Homeಮುಖಪುಟನೀಲಿ-ಕೆಂಪು ಒಂದಾಗಬೇಕೆಂಬುದು ಆಕೆಯ ಆಸೆಯಾಗಿತ್ತು

ನೀಲಿ-ಕೆಂಪು ಒಂದಾಗಬೇಕೆಂಬುದು ಆಕೆಯ ಆಸೆಯಾಗಿತ್ತು

- Advertisement -
- Advertisement -

 

ಡಿ.ಉಮಾಪತಿ

ಚಿತ್ರದುರ್ಗದ ಡಿ.ಉಮಾಪತಿಯವರು ದೀರ್ಘಕಾಲ ದೆಹಲಿಯಿಂದ ಕನ್ನಡದ ಮೂರು ಪ್ರಮುಖ ದಿನಪತ್ರಿಕೆಗಳಿಗೆ (ಕನ್ನಡಪ್ರಭ, ವಿಜಯ ಕರ್ನಾಟಕ, ಪ್ರಜಾವಾಣಿ) ವರದಿ ಮಾಡಿದ್ದಾರೆ. ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಬಿಡಿ ಘಟನೆಗಳನ್ನು ವಿಶಾಲ ಭಿತ್ತಿಯಲ್ಲಿಟ್ಟು ನೋಡುವ ಅವರ ಸಾಂದ್ರವಾದ ಬರಹಗಳು ಓದುಗರನ್ನು ಆಳವಾಗಿ ಕಲಕುತ್ತವೆ. ಅವರ `ಡೆಲ್ಲಿ ಡೈರಿ’ ಮತ್ತು `ದೆಹಲಿ ನೋಟ’ ಅಂಕಣಗಳು ಹೆಚ್ಚು ಓದುಗರನ್ನು ಸೆಳೆದಿದ್ದವು. ಪ್ರಸ್ತುತ `ನ್ಯಾಯಪಥ’ ಪತ್ರಿಕೆಯ ಕನ್ಸಲ್ಟಿಂಗ್ ಎಡಿಟರ್ ಆಗಿದ್ದಾರೆ ಮತ್ತು ಪ್ರತಿಧ್ವನಿ ಅಂತರ್ಜಾಲ ಪತ್ರಿಕೆ ಸೇರಿದಂತೆ ವಿವಿಧ ಮಾಧ್ಯಮಗಳಲ್ಲಿ ಅವರ ಬರಹಗಳು ಮುಂದುವರೆದಿವೆ.

ಮೂವತ್ತೆರಡು ವರ್ಷಗಳಷ್ಟು ಕಾಲದ ವರದಿಗಾರನ ಕಸುಬಿನಲ್ಲಿ ಇಪ್ಪತ್ತು ವರ್ಷಗಳನ್ನು ದಿಲ್ಲಿಯಲ್ಲೇ ಸವೆಸಿದ ಕಾರಣ ಗೌರಿ ಲಂಕೇಶ್ ಅವರ ಸಂಪರ್ಕ ನನಗೆ ಕೆಲಕಾಲ ಹತ್ತಿರದ್ದು ಮತ್ತು ಬಹುಕಾಲ ದೂರದ್ದೂ ಆಗಿ ಉಳಿಯಿತು.

1996ರಲ್ಲಿ ‘ಕನ್ನಡಪ್ರಭ’ ನನ್ನನ್ನು ದಿಲ್ಲಿಗೆ ಕಳಿಸುವ ತನಕ ಹನ್ನೆರಡು ವರ್ಷಗಳ ಕಾಲ ಬೆಂಗಳೂರಲ್ಲಿ ಕೆಲಸ. ಇಂಗ್ಲಿಷ್ ಪತ್ರಕರ್ತರು ಅದರಲ್ಲಿಯೂ ಹೆಣ್ಣುಮಕ್ಕಳು ಕನ್ನಡ ಪತ್ರಕರ್ತರೊಂದಿಗೆ ದೂರ ಕಾಯ್ದುಕೊಳ್ಳುತ್ತಿದ್ದರು. ಕೃತಕ ಗೋಡೆಗಳನ್ನು ಎಬ್ಬಿಸಿ ನಿಲ್ಲಿಸುತ್ತಿದ್ದರು. ಈ ಮಾತಿಗೆ ಅಪವಾದದಂತೆ ನಡೆದುಕೊಳ್ಳುತ್ತಿದ್ದ ವಿರಳರಲ್ಲಿ ಗೌರಿಯೂ ಒಬ್ಬರು. ಹೌದು, ಗೌರಿ ಇಂಗ್ಲಿಷ್ ಪತ್ರಕರ್ತೆಯಾಗಿದ್ದರು. ನಿತ್ಯದ ವರದಿಗಾರಿಕೆಯಲ್ಲಿ ಆಗಾಗ ಸಿಗುತ್ತಿದ್ದರು. ನಿಗರ್ವಿಯೂ ಸ್ನೇಹಪರರೂ ಹಾಗೂ ಸರಳ ಸ್ವಭಾವದವರೂ ಆಗಿರುತ್ತಿದ್ದರು. ಕನ್ನಡ ಇಂಗ್ಲಿಷಿನ ದೂರದಲ್ಲಿ ಅವರಿಗೆ ನಂಬಿಕೆ ಇರಲಿಲ್ಲ. ಎಂಬತ್ತರ ದಶಕ. ಆ ವೇಳೆಗಾಗಲೆ ಅವರು ದೆಹಲಿಯ ಪ್ರತಿಷ್ಠಿತ ಇಂಡಿಯನ್ ಇನ್ಸ್‍ಟಿಟ್ಯೂಟ್ ಆಫ್ ಮಾಸ್ ಕಮ್ಯೂನಿಕೇಷನ್ ಸಂಸ್ಥೆಯಲ್ಲಿ ಓದಿ ಪದವಿ ಪಡೆದವರಾಗಿದ್ದರು. ಅವರ ಮೇಲೆ ತಂದೆ ಲಂಕೇಶರ ಪ್ರಭಾವವಿತ್ತು. ದೆಹಲಿಯ ಜೆ.ಎನ್.ಯು.ವಿನ ಸಮ ಸಮಾಜದ ಆಶಯದ ವಾತಾವರಣ ಅದನ್ನು ಗಟ್ಟಿಗೊಳಿಸಿತ್ತು.

ಲಂಕೇಶ್ ಪತ್ರಿಕೆಯ ಯಶಸ್ಸಿನ ನೆರಳಿನಿಂದ ಪ್ರಜ್ಞಾಪೂರ್ವಕವಾಗಿ ದೂರ ಉಳಿಯಬಯಸಿದ್ದರು. ಹೀಗಾಗಿ ಇಂಗ್ಲಿಷ್ ಪತ್ರಿಕೋದ್ಯಮ ಅವರ ಆಯ್ಕೆಯಾಗಿತ್ತು. Mid Day, Sunday ಆಗ ರಭಸದ ಪತ್ರಿಕೋದ್ಯಮ ನಡೆಸಿದ ಪತ್ರಿಕೆಗಳು. ಆನಂತರ Times of India, ಇಂಗ್ಲಿಷ್ ದೈನಿಕ, ETV, News Timeಗೆ ವರದಿ ಮಾಡಿದರು. ಇಂಡಿಯಾ ಟುಡೇ ಸಮೂಹದ Headlines Todayಯಲ್ಲೂ ಕೆಲಸ ಅವರ ವರದಿಗಾರಿಕೆಗೆ ಸಾಣೆ ಹಿಡಿದಿತ್ತು. ಹೊಳಪು ಹರಿತ ಎರಡೂ ದಕ್ಕಿದ್ದವು.

ದೆಹಲಿಯಲ್ಲಿ ಹಲವು ವರ್ಷ ಕೆಲಸ ಮಾಡಿದ ಅವರಿಗೆ ರಾಜಧಾನಿಯ ರಾಜಕಾರಣದ ಒಳಸುಳಿಗಳ ಮೇಲೆ ಹಿಡಿತ ಸಿಕ್ಕಿತ್ತು. ಇಲ್ಲಿ ಕೂಡ ನನ್ನ ಪಾಲಿಗೆ ಅವರು ಅದೇ ಬೆಂಗಳೂರಿನ ನಿಗರ್ವಿ ಸಹೋದ್ಯೋಗಿ. ದೆಹಲಿಯಲ್ಲಿ ಕನ್ನಡ ಮೂಲದ ಮತ್ತೊಬ್ಬ ಯಶಸ್ವೀ ಇಂಗ್ಲಿಷ್ ಪತ್ರಕರ್ತ ಗಿರೀಶ್ ನಿಕ್ಕಮ್, ಗೌರಿ, ಔಟ್‍ಲುಕ್ ನಿಯತಕಾಲಿಕದ ವರದಿಗಾರ್ತಿ ಭಾವದೀಪ್ ಕಾಂಗ್ ಹೆಚ್ಚಾಗಿ ಕಲೆತು ಹರಟೆ ಹೊಡೆಯುತ್ತಿದ್ದೆವು. ದೈನಿಕ್ ಜಾಗರಣ್‍ನ ಹಿರಿಯ ವರದಿಗಾರ ನಿರ್ಮಲ್ ಪಾಠಕ್ ಒಂದು ಗುಂಪಾಗಿ ಸುದ್ದಿ ಸಂಗ್ರಹಕ್ಕೆಂದು ಅಲೆಯುತ್ತಿದ್ದೆವು. ಅನುಕೂಲಸ್ಥ ತಂದೆಯಿದ್ದಾರೆ ಎಂಬ ಭಾವದಿಂದ ಗೌರಿ ಯಾವೊತ್ತೂ ಕೆಲಸ ಕದಿಯಲಿಲ್ಲ. ಕಠಿಣ ಪರಿಶ್ರಮಕ್ಕೆ ಅಳುಕಲಿಲ್ಲ. ಅದಾಗಲೇ ಲಂಕೇಶರು ಅನಾರೋಗ್ಯಕ್ಕೆ ಒಳಗಾಗಿದ್ದರು. ತಂದೆ ಮಗಳು ಒಬ್ಬರನ್ನೊಬ್ಬರು ಬಹಳ ಹಚ್ಚಿಕೊಂಡಿದ್ದವರು. ತಂದೆಯ ಅನಾರೋಗ್ಯ ನೆನೆಸಿಕೊಂಡು ಗೌರಿ ಆಗಾಗ ಹನಿಗಣ್ಣಾಗುತ್ತಿದ್ದರು. ಬೆಂಗಳೂರಿಗೆ ತೆರಳಿ ಕೆಲ ದಿನ ಇದ್ದು ಬರುತ್ತಿದ್ದರು. ಯಾವ ಸುದ್ದಿಯನ್ನು ಕೇಳುವ ದಿನದ ಹೆದರಿಕೆಯಿತ್ತೋ ಆ ಕೆಟ್ಟ ಸುದ್ದಿ ಬಂದೇ ಬಿಟ್ಟಿತು. ಲಂಕೇಶರ ಆರೋಗ್ಯ ಬಿಗಡಾಯಿಸಿತ್ತು. ಒಮ್ಮೆ ಹೀಗೆ ಅಳುತ್ತಲೇ ಬೆಂಗಳೂರಿಗೆ ತೆರಳಿದ ಗೌರಿ ಮತ್ತೆ ದೆಹಲಿಗೆ ವಾಪಸು ಬರಲಿಲ್ಲ.

ತಂದೆ ತೊರೆದು ಹೋದ ಹೊಸ ರೂಹಿನ ಪತ್ರಿಕೋದ್ಯಮದ ‘ಬೃಹತ್ ಪಾದರಕ್ಷೆ’ಗಳಲ್ಲಿ ಗೌರಿ ತಮ್ಮ ಪುಟ್ಟ ಪಾದಗಳನ್ನು ಅಳುಕದೆ ಇರಿಸಿದ ದಿಟ್ಟ ಹೆಣ್ಣುಮಗಳು. ಪತ್ರಿಕೆಯೊಂದರ ಸಂಪಾದಕಿ ಆಗುವಷ್ಟು, ಪರಿಣಾಮಕಾರಿಯಾಗಿ ಬರೆಯುವಷ್ಟು ಕನ್ನಡ ಕಲಿತರು. ಅಲ್ಲಲ್ಲಿ ನ್ಯೂನತೆಗಳನ್ನು ಎಣಿಸಲು ಬಂದೀತು, ಆದರೆ ಒಟ್ಟಾರೆ ಲಂಕೇಶರು ನಡೆಸಿದ್ದು ಕೇವಲ ಪತ್ರಿಕೋದ್ಯಮ ಮಾತ್ರ ಆಗಿರಲಿಲ್ಲ. ಸಾಮಾಜಿಕ ಎಚ್ಚರದ ಹೊಸ ಪೀಳಿಗೆಯನ್ನೇ ರೂಪಿಸಿದರು. ತಂದೆಯ ಪ್ರಖರ ಪ್ರತಿಭೆ, ಭಾಷೆಯೊಂದಿಗಿನ ಮಾಂತ್ರಿಕ ಸ್ಪರ್ಶ, ಅಪಾರ ಓದು, ಆಳದ ಸಾಮಾಜಿಕ ರಾಜಕೀಯ ಒಳನೋಟಗಳು ಮಗಳಿಗಿರಲಿಲ್ಲ ನಿಜ. ಆದರೆ ತಂದೆ ಹಾಕಿಕೊಂಡಿದ್ದ ಗೆರೆಯನ್ನು ದಾಟಿ ಮುಂದೆ ಹೋದ ಮಗಳು ಪತ್ರಿಕೆಯನ್ನು ತುಳಿಸಿಕೊಂಡ ಜನರ ನೋವಿನ ದನಿಯಾಗಿಸಲು, ಕೋಮುವಾದಿಗಳ ವಿರುದ್ಧದ ಹತಾರು ಆಗಿಸಲು ಶ್ರಮಿಸಿದರು. ಹೋರಾಟಗಾರ್ತಿ ಪತ್ರಕರ್ತೆ ಆದರು.

ತಂದೆ ಆರಂಭಿಸಿದ ಪತ್ರಿಕೆ ತಮ್ಮನ ಪಾಲಾದಾಗಲೂ ಧೃತಿಗೆಡದೆ ಮತ್ತೊಂದನ್ನು ಶುರು ಮಾಡಿದರು. ಕಾಲಾನುಕ್ರಮದಲ್ಲಿ ಬರೆಯಲು ಮಾತ್ರವೇ ಅಲ್ಲ, ಕನ್ನಡದಲ್ಲಿ ಆಲೋಚಿಸಲೂ ಕಲಿತರು. ‘ಕಂಡ ಹಾಗೆ’ ಶೀರ್ಷಿಕೆಯಡಿ ಅವರು ಬರೆದ ಸಂಪಾದಕೀಯ ಸರಳ ಸಂವಹನಕ್ಕೆ ಮಾದರಿಯಾಗಿ ರೂಪುಗೊಂಡಿತು. ಹೊಸ ಪತ್ರಿಕೆ ಪತ್ರಿಕೆಯಷ್ಟೇ ಆಗಿ ಉಳಿಯಲಿಲ್ಲ. ಅದೊಂದು ಚಳವಳಿಯಾಗಿ ಬೆಳೆಯಿತು. ಗೌರಿಯವರನ್ನೂ ಬೆಳೆಸಿತು. ಅವರ ಅಂತರಂಗವನ್ನು ಅರಳಿಸಿತು.

ತುಂಟುತನ, ಜೀವಕಾರುಣ್ಯ, ಜೀವನಪ್ರೀತಿ ಅವರನ್ನು ಸುತ್ತಮುತ್ತಲ ಕನ್ನಡ ಸಮಾಜದೊಂದಿಗೆ ಮತ್ತಷ್ಟು ಗಟ್ಟಿಯಾಗಿ ಬೆಸೆಯಿತು. ಯುವಪೀಳಿಗೆಯೊಂದಿಗೆ ಸಂವಾದಕ್ಕೆ ಅವರಷ್ಟು ತೆರೆದುಕೊಂಡ ಅವರ ಓರಗೆಯ ಮತ್ತೊಬ್ಬ ಪತ್ರಕರ್ತರನ್ನು ನಾನು ಕಂಡಿಲ್ಲ. ಅಮ್ಮನ- ಅಕ್ಕನ ವಾತ್ಸಲ್ಯ ಅವರದು.

ಲಂಕೇಶರು ನಂಬಿದ್ದ ಲೋಹಿಯಾವಾದಿ-ಸಮಾಜವಾದ ಮತ್ತು ಗಾಂಧೀವಾದದ ಆಚೆಗೂ ಸರಿದ ಗೌರಿ, ಎಡಪಂಥೀಯ ವಿಚಾರಧಾರೆಯನ್ನು ದೂರ ಇರಿಸಲಿಲ್ಲ. ದಲಿತರು ಮತ್ತು ಎಡಪಂಥೀಯರನ್ನು ತಾವು ನಡೆಸಿದ ಪತ್ರಿಕೆಯಲ್ಲಿ ತಂದೆಗಿಂತ ಹೆಚ್ಚು ಹತ್ತಿರವಿಟ್ಟುಕೊಂಡರು. ಜನಾಂದೋಲನಗಳ ಜೊತೆ ಸಕ್ರಿಯವಾಗಿ ಬೆರೆತು ಗುರುತಿಸಿಕೊಂಡರು. ತಮ್ಮನ್ನು ‘ಆ್ಯಕ್ಟಿವಿಸ್ಟ್ ಜರ್ನಲಿಸ್ಟ್’ ಎಂದು ಹೆಮ್ಮೆಯಿಂದ ಕರೆದುಕೊಂಡರು.

ಪ್ರಚಂಡ ಕೋಮುವಾದಿ ಫ್ಯಾಸಿಸ್ಟ್ ರಾಜಕೀಯ ಎದುರಾಳಿಯ ಎದುರು ದಲಿತರ ನೀಲಿ ಮತ್ತು ಎಡಪಂಥೀಯರ ಕೆಂಪು ರಂಗುಗಳು ಎಲ್ಲ ಮತಭೇದವನ್ನೂ ಬದಿಗಿಟ್ಟು ಒಂದಾಗಬೇಕೆಂಬುದು ಅವರ ಅಚಲ ಆಶಯವಾಗಿತ್ತು. ನೀಲಿ ಮತ್ತು ಕೆಂಪು ಎರಡರ ಗೌರವವನ್ನೂ ಸಂಪಾದಿಸಿಕೊಂಡ ಪ್ರೀತಿ ವಾತ್ಸಲ್ಯದ ‘ಅಮ್ಮ’ನಾಗಿ ಹೊರಹೊಮ್ಮಿದ್ದರು. ಈ ಎರಡೂ ರಂಗುಗಳ ನಡುವೆ ನಡೆದ ವೈಚಾರಿಕ ಕದನಗಳು ಆಕೆಯ ಮನಸ್ಸನ್ನು ಘಾಸಿಗೊಳಿಸಿತ್ತು. ಅಲ್ಪಸಂಖ್ಯಾತರು, ಲೈಂಗಿಕ ಅಲ್ಪಸಂಖ್ಯಾತರ ಕುರಿತು ತಂದೆಯದೇ ಬದ್ಧತೆ, ಪ್ರೀತಿ ಅವರಿಗಿತ್ತು. ಕನ್ಹಯ್ಯಕುಮಾರ್ ಮತ್ತು ಜಿಗ್ನೇಶ್ ಮೇವಾನಿ, ಶೆಹ್ಲಾ ರಷೀದ್ ಅವರನ್ನು ತಮ್ಮ ದತ್ತುಮಕ್ಕಳೆಂದು ಬಹಿರಂಗವಾಗಿ ಕರೆದುಕೊಂಡಿದ್ದರು. ಹಂತಕರ ಗುಂಡು ಆಕೆಯನ್ನು ಬಲಿ ತೆಗೆದುಕೊಳ್ಳುವ ಕೆಲ ತಿಂಗಳುಗಳ ಹಿಂದೆ ದೆಹಲಿಗೆ ಬಂದಿದ್ದಾಗ ಕನ್ಹಯ್ಯನಿಗೆ ಹೊಸ ಉಡುಪುಗಳ ಉಡುಗೊರೆ ತಂದಿದ್ದುಂಟು.

ಪತ್ರಿಕೆ ನಡೆಸಲು ಆಕೆ ತನ್ನ ಕಟಿಬದ್ಧ ತಂಡದೊಂದಿಗೆ ಪಡುತ್ತಿದ್ದ ಪಡಿಪಾಟಲಿನ ಕಲ್ಪನೆಯೇ ನನಗಿರಲಿಲ್ಲ. ದೆಹಲಿ ರಾಜಕಾರಣದ ದಿಕ್ಕು ದೆಸೆಗಳನ್ನು ತಿಳಿದುಕೊಳ್ಳಲು ಆಗಾಗ ಫೋನ್ ಮಾಡುತ್ತಿದ್ದರು. ಚುನಾವಣೆಗಳ ಸಂದರ್ಭದಲ್ಲಿ ಕರ್ನಾಟಕದ ಚುನಾವಣಾ ರಾಜಕಾರಣದ ಸ್ಥಿತಿಗತಿಗಳ ವ್ಯಾಖ್ಯಾನಕಾರ್ತಿಯಾಗಿ ದೆಹಲಿಯಲ್ಲಿ ಖ್ಯಾತ ಟೀವಿ ಚಾನೆಲ್ಲುಗಳ ಪ್ಯಾನೆಲ್ ಡಿಸ್ಕಷನ್‍ಗಳಲ್ಲಿ ವಾರಗಟ್ಟಲೆ ಕುಳಿತುಕೊಳ್ಳುತ್ತಿದ್ದರು. ಅದರಿಂದ ಬಂದ ಲಕ್ಷ ರುಪಾಯಿಗೂ ಹೆಚ್ಚು ಹಣವನ್ನು ಪತ್ರಿಕೆ ನಡೆಸಲು ಬಳಸುತ್ತಿದ್ದ ವಿಚಾರ ನನಗೆ ತಿಳಿದದ್ದು ಆಕೆ ಗತಿಸಿದ ನಂತರವೇ. ಈ ದಿನಗಳಲ್ಲಿ ಊಟಕ್ಕೆ ಕುಳಿತಾಗಲೂ ಈ ಕಷ್ಟವನ್ನು ಹೇಳಿಕೊಳ್ಳದೆ ನಗುತ್ತಿದ್ದ ದೊಡ್ಡ ಹೃದಯದ ಹೆಣ್ಣುಮಗಳು ಗೌರಿ.

ಸಾಮಾಜಿಕ-ರಾಜಕೀಯ-ಧಾರ್ಮಿಕ-ವೈಚಾರಿಕ ಅಸಹಿಷ್ಣುತೆ ಅತ್ಯುಗ್ರ ರೀತಿಯಲ್ಲಿ ಪ್ರಕಟವಾದಾಗ ಪತ್ರಿಕೆಯ ಕಚೇರಿಯಲ್ಲಿ ಕುಳಿತುಕೊಳ್ಳದೆ ಬಯಲಿಗಿಳಿದು ಪ್ರವಾಸ ನಡೆಸಿ ಅದನ್ನು ಮುಖಾಮುಖಿಯಾದ ಅಪರೂಪದ ಪತ್ರಕರ್ತೆ ಆಕೆ.

ತಾವು ಗುಂಡಿಟ್ಟದ್ದು ಗೌರಿಯ ದೇಹಕ್ಕೇ ವಿನಾ ವಿಚಾರಕ್ಕಲ್ಲ ಎಂಬುದನ್ನು ದುರುಳರೂ ಮೂರ್ಖರೂ ಆದ ಹಂತಕರಿಗೆ ಈಗಲೂ ತಿಳಿದಿಲ್ಲ, ಮುಂದೆಯೂ ತಿಳಿಯುವುದಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇಸ್ಲಾಮಾಬಾದ್‌ನಲ್ಲಿ ಅಮೆರಿಕ–ಇರಾನ್ ಶಾಂತಿ ಮಾತುಕತೆ; ಪಾಕಿಸ್ತಾನ ಮಧ್ಯಸ್ಥಿಕೆ

ಹಲವು ರೀತಿಯ ಪ್ರತಿಷ್ಠೆ ಪ್ರದರ್ಶನ, ಭಿನ್ನಾಭಿಪ್ರಾಯಗಳ ನಡುವೆ ಅಮೆರಿಕ-ಇರಾನ್ ಶಾಂತಿ ಮಾತುಕತೆ ಶನಿವಾರ (ಏ.11) ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಪ್ರಾರಂಭಗೊಳ್ಳಲಿದೆ. ಪಾಕಿಸ್ತಾನದ ಪಾಲಿಗೆ ಇದು ಅತ್ಯಂತ ಪ್ರತಿಷ್ಠೆಯ ವಿಷಯವಾಗಿ ಮಾರ್ಪಟ್ಟಿದೆ. ಅಮೆರಿಕದ ಪರವಾಗಿ ಉಪಾಧ್ಯಕ್ಷ ಜೆ.ಡಿ....

ಕಾಂಗ್ರೆಸ್ ನಿಂದ ಏಪ್ರಿಲ್ 12ರಂದು ‘ರನ್ ಫಾರ್ ಅಂಬೇಡ್ಕರ್, ರನ್ ಫಾರ್ ಕಾನ್ಸ್ಟಿಟ್ಯೂಷನ್’ ಮ್ಯಾರಥಾನ್ ಆಯೋಜನೆ

ನವದೆಹಲಿ: ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯ ಅಂಗವಾಗಿ ಕಾಂಗ್ರೆಸ್ ಭಾನುವಾರ 'ಅಂಬೇಡ್ಕರ್‌ಗಾಗಿ ಓಟ, ಸಂವಿಧಾನಕ್ಕಾಗಿ ಓಟ' ಮ್ಯಾರಥಾನ್ ಆಯೋಜಿಸಿದೆ. ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಇಲ್ಲಿನ ಮಂಡಿ ಹೌಸ್‌ನಿಂದ ಮ್ಯಾರಥಾನ್‌ಗೆ...

ಮುಖ್ಯವಾಹಿನಿಗೆ ಬಂದ 42 ಕೇಡರ್‌ಗಳು; ರಾಜ್ಯದಲ್ಲಿ’ಮಾವೋವಾದಿ ಕಾರ್ಯಾಚರಣೆ’ ಅಂತ್ಯವಾಗಿದೆ ಎಂದ ತೆಲಂಗಾಣ ಪೊಲೀಸರು

ರಾಜ್ಯದಲ್ಲಿ ಸಿಪಿಐ (ಮಾವೋವಾದಿ) ಸಂಘಟನೆಯ ಕಾರ್ಯಚರಣೆ ಅಂತಿಮವಾಗಿದೆ ಎಂದು ತೆಲಂಗಾಣ ಪೊಲೀಸರು ಘೋಷಣೆ ಮಾಡಿದ್ದಾರೆ. ಬೆಟಾಲಿಯನ್ ಕಮಾಂಡರ್ ಮತ್ತು ಎರಡು ಪ್ರಮುಖ ಗುಂಪುಗಳ ಹಿರಿಯ ನಾಯಕತ್ವ ಸೇರಿದಂತೆ ನಿಷೇಧಿತ ಸಂಘಟನೆಯ 42 ಕೇಡರ್‌ಗಳು...

‘ಹಿಂದಿ ನಿರ್ಮೂಲನೆ ಮಾಡುತ್ತೇವೆ’ ಎಂದು ಸಚಿವರು ಹೇಳಿಲ್ಲ; ಹಿಂದಿ ಪರ ಅರ್ಜಿ ವಜಾ; ₹1 ಲಕ್ಷ ದಂಡ ವಿಧಿಸಿದ ಹೈಕೋರ್ಟ್‌

ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷಾ ವಿಷಯಗಳ ಮೌಲ್ಯಮಾಪನ ಸಂಬಂಧ ರಾಜ್ಯ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ನೀಡಿದ ಹೇಳಿಕೆಯ ವಿರುದ್ಧ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು (ಪಿಐಎಲ್) ಕರ್ನಾಟಕ...

ದೆಹಲಿ| ಮುಸ್ಲಿಮರ ಮೇಲಿನ ದ್ವೇಷಕ್ಕೆ ಜೀವಂತ ಹಂದಿಗಳನ್ನು ಪೂಜಿಸುತ್ತಿರುವ ಹಿಂದೂಗಳು

ಹಳೆಯ ದೆಹಲಿಯ ಹಿಂದೂ-ಮುಸ್ಲಿಂ ಜನರು ವಾಸಿಸುವ ತ್ರನಗರದ ನೆರೆಹೊರೆಯಲ್ಲಿ ಹಿಂದೂ ಕುಟುಂಬಗಳು ಜೀವಂತ ಹಂದಿಗಳನ್ನು ಪೂಜಿಸುತ್ತಿದ್ದಾರೆ. ಮುಸ್ಲಿಮರ ಮೇಲಿನ ದ್ವೇಷಕ್ಕೆ ಮನೆಯ ಮುಂಭಾಗ ಅಲಂಕೃತ ಹಂದಿ (ವರಹಾಸ್ವಾಮಿ) ಚಿತ್ರಗಳನ್ನು ಅಳವಡಿಸಿದ್ದಾರೆ ಎಂದು 'ದಿ...

ಪ. ಬಂಗಾಳ: ಮಹಿಳೆಯರಿಗೆ ₹3,000 ರಿಂದ 6 ತಿಂಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಸೇರಿದಂತೆ ಹಲವು ಭರವಸೆ ನೀಡಿದ ಬಿಜೆಪಿ 

ಕೋಲ್ಕತ್ತಾ : ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಪ್ರಚಾರ ಆರಂಭವಾಗಿದ್ದು, ಮೊದಲ ಹಂತದ ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ, ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಪಶ್ಚಿಮ ಬಂಗಾಳದ ಬಿಜೆಪಿ...

ಹಾಸನ| ರೈತ ಮುಖಂಡ ವಾಸುದೇವ ಕಲ್ಕೆರೆ ಮೇಲೆ ಹಲ್ಲೆ; ದುಷ್ಕರ್ಮಿಗಳ ಬಂಧನಕ್ಕೆ ಕೆಪಿಆರ್‌ಎಸ್‌ ಆಗ್ರಹ

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಕರ್ನಾಟಕ ಪ್ರಾಂತ ರೈತ ಸಂಘದ (ಕೆಪಿಆರ್‌ಎಸ್‌) ಕಾರ್ಯದರ್ಶಿ ಹಾಗೂ ಕಲ್ಕೆರೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ, ಡಿವೈಎಫ್‌ಐ ಜಿಲ್ಲಾಧ್ಯಕ್ಷ ವಾಸುದೇವ ಕಲ್ಕೆರೆ ಮೇಲೆ ಹಲ್ಲೆ-ದೌರ್ಜನ್ಯ ನಡೆಸಿರುವ ಗೂಂಡಾಗಳನ್ನು...

ಉತ್ತರ ಪ್ರದೇಶ| ಡಿಜಿಟಲ್ ಬಂಧನದಿಂದ ಪೋಷಕರನ್ನು ರಕ್ಷಿಸಿದ 8ನೇ ತರಗತಿ ವಿದ್ಯಾರ್ಥಿ

ಸುಮಾರು 10 ಗಂಟೆಗಳ ಕಾಲ ವೀಡಿಯೊ ಕರೆ ಮೂಲಕ ಡಿಜಿಟಲ್ ಬಂಧನಕ್ಕೆ ಒಳಗಾಗಿದ್ದ ತನ್ನ ಹೆತ್ತವರು ಹಣ ಕಳೆದುಕೊಳ್ಳದಂತೆ 8ನೇ ತರಗತಿಯ ಬಾಲಕನೊಬ್ಬ ರಕ್ಷಿಸಿರುವ ಘಟನೆ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಬರೇಲಿಯಲ್ಲಿ...

ಅಸ್ಸಾಂ: ಪವನ್ ಖೇರಾ ವಿರುದ್ಧದ ಪ್ರಕರಣದಲ್ಲಿ ಒಂದು ವಾರದ ನಿರೀಕ್ಷಣ ಜಾಮೀನು ನೀಡಿದ ತೆಲಂಗಾಣ ಹೈಕೋರ್ಟ್

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ ಅವರು ಸಲ್ಲಿಸಿದ ಎಫ್‌ಐಆರ್‌ಗೆ ಸಂಬಂಧಿಸಿದಂತೆ ತೆಲಂಗಾಣ ಹೈಕೋರ್ಟ್ ಶುಕ್ರವಾರ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರಿಗೆ ಒಂದು ವಾರದ...

ನಿವಾಸದಲ್ಲಿ ನಗದು ಪತ್ತೆ ಪ್ರಕರಣದಲ್ಲಿ ಸಿಲುಕಿದ್ದ ನ್ಯಾಯಮೂರ್ತಿ ಯಶವಂತ್ ವರ್ಮಾ ರಾಜೀನಾಮೆ

ತಮ್ಮ ನಿವಾಸದಲ್ಲಿ ನಗದು ಪತ್ತೆ ಆರೋಪದ ಕೇಂದ್ರಬಿಂದುವಾಗಿದ್ದ ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ಕಳೆದ ವರ್ಷ ಏಪ್ರಿಲ್ 5...