Homeಕರ್ನಾಟಕಗೌರಿ ಹತ್ಯೆಯ ತನಿಖೆ ನಡೆದದ್ದು ಹೇಗೆ? ಈಗ ಎಲ್ಲಿಯವರೆಗೂ ಬಂದಿದೆ? ಕೊನೆಯ ಭಾಗ ಓದಿ

ಗೌರಿ ಹತ್ಯೆಯ ತನಿಖೆ ನಡೆದದ್ದು ಹೇಗೆ? ಈಗ ಎಲ್ಲಿಯವರೆಗೂ ಬಂದಿದೆ? ಕೊನೆಯ ಭಾಗ ಓದಿ

ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 16ಕ್ಕೇರಿದೆ. ಸಂಚಿನಲ್ಲಿ ಭಾಗವಹಿಸಿದ್ದ ವಿಕಾಸ್ ಪಾಟೀಲ್ ಮತ್ತು ರುಷಿಕೇಶ್ ದೇವ್ಡಿಕರ್ ಎಂಬಿಬ್ಬರ ಬಂಧನ ಬಾಕಿಯಿದೆ.

- Advertisement -
- Advertisement -

ಭಾಗ-3  ಕೃಪೆ: ದಿ ಕ್ವಿಂಟ್
ನಿರೂಪಣೆ: ನಿಖಿಲ್ ಕೋಲ್ಪೆ

ಭಾಗ 1: ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ಕರ್ನಾಟಕ ವಿಶೇಷ ತನಿಖಾ ದಳ (SIT) ಭೇದಿಸಿದ್ದಾದರೂ ಹೇಗೆ?

ಭಾಗ-2 : ಗೌರಿ ಹತ್ಯೆಯ ತನಿಖೆಯ ಜಾಡು ಹಿಡಿದು ಹೊರಟಾಗ ಸಿಕ್ಕ ರೋಚಕ ಸತ್ಯಗಳು…

7. ಅಕ್ಯುಪಂಕ್ಚರ್ ‘ಸಂಪಾ’

ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಿದ ಪ್ರಕರಣದ ಎಲ್ಲಾ ಆರೋಪಿಗಳನ್ನು ಎಸ್‌ಐಟಿ ಬಂಧಿಸಿದರೂ, ಈ ಸಂಚಿನಲ್ಲಿ ಭಾಗಿಯಾಗಿ ಸಹಕರಿಸಿದ ಇತರರನ್ನು ಗುಡಿಸಿ, ಕಸದಬುಟ್ಟಿಗೆ ಹಾಕುವ ಕೆಲಸ ಬಾಕಿ ಉಳಿದಿತ್ತು. ವಿಚಾರಣೆಯ ವೇಳೆ, ತಾನು ಮತ್ತು ಇತರ ಮೂವರು ಗೌರಿಹತ್ಯೆಗೆ ಮುನ್ನ ವಾಸಿಸುತ್ತಿದ್ದ ಬೆಂಗಳೂರು ಹೊರವಲಯದ ಕುಂಬಳಗೋಡಿನಲ್ಲಿರುವ ಅಕ್ಯುಪಂಕ್ಚರ್ ಸೆಂಟರ್ ಬಗ್ಗೆ ಪರಶುರಾಮ ವಾಘ್‌ಮೋರೆ ಎಸ್‌ಐಟಿಗೆ ತಿಳಿಸಿದ. ಆತ, ಅಮೋಲ್ ಕಾಳೆ ವಾಸಿಸುತ್ತಿದ್ದ ಗೌರಿಯವರ ಮನೆಗೆ ಹತ್ತಿರವಿರುವ ಸುರೇಶ ಎಂಬಾತನ ಮನೆಯ ಬಗ್ಗೆಯೂ ತಿಳಿಸಿದ.

ಈ ಮಾಹಿತಿ ಪಡೆದ ಎಸ್‌ಐಟಿ, ಮೊದಲಿಗೆ ಅಕ್ಯುಪಂಕ್ಚರ್ ಸೆಂಟರ್ ನಡೆಸುತ್ತಿದ್ದ ಮನೆಗೆ ದಾಳಿ ನಡೆಸಿತು. ಅಲ್ಲಿ ಯಾರೂ ಇರಲಿಲ್ಲ. ಅಲ್ಲಿ ಸಿಕ್ಕಿದ ಡೈರಿಯಲ್ಲಿ ಮೊಬೈಲ್ ನಂಬರುಗಳಿಗಾಗಿ ಹುಡುಕುತ್ತಿದ್ದಾಗ, ಒಂದು ನಂಬರು ಸಿಕ್ಕಿತು. ಅದರ ಮುಂದೆ ಎಂ.ಎನ್. ಸಂಪಾ ಎಂದಿತ್ತು. ಇದೆಂತಹ ಹೆಸರು ಎಂದು ಪೊಲೀಸರು ತಲೆಕೆಡಿಸಿಕೊಂಡರು. ಅದು ಸಂಕೇತ ಭಾಷೆಯಾಗಿತ್ತು. ಪೊಲೀಸರು ಆ ನಂಬರಿನ ಕಾಲ್ ಡಿಟೈಲ್‌ ಹುಡುಕಿದಾಗ ಅಲ್ಲಿ ಎರಡು ಬೆಂಗಳೂರಿನ ನಂಬರುಗಳು ಸಿಕ್ಕಿದವು. ಅವು ಇಬ್ಬರು ರಿಯಲ್ ಎಸ್ಟೇಟ್ ಏಜೆಂಟುಗಳ ನಂಬರುಗಳಾಗಿದ್ದವು. ಅವರಲ್ಲೊಬ್ಬ ತಾನು ಆ ಮನೆಯನ್ನು ಅಕ್ಯುಪಂಕ್ಚರ್ ಸೆಂಟರ್ ನಡೆಸುವುದಕ್ಕಾಗಿ ವ್ಯಕ್ತಿಯೊಬ್ಬನಿಗೆ ಬಾಡಿಗೆಗೆ ಕೊಟ್ಟಿದ್ದುದಾಗಿ ಹೇಳಿದ.

ಆರೋಪಿಗಳನ್ನು ನ್ಯಾಯಾಲಯಕ್ಕೆ ಕರೆದೊಯ್ಯುವಾಗ

ಆ ಮೊಬೈಲನ್ನು ಕೊನೆಯ ಬಾರಿಗೆ ದಕ್ಷಿಣ ಕನ್ನಡ ಗಡಿಯಲ್ಲಿ, ಕೊಡಗಿನಲ್ಲಿರುವ ಸಂಪಾಜೆ ಗ್ರಾಮದಲ್ಲಿ ಬಳಸಿದ್ದು ಪೊಲೀಸರಿಗೆ ತಿಳಿಯಿತು. ಆಗ ಅವರಿಗೆ ಗೊತ್ತಾಯಿತು- ಸಂಪಾ ಎಂದರೆ ವ್ಯಕ್ತಿಯಲ್ಲ, ಊರು ಎಂದು. ಎಂ.ಎನ್. ಎಂದರೆ ಆ ವ್ಯಕ್ತಿಯ ಹೆಸರು ಎಂದು ಊಹಿಸುವುದು ಸುಲಭವಾಗಿತ್ತು. ಪೊಲೀಸರು ಸಂಪಾಜೆ ತಲಪಿ, ಅಲ್ಲಿ ಅಕ್ಯುಪಂಕ್ಚರ್ ಬಲ್ಲವರ ಬಗ್ಗೆ ವಿಚಾರಿಸಲು ಆರಂಭಿಸಿದರು. ಸ್ವಲ್ಪ ಸಮಯದಲ್ಲೇ ‘ಸಂಪಾ’ ಬಲೆಗೆ ಬಿದ್ದ. ಅವನ ಹೆಸರು ಮೋಹನ್ ನಾಯಕ್ ಎಂದಾಗಿತ್ತು. ಮೂವರು ಹಂತಕರು ಪರಶುರಾಮ ವಾಘ್‌ಮೋರೆ, ಗಣೇಶ ಮಿಸ್ಕಿನ್ ಮತ್ತು ಅಮಿತ್ ಬಡ್ಡಿ ಯಾವುದೇ ಗಮನ ಸೆಳೆಯದಂತೆ ವಾಸಿಸಲು ಅನುಕೂಲಕ್ಕಾಗಿ, ಅಮೋಲ್ ಕಾಳೆಯ ಸೂಚನೆಯಂತೆ ತಾನು ಆ ಮನೆಯನ್ನು ಬಾಡಿಗೆಗೆ ಪಡೆದು ಅಕ್ಯುಪಂಕ್ಚರ್ ಸೆಂಟರ್ ತೆರೆದುದಾಗಿ ಮನೋಹರ ನಾಯಕ್ ಒಪ್ಪಿಕೊಂಡ.

8. ರಾಜೇಶ್‌ ಬಂಗೇರಾ

ಪೊಲೀಸರ ಮುಂದಿದ್ದ ಒಂದು ಒಗಟೆಂದರೆ, ಪಿಸ್ತೂಲು ಬಳಕೆಯ ಬಗ್ಗೆ ತರಬೇತಿ ನೀಡಿದವರು ಯಾರು ಎಂಬುದು. ಅಮೋಲ್ ಕಾಳೆ ಸೇರಿದಂತೆ ಎಲ್ಲಾ ಆರೋಪಿಗಳು ಆತನನ್ನು ‘ಸರ್’ ಎಂದು ಕರೆಯುತ್ತಿದ್ದರು. ಮತ್ತೆ ವಶಪಡಿಸಿಕೊಳ್ಳಲಾದ ಡೈರಿಗಳು ನೆರವಿಗೆ ಬಂದವು. ಅವುಗಳೊಂದರಲ್ಲಿ ಈ ‘ಸರ್’ ಇದ್ದ. ಅದರ ಮುಂದೆ ಇದ್ದ ಮೊಬೈಲ್ ನಂಬರ್ ಕೊಡಗಿನದ್ದೆಂದು ಎಸ್‌ಐಟಿಗೆ ಗೊತ್ತಾಯಿತು.

ಮನೋಹರ ನಾಯಕ್ ಕೂಡಾ ಕೊಡಗಿನವನೇ ಆಗಿರುವುದರಿಂದ ಅವನಿಗೆ ಈತನ ಸಂಪರ್ಕವಿರಬೇಕು ಎಂದು ತರ್ಕಿಸಿದ ಎಸ್‌ಐಟಿ, ಆತನ ಕಾಲ್ ರೆಕಾರ್ಡ್‌ನ ವಿಶ್ಲೇಷಣೆ ನಡೆಸಿದಾಗ, ಒಂದು ಹೆಸರು ಎದ್ದು ಕಾಣುತ್ತಿತ್ತು. ಯಾಕೆಂದರೆ, ಅವರಿಬ್ಬರೂ ಆಗಿಂದಾಗ್ಗೆ ಮಾತಾಡುತ್ತಿದ್ದರು. ಆ ವ್ಯಕ್ತಿಯ ಹೆಸರು ರಾಜೇಶ್ ಬಂಗೇರ ಎಂದಾಗಿತ್ತು. ಆತನನ್ನು ಬಂಧಿಸಲಾಯಿತು.

ವಿಚಾರಣೆಯ ವೇಳೆ, ತಾನು ಇತರ ಆರೋಪಿಗಳಿಗೆ ಬೆಳಗಾವಿ ಜಿಲ್ಲೆಯ ತೋಟದ ಮನೆಯೊಂದರಲ್ಲಿ ಪಿಸ್ತೂಲು ಬಳಸುವ ತರಬೇತಿ ನೀಡಿದುದಾಗಿಯೂ, ತಾನು 1990ರ ದಶಕದಲ್ಲಿ ‘ಸನಾತನ ಸಂಸ್ಥೆ’ ಎಂಬ ಸಂಘಟನೆ ಸೇರಿದ್ದು, ಆ ಸಂಸ್ಥೆಯು ಶಸ್ತ್ರಾಸ್ತ್ರ ತರಬೇತಿ ನೀಡಿದ್ದವರಲ್ಲಿ ತಾನೂ ಒಬ್ಬ ಎಂದು ರಾಜೇಶ್ ಬಂಗೇರ ತಿಳಿಸಿದ. ತಾನು ಈ ತರಬೇತಿಯಲ್ಲಿ ಅತ್ಯುತ್ತಮವಾಗಿದ್ದುದರಿಂದ, ಹೊಸದಾಗಿ ಸಂಘಟನೆ ಸೇರಿದವರಿಗೆ ತರಬೇತಿ ನೀಡುತ್ತಿದ್ದೆ ಎಂದು ಆತ ತಿಳಿಸಿದ. ಇದಕ್ಕೂ ಹೆಚ್ಚಾಗಿ, ನರೇಂದ್ರ ದಾಬೋಲ್ಕರ್ ಮತ್ತು ಎಂ‌.ಎಂ. ಕಲಬುರ್ಗಿಯವರ ಹಂತಕರಿಗೆ ತರಬೇತಿ ನೀಡಿದವನು ತಾನೇ ಎಂದು ಹೇಳಿಕೊಂಡನಾದರೂ, ಅವರ ಬಗ್ಗೆ ತನಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ.

9. ಆರೋಪಿಯಾಗಿ ಬದಲಾದ ಸಾಕ್ಷಿ

ಎರಡು ಮನೆಗಳು ಈಗ ತನಿಖೆಗೆ ಮುಖ್ಯವಾಗಿದ್ದವು. ಅವುಗಳಲ್ಲಿ ಒಂದಾದ ಕುಂಬಳಗೋಡಿನ ಮನೆ ಹಂತಕರು ವಾಸಿಸುತ್ತಿದ್ದದ್ದು. ಎರಡನೇ ಮನೆ ಸೀಗೆಹಳ್ಳಿಯಲ್ಲಿ ಅಮೋಲ್ ಕಾಳೆ ಮತ್ತು ಇತರರು ವಾಸಿಸುತ್ತಿದ್ದದ್ದು. ಕುಂಬಳಗೋಡಿನ ಮನೆ ವಿಷಯ ಆಗಲೇ ಗೊತ್ತಿದ್ದುದರಿಂದ, ಎಸ್‌ಐಟಿಯವರು ಸೀಗೆಹಳ್ಳಿಯ ಮನೆಗೆ ಹೋದರು. ಅದು ಎಚ್.ಎಲ್. ಸುರೇಶ್ ಎಂಬವನದ್ದಾಗಿತ್ತು. ತಾನು ಕೇವಲ ಮನೆ ಮಾಲಕನಾಗಿದ್ದು, ತನಗೆ ಈ ಸಂಚಿನ ಬಗ್ಗೆ ಏನೇನೂ ಗೊತ್ತಿಲ್ಲ ಎಂದು ಆತ ಹೇಳಿದ. ಎಸ್‌ಐಟಿ ಆತನ ಮಾತುಗಳನ್ನು ನಂಬಿತು ಮತ್ತು ಅತನನ್ನು ಈ ಪ್ರಕರಣದಲ್ಲಿ ಸಾಕ್ಷಿಯಾಗಿ ಮಾಡಿತು. ಆತ, ತಾನು ಈ ಪ್ರಕರಣದ ಸಾಕ್ಷಿ ಎಂದು ಸಿಆರ್‌ಪಿಸಿ ವಿಧಿ 164ರ ಅನ್ವಯ ಮ್ಯಾಜಿಸ್ಟ್ರೇಟ್ ಒಬ್ಬರ ಮುಂದೆ ಹೇಳಿಕೆಯನ್ನೂ ದಾಖಲಿಸಿದ.

ಆದರೆ ಇನ್ನಷ್ಟು ಬಂಧನಗಳು ನಡೆದಾಗ ಆತನ ಬಣ್ಣ ಬಯಲಾಯಿತು. ಈ ಸುರೇಶ ಕೂಡಾ ಸಂಚಿನ ಪಾಲುದಾರನಾಗಿದ್ದ. ಎಸ್‌ಐಟಿ ಹೇಳುವಂತೆ ಸುರೇಶ, ಆರೋಪಿಗಳಿಗೆ ಆಶ್ರಯ ನೀಡಿ,  ಅಡುಗೆಯನ್ನೂ ಮಾಡಿಕೊಡುತ್ತಿದ್ದ ಮತ್ತು ನಂತರ ಸಾಕ್ಷ್ಯಗಳನ್ನೂ ನಾಶಪಡಿಸಿದ್ದ. ಗೌರಿ ಹತ್ಯೆಯ ಬಳಿಕ ಹಂತಕರು ಹಾಕಿದ್ದ ಬಟ್ಟೆಗಳನ್ನು ವಿಲೇವಾರಿ ಮಾಡುವ ಕೆಲಸವನ್ನು ಸುರೇಶನಿಗೆ ವಹಿಸಲಾಗಿತ್ತು. ಮುಂದಿನ ದಿಗಳಲ್ಲಿ ಆತ ಅವುಗಳನ್ನು ನಗರದ ಬೇರೆ ಬೇರೆ ಭಾಗಗಳಲ್ಲಿ ಎಸೆದುಬಂದಿದ್ದ. ಸುರೇಶ ಕನಿಷ್ಟ 2008ರಿಂದ ಗೋವಾ ಮೂಲದ ‘ಹಿಂದೂತ್ವ’ ಸಂಘಟನೆಯ ಸಕ್ರಿಯ ಸದಸ್ಯನಾಗಿದ್ದು, ಅಮೋಲ್ ಕಾಳೆಯ ಹತ್ತಿರದ ಗೆಳೆಯನೂ ಆಗಿದ್ದ. ಬೇಗನೇ ಸಾಕ್ಷಿಯಾಗಿದ್ದ ಸುರೇಶ 11ನೇ ಆರೋಪಿಯಾದ.

10. ಅಂಕಲ್ ಮತ್ತು ತೋಟದಮನೆ

ಬಂಗೇರನ ಬಂಧನದ ನಂತರವೂ ಇನ್ನಷ್ಟು ಆರೋಪಿಗಳನ್ನು ಬಂಧಿಸುವುದು ಬಾಕಿಯಿತ್ತು. ಕಾಳೆಯ ಮನೆಯಲ್ಲಿ ವಶಪಡಿಸಿಕೊಂಡ ಡೈರಿಗಳು, ಕಸ್ಟಡಿಯಲ್ಲಿ ಆರೋಪಿಗಳ ವಿಚಾರಣೆಯ ವೇಳೆ ಒಬ್ಬ ‘ಅಂಕಲ್’ ಕಾಣಿಸಿಕೊಂಡಿದ್ದ. ಆತ ಈ ಗ್ಯಾಂಗಿನ ಸಭೆಗಳಲ್ಲಿ ಭಾಗವಹಿಸಿದ್ದ. ಅವನನ್ನು ‘ಟಮಾಟರ್’ ಅಂದರೆ ಟೊಮೆಟೊ ಎಂದೂ ಕರೆಯಲಾಗುತ್ತಿತ್ತು. ಯಾಕೆಂದರೆ, ಆತ ತರಕಾರಿ ಮಾರುತ್ತಿದ್ದನಂತೆ. ಆತ ಕುಂಬಳಗೋಡಿನ ಮನೆಯಲ್ಲಿ ಹಂತಕರ ಜೊತೆಗೂ ಇದ್ದ. ಗೌರಿಯವರಿಗೆ ಗುಂಡಿಕ್ಕಿದ ಬಳಿಕ ಪರಶುರಾಮ ವಾಘ್‌ಮೋರೆಯನ್ನು ನಗರದ ಹೊರವಲಯಕ್ಕೆ ಬಿಟ್ಟೂ ಬಂದಿದ್ದ. ಯಾರು ಈ ‘ಅಂಕಲ್’ ಎಂಬುದು ಎಸ್‌ಐಟಿಗೆ ಸಮಸ್ಯೆಯಾಯಿತು.

ಗಣೇಶ ಮಿಸ್ಕಿನ್‌ ಬಂಧನದಲ್ಲಿ ಆರೋಪಿಯೊಬ್ಬ ಪ್ರಮುಖ ಪಾತ್ರ ವಹಿಸಿದ್ದ. ವಿಚಾರಣೆಯ ವೇಳೆ ಆತ, ತಾವು ‘ಅಂಕಲ್’ನನ್ನು ಭೇಟಿಯಾದ ಜಾಗವನ್ನು ತೋರಿಸುವುದಾಗಿ ಹೇಳಿದ್ದ. ಅದರಂತೆಯೇ ಆತ ಎಸ್‌ಐಟಿ ಪೊಲೀಸರನ್ನು ಬೆಳಗಾವಿಯ ಖಾನಾಪುರದಲ್ಲಿರುವ ಮೂರೆಕರೆಯ ತೋಟದ ಮನೆಗೆ ಕರೆದೊಯ್ದ. ಅದೇ ತೋಟದ ಮನೆಯಲ್ಲಿ ರಾಜೇಶ್ ಬಂಗೇರ ಹತ್ಯೆ ಆರೋಪಿಗಳಿಗೆ, ಮತ್ತಿತರರಿಗೆ ತರಬೇತಿ ನೀಡಿದ್ದುದು. ಅಲ್ಲದೇ, ಹತ್ಯೆಯ ಯೋಜನೆ ರೂಪಿಸುವ ಹಲವು ಸಭೆಗಳು ನಡೆದಿದ್ದುದೂ ಇದೇ ತೋಟದ ಮನೆಯಲ್ಲಿ. ಈ ತೋಟದಮನೆ ಮಹಿಳೆಯೊಬ್ಬರ ಹೆಸರಿನಲ್ಲಿ ನೋಂದಣಿಯಾಗಿತ್ತು. ವಿಚಾರಣೆಯ ವೇಳೆ ಪೊಲೀಸರು ಆಕೆಯಿಂದ ಆಕೆಯ ಮಕ್ಕಳಿಬ್ಬರ ಫೊಟೋ ಪಡೆದರು. ಅವರಲ್ಲಿ ಒಬ್ಬನ ಫೊಟೋವನ್ನು ಮಿಸ್ಕಿನ್, ‘ಅಂಕಲ್’ಎಂದು ಗುರುತಿಸಿದ. ಅವನೇ ಭರತ್ ಕುರ್ಣೆ. ಆತ ಈ ಪ್ರಕರಣದಲ್ಲಿ ಬಂಧಿತನಾದ 11ನೇ ವ್ಯಕ್ತಿ.

11. ಪೂರ್ತಿ ಗುಡಿಸುವ ಕೆಲಸ
ಬಹುತೇಕ ಎಲ್ಲಾ ಸಂಚುಕೋರರನ್ನು ಬಂಧಿಸಲಾಗಿದ್ದರೂ, ಹತ್ಯೆ ಸಂಚಿನಲ್ಲಿ ಶಾಮೀಲಾದ ಎಲ್ಲರನ್ನೂ ಗುಡಿಸುವ ಕೆಲಸ ಇನ್ನೂ ಬಾಕಿಯಿತ್ತು. ವಿಚಾರಣೆಯ ವೇಳೆ ಆರೋಪಿಗಳು ಹತ್ಯೆಯ ವೇಳೆ ಬಳಸಿದ್ದ ಬೈಕ್ ಕಳವು, ಪಿಸ್ತೂಲಿನ ವಿಲೇವಾರಿ ಇತ್ಯಾದಿಗಳಲ್ಲಿ ಪಾಲುಗೊಂಡಿದ್ದ ಇನ್ನೂ ನಾಲ್ವರ ಹೆಸರುಗಳನ್ನು ಬಾಯಿಬಿಟ್ಟಿದ್ದರು. ಗೌರಿ ಹತ್ಯೆ ಮತ್ತು ಮಹಾರಾಷ್ಟ್ರದಲ್ಲಿ ನಡೆದಿದ್ದ ದಾಬೋಲ್ಕರ್ ಮತ್ತು ಪನ್ಸಾರೆ ಹತ್ಯೆಗಳ ನಡುವೆ ಸಂಬಂಧ ಇದ್ದುದರಿಂದ ಕರ್ನಾಟಕ ಎಸ್‌ಐಟಿ, ಮಹಾರಾಷ್ಟ್ರ ಪೊಲೀಸರೊಂದಿಗೆ ಈ ಮಾಹಿತಿಗಳನ್ನು ಹಂಚಿಕೊಂಡಿತ್ತು.

ಪರಿಣಾಮ ನಿರೀಕ್ಷೆ ಮೀರಿತ್ತು. ಮಹಾರಾಷ್ಟ್ರ ಭಯೋತ್ಪಾದಕ ವಿರೋಧಿ ದಳ (ಎಟಿಎಸ್), ಮುಂಬಯಿಯ ನಲಸೊಪಾರ ಮತ್ತು ಪುಣೆಯಲ್ಲಿ ನಡೆಸಿದ ದಾಳಿಯಲ್ಲಿ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರ ವಶವಾಗಿತ್ತು. ಅದರ ನಂತರ ನಡೆದ ಬಂಧನ ಸರಣಿಯಲ್ಲಿ ಕರ್ನಾಟಕ ಎಸ್‌ಐಟಿಗೆ ಬೇಕಾಗಿದ್ದ ನಾಲ್ವರೂ ಇದ್ದರು. ಅವರಲ್ಲೊಬ್ಬ, ವಾಸುದೇವ ಸೂರ್ಯವಂಶಿ. ಈತ ಮೋಟಾರ್ ಸೈಕಲ್ ಮೆಕ್ಯಾನಿಕ್ ಆಗಿದ್ದು, ಗೌರಿ ಹತ್ಯೆಗೆ ಬಳಸಿದ್ದ ಬೈಕ್ ಕದ್ದಿದ್ದ. ಇನ್ನೊಬ್ಬ ಶರದ್ ಕಾಲಸ್ಕರ್, ಗೌರಿ ಹತ್ಯೆಗೆ ಬಳಸಿದ್ದ ಪಿಸ್ತೂಲನ್ನು ವಿಲೇವಾರಿ ಮಾಡಿದ್ದ. ಶ್ರೀಕಾಂತ ಪಾಂಗರ್ಕರ್ ಸಂಚಿನ ಸಭೆಗಳಲ್ಲಿ ಭಾಗವಹಿಸಿದ್ದ. ಸುಧನ್ವ ಕಾಲಸ್ಕರ್ ಎಂಬಾತ ಹತ್ಯೆಯ ಸ್ಥಳದಲ್ಲಿ ಉಪಸ್ಥಿತನಿದ್ದ.

ಈ ನಾಲ್ವರ ಬಂಧನದೊಂದಿಗೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 16ಕ್ಕೇರಿತು. ಸಂಚಿನಲ್ಲಿ ಭಾಗವಹಿಸಿದ್ದ ವಿಕಾಸ್ ಪಾಟೀಲ್ ಮತ್ತು ರುಷಿಕೇಶ್ ದೇವ್ಡಿಕರ್ ಎಂಬಿಬ್ಬರ ಬಂಧನ ಬಾಕಿಯಿದೆ.

ಈ ಪ್ರಕರಣದಲ್ಲಿ ವಿಶೇಷ ತನಿಖಾ ತಂಡವು ಮೂಲ ಆರೋಪಪಟ್ಟಿಗೆ ಹೆಚ್ಚುವರಿಯಾಗಿ 9,235 ಪುಟಗಳ ವಿವರವಾದ ಆರೋಪಪಟ್ಟಿಯನ್ನೂ ಸಲ್ಲಿಸಿದೆ. ತೀರ್ಪು ನ್ಯಾಯಾಲಯದ ಕೈಯ್ಯಲ್ಲಿದೆ.

(ಮುಗಿಯಿತು)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಟಿಎಂಸಿ ಬೆಂಬಲ

ಮಾರ್ಚ್ 9 ರ ಸೋಮವಾರ ಸಂಸತ್ತಿನ ಬಜೆಟ್ ಅಧಿವೇಶನ ಪುನರಾರಂಭವಾದಾಗ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ಮಂಡಿಸಲಾಗುವ ಅವಿಶ್ವಾಸ ನಿರ್ಣಯಕ್ಕೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಬೆಂಬಲ ನೀಡಲಿದೆ ಎಂದು ಪಕ್ಷದ ನಾಯಕರು...

ಹೊಸ ರಾಜ್ಯಪಾಲ ರವಿ ಬಿಜೆಪಿ ಕೇಡರ್, ಆದರೆ ಬಂಗಾಳ ಟಫ್ ಟರ್ಫ್ : ಮಮತಾ ಬ್ಯಾನರ್ಜಿ

ನೂತನ ರಾಜ್ಯಪಾಲ ಆರ್.ಎನ್ ರವಿ ಅವರನ್ನು 'ಬಿಜೆಪಿ ಕೇಡರ್' ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶನಿವಾರ ಲೇವಡಿ ಮಾಡಿದ್ದು, ಮುಂಬರುವ ದಿನಗಳಲ್ಲಿ ರಾಜ್ಯ ಸಚಿವಾಲಯ 'ನಬನ್ನಾ' ಮತ್ತು ರಾಜ್ಯಪಾಲರ ನಿವಾಸ...

ಕರ್ನಾಟಕ ಬಜೆಟ್ 2026| ಶಿಕ್ಷಣ ಕ್ಷೇತ್ರಕ್ಕೆ ಅನುದಾನ ಹಂಚಿಕೆ ನಿರಾಶದಾಯಕ

ಶಿಕ್ಷಣಕ್ಕೆ 47,224 ಕೋಟಿ (ಶೇ.10) ಹಂಚಿಕೆ ಮಾಡಿದ್ದಾರೆ. ಇದು ತುಂಬಾ ಕಡಿಮೆ ಅನುದಾನವಾಗಿದೆ. ವಾಸ್ತವದಲ್ಲಿ ಬಜೆಟ್ ವೆಚ್ಚದ ಶೇ.20-24ರಷ್ಟು ಹಣವನ್ನು ಶಿಕ್ಷಣಕ್ಕೆ ಮೀಸಲಿಡಬೇಕು. ಆದರೆ ಇದು ಸಾಧ್ಯವಾಗುತ್ತಿಲ್ಲ. ಶಿಕ್ಷಣವನ್ನು ಅನುತ್ಪಾದಕ ವಲಯ ಎಂದು...

ಕೇರಳ : ಪ್ರಧಾನಿ ಮೋದಿ ‘ದೇಶದ್ರೋಹಿ’ ಎಂದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲು

ಪ್ರಧಾನಿ ನರೇಂದ್ರ ಮೋದಿ 'ದೇಶದ್ರೋಹಿ' ಎಂದು ಸಾಮಾಜಿಕ ಮಾಧ್ಯಮದಲ್ಲಿ ಕಾಮೆಂಟ್ ಹಾಕಿದ ಆರೋಪದ ಮೇಲೆ ಕೇರಳದ ಕಣ್ಣೂರಿನ ಶ್ರೀಕಂಡಪುರಂ ಪೊಲೀಸರು ವ್ಯಕ್ತಿಯೊಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಹಿಂದೂ ಶನಿವಾರ (ಮಾ.7) ವರದಿ...

ಕೋಲ್ಕತ್ತಾ| ಮತದಾರರ ಪಟ್ಟಿಯಿಂದ ಹೆಸರು ಅಳಿಸುವಿಕೆ ವಿರೋಧಿಸಿ ಅಹೋರಾತ್ರಿ ಧರಣಿ ಮುಂದುವರೆಸಿದ ಮಮತಾ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶನಿವಾರ ಸತತ ಎರಡನೇ ದಿನವಾದ ಶನಿವಾರವೂ ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ, ಅವರು ಅಹೋರಾತ್ರಿ ಧರಣಿ ಸ್ಥಳದಲ್ಲಿ ರಾತ್ರಿ ಕಳೆದರು. ಮುಂಬರುವ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ "ಬಂಗಾಳದ ಮತದಾರರ...

ಇಂಡೋನೇಷ್ಯಾ | ನಾಲ್ವರು ಪ್ರಮುಖ ಹೋರಾಟಗಾರರು ಖುಲಾಸೆ : ಪ್ರತಿಭಟನೆಯ ಹಕ್ಕಿಗೆ ಹೊಸ ಭರವಸೆ ಎಂದ ಆಮ್ನೆಸ್ಟಿ

2025ರ ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ನಡೆದ ಹಿಂಸಾತ್ಮಕ ವಿದ್ಯಾರ್ಥಿ ಪ್ರತಿಭಟನೆಗಳಿಗೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿದ್ದ ನಾಲ್ವರು ಪ್ರಮುಖ ಹೋರಾಟಗಾರರನ್ನು ಇಂಡೋನೇಷ್ಯಾದ ಕೇಂದ್ರ ಜಕಾರ್ತಾ ಜಿಲ್ಲಾ ನ್ಯಾಯಾಲಯವು ಶುಕ್ರವಾರ (ಮಾ.6) ಖುಲಾಸೆಗೊಳಿಸಿದೆ. ದೇಶದಲ್ಲಿ ನಾಗರಿಕ ಸ್ವಾತಂತ್ರ್ಯಕ್ಕೆ...

‘ಆಕ್ರಮಣ ಮಾಡುವ ಉದ್ದೇಶವಿಲ್ಲ..’; ಗಲ್ಫ್ ರಾಷ್ಟ್ರಗಳ ಮೇಲಿನ ದಾಳಿಗೆ ಕ್ಷಮೆಯಾಚಿಸಿದ ಇರಾನ್ ಅಧ್ಯಕ್ಷರು

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ನೆರೆಯ ರಾಷ್ಟ್ರಗಳಿಗೆ ಶನಿವಾರ ಕ್ಷಮೆಯಾಚಿಸಿದ್ದಾರೆ. ಉಲ್ಬಣಗೊಳ್ಳುತ್ತಿರುವ ಪ್ರಾದೇಶಿಕ ಸಂಘರ್ಷಕ್ಕೆ ಸಂಬಂಧಿಸಿದ ಇತ್ತೀಚಿನ ದಾಳಿಗಳಿಗೆ ಟೆಹ್ರಾನ್ ಇತರ ರಾಷ್ಟ್ರಗಳನ್ನು ಆಕ್ರಮಿಸುವ ಉದ್ದೇಶವನ್ನು ಹೊಂದಿಲ್ಲ ಎಂದು ಹೇಳಿದ್ದಾರೆ. ಇರಾನ್ ಸಾರ್ವಜನಿಕರನ್ನು...

ತೈಲ ಆಮದು ವಿಚಾರದಲ್ಲಿ ಅಮೆರಿಕದ ಒಪ್ಪಿಗೆ ಪಡೆಯುವುದು ‘ಅತಿರೇಕದ’ ಸಂಗತಿ: ಪಿಣರಾಯಿ ವಿಜಯನ್

ತೈಲ ಆಮದುಗಳಂತಹ ನಿರ್ಧಾರಗಳಿಗೆ ಭಾರತವು ಅಮೆರಿಕದ ಅನುಮೋದನೆಯನ್ನು ಪಡೆಯುವಂತೆ ಬಿಂಬಿತವಾಗುತ್ತಿರುವುದು 'ಅತಿರೇಕದ' ಸಂಗತಿ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶುಕ್ರವಾರ ಹೇಳಿದ್ದಾರೆ. ಭಾರತದ ಸಾರ್ವಭೌಮತ್ವವು ವಿದೇಶಿ ಅನುಮತಿಗೆ ಒಳಪಡುವುದಿಲ್ಲ ಎಂದು ವಿಜಯನ್ ಸಾಮಾಜಿಕ...

ಪತ್ರಕರ್ತನ ಹತ್ಯೆ ಪ್ರಕರಣ : ಡೇರಾ ಮುಖ್ಯಸ್ಥ ರಾಮ್ ರಹೀಂ ಸಿಂಗ್ ಖುಲಾಸೆ

ಪತ್ರಕರ್ತ ಛತ್ರಪತಿ ಹತ್ಯೆ ಪ್ರಕರಣದಲ್ಲಿ ಸಿರ್ಸಾದ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಸಿಂಗ್ ಅನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಶನಿವಾರ (ಮಾ.7) ಖುಲಾಸೆಗೊಳಿಸಿರುವುದಾಗಿ livelaw.in ಎಂದು ವರದಿ...

ಗೃಹ ಬಳಕೆಯ ಎಲ್‌ಪಿಜಿ ದರ 60 ರೂ. ಹೆಚ್ಚಳ : 11 ತಿಂಗಳಲ್ಲಿ ಎರಡನೇ ಬಾರಿ ಬೆಲೆ ಏರಿಕೆ

ತೈಲ ಮಾರುಕಟ್ಟೆ ಕಂಪನಿಗಳು ಶನಿವಾರ (ಮಾ.7) ದೇಶದಲ್ಲಿ ಗೃಹ ಬಳಕೆಯ ಮತ್ತು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಕ್ರಮವಾಗಿ ರೂ. 60 ಮತ್ತು ರೂ. 115 ಹೆಚ್ಚಿಸಿವೆ. ಈ ಹೆಚ್ಚಳದ ನಂತರ ರಾಷ್ಟ್ರ ರಾಜಧಾನಿ...