“ಅತ್ಯಾಚಾರ ಪ್ರಕರಣಗಳನ್ನು ನ್ಯಾಯಾಲಯದ ಹೊರಗೆ ಇತ್ಯರ್ಥಪಡಿಸಲು ಸಾಧ್ಯವಿಲ್ಲ” ಎಂದು ಪ್ರತಿಪಾದಿಸಿರುವ ದೆಹಲಿ ಹೈಕೋರ್ಟ್, ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರು ಪ್ರಕರಣವನ್ನು ಇತ್ಯರ್ಥಪಡಿಸಲು ಆರೋಪಿ ಮತ್ತು ಸಂತ್ರಸ್ತೆಯ ನಡುವೆ ರಾಜಿ ಮಾಡಿಕೊಳ್ಳುವಂತೆ ಸೂಚಿಸಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದೆ.
“ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರ ಘನತೆ ಮತ್ತು ಹಕ್ಕುಗಳನ್ನು ಎತ್ತಿ ಹಿಡಿಯುವುದು ನ್ಯಾಯಾಂಗದ ಮೇಲಿದೆ” ಎಂದು ಹೈಕೋರ್ಟ್ ನ್ಯಾಯಮೂರ್ತಿ ಸ್ವರಣಾ ಕಾಂತ ಶರ್ಮಾ ಹೇಳಿದ್ದು, ಅತ್ಯಾಚಾರದಂತಹ ಪ್ರಕರಣಗಳನ್ನು ನ್ಯಾಯಾಲಯದ ಹೊರಗಡೆ ಇತ್ಯರ್ಥಪಡಿಸಿಕೊಳ್ಳುವಂತೆ ನ್ಯಾಯಾಧೀಶರು ಹೇಳುವುದು ಅಪರಾಧ ನ್ಯಾಯ ವ್ಯವಸ್ಥೆ ಮತ್ತು ನ್ಯಾಯಯುತ ವಿಚಾರಣೆಯ ತತ್ವಗಳಿಗೆ ವಿರುದ್ಧವಾಗಿದೆ ಎಂದಿದ್ದಾರೆ.
ನ್ಯಾಯಾಲಯದ ಹೊರಗಡೆ ಅತ್ಯಾಚಾರ ಆರೋಪಿ ಮತ್ತು ಸಂತ್ರಸ್ತೆ ನಡುವೆ ರಾಜಿ ಮಾಡಿಕೊಳ್ಳಲಾಗಿದೆ. ಹಾಗಾಗಿ, ಆರೋಪಿಯ ವಿರುದ್ದದ ಎಫ್ಐಆರ್ ರದ್ದುಗೊಳಿಸುವಂತೆ ಕೋರಿದ್ದ ಮನವಿಯನ್ನು ನ್ಯಾಯಾಲಯ ತಳ್ಳಿ ಹಾಕಿದೆ.
ವಿಚಾರಣಾ ನ್ಯಾಯಾಲಯದಲ್ಲಿ ಪ್ರಾಸಿಕ್ಯೂಷನ್ ಸಾಕ್ಷ್ಯಗಳನ್ನು ದಾಖಲಿಸಲು ಪ್ರಯತ್ನಿಸುತ್ತಿರುವ ನಡುವೆ, ಅದೇ ನ್ಯಾಯಾಲಯದ ನ್ಯಾಯಾಧೀಶರು ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಅಡಿ ದಾಖಲಾಗಿರುವ ಪ್ರಕರಣವನ್ನು ಇತ್ಯರ್ಥಪಡಿಸಲು ಆರೋಪಿ ಮತ್ತು ಸಂತ್ರಸ್ತೆಗೆ ಸಲಹೆ ನೀಡಿದ್ದಾರೆ ಮತ್ತು ಸಹಾಯ ಮಾಡಿದ್ದಾರೆ ಎಂಬುದು ನಿಜವಾಗಿದ್ದರೆ, ಇದು ಅಪಾಯಕಾರಿ ನಡವಳಿಕೆ ಎಂದು ನ್ಯಾಯಮೂರ್ತಿ ಸ್ವರಣಾ ಕಾಂತ ಶರ್ಮಾ ಕಳವಳ ವ್ಯಕ್ತಪಡಿಸಿದ್ದಾರೆ.
ಮುಂದಿನ ವಿಚಾರಣೆ ನ್ಯಾಯಯುತವಾಗಿ ನಡೆಯಲು ಪ್ರಕರಣವನ್ನು ಇನ್ನೊಬ್ಬರು ನ್ಯಾಯಾಧೀಶರಿಗೆ ವರ್ಗಾಯಿಸುವಂತೆ ಹೈಕೋರ್ಟ್ ನಿರ್ದೇಶನ ನೀಡಿದ್ದಾರೆ.
ಆರೋಪಿಯು ಸಂತ್ರಸ್ತೆಯ ಒಪ್ಪಿಗೆಯಿಲ್ಲದೆ ಆಕೆಯೊಂದಿಗೆ ದೈಹಿಕ ಸಂಬಂಧ ಬೆಳೆಸಿದ್ದಾನೆ. ಆಕೆಯ ಕುಟುಂಬ ಸದಸ್ಯರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ಅಲ್ಲದೆ, ಆಕೆಯ ಆಕ್ಷೇಪಾರ್ಹ ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಪ್ರಾಸಿಕ್ಯೂಷನ್ ವಾದಿಸಿದೆ.
ಆರೋಪಿ ತನ್ನ ಮೇಲಿನ ಎಫ್ಐಆರ್ ರದ್ದುಪಡಿಸಲು ಕೋರುವಾಗ, ನನ್ನ ಮತ್ತು ಸಂತ್ರಸ್ತೆಯ ನಡುವೆ ಏನೇ ನಡೆದರೂ ಅದಕ್ಕೆ ನಮ್ಮಿಬ್ಬರ ಒಪ್ಪಿಗೆಯಿದೆ. ನಾನು ಆಕೆಗೆ ಪರಿಹಾರವಾಗಿ 3.50 ಲಕ್ಷ ರೂಪಾಯಿ ಕೊಡುತ್ತೇನೆ ಎಂದಿದ್ದಾನೆ.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ನ್ಯಾಯಾಲಯ, ಕಾನೂನು ಪ್ರಕ್ರಿಯೆ ದುರುಪಯೋಗವಾಗುತ್ತಿರುವಾಗ ಮತ್ತು ಗರ್ಭಪಾತದಂತಹ ಅನಿವಾರ್ಯ ಸಂದರ್ಭಗಳಲ್ಲಿ ಹೊರತು, ಅತ್ಯಾಚಾರದ ಅಪರಾಧವನ್ನು ಸಂತ್ರಸ್ತೆ ಮತ್ತು ಆರೋಪಿ ನಡುವೆ ರಾಜಿ ಸಂಧಾನದ ಮೂಲಕ ಇತ್ಯರ್ಥ ಮಾಡಿ ಮುಗಿಸಲು ಸಾಧ್ಯವಿಲ್ಲ ಎಂದಿದೆ.
ತನ್ನ ಮತ್ತು ಸಂತ್ರಸ್ತೆಯ ನಡುವೆ ನಡೆದಿರುವುದೆಲ್ಲ ಒಪ್ಪಿತ ಎಂದು ಆರೋಪಿ ವಾದಿಸಿದ್ದಾರೆ, ಹೀಗಿರುವಾಗ ಆತ ಆಕೆಗೆ 3.50 ಲಕ್ಷ ರೂ. ದುಡ್ಡು ಕೊಡುವ ಅಗತ್ಯವೇನಿದೆ? ಎಂದು ಪ್ರಶ್ನಿಸಿರುವ ನ್ಯಾಯಾಲಯ, ಇದು ಒಪ್ಪಿತ ಸಂಬಂಧದ ರಾಜಿ ಸಂಧಾನವಲ್ಲ, ಒಂದು ರೀತಿಯ ಸೆಟಲ್ಮೆಂಟ್ ಎಂದು ಅನುಮಾನ ವ್ಯಕ್ತಪಡಿಸಿದೆ.
ಸಂತ್ರಸ್ತೆಯ ಹಿಂದಿನ ಹೇಳಿಕೆಗಳು ಒಪ್ಪಿತ ಸಂಬಂಧವನ್ನು ಸೂಚಿಸುತ್ತಿಲ್ಲ. ಇಲ್ಲಿ ಹಣದ ಆಮಿಷ ಒಡ್ಡಿರುವ ಸಾಧ್ಯತೆಯಿದೆ. ಆರೋಪಿ ಹೇಳುವಂತೆ ಸಂತ್ರಸ್ತೆ ಮತ್ತು ಆತನ ನಡುವೆ ಒಪ್ಪಿತ ಸಂಬಂಧ ನಡೆದಿದ್ದರೆ, ಆತ ತಪ್ಪು ಮಾಡಿರದಿದ್ದರೆ ದುಡ್ಡು ಕೊಡುವ ಅವಶ್ಯಕತೆ ಏನಿದೆ? ಆತ ತಪ್ಪು ಮಾಡಿದ್ದಾನೆ ಎಂದರ್ಥವಲ್ಲವೇ? ಇದು ಒಮ್ಮತ ಸಂಬಂಧ ಎಂಬ ಪ್ರತಿಪಾದನೆಗೆ ವಿರುದ್ದವಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಅತ್ಯಾಚಾರದ ಅಪರಾಧವು ಮಹಿಳೆಯ ದೈಹಿಕ ಸ್ವಾಯತ್ತತೆಯ ಘೋರ ಉಲ್ಲಂಘನೆಯಾಗಿದೆ. ಇದನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಕ್ಕೆ ಅವಕಾಶ ನೀಡುವುದು ಅತ್ಯಾಚಾರ ಸಂತ್ರಸ್ತೆಯ ನೋವುಗಳನ್ನು ಕಡೆಗಣಿಸಿದಂತೆ. ಆಕೆಯ ದುಃಖವನ್ನು ವ್ಯಾವಹಾರಿಕವಾಗಿ ಪರಿಗಣಿಸದಂತೆ ಎಂದು ನ್ಯಾಯಾಲಯ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.
ಇದನ್ನೂ ಓದಿ : 370ನೇ ವಿಧಿಯ ರದ್ದತಿಯನ್ನು ಟೀಕಿಸುವುದು, ಪಾಕಿಸ್ತಾನಿಗಳಿಗೆ ಸ್ವಾತಂತ್ರ್ಯ ದಿನದ ಶುಭಾಶಯ ಕೋರುವುದು ಅಪರಾಧವಲ್ಲ: ಸುಪ್ರೀಂ ಕೋರ್ಟ್