Homeಕರ್ನಾಟಕಗೌರಿ ಹತ್ಯೆಯ ತನಿಖೆ ನಡೆದದ್ದು ಹೇಗೆ? ಈಗ ಎಲ್ಲಿಯವರೆಗೂ ಬಂದಿದೆ? ಕೊನೆಯ ಭಾಗ ಓದಿ

ಗೌರಿ ಹತ್ಯೆಯ ತನಿಖೆ ನಡೆದದ್ದು ಹೇಗೆ? ಈಗ ಎಲ್ಲಿಯವರೆಗೂ ಬಂದಿದೆ? ಕೊನೆಯ ಭಾಗ ಓದಿ

ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 16ಕ್ಕೇರಿದೆ. ಸಂಚಿನಲ್ಲಿ ಭಾಗವಹಿಸಿದ್ದ ವಿಕಾಸ್ ಪಾಟೀಲ್ ಮತ್ತು ರುಷಿಕೇಶ್ ದೇವ್ಡಿಕರ್ ಎಂಬಿಬ್ಬರ ಬಂಧನ ಬಾಕಿಯಿದೆ.

- Advertisement -
- Advertisement -

ಭಾಗ-3  ಕೃಪೆ: ದಿ ಕ್ವಿಂಟ್
ನಿರೂಪಣೆ: ನಿಖಿಲ್ ಕೋಲ್ಪೆ

ಭಾಗ 1: ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ಕರ್ನಾಟಕ ವಿಶೇಷ ತನಿಖಾ ದಳ (SIT) ಭೇದಿಸಿದ್ದಾದರೂ ಹೇಗೆ?

ಭಾಗ-2 : ಗೌರಿ ಹತ್ಯೆಯ ತನಿಖೆಯ ಜಾಡು ಹಿಡಿದು ಹೊರಟಾಗ ಸಿಕ್ಕ ರೋಚಕ ಸತ್ಯಗಳು…

7. ಅಕ್ಯುಪಂಕ್ಚರ್ ‘ಸಂಪಾ’

ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಿದ ಪ್ರಕರಣದ ಎಲ್ಲಾ ಆರೋಪಿಗಳನ್ನು ಎಸ್‌ಐಟಿ ಬಂಧಿಸಿದರೂ, ಈ ಸಂಚಿನಲ್ಲಿ ಭಾಗಿಯಾಗಿ ಸಹಕರಿಸಿದ ಇತರರನ್ನು ಗುಡಿಸಿ, ಕಸದಬುಟ್ಟಿಗೆ ಹಾಕುವ ಕೆಲಸ ಬಾಕಿ ಉಳಿದಿತ್ತು. ವಿಚಾರಣೆಯ ವೇಳೆ, ತಾನು ಮತ್ತು ಇತರ ಮೂವರು ಗೌರಿಹತ್ಯೆಗೆ ಮುನ್ನ ವಾಸಿಸುತ್ತಿದ್ದ ಬೆಂಗಳೂರು ಹೊರವಲಯದ ಕುಂಬಳಗೋಡಿನಲ್ಲಿರುವ ಅಕ್ಯುಪಂಕ್ಚರ್ ಸೆಂಟರ್ ಬಗ್ಗೆ ಪರಶುರಾಮ ವಾಘ್‌ಮೋರೆ ಎಸ್‌ಐಟಿಗೆ ತಿಳಿಸಿದ. ಆತ, ಅಮೋಲ್ ಕಾಳೆ ವಾಸಿಸುತ್ತಿದ್ದ ಗೌರಿಯವರ ಮನೆಗೆ ಹತ್ತಿರವಿರುವ ಸುರೇಶ ಎಂಬಾತನ ಮನೆಯ ಬಗ್ಗೆಯೂ ತಿಳಿಸಿದ.

ಈ ಮಾಹಿತಿ ಪಡೆದ ಎಸ್‌ಐಟಿ, ಮೊದಲಿಗೆ ಅಕ್ಯುಪಂಕ್ಚರ್ ಸೆಂಟರ್ ನಡೆಸುತ್ತಿದ್ದ ಮನೆಗೆ ದಾಳಿ ನಡೆಸಿತು. ಅಲ್ಲಿ ಯಾರೂ ಇರಲಿಲ್ಲ. ಅಲ್ಲಿ ಸಿಕ್ಕಿದ ಡೈರಿಯಲ್ಲಿ ಮೊಬೈಲ್ ನಂಬರುಗಳಿಗಾಗಿ ಹುಡುಕುತ್ತಿದ್ದಾಗ, ಒಂದು ನಂಬರು ಸಿಕ್ಕಿತು. ಅದರ ಮುಂದೆ ಎಂ.ಎನ್. ಸಂಪಾ ಎಂದಿತ್ತು. ಇದೆಂತಹ ಹೆಸರು ಎಂದು ಪೊಲೀಸರು ತಲೆಕೆಡಿಸಿಕೊಂಡರು. ಅದು ಸಂಕೇತ ಭಾಷೆಯಾಗಿತ್ತು. ಪೊಲೀಸರು ಆ ನಂಬರಿನ ಕಾಲ್ ಡಿಟೈಲ್‌ ಹುಡುಕಿದಾಗ ಅಲ್ಲಿ ಎರಡು ಬೆಂಗಳೂರಿನ ನಂಬರುಗಳು ಸಿಕ್ಕಿದವು. ಅವು ಇಬ್ಬರು ರಿಯಲ್ ಎಸ್ಟೇಟ್ ಏಜೆಂಟುಗಳ ನಂಬರುಗಳಾಗಿದ್ದವು. ಅವರಲ್ಲೊಬ್ಬ ತಾನು ಆ ಮನೆಯನ್ನು ಅಕ್ಯುಪಂಕ್ಚರ್ ಸೆಂಟರ್ ನಡೆಸುವುದಕ್ಕಾಗಿ ವ್ಯಕ್ತಿಯೊಬ್ಬನಿಗೆ ಬಾಡಿಗೆಗೆ ಕೊಟ್ಟಿದ್ದುದಾಗಿ ಹೇಳಿದ.

ಆರೋಪಿಗಳನ್ನು ನ್ಯಾಯಾಲಯಕ್ಕೆ ಕರೆದೊಯ್ಯುವಾಗ

ಆ ಮೊಬೈಲನ್ನು ಕೊನೆಯ ಬಾರಿಗೆ ದಕ್ಷಿಣ ಕನ್ನಡ ಗಡಿಯಲ್ಲಿ, ಕೊಡಗಿನಲ್ಲಿರುವ ಸಂಪಾಜೆ ಗ್ರಾಮದಲ್ಲಿ ಬಳಸಿದ್ದು ಪೊಲೀಸರಿಗೆ ತಿಳಿಯಿತು. ಆಗ ಅವರಿಗೆ ಗೊತ್ತಾಯಿತು- ಸಂಪಾ ಎಂದರೆ ವ್ಯಕ್ತಿಯಲ್ಲ, ಊರು ಎಂದು. ಎಂ.ಎನ್. ಎಂದರೆ ಆ ವ್ಯಕ್ತಿಯ ಹೆಸರು ಎಂದು ಊಹಿಸುವುದು ಸುಲಭವಾಗಿತ್ತು. ಪೊಲೀಸರು ಸಂಪಾಜೆ ತಲಪಿ, ಅಲ್ಲಿ ಅಕ್ಯುಪಂಕ್ಚರ್ ಬಲ್ಲವರ ಬಗ್ಗೆ ವಿಚಾರಿಸಲು ಆರಂಭಿಸಿದರು. ಸ್ವಲ್ಪ ಸಮಯದಲ್ಲೇ ‘ಸಂಪಾ’ ಬಲೆಗೆ ಬಿದ್ದ. ಅವನ ಹೆಸರು ಮೋಹನ್ ನಾಯಕ್ ಎಂದಾಗಿತ್ತು. ಮೂವರು ಹಂತಕರು ಪರಶುರಾಮ ವಾಘ್‌ಮೋರೆ, ಗಣೇಶ ಮಿಸ್ಕಿನ್ ಮತ್ತು ಅಮಿತ್ ಬಡ್ಡಿ ಯಾವುದೇ ಗಮನ ಸೆಳೆಯದಂತೆ ವಾಸಿಸಲು ಅನುಕೂಲಕ್ಕಾಗಿ, ಅಮೋಲ್ ಕಾಳೆಯ ಸೂಚನೆಯಂತೆ ತಾನು ಆ ಮನೆಯನ್ನು ಬಾಡಿಗೆಗೆ ಪಡೆದು ಅಕ್ಯುಪಂಕ್ಚರ್ ಸೆಂಟರ್ ತೆರೆದುದಾಗಿ ಮನೋಹರ ನಾಯಕ್ ಒಪ್ಪಿಕೊಂಡ.

8. ರಾಜೇಶ್‌ ಬಂಗೇರಾ

ಪೊಲೀಸರ ಮುಂದಿದ್ದ ಒಂದು ಒಗಟೆಂದರೆ, ಪಿಸ್ತೂಲು ಬಳಕೆಯ ಬಗ್ಗೆ ತರಬೇತಿ ನೀಡಿದವರು ಯಾರು ಎಂಬುದು. ಅಮೋಲ್ ಕಾಳೆ ಸೇರಿದಂತೆ ಎಲ್ಲಾ ಆರೋಪಿಗಳು ಆತನನ್ನು ‘ಸರ್’ ಎಂದು ಕರೆಯುತ್ತಿದ್ದರು. ಮತ್ತೆ ವಶಪಡಿಸಿಕೊಳ್ಳಲಾದ ಡೈರಿಗಳು ನೆರವಿಗೆ ಬಂದವು. ಅವುಗಳೊಂದರಲ್ಲಿ ಈ ‘ಸರ್’ ಇದ್ದ. ಅದರ ಮುಂದೆ ಇದ್ದ ಮೊಬೈಲ್ ನಂಬರ್ ಕೊಡಗಿನದ್ದೆಂದು ಎಸ್‌ಐಟಿಗೆ ಗೊತ್ತಾಯಿತು.

ಮನೋಹರ ನಾಯಕ್ ಕೂಡಾ ಕೊಡಗಿನವನೇ ಆಗಿರುವುದರಿಂದ ಅವನಿಗೆ ಈತನ ಸಂಪರ್ಕವಿರಬೇಕು ಎಂದು ತರ್ಕಿಸಿದ ಎಸ್‌ಐಟಿ, ಆತನ ಕಾಲ್ ರೆಕಾರ್ಡ್‌ನ ವಿಶ್ಲೇಷಣೆ ನಡೆಸಿದಾಗ, ಒಂದು ಹೆಸರು ಎದ್ದು ಕಾಣುತ್ತಿತ್ತು. ಯಾಕೆಂದರೆ, ಅವರಿಬ್ಬರೂ ಆಗಿಂದಾಗ್ಗೆ ಮಾತಾಡುತ್ತಿದ್ದರು. ಆ ವ್ಯಕ್ತಿಯ ಹೆಸರು ರಾಜೇಶ್ ಬಂಗೇರ ಎಂದಾಗಿತ್ತು. ಆತನನ್ನು ಬಂಧಿಸಲಾಯಿತು.

ವಿಚಾರಣೆಯ ವೇಳೆ, ತಾನು ಇತರ ಆರೋಪಿಗಳಿಗೆ ಬೆಳಗಾವಿ ಜಿಲ್ಲೆಯ ತೋಟದ ಮನೆಯೊಂದರಲ್ಲಿ ಪಿಸ್ತೂಲು ಬಳಸುವ ತರಬೇತಿ ನೀಡಿದುದಾಗಿಯೂ, ತಾನು 1990ರ ದಶಕದಲ್ಲಿ ‘ಸನಾತನ ಸಂಸ್ಥೆ’ ಎಂಬ ಸಂಘಟನೆ ಸೇರಿದ್ದು, ಆ ಸಂಸ್ಥೆಯು ಶಸ್ತ್ರಾಸ್ತ್ರ ತರಬೇತಿ ನೀಡಿದ್ದವರಲ್ಲಿ ತಾನೂ ಒಬ್ಬ ಎಂದು ರಾಜೇಶ್ ಬಂಗೇರ ತಿಳಿಸಿದ. ತಾನು ಈ ತರಬೇತಿಯಲ್ಲಿ ಅತ್ಯುತ್ತಮವಾಗಿದ್ದುದರಿಂದ, ಹೊಸದಾಗಿ ಸಂಘಟನೆ ಸೇರಿದವರಿಗೆ ತರಬೇತಿ ನೀಡುತ್ತಿದ್ದೆ ಎಂದು ಆತ ತಿಳಿಸಿದ. ಇದಕ್ಕೂ ಹೆಚ್ಚಾಗಿ, ನರೇಂದ್ರ ದಾಬೋಲ್ಕರ್ ಮತ್ತು ಎಂ‌.ಎಂ. ಕಲಬುರ್ಗಿಯವರ ಹಂತಕರಿಗೆ ತರಬೇತಿ ನೀಡಿದವನು ತಾನೇ ಎಂದು ಹೇಳಿಕೊಂಡನಾದರೂ, ಅವರ ಬಗ್ಗೆ ತನಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ.

9. ಆರೋಪಿಯಾಗಿ ಬದಲಾದ ಸಾಕ್ಷಿ

ಎರಡು ಮನೆಗಳು ಈಗ ತನಿಖೆಗೆ ಮುಖ್ಯವಾಗಿದ್ದವು. ಅವುಗಳಲ್ಲಿ ಒಂದಾದ ಕುಂಬಳಗೋಡಿನ ಮನೆ ಹಂತಕರು ವಾಸಿಸುತ್ತಿದ್ದದ್ದು. ಎರಡನೇ ಮನೆ ಸೀಗೆಹಳ್ಳಿಯಲ್ಲಿ ಅಮೋಲ್ ಕಾಳೆ ಮತ್ತು ಇತರರು ವಾಸಿಸುತ್ತಿದ್ದದ್ದು. ಕುಂಬಳಗೋಡಿನ ಮನೆ ವಿಷಯ ಆಗಲೇ ಗೊತ್ತಿದ್ದುದರಿಂದ, ಎಸ್‌ಐಟಿಯವರು ಸೀಗೆಹಳ್ಳಿಯ ಮನೆಗೆ ಹೋದರು. ಅದು ಎಚ್.ಎಲ್. ಸುರೇಶ್ ಎಂಬವನದ್ದಾಗಿತ್ತು. ತಾನು ಕೇವಲ ಮನೆ ಮಾಲಕನಾಗಿದ್ದು, ತನಗೆ ಈ ಸಂಚಿನ ಬಗ್ಗೆ ಏನೇನೂ ಗೊತ್ತಿಲ್ಲ ಎಂದು ಆತ ಹೇಳಿದ. ಎಸ್‌ಐಟಿ ಆತನ ಮಾತುಗಳನ್ನು ನಂಬಿತು ಮತ್ತು ಅತನನ್ನು ಈ ಪ್ರಕರಣದಲ್ಲಿ ಸಾಕ್ಷಿಯಾಗಿ ಮಾಡಿತು. ಆತ, ತಾನು ಈ ಪ್ರಕರಣದ ಸಾಕ್ಷಿ ಎಂದು ಸಿಆರ್‌ಪಿಸಿ ವಿಧಿ 164ರ ಅನ್ವಯ ಮ್ಯಾಜಿಸ್ಟ್ರೇಟ್ ಒಬ್ಬರ ಮುಂದೆ ಹೇಳಿಕೆಯನ್ನೂ ದಾಖಲಿಸಿದ.

ಆದರೆ ಇನ್ನಷ್ಟು ಬಂಧನಗಳು ನಡೆದಾಗ ಆತನ ಬಣ್ಣ ಬಯಲಾಯಿತು. ಈ ಸುರೇಶ ಕೂಡಾ ಸಂಚಿನ ಪಾಲುದಾರನಾಗಿದ್ದ. ಎಸ್‌ಐಟಿ ಹೇಳುವಂತೆ ಸುರೇಶ, ಆರೋಪಿಗಳಿಗೆ ಆಶ್ರಯ ನೀಡಿ,  ಅಡುಗೆಯನ್ನೂ ಮಾಡಿಕೊಡುತ್ತಿದ್ದ ಮತ್ತು ನಂತರ ಸಾಕ್ಷ್ಯಗಳನ್ನೂ ನಾಶಪಡಿಸಿದ್ದ. ಗೌರಿ ಹತ್ಯೆಯ ಬಳಿಕ ಹಂತಕರು ಹಾಕಿದ್ದ ಬಟ್ಟೆಗಳನ್ನು ವಿಲೇವಾರಿ ಮಾಡುವ ಕೆಲಸವನ್ನು ಸುರೇಶನಿಗೆ ವಹಿಸಲಾಗಿತ್ತು. ಮುಂದಿನ ದಿಗಳಲ್ಲಿ ಆತ ಅವುಗಳನ್ನು ನಗರದ ಬೇರೆ ಬೇರೆ ಭಾಗಗಳಲ್ಲಿ ಎಸೆದುಬಂದಿದ್ದ. ಸುರೇಶ ಕನಿಷ್ಟ 2008ರಿಂದ ಗೋವಾ ಮೂಲದ ‘ಹಿಂದೂತ್ವ’ ಸಂಘಟನೆಯ ಸಕ್ರಿಯ ಸದಸ್ಯನಾಗಿದ್ದು, ಅಮೋಲ್ ಕಾಳೆಯ ಹತ್ತಿರದ ಗೆಳೆಯನೂ ಆಗಿದ್ದ. ಬೇಗನೇ ಸಾಕ್ಷಿಯಾಗಿದ್ದ ಸುರೇಶ 11ನೇ ಆರೋಪಿಯಾದ.

10. ಅಂಕಲ್ ಮತ್ತು ತೋಟದಮನೆ

ಬಂಗೇರನ ಬಂಧನದ ನಂತರವೂ ಇನ್ನಷ್ಟು ಆರೋಪಿಗಳನ್ನು ಬಂಧಿಸುವುದು ಬಾಕಿಯಿತ್ತು. ಕಾಳೆಯ ಮನೆಯಲ್ಲಿ ವಶಪಡಿಸಿಕೊಂಡ ಡೈರಿಗಳು, ಕಸ್ಟಡಿಯಲ್ಲಿ ಆರೋಪಿಗಳ ವಿಚಾರಣೆಯ ವೇಳೆ ಒಬ್ಬ ‘ಅಂಕಲ್’ ಕಾಣಿಸಿಕೊಂಡಿದ್ದ. ಆತ ಈ ಗ್ಯಾಂಗಿನ ಸಭೆಗಳಲ್ಲಿ ಭಾಗವಹಿಸಿದ್ದ. ಅವನನ್ನು ‘ಟಮಾಟರ್’ ಅಂದರೆ ಟೊಮೆಟೊ ಎಂದೂ ಕರೆಯಲಾಗುತ್ತಿತ್ತು. ಯಾಕೆಂದರೆ, ಆತ ತರಕಾರಿ ಮಾರುತ್ತಿದ್ದನಂತೆ. ಆತ ಕುಂಬಳಗೋಡಿನ ಮನೆಯಲ್ಲಿ ಹಂತಕರ ಜೊತೆಗೂ ಇದ್ದ. ಗೌರಿಯವರಿಗೆ ಗುಂಡಿಕ್ಕಿದ ಬಳಿಕ ಪರಶುರಾಮ ವಾಘ್‌ಮೋರೆಯನ್ನು ನಗರದ ಹೊರವಲಯಕ್ಕೆ ಬಿಟ್ಟೂ ಬಂದಿದ್ದ. ಯಾರು ಈ ‘ಅಂಕಲ್’ ಎಂಬುದು ಎಸ್‌ಐಟಿಗೆ ಸಮಸ್ಯೆಯಾಯಿತು.

ಗಣೇಶ ಮಿಸ್ಕಿನ್‌ ಬಂಧನದಲ್ಲಿ ಆರೋಪಿಯೊಬ್ಬ ಪ್ರಮುಖ ಪಾತ್ರ ವಹಿಸಿದ್ದ. ವಿಚಾರಣೆಯ ವೇಳೆ ಆತ, ತಾವು ‘ಅಂಕಲ್’ನನ್ನು ಭೇಟಿಯಾದ ಜಾಗವನ್ನು ತೋರಿಸುವುದಾಗಿ ಹೇಳಿದ್ದ. ಅದರಂತೆಯೇ ಆತ ಎಸ್‌ಐಟಿ ಪೊಲೀಸರನ್ನು ಬೆಳಗಾವಿಯ ಖಾನಾಪುರದಲ್ಲಿರುವ ಮೂರೆಕರೆಯ ತೋಟದ ಮನೆಗೆ ಕರೆದೊಯ್ದ. ಅದೇ ತೋಟದ ಮನೆಯಲ್ಲಿ ರಾಜೇಶ್ ಬಂಗೇರ ಹತ್ಯೆ ಆರೋಪಿಗಳಿಗೆ, ಮತ್ತಿತರರಿಗೆ ತರಬೇತಿ ನೀಡಿದ್ದುದು. ಅಲ್ಲದೇ, ಹತ್ಯೆಯ ಯೋಜನೆ ರೂಪಿಸುವ ಹಲವು ಸಭೆಗಳು ನಡೆದಿದ್ದುದೂ ಇದೇ ತೋಟದ ಮನೆಯಲ್ಲಿ. ಈ ತೋಟದಮನೆ ಮಹಿಳೆಯೊಬ್ಬರ ಹೆಸರಿನಲ್ಲಿ ನೋಂದಣಿಯಾಗಿತ್ತು. ವಿಚಾರಣೆಯ ವೇಳೆ ಪೊಲೀಸರು ಆಕೆಯಿಂದ ಆಕೆಯ ಮಕ್ಕಳಿಬ್ಬರ ಫೊಟೋ ಪಡೆದರು. ಅವರಲ್ಲಿ ಒಬ್ಬನ ಫೊಟೋವನ್ನು ಮಿಸ್ಕಿನ್, ‘ಅಂಕಲ್’ಎಂದು ಗುರುತಿಸಿದ. ಅವನೇ ಭರತ್ ಕುರ್ಣೆ. ಆತ ಈ ಪ್ರಕರಣದಲ್ಲಿ ಬಂಧಿತನಾದ 11ನೇ ವ್ಯಕ್ತಿ.

11. ಪೂರ್ತಿ ಗುಡಿಸುವ ಕೆಲಸ
ಬಹುತೇಕ ಎಲ್ಲಾ ಸಂಚುಕೋರರನ್ನು ಬಂಧಿಸಲಾಗಿದ್ದರೂ, ಹತ್ಯೆ ಸಂಚಿನಲ್ಲಿ ಶಾಮೀಲಾದ ಎಲ್ಲರನ್ನೂ ಗುಡಿಸುವ ಕೆಲಸ ಇನ್ನೂ ಬಾಕಿಯಿತ್ತು. ವಿಚಾರಣೆಯ ವೇಳೆ ಆರೋಪಿಗಳು ಹತ್ಯೆಯ ವೇಳೆ ಬಳಸಿದ್ದ ಬೈಕ್ ಕಳವು, ಪಿಸ್ತೂಲಿನ ವಿಲೇವಾರಿ ಇತ್ಯಾದಿಗಳಲ್ಲಿ ಪಾಲುಗೊಂಡಿದ್ದ ಇನ್ನೂ ನಾಲ್ವರ ಹೆಸರುಗಳನ್ನು ಬಾಯಿಬಿಟ್ಟಿದ್ದರು. ಗೌರಿ ಹತ್ಯೆ ಮತ್ತು ಮಹಾರಾಷ್ಟ್ರದಲ್ಲಿ ನಡೆದಿದ್ದ ದಾಬೋಲ್ಕರ್ ಮತ್ತು ಪನ್ಸಾರೆ ಹತ್ಯೆಗಳ ನಡುವೆ ಸಂಬಂಧ ಇದ್ದುದರಿಂದ ಕರ್ನಾಟಕ ಎಸ್‌ಐಟಿ, ಮಹಾರಾಷ್ಟ್ರ ಪೊಲೀಸರೊಂದಿಗೆ ಈ ಮಾಹಿತಿಗಳನ್ನು ಹಂಚಿಕೊಂಡಿತ್ತು.

ಪರಿಣಾಮ ನಿರೀಕ್ಷೆ ಮೀರಿತ್ತು. ಮಹಾರಾಷ್ಟ್ರ ಭಯೋತ್ಪಾದಕ ವಿರೋಧಿ ದಳ (ಎಟಿಎಸ್), ಮುಂಬಯಿಯ ನಲಸೊಪಾರ ಮತ್ತು ಪುಣೆಯಲ್ಲಿ ನಡೆಸಿದ ದಾಳಿಯಲ್ಲಿ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರ ವಶವಾಗಿತ್ತು. ಅದರ ನಂತರ ನಡೆದ ಬಂಧನ ಸರಣಿಯಲ್ಲಿ ಕರ್ನಾಟಕ ಎಸ್‌ಐಟಿಗೆ ಬೇಕಾಗಿದ್ದ ನಾಲ್ವರೂ ಇದ್ದರು. ಅವರಲ್ಲೊಬ್ಬ, ವಾಸುದೇವ ಸೂರ್ಯವಂಶಿ. ಈತ ಮೋಟಾರ್ ಸೈಕಲ್ ಮೆಕ್ಯಾನಿಕ್ ಆಗಿದ್ದು, ಗೌರಿ ಹತ್ಯೆಗೆ ಬಳಸಿದ್ದ ಬೈಕ್ ಕದ್ದಿದ್ದ. ಇನ್ನೊಬ್ಬ ಶರದ್ ಕಾಲಸ್ಕರ್, ಗೌರಿ ಹತ್ಯೆಗೆ ಬಳಸಿದ್ದ ಪಿಸ್ತೂಲನ್ನು ವಿಲೇವಾರಿ ಮಾಡಿದ್ದ. ಶ್ರೀಕಾಂತ ಪಾಂಗರ್ಕರ್ ಸಂಚಿನ ಸಭೆಗಳಲ್ಲಿ ಭಾಗವಹಿಸಿದ್ದ. ಸುಧನ್ವ ಕಾಲಸ್ಕರ್ ಎಂಬಾತ ಹತ್ಯೆಯ ಸ್ಥಳದಲ್ಲಿ ಉಪಸ್ಥಿತನಿದ್ದ.

ಈ ನಾಲ್ವರ ಬಂಧನದೊಂದಿಗೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 16ಕ್ಕೇರಿತು. ಸಂಚಿನಲ್ಲಿ ಭಾಗವಹಿಸಿದ್ದ ವಿಕಾಸ್ ಪಾಟೀಲ್ ಮತ್ತು ರುಷಿಕೇಶ್ ದೇವ್ಡಿಕರ್ ಎಂಬಿಬ್ಬರ ಬಂಧನ ಬಾಕಿಯಿದೆ.

ಈ ಪ್ರಕರಣದಲ್ಲಿ ವಿಶೇಷ ತನಿಖಾ ತಂಡವು ಮೂಲ ಆರೋಪಪಟ್ಟಿಗೆ ಹೆಚ್ಚುವರಿಯಾಗಿ 9,235 ಪುಟಗಳ ವಿವರವಾದ ಆರೋಪಪಟ್ಟಿಯನ್ನೂ ಸಲ್ಲಿಸಿದೆ. ತೀರ್ಪು ನ್ಯಾಯಾಲಯದ ಕೈಯ್ಯಲ್ಲಿದೆ.

(ಮುಗಿಯಿತು)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...