಭಾಷಣಗಳು ಹಾಗೂ ಫೆಬ್ರವರಿ 21ರ ಶಿವರಾತ್ರಿ ಮೆರವಣಿಗೆಗಳ ವೇಳೆಯ ಪ್ರಚೋದನಾತ್ಮಕ ಘೋಷಣೆಗಳು ಕೂಡ ದೆಹಲಿ ಹಿಂಸೆಗೆ ಕಾರಣವಾಗಿತ್ತು ಎಂದು ಸತ್ಯಶೋಧನಾ ವರದಿ ತಿಳಿಸಿತ್ತು.
ಇದನ್ನು ಓದಿ: ಗಾಝಾದಲ್ಲಿ ಮಾನವೀಯ ಬಿಕ್ಕಟ್ಟು: ಹಸಿವು ತಾಳಲಾರದೆ ಟ್ರಕ್ಗಳನ್ನು ತಡೆದು ಆಹಾರ ಕಸಿದುಕೊಳ್ಳುತ್ತಿರುವ ಜನ