ಕಾಲೇಜು ಗ್ರಂಥಾಲಯದಲ್ಲಿ ‘ಹಿಂದೂಫೋಬಿಕ್’ ಪುಸ್ತಕಗಳು ಇದ್ದ ಕಾರಣ ಪ್ರಾಂಶುಪಾಲರ ವಿರುದ್ಧ ದಾಖಲಾಗಿದ್ದ ಎಫ್ಐಆರ್ನ್ನು ‘ಅಸಂಬದ್ಧ’ ಎಂದು ಸುಪ್ರೀಂಕೋರ್ಟ್ ರದ್ದುಗೊಳಿಸಿದೆ.
ಇಂದೋರ್ನ ಸರ್ಕಾರಿ ಕಾನೂನು ಕಾಲೇಜಿನ ಪ್ರಾಂಶುಪಾಲ ಇನಾಮುರ್ ರೆಹಮಾನ್ ವಿರುದ್ಧ ದಾಖಲಾಗಿದ್ದ ಎಫ್ಐಆರ್ನ್ನು ಭಾರತದ ಸರ್ವೋಚ್ಚ ನ್ಯಾಯಾಲಯ ರದ್ದುಗೊಳಿಸಿದೆ. ಕಾಲೇಜು ಗ್ರಂಥಾಲಯದಲ್ಲಿ ಕೆಲವು ಪುಸ್ತಕಗಳು ಪತ್ತೆಯಾದ ಕಾರಣ ಪ್ರಾಂಶುಪಾಲರ ವಿರುದ್ಧ ಹಿಂದೂಫೋಬಿಯಾ ಮತ್ತು ಭಾರತ ವಿರೋಧಿ ಪ್ರಚಾರದ ಆರೋಪದಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು ಎಫ್ಐಆರ್ನಲ್ಲಿನ ಆರೋಪಗಳು ಅಸಂಬದ್ಧವಾಗಿದೆ, ಏಕೆಂದರೆ ಈ ಪುಸ್ತಕಗಳು ಸುಪ್ರೀಂಕೋರ್ಟ್ ಲೈಬ್ರರಿಯಲ್ಲಿಯೂ ಇರಬಹುದು ಎಂದು ಹೇಳಿದ್ದಾರೆ.
ಪ್ರೊಫೆಸರ್ ಇನಾಮುರ್ ರೆಹಮಾನ್ ಅವರನ್ನು ಹಿಂಸಿಸಲು ರಾಜ್ಯ ಏಕೆ ಉತ್ಸುಕವಾಗಿದೆ ಎಂದು ನ್ಯಾಯಾಲಯ ಪ್ರಶ್ನಿಸಿದ್ದು, ಇದು ಪಠ್ಯಕ್ರಮಕ್ಕೆ ಸಂಬಂಧಿಸಿದೆ. ಅವರು ಈಗಾಗಲೇ ನಿರೀಕ್ಷಣಾ ಜಾಮೀನಿನ ಮೇಲೆ ಹೊರಗಿದ್ದಾರೆ. ಈ ಪುಸ್ತಕವು ಸುಪ್ರೀಂಕೋರ್ಟ್ ಲೈಬ್ರರಿಯಲ್ಲಿಯೂ ಇರಬಹುದು ಎಂದು ಹೇಳಿದೆ.
ಎಫ್ಐಆರ್ಗೆ ಮಧ್ಯಂತರ ತಡೆಯಾಜ್ಞೆ ನಿರಾಕರಿಸಿದ ಮಧ್ಯಪ್ರದೇಶ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಪ್ರೊಫೆಸರ್ ರೆಹಮಾನ್ ಸಲ್ಲಿಸಿದ ಮೇಲ್ಮನವಿಯನ್ನು ನ್ಯಾಯಾಲಯವು ವಿಚಾರಣೆ ನಡೆಸುತ್ತಿದೆ ಈ ಕುರಿತ ಮುಂದಿನ ವಿಚಾರಣೆಯನ್ನು 10 ವಾರಗಳವರೆಗೆ ಮುಂದೂಡಿದೆ.
ಇಂದೋರ್ನಲ್ಲಿನ ‘ಶಾಸಕಿಯ ನವೀನ್ ವಿಧಿ ಮಹಾವಿದ್ಯಾಲಯ’ದ ಗ್ರಂಥಾಲಯದಲ್ಲಿ “ಹಿಂದೂಫೋಬಿಕ್” ಪುಸ್ತಕಗಳಿದೆ ಎಂದು ಎಬಿವಿಪಿ ಪ್ರತಿಭಟನೆಯನ್ನು ನಡೆಸಿತ್ತು. ‘ಸಾಮೂಹಿಕ ಹಿಂಸೆ ಮತ್ತು ಅಪರಾಧ ನ್ಯಾಯ ವ್ಯವಸ್ಥೆ’ ಮತ್ತು ‘ಮಹಿಳೆ ಮತ್ತು ಕ್ರಿಮಿನಲ್ ಕಾನೂನು’ ಎಂಬ ಶೀರ್ಷಿಕೆಯ ಎರಡು ಪುಸ್ತಕಗಳ ಬಗ್ಗೆ ವಿವಾದವನ್ನು ಸೃಷ್ಟಿಸಲಾಗಿತ್ತು. ಈ ಪುಸ್ತಕಗಳನ್ನು ಡಾ ಫರ್ಹತ್ ಖಾನ್ ಬರೆದಿದ್ದರು.
ಹಿಂದೂ ಸಮಾಜದಲ್ಲಿ ಸ್ತ್ರೀಯರನ್ನು ನಡೆಸಿಕೊಳ್ಳುವ ರೀತಿ, ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಹಿಂದೂ ಮಹಿಳೆಯರು ಕಾಮವನ್ನು ಪೂರೈಸುವ ಸಾಧನಗಳಾಗಿದ್ದರು ಮತ್ತು ಅವರು ಪುರುಷರಿಗೆ ಹೇಗೆ ಅಧೀನರಾಗಿದ್ದರು ಎಂಬುವುದನ್ನು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾಗಿದೆ.
ಎಬಿವಿಪಿಯಲ್ಲಿ ಸಕ್ರಿಯನಾಗಿದ್ದ ಕಾಲೇಜಿನ ಎಲ್ಎಲ್ಎಂ ವಿದ್ಯಾರ್ಥಿಯ ದೂರಿನ ಆಧಾರದ ಮೇಲೆ ಭಾರತೀಯ ದಂಡ ಸಂಹಿತೆಯ(ಐಪಿಸಿ) ವಿವಿಧ ಸೆಕ್ಸನ್ಗಳಡಿಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ರೆಹಮಾನ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು. ಆ ಬಳಿಕ ಅಧ್ಯಾಪಕರ ಅಮಾನತು, ಪ್ರೊ ರೆಹಮಾನ್ ರಾಜೀನಾಮೆ ಮತ್ತು ಪೊಲೀಸ್ ಪ್ರಕರಣದಂತಹ ಬೆಳವಣಿಗೆಗಳು ನಡೆದಿದ್ದವು. ಡಿಸೆಂಬರ್ 2022ರಲ್ಲಿ ಪ್ರೊಫೆಸರ್ ಬಂಧನಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿತ್ತು.
ಪ್ರಾಧ್ಯಾಪಕರ ಪರ ವಕೀಲ ಅಲ್ಜೋ ಕೆ ಜೋಸೆಫ್ ವಾದ ಮಂಡಿಸಿದ್ದರು. ಮಂಗಳವಾರ ನಡೆದ ಪ್ರಕರಣದ ವಿಚಾರಣೆ ವೇಳೆ ವಕೀಲರು, ಇನಾಮುರ್ ರೆಹಮಾನ್ ಶೀಘ್ರವೇ ನಿವೃತ್ತರಾಗಲಿದ್ದಾರೆ ಎಂದು ಕೋರ್ಟ್ ಗಮನಕ್ಕೆ ತಂದಿದ್ದಾರೆ. ಸೆಕ್ಷನ್ 482 CrPC ಅಡಿಯಲ್ಲಿ ತನ್ನ ಅಧಿಕಾರವನ್ನು ಚಲಾಯಿಸಲು ಹೈಕೋರ್ಟ್ ವಿಫಲವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಇದನ್ನು ಓದಿ: ಗಾಝಾದಲ್ಲಿ ಭಾರತೀಯ ಸೇನಾ ನಿವೃತ್ತ ಅಧಿಕಾರಿಯನ್ನು ಹತ್ಯೆ ಮಾಡಿದ ಇಸ್ರೇಲ್


