Homeಕರ್ನಾಟಕಕೊನೆಗೂ 'ಪಾಶ್ ಸಮಿತಿ' ರಚಿಸಿದ ಕರ್ನಾಟಕ ಫಿಲಂ ಚೇಂಬರ್ : ಆದರೆ ಬಹುಪಾಲು ಸದಸ್ಯರು ಪುರುಷರು!

ಕೊನೆಗೂ ‘ಪಾಶ್ ಸಮಿತಿ’ ರಚಿಸಿದ ಕರ್ನಾಟಕ ಫಿಲಂ ಚೇಂಬರ್ : ಆದರೆ ಬಹುಪಾಲು ಸದಸ್ಯರು ಪುರುಷರು!

ಹೊಸ ಸಮಿತಿಗೆ ವಿರೋಧ ವ್ಯಕ್ತಪಡಿಸಿದ 'ಫೈರ್'

- Advertisement -
- Advertisement -

ಹಲವು ದಿನಗಳ ಹಗ್ಗ-ಜಗ್ಗಾಟದ ಬಳಿಕ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (ಕೆಎಫ್‌ಸಿಸಿ) ಅಂತಿಮವಾಗಿ ಲೈಂಗಿಕ ಕಿರುಕುಳ ತಡೆ (ಪಿಒಎಸ್‌ಹೆಚ್-ಪಾಶ್) ಕಾಯ್ದೆಯಡಿ ಆಂತರಿಕ ಸಮಿತಿ (ಐಸಿ)ಯನ್ನು ರಚಿಸಿದೆ. ಆದರೆ, ಸಮಿತಿ ರಚನೆ ವೇಳೆ ಪ್ರಮುಖ ನಿಯಮಗಳನ್ನು ಉಲ್ಲಂಘಿಸಿದೆ. ಪಾಶ್ ಕಾಯ್ದೆಯಲ್ಲಿ ನಿಗದಿಪಡಿಸಿದ ಮಾನದಂಡಗಳಿಗೆ ವಿರುದ್ಧವಾಗಿ ಹೊಸ ಸಮಿತಿಯಲ್ಲಿ ಬಹುಪಾಲು ಪುರುಷ ಸದಸ್ಯರಿದ್ದಾರೆ.

ಜನವರಿ 17ರಂದು ಪ್ರಕಟಿಸಿದ ಸಮಿತಿ ಸದಸ್ಯರ ಪಟ್ಟಿಯಲ್ಲಿ, ಕೆಎಫ್‌ಸಿಸಿ ಅಧ್ಯಕ್ಷ ಎಂ.ನರಸಿಂಹುಲು ಮತ್ತು ಕಾರ್ಯದರ್ಶಿ (ವಿತರಕರು) ಎಂ.ಎನ್ ಕುಮಾರ್, ಕೆಎಫ್‌ಸಿಸಿ ಮಾಜಿ ಪದಾಧಿಕಾರಿಗಳಾದ ಎನ್‌.ಎಂ ಸುರೇಶ್ ಮತ್ತು ಚಲನಚಿತ್ರ ನಿರ್ಮಾಪಕ ಸಾ ರಾ ಗೋವಿಂದು, ನಿರ್ದೇಶಕ ಬಿ.ಎಲ್ ನಾಗರಾಜ್ (ನಾಗಣ್ಣ), ನಟಿ ಅನಿತಾರಾಣಿ ಮತ್ತು ಅನ್ನಪೂರ್ಣ ಎಂಬ ಎನ್‌ಜಿಒ ಪ್ರತಿನಿಧಿ ಇದ್ದಾರೆ. ಸಮಿತಿಯು ತನ್ನ ಸದಸ್ಯರ ಮೇಲೆ ಮಾತ್ರ ಅಧಿಕಾರ ವ್ಯಾಪ್ತಿಯನ್ನು ಹೊಂದಿರುತ್ತದೆ ಎಂದು ಫಿಲಂ ಚೇಂಬರ್ ಒಂದು ಪತ್ರದಲ್ಲಿ ತಿಳಿಸಿದೆ.

ಪಾಶ್ ಕಾಯ್ದೆಯು ಆಂತರಿಕ ಸಮಿತಿಯ ಒಟ್ಟು ಸದಸ್ಯರಲ್ಲಿ ಕನಿಷ್ಠ ಅರ್ಧದಷ್ಟು ಮಹಿಳೆಯರು ಇರಬೇಕು ಎಂದು ಹೇಳುತ್ತದೆ. ಆದರೆ, ಕೆಎಫ್‌ಸಿಸಿ ಹೊಸದಾಗಿ ರಚಿಸಿರುವ ಸಮಿತಿಯ ಏಳು ಸದಸ್ಯರ ಪೈಕಿ ಐವರು ಪುರುಷರಿದ್ದಾರೆ. ಕೆಎಫ್‌ಸಿಸಿ ಅನ್ನಪೂರ್ಣ ಎಂಬ ಎನ್‌ಜಿಒ ಪ್ರತಿನಿಧಿಯೊಬ್ಬರನ್ನು ಸದಸ್ಯರಾಗಿ ಘೋಷಿಸಿದೆ. ಆದರೆ, ಅವರು ಮಹಿಳೆಯೇ ಎಂಬುವುದನ್ನು ಖಚಿತಪಡಿಸಿಲ್ಲ. ಹಾಗಾಗಿ, ಸದ್ಯಕ್ಕೆ ಸಮಿತಿಯಲ್ಲಿ ಅನಿತಾರಾಣಿ ಒಬ್ಬರೇ ಮಹಿಳಾ ಸದಸ್ಯರಿದ್ದಂತಾಗಿದೆ.

ಪಾಶ್ ಕಾಯ್ದೆಯ ಪ್ರಕಾರ, ಒಂದು ಆಂತರಿಕ ಸಮಿತಿ ಉದ್ಯೋಗದಾತರಿಂದ ನಾಮನಿರ್ದೇಶಿತ ಸದಸ್ಯರನ್ನು (members nominated by the employer) ಒಳಗೊಂಡಿರಬೇಕು. ಇದರಲ್ಲಿ ಪ್ರಿಸೈಡಿಂಗ್ ಆಫೀಸರ್ ಸೇರಿದ್ದಾರೆ, ಅವರು ಕೆಲಸದ ಸ್ಥಳದಲ್ಲಿ ಹಿರಿಯ ಮಹಿಳಾ ಉದ್ಯೋಗಿಯಾಗಿರಬೇಕು.

ಯಾವುದೇ ಹಿರಿಯ ಮಹಿಳೆ ಲಭ್ಯವಿಲ್ಲದಿದ್ದರೆ, ಪ್ರಿಸೈಡಿಂಗ್ ಆಫೀಸರ್ ಅನ್ನು ಉದ್ಯೋಗದಾತರ ಇತರ ಕಚೇರಿಗಳಿಂದ ಅಥವಾ ಬಾಹ್ಯ ಸಂಸ್ಥೆಗಳಿಂದ ನಾಮನಿರ್ದೇಶನ ಮಾಡಬಹುದು. ಸಮಿತಿಯು ಮಹಿಳೆಯರ ಪರವಾಗಿ ಬದ್ಧರಾಗಿರುವ ಅಥವಾ ಸಾಮಾಜಿಕ ಕಾರ್ಯ ಅಥವಾ ಕಾನೂನು ವಿಷಯಗಳಲ್ಲಿ ಅನುಭವ ಹೊಂದಿರುವ ಕನಿಷ್ಠ ಇಬ್ಬರು ಉದ್ಯೋಗಿ ಸದಸ್ಯರನ್ನು ಒಳಗೊಂಡಿರಬೇಕು.

ಹೆಚ್ಚುವರಿಯಾಗಿ, ಒಬ್ಬ ಬಾಹ್ಯ ಸದಸ್ಯರು ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಪರಿಚಿತವಾಗಿರುವ ಎನ್‌ಜಿಒ ಅಥವಾ ಸಂಘದಿಂದ ಬಂದಿರಬೇಕು ಎಂದು ಕಾನೂನು ಷರತ್ತು ವಿಧಿಸುತ್ತದೆ.

ಮಹಿಳಾ ಆಯೋಗ ಸೇರಿದಂತೆ ವಿವಿದೆಡೆಗಳ ಒತ್ತಡಕ್ಕೆ ಮಣಿದು ಡಿಸೆಂಬರ್ 2024ರ ಆರಂಭದಲ್ಲಿ ಹಿರಿಯ ನಿರ್ದೇಶಕಿ ಕವಿತಾ ಲಂಕೇಶ್ ಅವರ ಅಧ್ಯಕ್ಷತೆಯಲ್ಲಿ ಫಿಲಂ ಚೇಂಬರ್ 11 ಸದಸ್ಯರ ಪಾಶ್ ಸಮಿತಿ ರಚಿಸಿತ್ತು. ಆದರೆ, ಫಿಲಂ ಚೇಂಬರ್ ಚುನಾವಣೆಯ ನೆಪವೊಡ್ಡಿ ಘೋಷಣೆ ಮಾಡಿದ ಘಂಟೆಗಳ ಒಳಗೆ ಆ ಸಮಿತಿಯನ್ನು ರದ್ದು ಮಾಡಿತ್ತು. ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.

ಜಸ್ಟೀಸ್ ಹೇಮಾ ಸಮಿತಿ ಮಲಯಾಳಂ ಚಿತ್ರೋದ್ಯಮದ ಒಳಗೆ ನಡೆದಿರುವ ಮತ್ತು ನಡೆಯುತ್ತಿರುವ ಲೈಂಗಿಕ ದೌರ್ಜನ್ಯಗಳ ಕರಾಳ ಸತ್ಯವನ್ನು ಬಿಚ್ಚಿಟ್ಟ ಬಳಿಕ, ಕರ್ನಾಟಕದಲ್ಲೂ ಸಮಿತಿಯೊಂದನ್ನು ರಚಿಸಿ ಚಿತ್ರೋದ್ಯಮದಲ್ಲಿ ಮಹಿಳಾ ಕಲಾವಿದರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ಕಲೆ ಹಾಕಲು ಸರ್ಕಾರವನ್ನು ಆಗ್ರಹಿಸಲಾಗಿದೆ.

ನಟ, ನಟಿಯರ ನಿಯೋಗವೊಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಈ ಸಂಬಂಧ ಮನವಿ ಸಲ್ಲಿಸಿದೆ. ರಾಜ್ಯ ಮಹಿಳಾ ಆಯೋಗವೂ ಸಮಿತಿ ನೇಮಿಸುವಂತೆ ಸರ್ಕಾರವನ್ನು ಕೋರಿದೆ. ಆ ವಿಷಯ ಈಗ ಸಿಎಂ ನಿರ್ಧಾರದ ಮೇಲೆ ನಿಂತಿದೆ.

ಈ ನಡುವೆ, ಪಾಶ್ ಕಾಯ್ದೆಯ ಪ್ರಕಾರ ಫಿಲಂ ಚೇಂಬರ್ ಆಂತರಿಕ ಸಮಿತಿ ರಚಿಸಬೇಕು ಎಂಬ ಆಗ್ರಹ ಕೇಳಿ ಬಂದಿತ್ತು. ರಾಜ್ಯ ಮಹಿಳಾ ಆಯೋಗ ಈ ವಿಷಯದ ಬೆನ್ನು ಬಿದ್ದು ಫಿಲಂ ಚೇಂಬರ್‌ಗೆ ಒತ್ತಡ ಹೇರಿತ್ತು. ಆದರೂ, ಸಮಿತಿ ರಚಿಸಲು ವಿಳಂಬ ಮಾಡುತ್ತಿದ್ದ ಫಿಲಂ ಚೇಂಬರ್ ವಿರುದ್ದ 2024ರ ನವೆಂಬರ್ 28ರಂದು ಪಾಶ್ ಕಾಯ್ದೆಯ ನೋಡಲ್ ಅಧಿಕಾರಿಯಾಗಿರುವ ಬೆಂಗಳೂರು ಜಿಲ್ಲಾಧಿಕಾರಿಗೆ ಪತ್ರ ಬರೆದು ದೂರು ನೀಡಿತ್ತು.

ಡಿಸೆಂಬರ್ 14, 2024ರಂದು ಫಿಲಂ ಚೇಂಬರ್‌ಗೆ ಹೊಸ ಆಡಳಿತ ಬಂದ ಬಳಿಕವೂ, ಆಂತರಿಕ ಸಮಿತಿ ರಚಿಸುವ ಆಗ್ರಹ ಹೆಚ್ಚಾಯಿತು. ಹಾಗಾಗಿ, ಕೊನೆಗೂ ಫಿಲಂ ಚೇಂಬರ್ ಸಮಿತಿ ರಚಿಸಿದೆ. ಆದರೆ, ನಿಯಮಗಳನ್ನು ಉಲ್ಲಂಘಿಸಿದೆ.

ವಿರೋಧ ವ್ಯಕ್ತಪಡಿಸಿದ ಫೈರ್

ಫಿಲಂ ಚೇಂಬರ್ ರಚಿಸಿರುವ ಹೊಸ ಆಂತರಿಕ ಸಮಿತಿ ಅಥವಾ ಪಾಶ್ ಸಮಿತಿಗೆ ‘ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಈಕ್ವಾಲಿಟಿ (ಫೈರ್)’ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಹೊಸ ಆಂತರಿಕ ಸಮಿತಿ ಅದರ ರಚನೆಯ ಉದ್ದೇಶಗಳನ್ನು ಪೂರೈಸುವ ನಂಬಿಕೆ ನಮಗಿಲ್ಲ. ಸಮಿತಿಯಲ್ಲಿ ಅರ್ಧದಷ್ಟು ಮಹಿಳಾ ಸದಸ್ಯರು ಮತ್ತು ಕನಿಷ್ಠ ಇಬ್ಬರು ಲಿಂಗ ಹಕ್ಕುಗಳಿಗಾಗಿ ಕೆಲಸ ಮಾಡಿದವರು ಅಥವಾ ಸೂಕ್ಷ್ಮ ವಿಚಾರಗಳನ್ನು ನಿಭಾಯಿಸುವ ಕಾನೂನು ಜ್ಞಾನ ಹೊಂದಿರುವವರು ಇರಬೇಕು ಎಂದು ಫೈರ್ ಹೇಳಿದೆ.

ನಿಯಮದ ಪ್ರಕಾರ, ಹೊಸ ಸಮಿತಿಯ 7 ಮಂದಿ ಸದಸ್ಯರಲ್ಲಿ ಕನಿಷ್ಠ 4 ಮಂದಿ ಮಹಿಳೆಯರು ಇರಬೇಕಿತ್ತು. ಆದರೆ ಇಲ್ಲಿ ಇಬ್ಬರು ಮಾತ್ರ ಇದ್ದಾರೆ. ಫಿಲಂ ಚೇಂಬರ್‌ನಲ್ಲಿ ಕಳೆದ 6 ತಿಂಗಳಿನಿಂದ ಲಿಂಗ ಸಮಾನತೆ ಅಥವಾ ಲಿಂಗ ನ್ಯಾಯವನ್ನು ವಿರೋಧಿಸುತ್ತಿದ್ದ ಒಬ್ಬರು ಸಮಿತಿಯ ಸದಸ್ಯರಾಗಿದ್ದಾರೆ. ಲೈಂಗಿಕ ಕಿರುಕುಳ ಅಪರಾಧಿಗಳು/ಪರಭಕ್ಷಕರನ್ನು ಬೆಂಬಲಿಸುವ ಮೂಲಕ ಲಿಂಗ ಘನತೆಯನ್ನು ವಿರೋಧಿಸುವ ಇಂತಹ ವ್ಯಕ್ತಿಗಳು ಆಂತರಿಕ ಸಮಿತಿಯಲ್ಲಿ ಮಾತ್ರವಲ್ಲದೆ, ಫಿಲಂ ಚೇಂಬರ್ ಅನ್ನು ಪ್ರತಿನಿಧಿಸಲೂ ಅನರ್ಹರು ಎಂದಿದೆ.

ಹೊಸದಾಗಿ ರಚಿಸಲಾದ ಸಮಿತಿಗೆ ಈಗ ಅಥವಾ ಭವಿಷ್ಯದಲ್ಲಿ ಬಲಿಪಶುಗಳಿಗೆ ನ್ಯಾಯ ಒದಗಿಸುವುದು ಬಿಡಿ, ಲೈಂಗಿಕ ಕಿರುಕುಳ ಮತ್ತು ‘ಕಾಸ್ಟಿಂಗ್ ಕೌಚ್’ ಪ್ರಕರಣಗಳನ್ನು ಚಿಂತನಶೀಲವಾಗಿ ನಿರ್ವಹಿಸಲು ಸಾಧ್ಯವಾಗದಿರಬಹುದು ಎಂದು ಫೈರ್ ಕಳವಳ ವ್ಯಕ್ತಪಡಿಸಿದೆ.

ಯಾವುದೇ ಸಂಸ್ಥೆಯು ಎಷ್ಟೇ ಸದುದ್ದೇಶವನ್ನು ಹೊಂದಿದ್ದರೂ, ಅದರ ಸದಸ್ಯರ ಅರ್ಹತೆಯ ಮೇಲೆ ನಿಂತಿರುತ್ತದೆ. ಪಾಶ್ ಮಾರ್ಗಸೂಚಿಗಳ ಅಡಿಯಲ್ಲಿ ಒದಗಿಸಲಾದ ಮಾನದಂಡಗಳನ್ನು ಪೂರೈಸುವ ಸದಸ್ಯರನ್ನು ಆಂತರಿಕ ಸಮಿತಿ ಸದಸ್ಯರನ್ನಾಗಿ ಸೇರಿಸಿಕೊಳ್ಳಬೇಕೆಂದು ನಾವು ಆಗ್ರಹಿಸುತ್ತೇವೆ. ರಾಜ್ಯ ಮಹಿಳಾ ಆಯೋಗ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ನಾವು ಕೇಳಿಕೊಳ್ಳುತ್ತೇವೆ ಎಂದು ಫೈರ್ ಹೇಳಿದೆ.

ದಲಿತ ಚಳವಳಿಯ ಪ್ರಮುಖ ಹೋರಾಟಗಾರ ಕೆ.ಎಂ. ಕೊಮ್ಮಣ್ಣ ನಿಧನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸತೀಶ್‌ ಜಾರಕಿಹೊಳಿ ಮೇಲಿನ ಇಡಿ ದಾಳಿಯನ್ನು ‘ಚಾರಿತ್ರ್ಯ ಹರಣ’ ಎಂದ ವಿಜಯ್ ಮಲ್ಯ

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಮನೆ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯವು (ಇಡಿ) ನಡೆಸಿದ ದಾಳಿಯನ್ನು ಮಾಜಿ ಸಂಸದ ಮತ್ತು ದೇಶದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ, "ಸಾರ್ವಜನಿಕವಾಗಿ ಚಾರಿತ್ರ್ಯ...

ಒಗ್ಗಟ್ಟಿನ ಮಾತುಗಳಷ್ಟೇ ಸಾಲದು, ಕೃತಿಯಲ್ಲಿರಲಿ ದಿಟ್ಟತನ : ಬ್ರಿಕ್ಸ್ ವಿಚಾರದಲ್ಲಿ ಕೇಂದ್ರಕ್ಕೆ ಕಾಂಗ್ರೆಸ್ ಚಾಟಿ

ಜಾಗತಿಕ ಮಟ್ಟದಲ್ಲಿ ಬ್ರಿಕ್ಸ್ (BRICS) ಒಕ್ಕೂಟದ ಪ್ರಭಾವ ಹೆಚ್ಚುತ್ತಿರುವುದನ್ನು ಸ್ವಾಗತಿಸಿರುವ ಕಾಂಗ್ರೆಸ್, ಈ ಒಕ್ಕೂಟದ ಅಧ್ಯಕ್ಷತೆಯನ್ನು ವಹಿಸಿರುವ ಭಾರತವು ‘ಗ್ಲೋಬಲ್ ಸೌತ್’ (Global South) ರಾಷ್ಟ್ರಗಳ ನಡುವೆ ತನ್ನ ರಾಜತಾಂತ್ರಿಕ ಸ್ಥಾನಮಾನವನ್ನು ಮರುಸ್ಥಾಪಿಸಲು...

9/11 ರ ಹಿಂದಿನ ದಾಳಿಯನ್ನು ಇರಾನ್ ಜೊತೆಗಿನ ಇಂದಿನ ಯುದ್ಧಕ್ಕೆ ಜೋಡಿಸಿದ ಡೊನಾಲ್ಡ್‌ ಟ್ರಂಪ್

"ಸೆಪ್ಟೆಂಬರ್ 11, 2001 ರ ದಾಳಿಯನ್ನು ಯುನೈಟೆಡ್ ಸ್ಟೇಟ್ಸ್ ಎಂದಿಗೂ ಮರೆಯುವುದಿಲ್ಲ. 25 ವರ್ಷಗಳ ನಂತರವೂ ಇರಾನ್ ಮೇಲೆ ದಾಳಿ ಮಾಡುವ ಮೂಲಕ ದೇಶವು ಭಯೋತ್ಪಾದನೆ ವಿರುದ್ಧದ ಯುದ್ಧವನ್ನು ಮುಂದುವರೆಸಿದೆ" ಎಂದು ಅಧ್ಯಕ್ಷ...

SIR ನೋಟಿಸ್ ಮತ್ತು ವಿಚಾರಣೆಯಲ್ಲಿ ಅಕ್ರಮ : ಚು. ಆಯೋಗದ ವಿರುದ್ಧ ನಾಗರಿಕ ಸಂಘಟನೆಗಳಿಂದ 2ನೇ ಎಫ್‌ಐಆರ್

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಭಾಗವಾಗಿ, ಆಗಸ್ಟ್ 24ರಂದು ರಾಜ್ಯ ಚುನಾವಣಾ ಆಯೋಗ ಬಿಡುಗಡೆ ಮಾಡಿದ್ದ ಕರಡು ಮತದಾರರ ಪಟ್ಟಿಯನ್ನು ತಿರಸ್ಕರಿಸಿ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಎಫ್‌ಐಆರ್ ಬಿಡುಗಡೆ...

‘ಕೊಂಕಣಿ – ಮಾಲ್ವಣಿ ಸಮುದಾಯಗಳು ಹಿಂದುತ್ವದ ಬೆಂಬಲಿಗರು..’; ಮಹಾರಾಷ್ಟ್ರ ಬಿಜೆಪಿ ನಾಯಕ ಅಮೀತ್ ಸತಮ್

ಮುಂಬೈನಲ್ಲಿ ವಾಸಿಸುತ್ತಿರುವ ಕೊಂಕಣಿ ಮತ್ತು ಮಾಲ್ವಣಿ ಸಮುದಾಯಗಳು ಸೇರಿದಂತೆ ಕೊಂಕಣ ಪ್ರದೇಶದ ಜನರು ಹಿಂದುತ್ವವನ್ನು ಬೆಂಬಲಿಸುತ್ತಾರೆ ಎಂದು ಬಿಜೆಪಿ ನಾಯಕ ಅಮೀತ್ ಸತಮ್ ಹೇಳಿದ್ದಾರೆ. ಮಹಾರಾಷ್ಟ್ರದ ಕೊಂಕಣ ಪ್ರದೇಶದ ಸಾವಂತವಾಡಿಗೆ ಗಣಪತಿ ಭಕ್ತರಿಗಾಗಿ ಛತ್ರಪತಿ...

SIR! ಸಾಮಾನ್ಯರಿಗೆ ಸಂಕಷ್ಟ; ಗಣ್ಯರಿಗೆ ಮನೆ ಬಾಗಿಲಲ್ಲೇ ಸೇವೆ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಕರ್ನಾಟಕದಲ್ಲಿ ಮುಂದುವರೆದಿರುವ ನಡುವೆಯೇ, ಅದರ ಜಾರಿಯಲ್ಲಿ ಸಾಮಾನ್ಯ ಮತದಾರರು ಮತ್ತು ಪ್ರಭಾವಿ ವ್ಯಕ್ತಿಗಳ ಅನುಭವದ ನಡುವಿನ ವ್ಯತ್ಯಾಸದ ಕುರಿತು ಪ್ರಶ್ನೆಗಳು ಎದ್ದಿವೆ. ಮತದಾರರ ಪಟ್ಟಿಯಲ್ಲಿನ...

ದಲಿತ ಬಾಲಕಿ ನಿಶು ಆಜಾದ್ ಕುಟುಂಬಕ್ಕೆ ನಿಲ್ಲದ ಕಿರುಕುಳ; ಅಸಭ್ಯ ಭಾಷೆ – ಬೆದರಿಕೆ ಸಂದೇಶ ರವಾನೆ

ಸಿಜೆಪಿ ಪ್ರತಿಭಟನೆಯಲ್ಲಿ ಗಮನ ಸೆಳೆದಿದ್ದ ಹದಿನಾಲ್ಕು ವರ್ಷ ವಯಸ್ಸಿನ ದಲಿತ ಸಮುದಾಯದ ಕಂಟೆಂಟ್ ಕ್ರಿಯೇಟರ್ ನಿಶು ಆಜಾದ್ ಮತ್ತು ಅವರ ಕುಟುಂಬಕ್ಕೆ ಮೊಬೈಲ್‌ ಫೋನ್‌ ಮೂಲಕ ನಿರಂತರ ಕಿರುಕುಳ ಸಂದೇಶ ಬರುತ್ತಿವೆ ಎಂದು...

ಉತ್ತರ ಪ್ರದೇಶ| 8ನೇ ತರಗತಿಯ ದಲಿತ ವಿದ್ಯಾರ್ಥಿಗೆ ಶಿಕ್ಷಕಿಯಿಂದ ಜಾತಿ ತಾರತಮ್ಯ

ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಸರ್ಕಾರಿ ಉನ್ನತ ಪ್ರಾಥಮಿಕ ಶಾಲೆಯ 8ನೇ ತರಗತಿಯ ವಿದ್ಯಾರ್ಥಿಯೊಬ್ಬರು ಶಿಕ್ಷಕಿಯಿಂದ ಜಾತಿ ಆಧಾರಿತ ತಾರತಮ್ಯ ಎಸಗಲಾಗಿದೆ ಎಂದು ಆರೋಪಿಸಿದ್ದಾನೆ. ಕೃಷ್ಣ ಎಂದು ಗುರುತಿಸಲ್ಪಟ್ಟ ಈ ವಿದ್ಯಾರ್ಥಿ ಪರಿಶಿಷ್ಟ...

ಯೆಮನ್ | ಸಂಪೂರ್ಣ ರೆಡ್ ಸೀ ಕರಾವಳಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಹೌತಿ ಪಡೆ : ಮಂದೇಬ್ ಜಲಸಂಧಿ ಮೇಲೆಯೂ ಹಿಡಿತ ಸಾಧಿಸಿರುವುದಾಗಿ ವರದಿ

ಮಹತ್ವದ ಬೆಳವಣಿಗೆಯಲ್ಲಿ, ಹೌತಿ ಬಂಡುಕೋರರು ಯೆಮನ್‌ನ ಇಡೀ ಕೆಂಪು ಸಮುದ್ರದ (ರೆಡ್ ಸೀ) ಕರಾವಳಿಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಇರಾನ್ ಬೆಂಬಲಿತ ಹೌತಿ ಸಶಸ್ತ್ರ ಪಡೆಗಳು ಯೆಮನ್ ಸರ್ಕಾರದ ನಿಯಂತ್ರಣದಲ್ಲಿದ್ದ...

ಭಾರತದ ಚುನಾವಣಾ ಪ್ರಕ್ರಿಯೆಯು ಅತ್ಯಂತ ಪಾರದರ್ಶಕವಾಗಿದೆ: ಸಿಇಸಿ ಜ್ಞಾನೇಶ್ ಕುಮಾರ್

ಭಾರತದ ಚುನಾವಣಾ ಪ್ರಕ್ರಿಯೆಯು ವಿಶ್ವದಲ್ಲೇ ಅತ್ಯಂತ ಪಾರದರ್ಶಕವಾದದ್ದು ಎಂದು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ (ಸೆ.11) ಹೇಳಿದ್ದಾರೆ. ಗುಜರಾತ್ ವಿಶ್ವವಿದ್ಯಾಲಯದ ಅಟಲ್ ಕಲಾಂ ಸಭಾಂಗಣದಲ್ಲಿ ನಡೆದ 'ಮತಗಟ್ಟೆ ಮಟ್ಟದ ಅಧಿಕಾರಿಗಳೊಂದಿಗೆ...