Homeಕರ್ನಾಟಕವೈರಲ್ ವೀಡಿಯೋದ ಒಳಸುಳಿಗಳೇನು? ಸಿದ್ದು-ಡೀಕೆ ನಡುವೆ ಗೌಡರ ದಾಳ!

ವೈರಲ್ ವೀಡಿಯೋದ ಒಳಸುಳಿಗಳೇನು? ಸಿದ್ದು-ಡೀಕೆ ನಡುವೆ ಗೌಡರ ದಾಳ!

- Advertisement -
- Advertisement -

| ಗಿರೀಶ್ ತಾಳಿಕಟ್ಟೆ |

ಕುಮಾರಸ್ವಾಮಿಯವರು ಡೀಕೆ ಮನೆಗೆ ಹೋಗಿ ಅವರ ತಾಯಿಗೆ ಸಾಂತ್ವನ ಹೇಳಿದ್ದಾಗಲಿ, ತಿಹಾರ್ ಜೈಲಿಗೆ ಹೋಗಿ ಮುಖತಃ ಭೇಟಿ ಮಾಡಿದ್ದಾಗಲಿ, ಡೀಕೆ ಬೆಂಗಳೂರಿಗೆ ಬಂದಿಳಿಯುತ್ತಿದ್ದಂತೆ ಕುಮಾರಸ್ವಾಮಿಯವರೇ ಹೋಗಿ ಸ್ವಾಗತಿಸಿದ್ದಾಗಲಿ, `ವೆಲ್‍ಕಂ’ ಮೆರವಣಿಗೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಪಕ್ಷದ ಬಾವುಟದ ಸಮೇತ ಹಾಜರಿರುವಂತೆ ನೋಡಿಕೊಂಡಿದ್ದಾಗಲಿ ಎಲ್ಲವೂ ಗೌಡರ ಲೆಕ್ಕಾಚಾರಗಳೇ ಆಗಿವೆ.

ಇದು ದೇವೇಗೌಡರ ಪಾಲಿಗೆ ಬಯಸದೇ ಬಂದ ಭಾಗ್ಯ. ಹಾಗಂತ ಇದರಲ್ಲಿ ಅವರ ಶ್ರಮ ಏನೇನೂ ಇಲ್ಲ ಅಂತಲ್ಲ. ಆದರೆ ಅವರು ಒಂದು ಹಣ್ಣಿಗೆ ಗುರಿಯಿಟ್ಟು ಎಸೆದ ಕಲ್ಲು, ಎರಡು ಹಣ್ಣುಗಳನ್ನು ತಂದು ಬುಟ್ಟಿಗೆ ಬೀಳಿಸಿದಂತಾಗಿದೆ ಈಗಿನ ರಾಜಕೀಯ ಸನ್ನಿವೇಶ. ಗೌಡರ ನಸೀಬು ಅದೆಷ್ಟು ಹದವಾಗಿದೆಯೆಂದರೆ, ಒಕ್ಕಲಿಗರ ಮೇಲಿನ ಅವರ ಕುಟುಂಬದ ಅಧಿಪತ್ಯವನ್ನು ಕೊನೆಗಾಣಿಸಬೇಕೆಂದು ಟೊಂಕಕಟ್ಟಿದ್ದ ಬಿಜೆಪಿ ಮತ್ತು ಹೆಜ್ಜೆಹೆಜ್ಜೆಗೂ `ಗೌಡರ ಗೌರ್ಮೆಂಟಿ’ಗೆ ಕಾಟ ಕೊಡುತ್ತಲೇ ಬಂದ ಕನ್ನಡ ನ್ಯೂಸ್ ಚಾನೆಲ್‍ಗಳೂ ಅವರಿಗೆ ಅನುಕೂಲವಾಗುವಂತೆ ವರ್ತಿಸಲು ಶುರು ಮಾಡಿವೆ.

ಹೌದು, ಇದು ಡೀಕೆಶಿ ಸುತ್ತ ಹೆಣೆದುಕೊಂಡ ರಾಜಕೀಯ ಕಥನದ ಪೀಠಿಕೆ. ನೋ ಡೌಟ್, ಡೀಕೆ ಈಗ ಕಾಂಗ್ರೆಸ್ ಪಾಲಿನ ದೊಡ್ಡ ಹೀರೊ, ಅದು ಸಹಜವೂ ಕೂಡಾ. ಬಿಜೆಪಿಯ ಸೇಡಿನ ರಾಜಕಾರಣಕ್ಕೆ ಶರಣಾಗದೆ ತಿಹಾರ್ ಜೈಲಿನಲ್ಲಿ ಅಜಮಾಸು ಐವತ್ತು ದಿನ ಕಳೆದುಬಂದ ಡೀಕೆ ಮೇಲೆ ಸಾಮಾನ್ಯ ಕಾರ್ಯಕರ್ತರಿಗಿರಲಿ, ಖುದ್ದು ಹೈಕಮಾಂಡ್‍ಗೇ ವಿಶೇಷ ಅಭಿಮಾನ ಉಕ್ಕಿದೆ. ಇಲ್ಲದೇ ಹೋಗಿದ್ದಲ್ಲಿ ಸ್ವತಃ ಸೋನಿಯಾ ತಿಹಾರ್ ಜೈಲಿಗೆ ಹೋಗಿ ಭೇಟಿ ಮಾಡುತ್ತಿರಲಿಲ್ಲ, ಬಿಡುಗಡೆಯಾದ ಕೂಡಲೇ ತಮ್ಮ ಮನೆಗೇ ಕರೆಸಿಕೊಂಡು ಧೈರ್ಯ ತುಂಬಿ ಕಳಿಸುತ್ತಿರಲಿಲ್ಲ. ಇನ್ನು ಬೆಂಗಳೂರಿಗೆ ಕಾಲಿಟ್ಟ ಡೀಕೆಗೆ ಸಿಕ್ಕ ಅದ್ಭುತ ಸ್ವಾಗತ, ಭಾರೀ ಮೆರವಣಿಗೆಗಳೇನು ನಡೆದವಲ್ಲ, ಅದಕ್ಕೆಲ್ಲ ಪರ್ಮೀಷನ್ ಕೊಟ್ಟದ್ದೇ ಹೈಕಮಾಂಡ್. ಅಷ್ಟೇ ಅಲ್ಲ ಬೆಂಗಳೂರಿಗೆ ಬಂದ ತಕ್ಷಣ ಮನೆಗೆ ಹೋಗದೆ ಸೀದಾ ಕೆಪಿಸಿಸಿ ಕಚೇರಿಗೆ ಹೋಗಿ ಸುದ್ದಿಗೋಷ್ಠಿ ನಡೆಸುವಂತೆ ಸಲಹೆ ಕೊಟ್ಟದ್ದೂ ಹೈಕಮಾಂಡ್! `ಜೈಲಿಗೆ ಹೋಗಿ ಬಂದವ’ ಎಂಬ ಸಣ್ಣ ಅಳುಕು ಹೈಕಮಾಂಡ್‍ಗೆ ಇದ್ದಿದ್ದರೂ ಕೆಪಿಸಿಸಿ ಕಚೇರಿಯ ಹೆಬ್ಬಾಗಿಲು ಅಷ್ಟು ಸಲೀಸಾಗಿ ತೆರೆದುಕೊಳ್ಳುತ್ತಿರಲಿಲ್ಲ.

ಡೀಕೆ ಪರ ನಿಲ್ಲಲು ಗೌಡರಿಗಿರುವ ಕಾರಣವೇನು?

ಕಾಂಗ್ರೆಸ್‍ಗೇನೊ ಡೀಕೆಯನ್ನು `ಹೀರೊ’ ಆಗಿಸುವುದು ಅನಿವಾರ್ಯ. ಆದರೆ ಜೆಡಿಎಸ್‍ಗೆ, ಅರ್ಥಾತ್ ಗೌಡರ ಫ್ಯಾಮಿಲಿಗೆ ಇದ್ದಕ್ಕಿದ್ದಂತೆ ಡೀಕೆ ಮೇಲೆ ಇಂಥಾ ಮಮಕಾರ ಉಕ್ಕಲು ಕಾರಣವೇನು? ಜೀವನಪರ್ಯಂತ ತಮಗೆ ನಿಷ್ಠರಿದ್ದ ನಾಯಕರನ್ನೇ ರಾಜಕೀಯ ಸಮಾಧಿ ಮಾಡಿದ ಗೌಡರಿಗೆ, ನಿನ್ನೆ-ಮೊನ್ನೆವರೆಗೂ ತಮ್ಮ ವಿರುದ್ಧವೇ ಸೆಟೆದು ನಿಂತಿದ್ದ ಡೀಕೆಯನ್ನು ಹೀರೊ ಆಗಿಸುವಂತ ದರ್ದೇನು ಬಂತು?

ದೇವೇಗೌಡರ ರಾಜಕಾರಣದ ಅಡಿಪಾಯವೇ ಜಾತಿ. ಬಾಯಲ್ಲಿ ಹೇಳದೇ ಸಮುದಾಯಕ್ಕೆ ಸಂದೇಶ ರವಾನಿಸುವ ವಿಶೇಷ ಚಾಕಚಕ್ಯತೆ ಅವರದ್ದು. ಗೌಡರ ಈ ರಾಜಕೀಯ ಸಮೀಕರಣವನ್ನು ಬುಡಮೇಲು ಮಾಡಿದ್ದು 2019ರ ಲೋಕಸಭಾ ಚುನಾವಣೆ. ಮಂಡ್ಯ ಒಕ್ಕಲಿಗರ ಸೆಂಟಿಮೆಂಟು, ಸ್ವಾಭಿಮಾನಗಳು ನುಚ್ಚು ನೂರಾಗುವಂತೆ ಅವರ ಮೇಲೆ ತಮ್ಮ ಮೊಮ್ಮಗ ನಿಖಿಲ್ ಕುಮಾರಸ್ವಾಮಿಯನ್ನು ಹೇರಲು ಹೊರಟದ್ದು ದೇವೇಗೌಡರು ಮಾಡಿದ ಬಹುದೊಡ್ಡ ಪ್ರಮಾದ. ಅದು ಮಂಡ್ಯ ರಾಜಕಾರಣಕ್ಕಷ್ಟೇ ಸೀಮಿತವಾಗಲಿಲ್ಲ, ಇಡೀ ಒಕ್ಕಲಿಗ ಸಮುದಾಯದಲ್ಲೆ `ಗೌಡರ ಫ್ಯಾಮಿಲಿ ರಾಜಕಾರಣ’ ಅತಿಯಾಯ್ತು ಎಂಬ ಭಾವನೆಯನ್ನು ಬಿತ್ತಿತ್ತು. ದೇವೇಗೌಡರು ತಮ್ಮ ಕುಟುಂಬದ ಹಿತಾಸಕ್ತಿಗಾಗಿ ಯಾವೆಲ್ಲ ಒಕ್ಕಲಿಗ ನಾಯಕರನ್ನು ಹೇಗೆಲ್ಲ ಬಲಿಕೊಡುತ್ತಾ ಬಂದರು ಅನ್ನೋ ಚರ್ಚೆ ಒಕ್ಕಲಿಗರಲ್ಲೇ ಹರಿದಾಡಲು ಶುರುವಾಯ್ತು. ಅದರ ಪರಿಣಾಮವೇ ಮಂಡ್ಯದಲ್ಲಿ ನಿಖಿಲ್ ಸೋತದ್ದು ಮಾತ್ರವಲ್ಲ, ಒಕ್ಕಲಿಗರ ಪ್ರಾಬಲ್ಯವಿರುವ ತುಮಕೂರಿನಲ್ಲಿ ಸ್ವತಃ ದೇವೇಗೌಡರು ಸೋತುಹೋದರು!

ಹಾಗೆ ನೋಡಿದರೆ, ಗೌಡರ ಕುಟುಂಬಕ್ಕೆ ಸೋಲುಗಳೇನು ಹೊಸದಲ್ಲ. ಆದರೆ ತಮ್ಮದೇ ಕುಟುಂಬ ಮುಖ್ಯಮಂತ್ರಿ ಹುದ್ದೆಯನ್ನು ಆವರಿಸಿದ್ದರೂ, ತಮ್ಮ ಕುಟುಂಬಕ್ಕೆ ನಿಷ್ಠರಾದ ಮಂತ್ರಿವರ್ಯರು ಅನೇಕರಿದ್ದರು ಎರಗಿದ ಈ ಸೋಲು ದೇವೇಗೌಡರಂತಹ ಬಲು ನಾಜೂಕಿನ ರಾಜಕಾರಣಿಯನ್ನು ಕಂಗೆಡಿಸದೇ ಇರಲು ಸಾಧ್ಯವೇ!? ಒಕ್ಕಲಿಗರ ವಿಶ್ವಾಸ ಕಳೆದುಕೊಳ್ಳಲು ಶುರು ಮಾಡಿದ್ದೇವೆ ಎಂದು ದೇವೇಗೌಡರಿಗೆ ಅನಿಸಿದ್ದೇ ಆಗ. ಹೇಗಾದರು ಮಾಡಿ ಅದನ್ನು ಸರಿಪಡಿಸಿಕೊಳ್ಳಬೇಕೆಂದು ಅವರು ರಾಜಕೀಯ ಪಂಚಾಂಗ ಬಿಚ್ಚಿ ಕೂತಿದ್ದಾಗ ಘಟಿಸಿದ್ದೇ ಈ ಡೀಕೆ ಪ್ರಕರಣ!

ಗೌಡರ ಒಕ್ಕಲಿಗ ಸೆಂಟಿಮೆಂಟ್; ಎಚ್‍ಡಿಕೆಯ ಬಿಜೆಪಿ ಸ್ಟೇಟ್‍ಮೆಂಟ್

ಕುಮಾರಸ್ವಾಮಿಯವರು ಡೀಕೆ ಮನೆಗೆ ಹೋಗಿ ಅವರ ತಾಯಿಗೆ ಸಾಂತ್ವನ ಹೇಳಿದ್ದಾಗಲಿ, ತಿಹಾರ್ ಜೈಲಿಗೆ ಹೋಗಿ ಮುಖತಃ ಭೇಟಿ ಮಾಡಿದ್ದಾಗಲಿ ಎಲ್ಲದರ ಹಿಂದೆ ಗೌಡರ ಸ್ಪಷ್ಟ ನೀಲನಕ್ಷೆಗಳಿದ್ದವು. ಅಷ್ಟೇ ಅಲ್ಲ ಕುಮಾರಸ್ವಾಮಿ ತಿಹಾರ್ ಜೈಲಿಗೆ ಹೋಗುವುದಕ್ಕೂ ಇಪ್ಪತ್ತು ದಿನ ಮೊದಲೇ ಖುದ್ದು ದೇವೇಗೌಡರೆ ಹಿರಿಮಗ ರೇವಣ್ಣನವರ ಜೊತೆಗೆ ತಿಹಾರ್ ಜೈಲಿಗೆ ಹೋಗಿ ಡೀಕೆಯನ್ನು ಭೇಟಿ ಮಾಡಬೇಕು ಅಂದುಕೊಂಡಿದ್ದರು. ಆದರೆ ಭೇಟಿಗೆ ಎರಡು ದಿನ ಮೊದಲೇ ಪರ್ಮೀಷನ್ನಿಗೆ ಅರ್ಜಿ ಹಾಕಬೇಕಿತ್ತು. ಆದರೆ ಗೌಡರು ನೇರವಾಗಿ ಭೇಟಿಗೆ ಅನುಮತಿ ಕೇಳಿದ್ದರಿಂದ ಜೈಲಿನ ಅಧಿಕಾರಿಗಳು ತಲೆ ಅಡ್ಡಡ್ಡ ಆಡಿಸಿದ್ದರು. ಭೇಟಿ ಸಾಧ್ಯವಾಗದಿದ್ದರೂ, ದಿಲ್ಲಿಯ ತಮ್ಮ ನಿವಾಸಕ್ಕೆ ಡಿ.ಕೆ.ಸುರೇಶ್‍ರನ್ನು ಕರೆಸಿಕೊಂಡ ಗೌಡರು `ಡೀಕೆಗೆ ಒಳ್ಳೆಯದಾಗಲಿ ಅಂತ ದೇವರ ಬಳಿ ವಿಶೇಷ ಪೂಜೆ ಮಾಡಿಸಿಕೊಂಡು ಬಂದಿದ್ದೇನೆ’ ಅಂತ ಸಂತೈಸಿ ಕಳಿಸಿದ್ದರು. ಇನ್ನು ಡೀಕೆ ಬೆಂಗಳೂರಿಗೆ ಬಂದಿಳಿಯುತ್ತಿದ್ದಂತೆ ಕುಮಾರಸ್ವಾಮಿಯವರೇ ಹೋಗಿ ಸ್ವಾಗತಿಸಿದ್ದಾಗಲಿ, `ವೆಲ್‍ಕಂ’ ಮೆರವಣಿಗೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಪಕ್ಷದ ಬಾವುಟದ ಸಮೇತ ಹಾಜರಿರುವಂತೆ ನೋಡಿಕೊಂಡಿದ್ದಾಗಲಿ ಎಲ್ಲವೂ ಗೌಡರ ಲೆಕ್ಕಾಚಾರಗಳೇ ಆಗಿವೆ. `ಪಕ್ಷ ಯಾವುದಾದರೇನು ನಮಗೆ ಒಕ್ಕಲಿಗರ ಹಿತ ಕಾಯುವುದೇ ಮುಖ್ಯ’ ಎಂಬ ಸಂದೇಶ ರವಾನೆಯಾಗಿ ಕಳೆದುಹೋಗಿರುವ ಒಕ್ಕಲಿಗರ ವಿಶ್ವಾಸವನ್ನು ಮತ್ತೆ ಗಳಿಸಿಕೊಳ್ಳುವ ಸಿಂಗಲ್ ಅಜೆಂಡಾ ಗೌಡರದ್ದು.

ಇಲ್ಲೊಂದು ಇಂಟರೆಸ್ಟಿಂಗ್ ಸಂಗತಿಯಿದೆ. ಡೀಕೆ ಪರವಾಗಿ ಹೀಗೆ ನಿಲ್ಲುತ್ತಾ ಹೋಗಿ ತಮ್ಮ ಕುಟುಂಬ ಬಿಜೆಪಿಯ ಕೆಂಗಣ್ಣಿಗೆ ಗುರಿಯಾದರೇನು ಗತಿ? ಸಿಬಿಐ, ಇಡಿ, ಐಟಿ ಅಸ್ತ್ರಗಳು ತಮ್ಮ ಮೇಲೂ ಮುಗಿಬಿದ್ದರೆ ಏನು ಕತೆ? ಇಲ್ಲೂ ಗೌಡರು ಬ್ಯಾಲೆನ್ಸ್ ಮಾಡುತ್ತಲೇ ಬಂದರು. ಒಂದು ಕಡೆ ಕೇಂದ್ರದ ಅಧಿಕಾರ ದುರ್ಬಳಕೆಯ ವಿರುದ್ಧ ಮಾತಾಡುತ್ತಲೆ, ಮತ್ತೊಂದು ಕಡೆ ಪ್ರಧಾನಿ ಮೋದಿಯವರ `ದುಬಾರಿ ಹೆಮ್ಮೆ’ಯಾದ ಸ್ಟ್ಯಾಚ್ಯೂ ಆಫ್ ಯೂನಿಟಿ ಮುಂದೆ ಫೋಜು ಕೊಟ್ಟು, ಹೊಗಳಿ ಮೋದಿಯವರಿಂದ ಖುಷಿಯ ಟ್ವೀಟು ಗಿಟ್ಟಿಸಿಕೊಂಡರು. ಅತ್ತ ಕುಮಾರಸ್ವಾಮಿಯವರ ಮೂಲಕ `ಉತ್ತರ ಕರ್ನಾಟಕ ನೆರೆ ಸಂಕಷ್ಟಕ್ಕೆ ಸಿಲುಕಿರೋದ್ರಿಂದ ಈ ಬಿಜೆಪಿ (ರಾಜ್ಯ) ಸರ್ಕಾರ ಬೀಳದಂತೆ ನಾವು ನೋಡಿಕೊಳ್ಳುತ್ತೇವೆ’ ಎಂಬ ಹೇಳಿಕೆ ಹೇಳಿಸಿ ಬಿಜೆಪಿ ಜೊತೆಗೆ ಒಂದು ಬಾಂಧವ್ಯವನ್ನೂ ಗಟ್ಟಿ ಮಾಡಿಕೊಳ್ಳುತ್ತಿದ್ದಾರೆ.

ಸಿದ್ದು ಬೇಸರದ ಮೂಲ ಇದು

ದೇವೇಗೌಡರ ಇಂಥಾ ಸ್ಟ್ರಾಟಜಿಗಳನ್ನು ಬಹಳ ಹತ್ತಿರದಿಂದ ನೋಡಿ, ಸಿಟ್ಟಿಗೆದ್ದು ದೂರ ಬಂದ ಸಿದ್ರಾಮಯ್ಯನಂತಹ ರಾಜಕಾರಣಿಗೆ ಈಗ ಡೀಕೆಯನ್ನು ಅವರು ದಾಳವಾಗಿ ಬಳಸಿಕೊಳ್ಳುತ್ತಿರೋದರ ವಿರುದ್ಧ ಸಹಜವಾಗಿಯೇ ಬೇಸರವಿದೆ. ಅದು ದೇವೇಗೌಡರ ಇಡೀ ಷಡ್ಯಂತ್ರದ ಮೇಲಿನ ಬೇಸರವೇ ವಿನಾಃ ಡೀಕೆ ಮೇಲಿನ ವೈಯಕ್ತಿಕ ಹಗೆತನವಲ್ಲ. ಖಾಸಗಿ ವೀಡಿಯೊದಲ್ಲಿ ಸಿದ್ದು ಹೊರಹಾಕಿದ ಅಸಮಾಧಾನ ಕೂಡಾ ಡಿಕೆಶಿಯ ಜೆಡಿಎಸ್ ವಾಲಿಕೆಯ ವಿರುದ್ಧವಾಗಿತ್ತೆ ವಿನಾಃ ಡಿಕೆಶಿಗೆ ಸಿಕ್ಕ ಅದ್ಭುತ ಸ್ವಾಗತದ ವಿರುದ್ಧವಲ್ಲ. ಆದರೆ ಮೊದಲಿನಿಂದಲೂ ಸಿದ್ದು ಎಂದರೆ ಒಂದು ಬಗೆಯ ಅಸಿಡಿಟಿಯನ್ನು ಅದುಮಿಟ್ಟುಕೊಂಡೇ ಬಂದಿರುವ ಕೆಲ ಮೀಡಿಯಾಗಳು ಸಿದ್ದು-ಡಿಕೆ ನಡುವೆ ಶೀತಲಸಮರವನ್ನಾಗಿ ಅದನ್ನು ಬಿಂಬಿಸುತ್ತಿವೆ. ಅಸಲಿಗೆ, ಡಿಕೆ ಬಿಡುಗಡೆಯ ನಂತರ ಒಕ್ಕಲಿಗರ ಆಕ್ರೋಶ, ಅವರನ್ನು ಬಂಧಿಸಿ ಜೈಲಿನಲ್ಲಿಟ್ಟಿದ್ದ ಬಿಜೆಪಿ ವಿರುದ್ಧ ಆಸ್ಫೋಟಿಸುತ್ತಿದ್ದುದನ್ನು ಸಿದ್ದು ಕಡೆಗೆ ಡೈವರ್ಟ್ ಮಾಡಲು ಮೀಡಿಯಾಗಳು ಹೆಣಗಾಡುತ್ತಿವೆಯಷ್ಟೆ. ಇದು ಗೌಡರ ಪಾಲಿಗೆ ಬೋನಸ್ ಪ್ರತಿಫಲ.

ಡಿಕೆಗಿದೆ ಸರ್ವೈವಲ್ ಸ್ಟ್ರಾಟಜಿ!

ಸರಿ, ದೇವೇಗೌಡರಿಗೇನೊ ಅನಿವಾರ್ಯತೆ ಇದೆ, ಡಿಕೆ ಪರವಾಗಿ ಮಮಕಾರ ಹರಿಸುತ್ತಿದ್ದಾರೆ. ಆದರೆ ಅವರನ್ನು ವಿರೋಧಿಸಿಕೊಂಡೇ ಬಂದ ಡಿಕೆಗೆ, ದೇವೇಗೌಡರ ದಾಳವಾಗುವ ಅನಿವಾರ್ಯತೆಯೇನು? ಅಷ್ಟೂ ಅರ್ಥವಾಗದ ದಡ್ಡರೇ ಅವರು? ಖಂಡಿತ ಇಲ್ಲ. ಈ ವಿಚಾರದಲ್ಲಿ ಸಿದ್ದುಗೆ ಒಂದು ಐಡಿಯಾಲಜಿಕಲ್ ವ್ಯೂ ಇರುವಂತೆ, ದೇವೇಗೌಡರಿಗೆ ಸ್ಪಷ್ಟ ಗೇಮ್‍ಪ್ಲ್ಯಾನ್ ಇರುವಂತೆ, ಡಿಕೆಶಿಗೂ ಒಂದು ವಿಶಿಷ್ಟ ಸರ್ವೈವಲ್ ಸ್ಟ್ರಾಟಜಿ ಇದರ ಹಿಂದಿದೆ.

ಬಿಜೆಪಿ ಸರ್ಕಾರದ ಇನ್‍ಕಂಟ್ಯಾಕ್ಸ್ ಡಿಪಾರ್ಟ್‍ಮೆಂಟು ರೇಡ್ ಮಾಡಿದ ತರುವಾಯ ಡಿಕೆಶಿ ಒಂದಷ್ಟು ಬದಲಾಗಲೇಬೇಕಿತ್ತು, ಅದು ಜೆಡಿಎಸ್ ಮತ್ತು ದೇವೇಗೌಡರ ವಿಚಾರದಲ್ಲು ಕೂಡಾ. ಯಾಕೆಂದರೆ ಬಿಜೆಪಿಯಂತಹ ಬೃಹತ್ ಅಧಿಕಾರ ಶಕ್ತಿಯನ್ನು ಎದುರುಹಾಕಿಕೊಂಡಿದ್ದ ಡಿಕೆ ಏಕಕಾಲದಲ್ಲಿ ಇಬ್ಬರು ವೈರಿಗಳ ಸಂಗಡ ಕಾದಾಡು ವಂತಿರಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಅಧಿಕಾರ ಇದ್ದಷ್ಟು ದಿನ ಮಾತ್ರ ತಾನು ಸೇಫ್, ಅಧಿಕಾರ ಕೈತಪ್ಪುತ್ತಿದ್ದಂತೆಯೇ ಬಿಜೆಪಿ ತನ್ನ ಜೊತೆ ಭೀಕರವಾಗಿ ನಡೆದುಕೊಳ್ಳಲಿದೆ ಎಂಬುದನ್ನು ಡಿಕೆ ಮೊದಲೇ ಊಹಿಸಿದ್ದರು. ಆದದ್ದು ಕೂಡಾ ಹಾಗೆಯೇ.

2018ರಲ್ಲಿ ಅತಂತ್ರ ವಿಧಾನಸಭೆ ಏರ್ಪಟ್ಟಾಗ ಜೆಡಿಎಸ್-ಕಾಂಗ್ರೆಸ್ ನಡುವೆ ಮೈತ್ರಿ ಕುದುರಿಸಲು ಡಿಕೆಶಿ ಹಳೆಯದನ್ನೆಲ್ಲ ಮರೆತು ವಿಪರೀತ ಮುತುವರ್ಜಿ ವಹಿಸಿದ್ದು ಮತ್ತು ಆ ಮೈತ್ರಿಯನ್ನು ಉಳಿಸಿಕೊಳ್ಳಲು ಶತಾಯಗತಾಯ ಹೋರಾಡಿದ್ದು, ಎಲ್ಲವೂ ಇದೇ ಕಾರಣಕ್ಕೆ. ಜೆಡಿಎಸ್ ಜೊತೆಗಿನ ಮೈತ್ರಿ ಎಂದರೆ, ಗೌಡರ ಕುಟುಂಬದ ಜೊತೆಗಿನ ಮೈತ್ರಿ ಎಂದರಿತಿದ್ದ ಡಿಕೆಶಿ ಸಹಜವಾಗಿಯೇ ಆ ಕುಟುಂಬದ ಜೊತೆ ಉತ್ತಮ ಒಡನಾಟವಿರುವಂತೆ ವರ್ತಿಸುತ್ತಿದ್ದಾರೆ. ಈಗಂತೂ ಅವರ ಸುತ್ತ ಕ್ರೋಢೀಕರಣಗೊಳ್ಳುತ್ತಿರುವ `ಒಕ್ಕಲಿಗ ಜಾತಿಪ್ರಜ್ಞೆ’ಯ ರಾಜಕಾರಣ ದೇವೇಗೌಡರಿಗೆಷ್ಟು ಅನಿವಾರ್ಯವಿದೆಯೋ ಡಿಕೆಗೂ ಅಷ್ಟೇ ಅಗತ್ಯವಿದೆ. ಅಧಿಕಾರವಂತೂ ಇಲ್ಲ, ಇಂಥಾ ಸಮಯದಲ್ಲಿ ಜಾತಿರಾಜಕಾರಣವನ್ನೂ ಗುರಾಣಿಯಾಗಿ ಬಳಸಿಕೊಳ್ಳದಿದ್ದರೆ ಬಿಜೆಪಿ ಜೊತೆ ಸೆಣೆಸಾಡಲು ಸಾಧ್ಯವೇ? ಇದು ಡೀಕೆ ತರ್ಕ. ಅವತ್ತು ಜೆಡಿಎಸ್ ಬಾವುಟ ಡಿಕೆ ಕೈ ಏರುವಂತೆ ಮಾಡಿದ್ದು ಇದೇ ತರ್ಕ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...