Homeಅಂಕಣಗಳುಎಲೆಮರೆಕಡುಬಡತನದಲ್ಲಿ ಬೆಳೆದು ನೂರಾರು ಮಕ್ಕಳಿಗೆ ನೆರಳಾದ ಒಂದು ಹೆಮ್ಮರ 'ಸಂತೋಷ ಗುಡ್ಡಿಯಂಗಡಿ’

ಕಡುಬಡತನದಲ್ಲಿ ಬೆಳೆದು ನೂರಾರು ಮಕ್ಕಳಿಗೆ ನೆರಳಾದ ಒಂದು ಹೆಮ್ಮರ ‘ಸಂತೋಷ ಗುಡ್ಡಿಯಂಗಡಿ’

ಶಾಲಾ ಶಿಕ್ಷಣದಲ್ಲಿ ರಂಗಭೂಮಿ ಕಸಿ ಮಾಡುತ್ತಿರುವ ಸಂತೋಷ್ ಗುಡ್ಡಿಯಂಗಡಿಯವರ ಕುರಿತು ಒಂದಿಷ್ಟು...

- Advertisement -
- Advertisement -

ಎಲೆಮರೆ-5

-ಅರುಣ್ ಜೋಳದಕೂಡ್ಲಿಗಿ.

ಶಿವಾಜಿಯ ಆಡಳಿತವಿದ್ದಾಗ ಆತನ ಸೈನ್ಯದಲ್ಲಿದ್ದ ಒಂದು ಗುಂಪು ಆತನ  ಸಾವಿನ ನಂತರ ಸಾಗರದ ಕಡೆಗೆ ವಲಸೆ ಬರುತ್ತಾರೆ. ಇಲ್ಲಿ ಹವ್ಯಕರ ಮನೆಗಳಲ್ಲಿ ಕೆಲವು ಕಾಲ ಜೀತ ಮಾಡಿಕೊಂಡಿದ್ದು, ಕಾಲಾನಂತರ ಶಿವನ ಭಕ್ತರಾಗಿದ್ದ ಇವರು ಕರಾವಳಿಯ ಕೋಟೇಶ್ವರಕ್ಕೆ ಬಂದು ಅಲ್ಲಿನ ಕೆರೆಗೆ ತಾವು ಕಟ್ಟಿದ್ದ ಲಿಂಗವನ್ನು ಎಸೆದು ಮೀನು ತಿನ್ನಲು ಶುರುಮಾಡಿದ ಪುಟ್ಟ ಸಮುದಾಯವೆ ‘ಕೂಸಾಳ’. ಜೀತ ಮಾಡುವವರನ್ನು ಒಡೆಯರು ಮನೆಯ ಮಕ್ಕಳೆಂದು ಪ್ರೀತಿಯಿಂದ ಕರೆಯುತ್ತಾರೆಂದು ನಂಬಿಸಿರುವ ‘ಕೂಸಾಳು’ ಪದವೇ ಸಮುದಾಯಕ್ಕೂ ಬಂದಿರಬಹುದು. ಉಡುಪಿ, ಕಾರ್ಕಳ, ಕುಂದಾಪುರ ಮುಂತಾದ ಕಡೆಗಳಲ್ಲಿ ನೆಲೆಸಿದ ಕೂಸಾಳುಗಳು ದಲಿತ ಅಸ್ಪೃಶ್ಯ ಸಮುದಾಯಕ್ಕೆ ಸೇರಿದ್ದು, ಇದೀಗ ತಮ್ಮನ್ನು ಆದಿ ದ್ರಾವಿಡ ಎಂದು ಕರೆದುಕೊಳ್ಳುತ್ತಾರೆ.

ಈ ಕೂಸಾಳು ಸಮುದಾಯ ‘ಕೀಳು’ ಎನ್ನುವ ಭೂತವನ್ನು ಆರಾಧಿಸುತ್ತಾರೆ. ಮರದ ಬಳಿ ಇಟ್ಟಿರುವ ಕಲ್ಲೇ ದೈವ, ಈ ದೈವದ ಹೆಸರೇ ಕೀಳು. ಹೀಗೆ ತಮ್ಮದೇ ಆದ ಪುಟ್ಟ ದೈವದ ಮನೆಗಳನ್ನು ಕಟ್ಟಿಕೊಂಡು ಪೂಜೆ ಮಾಡುತ್ತ ತಮ್ಮ ಗುರುತನ್ನು ಕಾಪಿಟ್ಟುಕೊಂಡ ಪುಟ್ಟದಾದ ಕೂಸಾಳು ಸಮುದಾಯದ ಒಳಗಿಂದ ಅಕ್ಷರದ ಬೆಳಕಿನಲ್ಲಿ ನಡೆದುಕೊಂಡು ಬಂದವರು ಸಂತೋಷ್ ಗುಡ್ಡಿಯಂಗಡಿ.

“ಮಂತ್ರವಾದಿಯಾದ ತಾತ ಸಾಗರ – ಶಿವಮೊಗ್ಗದ ಕಡೆಯ ಘಟ್ಟಕ್ಕೆ ಹೋಗುವಾಗ ಕೊಲ್ಲೂರು ಕಾಡಲ್ಲಿ ರಾತ್ರಿಯಾಗುತ್ತದೆ. ಆಗ ಮಂತ್ರಶಕ್ತಿಯಿಂದ ಎರಡು ಹುಲಿಗಳನ್ನು ವಶಮಾಡಿಕೊಂಡು ತನ್ನ ಕಾಲು ಮತ್ತು ತಲೆಯ ಬಳಿ ಕಾವಲಿಗಿರಿಸಿ ಅಜ್ಜ ಮಲಗುತ್ತಾನೆ. ದಾರಿಹೋಕ ಬ್ರಿಟೀಷ್ ಅಧಿಕಾರಿ ಅಜ್ಜನನ್ನು ನೋಡುತ್ತಾನೆ. ಈ ಮನುಷ್ಯ ಅಸಾಮಾನ್ಯ, ಇಂತವರು ನಮ್ಮ ವಿರುದ್ಧ ತಿರುಗಿಬಿದ್ದರೆ ಕಷ್ಟವೆಂದು ಆ ಮಂತ್ರವಾದಿಯನ್ನು ಏಳು ಗುಂಡಿಟ್ಟು ಕೊಂದರಂತೆ. ಅಜ್ಜಿಯ ಮೇಲೆ ಭೂತ ಬಂದು ಮೈಮೇಲೆ ಅಳಕೊಂಡು ಈ ಕತೆಯನ್ನು ಹೇಳುತ್ತಿದ್ದರು” ಎನ್ನುತ್ತ ತನ್ನ ಮುತ್ತಾತನ ಕತೆ ಹೇಳುವ ಸಂತೋಷ ತನ್ನ ಸಮುದಾಯದ ಕಥನಗಳನ್ನು ಒಡಲೊಳಗಿಟ್ಟುಕೊಂಡ ಯುವಕ.

ನಂದನ್ ನೀಲೆಕಣಿ ಅವರ ಶಿರಸಿಯ ಕಡೆ ತೋಟದಲ್ಲಿ ಜೀತ ಮಾಡುತ್ತಿದ್ದ ತಂದೆತಾಯಿಯ ಮಗನಾದ ಸಂತೋಷ್, ಪಿಯುಸಿ ಫೇಲಾಗಿ ಮನೆಯಲ್ಲಿ ಸುಳ್ಳು ಹೇಳಿ, 4 ವರ್ಷ ಗಾರೆ ಕೆಲಸ ಮಾಡುತ್ತಾನೆ. ಹಿಮಕರ ಎನ್ನುವವರ ಸಂಪರ್ಕ ಸಿಕ್ಕು ‘ನಮ್ಮ ಭೂಮಿ’ ಸಂಸ್ಥೆಯ ಬೀದಿನಾಟಕಕ್ಕೆ ಸಂತೋಷ್ ಅವರನ್ನು ಪರಿಚಯಿಸುತ್ತಾರೆ. ನಂತರ ಮುರಾರಿ ಬಲ್ಲಾಳ್ ಎನ್ನುವವರು ನೀನಾಸಂಗೆ ದಾರಿ ತೋರುತ್ತಾರೆ. ನೀನಾಸಂ ತಿರುಗಾಟದಲ್ಲಿ ಮೂರು ವರ್ಷ ಓಡಾಟ ಮಾಡಿ, ಕುಂದಾಪುರದ ರಂಗ ಅಧ್ಯಯನ ಕೇಂದ್ರದಲ್ಲಿ ಒಂದು ವರ್ಷ ಮೇಷ್ಟ್ರಾಗಿ ಕೆಲಸ ಮಾಡುತ್ತಾರೆ. ಅದೇ ಹೊತ್ತಿಗೆ 2009 ರಲ್ಲಿ ಸರಕಾರಿ ಪ್ರೌಢಶಾಲೆಯ ನಾಟಕದ ಮೇಷ್ಟ್ರಾಗಿ ಕೆಲಸಕ್ಕೆ ಸೇರುತ್ತಾರೆ. ಇದೀಗ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಹೆಗ್ಗಡಹಳ್ಳಿ ಸರಕಾರಿ ಪ್ರೌಢಶಾಲೆಯಲ್ಲಿ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಾ ಒಂದು ದಶಕ ಪೂರೈಸಿದ್ದಾರೆ.

ಶಾಲೆಗಳಲ್ಲಿ ರಂಗಶಿಕ್ಷಣಕ್ಕೆ ಇಂತದ್ದೇ ಮಾದರಿಯಿಲ್ಲ. ಆಯಾ ಶಾಲೆಯಲ್ಲಿ ಆಯ್ಕೆಯಾದ ರಂಗಶಿಕ್ಷಕರು ತಮ್ಮ ಕ್ರಿಯಾಶೀಲತೆ, ಹೊಸತನದಿಂದ ತಾವೇ ಮಾದರಿಗಳನ್ನು ರೂಪಿಸಬೇಕು. ಒಂದು ದಶಕದಲ್ಲಿ ಸಂಶೋಷ್ ಅವರು ರಂಗ ಶಿಕ್ಷಕರಾಗಿ ನಡೆಸಿದ ಪ್ರಯೋಗಗಳು ನಿಜಕ್ಕೂ ಅತ್ಯುತ್ತಮ ರಂಗಶಿಕ್ಷಣದ ಮಾದರಿಗಳಾಗಿವೆ. ಇಡೀ ಶಾಲೆಯನ್ನೇ ಒಂದು ರಂಗಮಂದಿರವನ್ನಾಗಿಸಿ, ಮಕ್ಕಳನ್ನು ರಂಗಭೂಮಿಯ ಕಣ್ಣೋಟದಿಂದ ಲೋಕವನ್ನು ನೋಡುವ ಮಾದರಿ ರೂಪಿಸಿದ್ದಾರೆ. ಈ ಪ್ರಯೋಗದಲ್ಲಿ ಮಕ್ಕಳಿಂದ ಈತನಕ 25 ನಾಟಕಗಳನ್ನು ಮಾಡಿಸಿದ್ದಾರೆ. ಸಂತೋಷ್ ಅವರು ‘ಸನಿಮಾತ್ಮೆ’ ಮತ್ತು ‘ಗಾಯ’ ಎನ್ನುವ ನಾಟಕಗಳನ್ನು ಬರೆದಿದ್ದಾರೆ. ಮಕ್ಕಳಿಗಾಗಿಯೇ ‘ಹುಲಿಯಜ್ಜ’, ‘ತಿಕ್ಕಲು ರಾಜ ತಿರಬೋಕಿ ರಾಜ್ಯ’, ‘ಭೂಮಿಗೆ ಜ್ವರ ಬಂದಿದೆ’, ‘ಜಟ್ರೋಫ ಎಂಬ ವರ’, ‘ಮಾಯದ ಡಬ್ಬಿ’, ‘ಪ್ಲಾಸ್ಟಿಕ್ ರಾಕ್ಷಸ’, ‘ಕಾಮನಬಿಲ್ಲಿನ ಸೈನಿಕರು’, ‘ಕಪ್ಪು ವಜ್ರ’ ನಾಟಕಗಳನ್ನು ಮಾಡಿಸಿದ್ದಾರೆ.

ಹೆಮ್ಮರಗಾಲ ಶಾಲೆಯಲ್ಲಿದ್ದಾಗ ಶಾಲಾ ಮಕ್ಕಳ ಬರಹಗಳನ್ನೊಳಗೊಂಡ “ಹೆಮ್ಮರ” ಕೈಬರಹದ ಮಾಸಿಕವನ್ನು ಸಂತೋಷ್‌ರವರು ಬಹಳ ವರ್ಷ ಪ್ರಕಟಿಸಿದ್ದಾರೆ. ಅದು ಮಕ್ಕಳ ವಿಶೇಷ ಪ್ರತಿಭೆಯನ್ನು ಅನಾವರಣಗೊಳಿಸಲು, ಮಕ್ಕಳಲ್ಲಿ ಓದಲು, ಬರೆಯಲು ದೊಡ್ಡ ಸ್ಫೂರ್ತಿಯನ್ನು ನೀಡಿತ್ತು.

ಸ್ವೀಡನ್‌ನ 16 ವರ್ಷದ ಶಾಲಾ ಬಾಲಕಿ ಗ್ರೇಟಾ ಥನ್ಬರ್ಗ್ ಹವಾಮಾನ ವೈಪರೀತ್ಯ ಕಂಡು 2018 ರಲ್ಲಿ ‘ಸ್ಕೂಲ್ ಸ್ಟ್ರೈಕ್ ಫಾರ್ ಕ್ಲೈಮೆಟ್/ ಪ್ರೈಡೇಸ್ ಫಾರ್ ಫ್ಯೂಚರ್’ ಅಭಿಯಾನ ಆರಂಭಿಸಿದಳು. ಸೆಪ್ಟಂಬರ್ 23 ರಂದು ವಿಶ್ವಸಂಸ್ಥೆಯ ಶೃಂಗಸಭೆಯಲ್ಲಿ ‘ನಿಮಗೆಷ್ಟು ಧೈರ್ಯ’? ನೀವು ನಿಮ್ಮ ಖಾಲಿ ಮಾತುಗಳಿಂದ ನನ್ನ ಬಾಲ್ಯ, ಕನಸುಗಳನ್ನು ಚೂರಾಗಿಸಿದ್ದೀರಿ ಎಂದು ಜಾಗತಿಕ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಳು. ಗ್ರೇಟಾ ಪ್ರಭಾವದಿಂದ ಸಂತೋಷ್ ತಮ್ಮ ಶಾಲೆಯ ಮಕ್ಕಳಲ್ಲಿ ಪರಿಸರದ ಅರಿವು ಮೂಡಿಸಿ ‘ನಾಳೆಗಳು ನಮ್ಮದು’ ಎನ್ನುವ ಧ್ಯೇಯವಾಕ್ಯದೊಂದಿಗೆ ‘ನಿಮ್ಮ ಕಸ ನಿಮಗೆ’ ಎಂಬ ಅಭಿಯಾನವನ್ನು ಆರಂಭಿಸಿದರು. ಉತ್ಪಾದಕ ಕಂಪನಿಗಳಿಗೇ ಅವರ ಪ್ಲಾಸ್ಟಿಕ್ ಕಸವನ್ನು ಪೋಸ್ಟ್ ಮಾಡುವ ವಿಶಿಷ್ಟ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಕಾರಣಕ್ಕೆ ಹೆಗ್ಗಡನಳ್ಳಿ ಮಕ್ಕಳು ರಾಜ್ಯವ್ಯಾಪಿ ಗಮನ ಸೆಳೆಯುತ್ತಿದ್ದಾರೆ. ಇದು ಇಡೀ ದೇಶಕ್ಕೆ ಮಾದರಿಯಾಗಿದೆ.

ಸಂತೋಷ್ ಒಳ್ಳೆಯ ಕಥೆಗಾರ ಕೂಡ. ಅವರ ‘ಕೊರಬಾಡು’ ಕಥಾಸಂಕಲನ ಭಿನ್ನ ಪ್ರಯೋಗ. ಅಷ್ಟು ಚರ್ಚೆಗೆ ಬಾರದ ಈ ಸಂಕಲನದಲ್ಲಿ ದೇವನೂರು ಮಾದರಿಯ ಕಥನ ಶೈಲಿಯನ್ನು ಅನುಕರಿಸುತ್ತಲೇ ಅದನ್ನು ಮೀರಲು ಪ್ರಯತ್ನಿಸಲಾಗಿದೆ. ಬಹುಶಃ ದೇವನೂರೋತ್ತರ ನಂಜನಗೂಡಿನ ಜನರ ನುಡಿಗಟ್ಟನ್ನು ಸಂತೋಷ್ ಅವರ ಕತೆಗಳಲ್ಲಿ ಕಾಣಬಹುದು. ಕಥನ ಶೈಲಿಯಲ್ಲಿಯೂ ದೇವನೂರರ ಮಾದರಿಯನ್ನು ಹೊಸದಾಗಿ ವಿಸ್ತರಿಸಲು ಪ್ರಯತ್ನಿಸಿದ್ದಾರೆ. ಸಂತೋಷ್ ನಾಟಕದ ಹಿನ್ನೆಲೆಯವರಾದ ಕಾರಣ ಈ ಕತೆಗಳಲ್ಲಿನ ನಾಟಕೀಯ ಗುಣ ವಿಶಿಷ್ಟವಾಗಿ ಮೂಡಿಬಂದಿದೆ. ಹೊಸ ತಲೆಮಾರಿನ ಬರಹಗಾರರು ಓದಲೇಬೇಕಾದ ಕಥಾ ಸಂಕಲನವಿದು. ಹೀಗೆ ಸಂತೋಷ್ ತನ್ನದೇ ಲೋಕದಲ್ಲಿ ನಡೆಸುತ್ತಿರುವ ಕ್ರಿಯಾಶೀಲ ಚಟುವಟಿಕೆಗಳು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಮಹತ್ವದ್ದಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

3 COMMENTS

  1. ನಮ್ಮೂರ ಸಂತೋಷ್ ಗುಡ್ಡಿಯಂಗಡಿಯವರ ಕುರಿತು ಹೆಮ್ಮೆಯೆನಿಸುತ್ತದೆ. ಲೇಖನಕ್ಕಾಗಿ ಧನ್ಯವಾದಗಳು.

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...