ಹಿಂದೂ ಧರ್ಮದ ರಕ್ಷಣೆಗಾಗಿ ವಕ್ಫ್ ಬೋರ್ಡ್ ರೀತಿ ‘ಸನಾತನ ಧರ್ಮ ಸಂರಕ್ಷಣಾ ಮಂಡಳಿ’ ಸ್ಥಾಪಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಇಂದು (ನ.27) ತಿರಸ್ಕರಿಸಿದೆ.
ಪ್ರಕರಣ ನೀತಿ ನಿರೂಪಣೆ ವ್ಯಾಪ್ತಿಗೆ ಒಳಪಡುವುದರಿಂದ ನ್ಯಾಯಾಲಯ ಮಧ್ಯಪ್ರವೇಶಿಸಲಾಗದು ಎಂದು ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರಿದ್ದ ಪೀಠ ತಿಳಿಸಿದೆ.
ಈ ವಿಚಾರವಾಗಿ ನ್ಯಾಯಾಲಯ ಏನೂ ಮಾಡಲು ಸಾಧ್ಯವಿಲ್ಲ ಎಂದ ನ್ಯಾಯಮೂರ್ತಿ ಮನಮೋಹನ್ ಅವರು, ಸೂಕ್ತ ಕ್ರಮಕ್ಕಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಲು ಅರ್ಜಿದಾರರಿಗೆ ಅವಕಾಶವಿದೆ ಎಂದಿದ್ದಾರೆ.
ಸನಾತನ ಧರ್ಮದ ಅನುಯಾಯಿಗಳ ಮೇಲೆ ಇತರ ಧರ್ಮದ ಅನುಯಾಯಿಗಳು ಹಲ್ಲೆ ನಡೆಸುತ್ತಿದ್ದಾರೆ. ಸನಾತನ ಧರ್ಮದ ಹಕ್ಕುಗಳು ಮತ್ತು ಆಚಾರಗಳ ರಕ್ಷಣೆಗೆ ಯಾವುದೇ ಧಾರ್ಮಿಕ ಸಂಸ್ಥೆ ಇಲ್ಲ. ಆದ್ದರಿಂದ ಅಂತಹ ಸಂಸ್ಥೆ ರಚಿಸುವಂತೆ ಸನಾತನ ಹಿಂದೂ ಸೇವಾ ಸಂಘ ಟ್ರಸ್ಟ್ ಕೋರಿತ್ತು.
ಸರ್ಕಾರಕ್ಕೆ ಈ ಸಂಬಂಧ ಪತ್ರ ಬರೆದಿದ್ದರೂ ಪ್ರತಿಕ್ರಿಯೆ ದೊರೆಯದ ಕಾರಣ ನ್ಯಾಯಾಲಯದ ಮೊರೆ ಹೋಗಿರುವುದಾಗಿ ಸಂಘ ಹೇಳಿದೆ ಎಂದು ಲೈವ್ ಲಾ ವರದಿ ಮಾಡಿದೆ.
ಇದನ್ನೂ ಓದಿ | ಸಂಭಾಲ್ ಹಿಂಸಾಚಾರ : ಸಾರ್ವಜನಿಕ ಸ್ಥಳಗಳಲ್ಲಿ ‘ಕಲ್ಲು ತೂರಾಟಗಾರರ’ ಪೋಸ್ಟರ್ ಪ್ರದರ್ಶನಕ್ಕೆ ಯುಪಿ ಸರ್ಕಾರ ಸಿದ್ಧತೆ


