ಬಹುಭಾಷಾ ನಟಿ ತಮನ್ನಾ ಭಾಟಿಯಾ ಕುರಿತ ಪಠ್ಯ ಅಳವಡಿಸಿಕೊಂಡಿರುವ ಬೆಂಗಳೂರಿನ ಹೆಬ್ಬಾಳದ ಸಿಂಧಿ ಪ್ರೌಢ ಶಾಲೆಯ ವಿರುದ್ದ ಪೋಷಕರು ಅಸಮಧಾನ ವ್ಯಕ್ತಪಡಿಸಿದ್ದು, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.
ಶಾಲೆಯ 7ನೇ ತರಗತಿಯ ಮಕ್ಕಳ ಪಠ್ಯ ಪುಸ್ತಕದಲ್ಲಿ ನಟರಾದ ತಮನ್ನಾ, ರಣವೀರ್ ಸಿಂಗ್ ಸೇರಿದಂತೆ ಪ್ರಮುಖ ಸಿಂಧಿಗಳ ಕುರಿತು ಪಾಠವಿದೆ. ಆದರೆ, ಪೋಷಕರು ತಮನ್ನಾ ಅವರ ವಿಷಯಕ್ಕೆ ಮಾತ್ರ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.
ಮಕ್ಕಳು ತಮನ್ನಾ ಕುರಿತ ಪಾಠ ಕೇಳಿದ ನಂತರ ಇಂಟರ್ನೆಟ್ನಲ್ಲಿ ಆಕೆಯ ಬಗ್ಗೆ ಹೆಚ್ಚಿನ ಮಾಹಿತಿ ಹುಡುಕುತ್ತಾರೆ. ಈ ಮೂಲಕ ಅವರು ವಯಸ್ಸಿಗೆ ಸೂಕ್ತವಲ್ಲದ ವಿಷಯಗಳಿಗೆ ಆಕರ್ಷಿತರಾಗುವ ಅಪಾಯವಿದೆ. ಹಾಗಾಗಿ, ತಮನ್ನಾ ಕುರಿತ ಪಾಠವನ್ನು ಕೈ ಬಿಡಲು ಒತ್ತಾಯಿಸಿದ್ದೇವೆ ಎಂದು ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ.
7ತರಗತಿಯ ಪಠ್ಯ ಪುಸ್ತಕದಲ್ಲಿನ ಪಾಠವು 1947ರಿಂದ 1962ರ ಅವಧಿಯಲ್ಲಿ ನಡೆದ ಸಿಂಧ್ ವಿಭಜನೆ, ಆ ನಂತರದ ಜನರ ಜೀವನ, ವಲಸೆ, ಸಮುದಾಯ ಮತ್ತು ಕಲಹಗಳ ವಿಷಯಗಳನ್ನು ಒಳಗೊಂಡಿದೆ. ಸಿಂಧ್ ಭಾಷಾ ಅಲ್ಪ ಸಂಖ್ಯಾತ ಸಮುದಾಯದ ಸಂಸ್ಕೃತಿಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಲು ಇಂತಹ ಪಾಠವನ್ನು ಅಳವಡಿಸಿಕೊಳ್ಳಲಾಗಿದೆ ಎಂದು ಶಾಲೆಯ ಆಡಳಿತ ಮಂಡಳಿ ತಿಳಿಸಿರುವುದಾಗಿ ವರದಿಗಳು ಹೇಳಿವೆ.
ಇದನ್ನೂ ಓದಿ : ವಿವಾಹಿತ ಮಹಿಳೆಯರ ನೇಮಕಕ್ಕೆ ನಿರಾಕರಿಸುತ್ತಿರುವ ‘ಫಾಕ್ಸ್ಕಾನ್’: ವರದಿ


