ಕೋಲ್ಕತ್ತಾದ ಆರ್ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಟ್ರೈನಿ ವೈದ್ಯೆಯೊಬ್ಬರ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆ ಅತ್ಯಂತ ಗಂಭೀರವಾಗಿ ನಡೆಯುತ್ತಿದೆ ಎಂದು ಕೇಂದ್ರೀಯ ತನಿಖಾ ದಳ (ಸಿಬಿಐ) ಮಂಗಳವಾರ ಸುಪ್ರೀಂ ಕೋರ್ಟ್ಗೆ ಮಾಹಿತಿ ನೀಡಿದೆ.
ಸಿಬಿಐ ಅನ್ನು ಪ್ರತಿನಿಧಿಸುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರ ಪೀಠದ ಮುಂದೆ ಏಜೆನ್ಸಿಯ ಐದನೇ ತನಿಖಾ ಸ್ಥಿತಿ ವರದಿಯನ್ನು ಸಲ್ಲಿಸಿದರು.
“ಈ ವಿಷಯದಲ್ಲಿ ಅತ್ಯಂತ ಗಂಭೀರವಾಗಿ ತನಿಖೆ ನಡೆಯುತ್ತಿದೆ. ಈ ಪ್ರಕರಣದ ಆರೋಪಪಟ್ಟಿಯನ್ನು ಅಕ್ಟೋಬರ್ 7 ರಂದು ಆರೋಪಿ ಸಂಜಯ್ ರಾಯ್ ವಿರುದ್ಧ ಸಲ್ಲಿಸಲಾಗಿದೆ. ಸೀಲ್ದಾ ನ್ಯಾಯಾಲಯವು ವಿಚಾರಣೆಗೆ ತೆಗೆದುಕೊಂಡಿದೆ” ಎಂದು ಅವರು ಪೀಠಕ್ಕೆ ತಿಳಿಸಿದರು.
ನಡೆಯುತ್ತಿರುವ ತನಿಖೆಯ ಭಾಗವಾಗಿ ಇತರ ವ್ಯಕ್ತಿಗಳ ಪಾತ್ರವನ್ನು ಸಿಬಿಐ ತನಿಖೆ ನಡೆಸುತ್ತಿದೆ ಎಂದು ಹೇಳಿದೆ. ಮೂರು ವಾರಗಳಲ್ಲಿ ಹೆಚ್ಚಿನ ತನಿಖಾ ಸ್ಥಿತಿ ವರದಿ ಕೇಳಿದೆ ಎಂದು ಸುಪ್ರೀಂ ಕೋರ್ಟ್ ಗಮನಿಸಿದೆ.
ವೈದ್ಯಕೀಯ ವೃತ್ತಿಪರರ ಸುರಕ್ಷತೆ ಮತ್ತು ಭದ್ರತೆಯ ಕುರಿತು ಶಿಫಾರಸುಗಳನ್ನು ಮಾಡಲು ರಚಿಸಲಾದ ರಾಷ್ಟ್ರೀಯ ಕಾರ್ಯಪಡೆ (ಎನ್ಟಿಎಫ್) ವಿಷಯದ ಕುರಿತು, ಸೆಪ್ಟೆಂಬರ್ ಮೊದಲ ವಾರದಿಂದ ಯಾವುದೇ ಸಭೆ ನಡೆಸಿಲ್ಲ ಎಂಬುದನ್ನು ಸುಪ್ರೀಂ ಕೋರ್ಟ್ ಇದೇ ಸಂದರ್ಭದಲ್ಲಿ ಗಮನಿಸಿದೆ.
ಹಾಗಾಗಿ, ತನಿಖೆಯನ್ನು ಸೂಕ್ತ ಅವಧಿಯಲ್ಲಿ ಪೂರ್ಣಗೊಳಿಸಲು ಪೂರ್ವಭಾವಿ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ.
“ಎನ್ಟಿಎಫ್ನ ಸಭೆಗಳು ನಡೆಯಬೇಕು ಮತ್ತು ಎಲ್ಲ ಉಪ ಗುಂಪುಗಳು ನಿಯಮಿತ ಸಭೆಗಳನ್ನು ನಡೆಸಬೇಕು” ಎಂದು ಮೂರು ವಾರಗಳಲ್ಲಿ ಕೋಲ್ಕತ್ತಾ ವೈದ್ಯರ ಸುರಕ್ಷತೆಯ ಕುರಿತು ಶಿಫಾರಸುಗಳನ್ನು ರೂಪಿಸಲು ನಿರ್ದೇಶಿಸಿದಾಗ ಪೀಠವು ಹೇಳಿದೆ.
ಸೆಪ್ಟೆಂಬರ್ 30 ರಂದು, ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಸಿಸಿಟಿವಿಗಳ ಅಳವಡಿಕೆ ಮತ್ತು ಶೌಚಾಲಯಗಳು, ಪ್ರತ್ಯೇಕ ವಿಶ್ರಾಂತಿ ಕೊಠಡಿಗಳ ನಿರ್ಮಾಣದಲ್ಲಿ ಪಶ್ಚಿಮ ಬಂಗಾಳ ಸರ್ಕಾರದ ವಿಳಂಭದ ಬಗ್ಗೆ ಸುಪ್ರೀಂ ಕೋರ್ಟ್ ಅತೃಪ್ತಿ ವ್ಯಕ್ತಪಡಿಸಿತು. ಅಕ್ಟೋಬರ್ 15ರ ಒಳಗೆ ನಡೆಯುತ್ತಿರುವ ಕೆಲಸವನ್ನು ಪೂರ್ಣಗೊಳಿಸಲು ರಾಜ್ಯಕ್ಕೆ ನಿರ್ದೇಶನ ನೀಡಿತು.
ಆಗಸ್ಟ್ 22 ರಂದು, ಮಹಿಳಾ ವೈದ್ಯರ ಅಸಹಜ ಸಾವಿನ ಪ್ರಕರಣವನ್ನು ದಾಖಲಿಸುವಲ್ಲಿ ವಿಳಂಬವಾದ ಬಗ್ಗೆ ಸುಪ್ರೀಂ ಕೋರ್ಟ್ ಕೋಲ್ಕತ್ತಾ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿತು. ಇದನ್ನು “ಅತ್ಯಂತ ಗೊಂದಲ” ಎಂದು ಕರೆದಿತ್ತು.
ವೈದ್ಯರು ಮತ್ತು ಇತರ ಆರೋಗ್ಯ ವೃತ್ತಿಪರರ ಸುರಕ್ಷತೆ, ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಪ್ರೋಟೋಕಾಲ್ ಅನ್ನು ರೂಪಿಸಲು ಉನ್ನತ ನ್ಯಾಯಾಲಯವು 10 ಸದಸ್ಯರ ರಾಷ್ಟ್ರೀಯ ಕಾರ್ಯಪಡೆಯನ್ನು ರಚಿಸಿದೆ.
ಘಟನೆಯನ್ನು “ಭಯಾನಕ” ಎಂದು ಬಣ್ಣಿಸಿದ ಸುಪ್ರೀಂ ಕೋರ್ಟ್, ಎಫ್ಐಆರ್ ದಾಖಲಿಸುವಲ್ಲಿ ವಿಳಂಬ ಮತ್ತು ಸರ್ಕಾರಿ ಸೌಲಭ್ಯವನ್ನು ಧ್ವಂಸಗೊಳಿಸಲು ಸಾವಿರಾರು ಜನರಿಗೆ ಅವಕಾಶ ನೀಡಿದ ಆರೋಪದ ಮೇಲೆ ರಾಜ್ಯ ಸರ್ಕಾರವನ್ನು ಖಂಡಿಸಿದೆ.
ಗಾಯದ ಗುರುತುಗಳೊಂದಿಗೆ ವೈದ್ಯೆಯನ್ನು ಕೊಂದ ಘಟನೆ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕಾರಣವಾಗಿತ್ತು. ಅಪರಾಧದ ಮರುದಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗರಿಕ ಸ್ವಯಂಸೇವಕನನ್ನು ಕೋಲ್ಕತ್ತಾ ಪೊಲೀಸರು ಬಂಧಿಸಿದರು. ಆಗಸ್ಟ್ 13 ರಂದು ಕಲ್ಕತ್ತಾ ಹೈಕೋರ್ಟ್ ತನಿಖೆಯನ್ನು ಕೋಲ್ಕತ್ತಾ ಪೊಲೀಸರಿಂದ ಸಿಬಿಐಗೆ ವರ್ಗಾಯಿಸಲು ಆದೇಶಿಸಿತು, ಅದು ಆಗಸ್ಟ್ 14 ರಂದು ತನಿಖೆಯನ್ನು ಪ್ರಾರಂಭಿಸಿತು.
ಇದನ್ನೂ ಓದಿ; ಮಹಾರಾಷ್ಟ್ರ, ಜಾರ್ಖಂಡ್ ವಿಧಾನಸಭೆಗೆ ಚುನಾವಣಾ ದಿನಾಂಕ ಘೋಷಣೆ; ನವೆಂಬರ್ 23ರಂದು ಎರಡೂ ರಾಜ್ಯಗಳ ಫಲಿತಾಂಶ


