Homeಕರ್ನಾಟಕವೈರಲ್ ವೀಡಿಯೋದ ಒಳಸುಳಿಗಳೇನು? ಸಿದ್ದು-ಡೀಕೆ ನಡುವೆ ಗೌಡರ ದಾಳ!

ವೈರಲ್ ವೀಡಿಯೋದ ಒಳಸುಳಿಗಳೇನು? ಸಿದ್ದು-ಡೀಕೆ ನಡುವೆ ಗೌಡರ ದಾಳ!

- Advertisement -
- Advertisement -

| ಗಿರೀಶ್ ತಾಳಿಕಟ್ಟೆ |

ಕುಮಾರಸ್ವಾಮಿಯವರು ಡೀಕೆ ಮನೆಗೆ ಹೋಗಿ ಅವರ ತಾಯಿಗೆ ಸಾಂತ್ವನ ಹೇಳಿದ್ದಾಗಲಿ, ತಿಹಾರ್ ಜೈಲಿಗೆ ಹೋಗಿ ಮುಖತಃ ಭೇಟಿ ಮಾಡಿದ್ದಾಗಲಿ, ಡೀಕೆ ಬೆಂಗಳೂರಿಗೆ ಬಂದಿಳಿಯುತ್ತಿದ್ದಂತೆ ಕುಮಾರಸ್ವಾಮಿಯವರೇ ಹೋಗಿ ಸ್ವಾಗತಿಸಿದ್ದಾಗಲಿ, `ವೆಲ್‍ಕಂ’ ಮೆರವಣಿಗೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಪಕ್ಷದ ಬಾವುಟದ ಸಮೇತ ಹಾಜರಿರುವಂತೆ ನೋಡಿಕೊಂಡಿದ್ದಾಗಲಿ ಎಲ್ಲವೂ ಗೌಡರ ಲೆಕ್ಕಾಚಾರಗಳೇ ಆಗಿವೆ.

ಇದು ದೇವೇಗೌಡರ ಪಾಲಿಗೆ ಬಯಸದೇ ಬಂದ ಭಾಗ್ಯ. ಹಾಗಂತ ಇದರಲ್ಲಿ ಅವರ ಶ್ರಮ ಏನೇನೂ ಇಲ್ಲ ಅಂತಲ್ಲ. ಆದರೆ ಅವರು ಒಂದು ಹಣ್ಣಿಗೆ ಗುರಿಯಿಟ್ಟು ಎಸೆದ ಕಲ್ಲು, ಎರಡು ಹಣ್ಣುಗಳನ್ನು ತಂದು ಬುಟ್ಟಿಗೆ ಬೀಳಿಸಿದಂತಾಗಿದೆ ಈಗಿನ ರಾಜಕೀಯ ಸನ್ನಿವೇಶ. ಗೌಡರ ನಸೀಬು ಅದೆಷ್ಟು ಹದವಾಗಿದೆಯೆಂದರೆ, ಒಕ್ಕಲಿಗರ ಮೇಲಿನ ಅವರ ಕುಟುಂಬದ ಅಧಿಪತ್ಯವನ್ನು ಕೊನೆಗಾಣಿಸಬೇಕೆಂದು ಟೊಂಕಕಟ್ಟಿದ್ದ ಬಿಜೆಪಿ ಮತ್ತು ಹೆಜ್ಜೆಹೆಜ್ಜೆಗೂ `ಗೌಡರ ಗೌರ್ಮೆಂಟಿ’ಗೆ ಕಾಟ ಕೊಡುತ್ತಲೇ ಬಂದ ಕನ್ನಡ ನ್ಯೂಸ್ ಚಾನೆಲ್‍ಗಳೂ ಅವರಿಗೆ ಅನುಕೂಲವಾಗುವಂತೆ ವರ್ತಿಸಲು ಶುರು ಮಾಡಿವೆ.

ಹೌದು, ಇದು ಡೀಕೆಶಿ ಸುತ್ತ ಹೆಣೆದುಕೊಂಡ ರಾಜಕೀಯ ಕಥನದ ಪೀಠಿಕೆ. ನೋ ಡೌಟ್, ಡೀಕೆ ಈಗ ಕಾಂಗ್ರೆಸ್ ಪಾಲಿನ ದೊಡ್ಡ ಹೀರೊ, ಅದು ಸಹಜವೂ ಕೂಡಾ. ಬಿಜೆಪಿಯ ಸೇಡಿನ ರಾಜಕಾರಣಕ್ಕೆ ಶರಣಾಗದೆ ತಿಹಾರ್ ಜೈಲಿನಲ್ಲಿ ಅಜಮಾಸು ಐವತ್ತು ದಿನ ಕಳೆದುಬಂದ ಡೀಕೆ ಮೇಲೆ ಸಾಮಾನ್ಯ ಕಾರ್ಯಕರ್ತರಿಗಿರಲಿ, ಖುದ್ದು ಹೈಕಮಾಂಡ್‍ಗೇ ವಿಶೇಷ ಅಭಿಮಾನ ಉಕ್ಕಿದೆ. ಇಲ್ಲದೇ ಹೋಗಿದ್ದಲ್ಲಿ ಸ್ವತಃ ಸೋನಿಯಾ ತಿಹಾರ್ ಜೈಲಿಗೆ ಹೋಗಿ ಭೇಟಿ ಮಾಡುತ್ತಿರಲಿಲ್ಲ, ಬಿಡುಗಡೆಯಾದ ಕೂಡಲೇ ತಮ್ಮ ಮನೆಗೇ ಕರೆಸಿಕೊಂಡು ಧೈರ್ಯ ತುಂಬಿ ಕಳಿಸುತ್ತಿರಲಿಲ್ಲ. ಇನ್ನು ಬೆಂಗಳೂರಿಗೆ ಕಾಲಿಟ್ಟ ಡೀಕೆಗೆ ಸಿಕ್ಕ ಅದ್ಭುತ ಸ್ವಾಗತ, ಭಾರೀ ಮೆರವಣಿಗೆಗಳೇನು ನಡೆದವಲ್ಲ, ಅದಕ್ಕೆಲ್ಲ ಪರ್ಮೀಷನ್ ಕೊಟ್ಟದ್ದೇ ಹೈಕಮಾಂಡ್. ಅಷ್ಟೇ ಅಲ್ಲ ಬೆಂಗಳೂರಿಗೆ ಬಂದ ತಕ್ಷಣ ಮನೆಗೆ ಹೋಗದೆ ಸೀದಾ ಕೆಪಿಸಿಸಿ ಕಚೇರಿಗೆ ಹೋಗಿ ಸುದ್ದಿಗೋಷ್ಠಿ ನಡೆಸುವಂತೆ ಸಲಹೆ ಕೊಟ್ಟದ್ದೂ ಹೈಕಮಾಂಡ್! `ಜೈಲಿಗೆ ಹೋಗಿ ಬಂದವ’ ಎಂಬ ಸಣ್ಣ ಅಳುಕು ಹೈಕಮಾಂಡ್‍ಗೆ ಇದ್ದಿದ್ದರೂ ಕೆಪಿಸಿಸಿ ಕಚೇರಿಯ ಹೆಬ್ಬಾಗಿಲು ಅಷ್ಟು ಸಲೀಸಾಗಿ ತೆರೆದುಕೊಳ್ಳುತ್ತಿರಲಿಲ್ಲ.

ಡೀಕೆ ಪರ ನಿಲ್ಲಲು ಗೌಡರಿಗಿರುವ ಕಾರಣವೇನು?

ಕಾಂಗ್ರೆಸ್‍ಗೇನೊ ಡೀಕೆಯನ್ನು `ಹೀರೊ’ ಆಗಿಸುವುದು ಅನಿವಾರ್ಯ. ಆದರೆ ಜೆಡಿಎಸ್‍ಗೆ, ಅರ್ಥಾತ್ ಗೌಡರ ಫ್ಯಾಮಿಲಿಗೆ ಇದ್ದಕ್ಕಿದ್ದಂತೆ ಡೀಕೆ ಮೇಲೆ ಇಂಥಾ ಮಮಕಾರ ಉಕ್ಕಲು ಕಾರಣವೇನು? ಜೀವನಪರ್ಯಂತ ತಮಗೆ ನಿಷ್ಠರಿದ್ದ ನಾಯಕರನ್ನೇ ರಾಜಕೀಯ ಸಮಾಧಿ ಮಾಡಿದ ಗೌಡರಿಗೆ, ನಿನ್ನೆ-ಮೊನ್ನೆವರೆಗೂ ತಮ್ಮ ವಿರುದ್ಧವೇ ಸೆಟೆದು ನಿಂತಿದ್ದ ಡೀಕೆಯನ್ನು ಹೀರೊ ಆಗಿಸುವಂತ ದರ್ದೇನು ಬಂತು?

ದೇವೇಗೌಡರ ರಾಜಕಾರಣದ ಅಡಿಪಾಯವೇ ಜಾತಿ. ಬಾಯಲ್ಲಿ ಹೇಳದೇ ಸಮುದಾಯಕ್ಕೆ ಸಂದೇಶ ರವಾನಿಸುವ ವಿಶೇಷ ಚಾಕಚಕ್ಯತೆ ಅವರದ್ದು. ಗೌಡರ ಈ ರಾಜಕೀಯ ಸಮೀಕರಣವನ್ನು ಬುಡಮೇಲು ಮಾಡಿದ್ದು 2019ರ ಲೋಕಸಭಾ ಚುನಾವಣೆ. ಮಂಡ್ಯ ಒಕ್ಕಲಿಗರ ಸೆಂಟಿಮೆಂಟು, ಸ್ವಾಭಿಮಾನಗಳು ನುಚ್ಚು ನೂರಾಗುವಂತೆ ಅವರ ಮೇಲೆ ತಮ್ಮ ಮೊಮ್ಮಗ ನಿಖಿಲ್ ಕುಮಾರಸ್ವಾಮಿಯನ್ನು ಹೇರಲು ಹೊರಟದ್ದು ದೇವೇಗೌಡರು ಮಾಡಿದ ಬಹುದೊಡ್ಡ ಪ್ರಮಾದ. ಅದು ಮಂಡ್ಯ ರಾಜಕಾರಣಕ್ಕಷ್ಟೇ ಸೀಮಿತವಾಗಲಿಲ್ಲ, ಇಡೀ ಒಕ್ಕಲಿಗ ಸಮುದಾಯದಲ್ಲೆ `ಗೌಡರ ಫ್ಯಾಮಿಲಿ ರಾಜಕಾರಣ’ ಅತಿಯಾಯ್ತು ಎಂಬ ಭಾವನೆಯನ್ನು ಬಿತ್ತಿತ್ತು. ದೇವೇಗೌಡರು ತಮ್ಮ ಕುಟುಂಬದ ಹಿತಾಸಕ್ತಿಗಾಗಿ ಯಾವೆಲ್ಲ ಒಕ್ಕಲಿಗ ನಾಯಕರನ್ನು ಹೇಗೆಲ್ಲ ಬಲಿಕೊಡುತ್ತಾ ಬಂದರು ಅನ್ನೋ ಚರ್ಚೆ ಒಕ್ಕಲಿಗರಲ್ಲೇ ಹರಿದಾಡಲು ಶುರುವಾಯ್ತು. ಅದರ ಪರಿಣಾಮವೇ ಮಂಡ್ಯದಲ್ಲಿ ನಿಖಿಲ್ ಸೋತದ್ದು ಮಾತ್ರವಲ್ಲ, ಒಕ್ಕಲಿಗರ ಪ್ರಾಬಲ್ಯವಿರುವ ತುಮಕೂರಿನಲ್ಲಿ ಸ್ವತಃ ದೇವೇಗೌಡರು ಸೋತುಹೋದರು!

ಹಾಗೆ ನೋಡಿದರೆ, ಗೌಡರ ಕುಟುಂಬಕ್ಕೆ ಸೋಲುಗಳೇನು ಹೊಸದಲ್ಲ. ಆದರೆ ತಮ್ಮದೇ ಕುಟುಂಬ ಮುಖ್ಯಮಂತ್ರಿ ಹುದ್ದೆಯನ್ನು ಆವರಿಸಿದ್ದರೂ, ತಮ್ಮ ಕುಟುಂಬಕ್ಕೆ ನಿಷ್ಠರಾದ ಮಂತ್ರಿವರ್ಯರು ಅನೇಕರಿದ್ದರು ಎರಗಿದ ಈ ಸೋಲು ದೇವೇಗೌಡರಂತಹ ಬಲು ನಾಜೂಕಿನ ರಾಜಕಾರಣಿಯನ್ನು ಕಂಗೆಡಿಸದೇ ಇರಲು ಸಾಧ್ಯವೇ!? ಒಕ್ಕಲಿಗರ ವಿಶ್ವಾಸ ಕಳೆದುಕೊಳ್ಳಲು ಶುರು ಮಾಡಿದ್ದೇವೆ ಎಂದು ದೇವೇಗೌಡರಿಗೆ ಅನಿಸಿದ್ದೇ ಆಗ. ಹೇಗಾದರು ಮಾಡಿ ಅದನ್ನು ಸರಿಪಡಿಸಿಕೊಳ್ಳಬೇಕೆಂದು ಅವರು ರಾಜಕೀಯ ಪಂಚಾಂಗ ಬಿಚ್ಚಿ ಕೂತಿದ್ದಾಗ ಘಟಿಸಿದ್ದೇ ಈ ಡೀಕೆ ಪ್ರಕರಣ!

ಗೌಡರ ಒಕ್ಕಲಿಗ ಸೆಂಟಿಮೆಂಟ್; ಎಚ್‍ಡಿಕೆಯ ಬಿಜೆಪಿ ಸ್ಟೇಟ್‍ಮೆಂಟ್

ಕುಮಾರಸ್ವಾಮಿಯವರು ಡೀಕೆ ಮನೆಗೆ ಹೋಗಿ ಅವರ ತಾಯಿಗೆ ಸಾಂತ್ವನ ಹೇಳಿದ್ದಾಗಲಿ, ತಿಹಾರ್ ಜೈಲಿಗೆ ಹೋಗಿ ಮುಖತಃ ಭೇಟಿ ಮಾಡಿದ್ದಾಗಲಿ ಎಲ್ಲದರ ಹಿಂದೆ ಗೌಡರ ಸ್ಪಷ್ಟ ನೀಲನಕ್ಷೆಗಳಿದ್ದವು. ಅಷ್ಟೇ ಅಲ್ಲ ಕುಮಾರಸ್ವಾಮಿ ತಿಹಾರ್ ಜೈಲಿಗೆ ಹೋಗುವುದಕ್ಕೂ ಇಪ್ಪತ್ತು ದಿನ ಮೊದಲೇ ಖುದ್ದು ದೇವೇಗೌಡರೆ ಹಿರಿಮಗ ರೇವಣ್ಣನವರ ಜೊತೆಗೆ ತಿಹಾರ್ ಜೈಲಿಗೆ ಹೋಗಿ ಡೀಕೆಯನ್ನು ಭೇಟಿ ಮಾಡಬೇಕು ಅಂದುಕೊಂಡಿದ್ದರು. ಆದರೆ ಭೇಟಿಗೆ ಎರಡು ದಿನ ಮೊದಲೇ ಪರ್ಮೀಷನ್ನಿಗೆ ಅರ್ಜಿ ಹಾಕಬೇಕಿತ್ತು. ಆದರೆ ಗೌಡರು ನೇರವಾಗಿ ಭೇಟಿಗೆ ಅನುಮತಿ ಕೇಳಿದ್ದರಿಂದ ಜೈಲಿನ ಅಧಿಕಾರಿಗಳು ತಲೆ ಅಡ್ಡಡ್ಡ ಆಡಿಸಿದ್ದರು. ಭೇಟಿ ಸಾಧ್ಯವಾಗದಿದ್ದರೂ, ದಿಲ್ಲಿಯ ತಮ್ಮ ನಿವಾಸಕ್ಕೆ ಡಿ.ಕೆ.ಸುರೇಶ್‍ರನ್ನು ಕರೆಸಿಕೊಂಡ ಗೌಡರು `ಡೀಕೆಗೆ ಒಳ್ಳೆಯದಾಗಲಿ ಅಂತ ದೇವರ ಬಳಿ ವಿಶೇಷ ಪೂಜೆ ಮಾಡಿಸಿಕೊಂಡು ಬಂದಿದ್ದೇನೆ’ ಅಂತ ಸಂತೈಸಿ ಕಳಿಸಿದ್ದರು. ಇನ್ನು ಡೀಕೆ ಬೆಂಗಳೂರಿಗೆ ಬಂದಿಳಿಯುತ್ತಿದ್ದಂತೆ ಕುಮಾರಸ್ವಾಮಿಯವರೇ ಹೋಗಿ ಸ್ವಾಗತಿಸಿದ್ದಾಗಲಿ, `ವೆಲ್‍ಕಂ’ ಮೆರವಣಿಗೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಪಕ್ಷದ ಬಾವುಟದ ಸಮೇತ ಹಾಜರಿರುವಂತೆ ನೋಡಿಕೊಂಡಿದ್ದಾಗಲಿ ಎಲ್ಲವೂ ಗೌಡರ ಲೆಕ್ಕಾಚಾರಗಳೇ ಆಗಿವೆ. `ಪಕ್ಷ ಯಾವುದಾದರೇನು ನಮಗೆ ಒಕ್ಕಲಿಗರ ಹಿತ ಕಾಯುವುದೇ ಮುಖ್ಯ’ ಎಂಬ ಸಂದೇಶ ರವಾನೆಯಾಗಿ ಕಳೆದುಹೋಗಿರುವ ಒಕ್ಕಲಿಗರ ವಿಶ್ವಾಸವನ್ನು ಮತ್ತೆ ಗಳಿಸಿಕೊಳ್ಳುವ ಸಿಂಗಲ್ ಅಜೆಂಡಾ ಗೌಡರದ್ದು.

ಇಲ್ಲೊಂದು ಇಂಟರೆಸ್ಟಿಂಗ್ ಸಂಗತಿಯಿದೆ. ಡೀಕೆ ಪರವಾಗಿ ಹೀಗೆ ನಿಲ್ಲುತ್ತಾ ಹೋಗಿ ತಮ್ಮ ಕುಟುಂಬ ಬಿಜೆಪಿಯ ಕೆಂಗಣ್ಣಿಗೆ ಗುರಿಯಾದರೇನು ಗತಿ? ಸಿಬಿಐ, ಇಡಿ, ಐಟಿ ಅಸ್ತ್ರಗಳು ತಮ್ಮ ಮೇಲೂ ಮುಗಿಬಿದ್ದರೆ ಏನು ಕತೆ? ಇಲ್ಲೂ ಗೌಡರು ಬ್ಯಾಲೆನ್ಸ್ ಮಾಡುತ್ತಲೇ ಬಂದರು. ಒಂದು ಕಡೆ ಕೇಂದ್ರದ ಅಧಿಕಾರ ದುರ್ಬಳಕೆಯ ವಿರುದ್ಧ ಮಾತಾಡುತ್ತಲೆ, ಮತ್ತೊಂದು ಕಡೆ ಪ್ರಧಾನಿ ಮೋದಿಯವರ `ದುಬಾರಿ ಹೆಮ್ಮೆ’ಯಾದ ಸ್ಟ್ಯಾಚ್ಯೂ ಆಫ್ ಯೂನಿಟಿ ಮುಂದೆ ಫೋಜು ಕೊಟ್ಟು, ಹೊಗಳಿ ಮೋದಿಯವರಿಂದ ಖುಷಿಯ ಟ್ವೀಟು ಗಿಟ್ಟಿಸಿಕೊಂಡರು. ಅತ್ತ ಕುಮಾರಸ್ವಾಮಿಯವರ ಮೂಲಕ `ಉತ್ತರ ಕರ್ನಾಟಕ ನೆರೆ ಸಂಕಷ್ಟಕ್ಕೆ ಸಿಲುಕಿರೋದ್ರಿಂದ ಈ ಬಿಜೆಪಿ (ರಾಜ್ಯ) ಸರ್ಕಾರ ಬೀಳದಂತೆ ನಾವು ನೋಡಿಕೊಳ್ಳುತ್ತೇವೆ’ ಎಂಬ ಹೇಳಿಕೆ ಹೇಳಿಸಿ ಬಿಜೆಪಿ ಜೊತೆಗೆ ಒಂದು ಬಾಂಧವ್ಯವನ್ನೂ ಗಟ್ಟಿ ಮಾಡಿಕೊಳ್ಳುತ್ತಿದ್ದಾರೆ.

ಸಿದ್ದು ಬೇಸರದ ಮೂಲ ಇದು

ದೇವೇಗೌಡರ ಇಂಥಾ ಸ್ಟ್ರಾಟಜಿಗಳನ್ನು ಬಹಳ ಹತ್ತಿರದಿಂದ ನೋಡಿ, ಸಿಟ್ಟಿಗೆದ್ದು ದೂರ ಬಂದ ಸಿದ್ರಾಮಯ್ಯನಂತಹ ರಾಜಕಾರಣಿಗೆ ಈಗ ಡೀಕೆಯನ್ನು ಅವರು ದಾಳವಾಗಿ ಬಳಸಿಕೊಳ್ಳುತ್ತಿರೋದರ ವಿರುದ್ಧ ಸಹಜವಾಗಿಯೇ ಬೇಸರವಿದೆ. ಅದು ದೇವೇಗೌಡರ ಇಡೀ ಷಡ್ಯಂತ್ರದ ಮೇಲಿನ ಬೇಸರವೇ ವಿನಾಃ ಡೀಕೆ ಮೇಲಿನ ವೈಯಕ್ತಿಕ ಹಗೆತನವಲ್ಲ. ಖಾಸಗಿ ವೀಡಿಯೊದಲ್ಲಿ ಸಿದ್ದು ಹೊರಹಾಕಿದ ಅಸಮಾಧಾನ ಕೂಡಾ ಡಿಕೆಶಿಯ ಜೆಡಿಎಸ್ ವಾಲಿಕೆಯ ವಿರುದ್ಧವಾಗಿತ್ತೆ ವಿನಾಃ ಡಿಕೆಶಿಗೆ ಸಿಕ್ಕ ಅದ್ಭುತ ಸ್ವಾಗತದ ವಿರುದ್ಧವಲ್ಲ. ಆದರೆ ಮೊದಲಿನಿಂದಲೂ ಸಿದ್ದು ಎಂದರೆ ಒಂದು ಬಗೆಯ ಅಸಿಡಿಟಿಯನ್ನು ಅದುಮಿಟ್ಟುಕೊಂಡೇ ಬಂದಿರುವ ಕೆಲ ಮೀಡಿಯಾಗಳು ಸಿದ್ದು-ಡಿಕೆ ನಡುವೆ ಶೀತಲಸಮರವನ್ನಾಗಿ ಅದನ್ನು ಬಿಂಬಿಸುತ್ತಿವೆ. ಅಸಲಿಗೆ, ಡಿಕೆ ಬಿಡುಗಡೆಯ ನಂತರ ಒಕ್ಕಲಿಗರ ಆಕ್ರೋಶ, ಅವರನ್ನು ಬಂಧಿಸಿ ಜೈಲಿನಲ್ಲಿಟ್ಟಿದ್ದ ಬಿಜೆಪಿ ವಿರುದ್ಧ ಆಸ್ಫೋಟಿಸುತ್ತಿದ್ದುದನ್ನು ಸಿದ್ದು ಕಡೆಗೆ ಡೈವರ್ಟ್ ಮಾಡಲು ಮೀಡಿಯಾಗಳು ಹೆಣಗಾಡುತ್ತಿವೆಯಷ್ಟೆ. ಇದು ಗೌಡರ ಪಾಲಿಗೆ ಬೋನಸ್ ಪ್ರತಿಫಲ.

ಡಿಕೆಗಿದೆ ಸರ್ವೈವಲ್ ಸ್ಟ್ರಾಟಜಿ!

ಸರಿ, ದೇವೇಗೌಡರಿಗೇನೊ ಅನಿವಾರ್ಯತೆ ಇದೆ, ಡಿಕೆ ಪರವಾಗಿ ಮಮಕಾರ ಹರಿಸುತ್ತಿದ್ದಾರೆ. ಆದರೆ ಅವರನ್ನು ವಿರೋಧಿಸಿಕೊಂಡೇ ಬಂದ ಡಿಕೆಗೆ, ದೇವೇಗೌಡರ ದಾಳವಾಗುವ ಅನಿವಾರ್ಯತೆಯೇನು? ಅಷ್ಟೂ ಅರ್ಥವಾಗದ ದಡ್ಡರೇ ಅವರು? ಖಂಡಿತ ಇಲ್ಲ. ಈ ವಿಚಾರದಲ್ಲಿ ಸಿದ್ದುಗೆ ಒಂದು ಐಡಿಯಾಲಜಿಕಲ್ ವ್ಯೂ ಇರುವಂತೆ, ದೇವೇಗೌಡರಿಗೆ ಸ್ಪಷ್ಟ ಗೇಮ್‍ಪ್ಲ್ಯಾನ್ ಇರುವಂತೆ, ಡಿಕೆಶಿಗೂ ಒಂದು ವಿಶಿಷ್ಟ ಸರ್ವೈವಲ್ ಸ್ಟ್ರಾಟಜಿ ಇದರ ಹಿಂದಿದೆ.

ಬಿಜೆಪಿ ಸರ್ಕಾರದ ಇನ್‍ಕಂಟ್ಯಾಕ್ಸ್ ಡಿಪಾರ್ಟ್‍ಮೆಂಟು ರೇಡ್ ಮಾಡಿದ ತರುವಾಯ ಡಿಕೆಶಿ ಒಂದಷ್ಟು ಬದಲಾಗಲೇಬೇಕಿತ್ತು, ಅದು ಜೆಡಿಎಸ್ ಮತ್ತು ದೇವೇಗೌಡರ ವಿಚಾರದಲ್ಲು ಕೂಡಾ. ಯಾಕೆಂದರೆ ಬಿಜೆಪಿಯಂತಹ ಬೃಹತ್ ಅಧಿಕಾರ ಶಕ್ತಿಯನ್ನು ಎದುರುಹಾಕಿಕೊಂಡಿದ್ದ ಡಿಕೆ ಏಕಕಾಲದಲ್ಲಿ ಇಬ್ಬರು ವೈರಿಗಳ ಸಂಗಡ ಕಾದಾಡು ವಂತಿರಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಅಧಿಕಾರ ಇದ್ದಷ್ಟು ದಿನ ಮಾತ್ರ ತಾನು ಸೇಫ್, ಅಧಿಕಾರ ಕೈತಪ್ಪುತ್ತಿದ್ದಂತೆಯೇ ಬಿಜೆಪಿ ತನ್ನ ಜೊತೆ ಭೀಕರವಾಗಿ ನಡೆದುಕೊಳ್ಳಲಿದೆ ಎಂಬುದನ್ನು ಡಿಕೆ ಮೊದಲೇ ಊಹಿಸಿದ್ದರು. ಆದದ್ದು ಕೂಡಾ ಹಾಗೆಯೇ.

2018ರಲ್ಲಿ ಅತಂತ್ರ ವಿಧಾನಸಭೆ ಏರ್ಪಟ್ಟಾಗ ಜೆಡಿಎಸ್-ಕಾಂಗ್ರೆಸ್ ನಡುವೆ ಮೈತ್ರಿ ಕುದುರಿಸಲು ಡಿಕೆಶಿ ಹಳೆಯದನ್ನೆಲ್ಲ ಮರೆತು ವಿಪರೀತ ಮುತುವರ್ಜಿ ವಹಿಸಿದ್ದು ಮತ್ತು ಆ ಮೈತ್ರಿಯನ್ನು ಉಳಿಸಿಕೊಳ್ಳಲು ಶತಾಯಗತಾಯ ಹೋರಾಡಿದ್ದು, ಎಲ್ಲವೂ ಇದೇ ಕಾರಣಕ್ಕೆ. ಜೆಡಿಎಸ್ ಜೊತೆಗಿನ ಮೈತ್ರಿ ಎಂದರೆ, ಗೌಡರ ಕುಟುಂಬದ ಜೊತೆಗಿನ ಮೈತ್ರಿ ಎಂದರಿತಿದ್ದ ಡಿಕೆಶಿ ಸಹಜವಾಗಿಯೇ ಆ ಕುಟುಂಬದ ಜೊತೆ ಉತ್ತಮ ಒಡನಾಟವಿರುವಂತೆ ವರ್ತಿಸುತ್ತಿದ್ದಾರೆ. ಈಗಂತೂ ಅವರ ಸುತ್ತ ಕ್ರೋಢೀಕರಣಗೊಳ್ಳುತ್ತಿರುವ `ಒಕ್ಕಲಿಗ ಜಾತಿಪ್ರಜ್ಞೆ’ಯ ರಾಜಕಾರಣ ದೇವೇಗೌಡರಿಗೆಷ್ಟು ಅನಿವಾರ್ಯವಿದೆಯೋ ಡಿಕೆಗೂ ಅಷ್ಟೇ ಅಗತ್ಯವಿದೆ. ಅಧಿಕಾರವಂತೂ ಇಲ್ಲ, ಇಂಥಾ ಸಮಯದಲ್ಲಿ ಜಾತಿರಾಜಕಾರಣವನ್ನೂ ಗುರಾಣಿಯಾಗಿ ಬಳಸಿಕೊಳ್ಳದಿದ್ದರೆ ಬಿಜೆಪಿ ಜೊತೆ ಸೆಣೆಸಾಡಲು ಸಾಧ್ಯವೇ? ಇದು ಡೀಕೆ ತರ್ಕ. ಅವತ್ತು ಜೆಡಿಎಸ್ ಬಾವುಟ ಡಿಕೆ ಕೈ ಏರುವಂತೆ ಮಾಡಿದ್ದು ಇದೇ ತರ್ಕ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...