ಡೆವಲಪರ್ ಮತ್ತು ಅವರ ವ್ಯವಹಾರದ ಅಕ್ರಮ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ‘ದುರುದ್ದೇಶಪೂರಿತ ಕ್ರಮ’ಕ್ಕಾಗಿ ಬಾಂಬೆ ಹೈಕೋರ್ಟ್ ಮಂಗಳವಾರ (ಜ.22) ಜಾರಿ ನಿರ್ದೇಶನಾಲಯಕ್ಕೆ (ಇಡಿ) 1 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಇಡಿ ಪ್ರಕರಣವನ್ನು ನಿರ್ವಹಿಸಿದ ರೀತಿಗೆ ನ್ಯಾಯಮೂರ್ತಿ ಮಿಲಿಂದ್ ಜಾಧವ್ ಅವರು ತೀವ್ರ ಅಸಮ್ಮತಿ ವ್ಯಕ್ತಪಡಿಸಿದ್ದು, ಇಡಿಯಂತಹ ಸಂಸ್ಥೆಗಳು ಕಾನೂನಿನ ಮಿತಿಯೊಳಗೆ ಕಾರ್ಯನಿರ್ವಹಿಸುವ ಅಗತ್ಯವನ್ನು ಒತ್ತಿ ಹೇಳಿದ್ದಾರೆ. ನಾಗರಿಕರಿಗೆ ಕಿರುಕುಳ ನೀಡದಂತೆ ಎಚ್ಚರಿಕೆ ನೀಡಿದ್ದಾರೆ. ಅನಗತ್ಯ ದಬ್ಬಾಳಿಕೆಯನ್ನು ತಪ್ಪಿಸಲು ಸೂಕ್ತ ಪ್ರಕ್ರಿಯೆಯನ್ನು ಅನುಸರಿಸುವಂತೆ ಸೂಚಿಸಿದ್ದಾರೆ.
ಆಗಸ್ಟ್ 2024ರಲ್ಲಿ ಮುಂಬೈ ಮೂಲದ ಡೆವಲಪರ್ ವಿರುದ್ಧ ವಿಶೇಷ ನ್ಯಾಯಾಲಯವು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ಹೊರಡಿಸಲಾದ ಆದೇಶವನ್ನು ರದ್ದುಗೊಳಿಸುವಾಗ ನ್ಯಾಯಾಲಯವು ಈ ಅವಲೋಕನಗಳನ್ನು ಮಾಡಿದೆ.
2007ರಲ್ಲಿ ದೂರುದಾರರು ಮುಂಬೈನ ಉನ್ನತ ಮಟ್ಟದ ಯೋಜನೆಯಲ್ಲಿ ವಾಣಿಜ್ಯ ಆಸ್ತಿಯನ್ನು ಖರೀದಿಸಲು ಮತ್ತು ಅದನ್ನು ವಸತಿ ಹೋಟೆಲ್/ಅತಿಥಿ ಗೃಹವಾಗಿ ಪರಿವರ್ತಿಸಲು ನವೀಕರಣ ಕಾರ್ಯಕ್ಕಾಗಿ ಡೆವಲಪರ್ನೊಂದಿಗೆ ಒಪ್ಪಂದಗಳನ್ನು ಮಾಡಿಕೊಂಡಾಗ ಪ್ರಕರಣ ಪ್ರಾರಂಭವಾಯಿತು.
ದೂರುದಾರರು ಆಸ್ತಿ ಮತ್ತು ನವೀಕರಣ ಕಾರ್ಯ ಎರಡಕ್ಕೂ ಸೇರಿ ಡೆವಲಪರ್ಗೆ 10 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಪಾವತಿಸಿದ್ದರು. ಆದರೆ, ಆಕ್ಯುಪೆನ್ಸಿ ಪ್ರಮಾಣಪತ್ರ (OC)ಪಡೆಯುವಲ್ಲಿನ ಭಾರೀ ವಿಳಂಬವು ಅವರಿಗೆ ನಿರಾಶೆ ಉಂಟು ಮಾಡಿತ್ತು.
ಈ ಸಂಬಂಧ ಅವರು ನೀಡಿದ್ದ ಆರಂಭಿಕ ದೂರುಗಳನ್ನು ಪೊಲೀಸರು ತಿರಸ್ಕರಿದ್ದರು. ಯಾವುದೇ ಗುರುತಿಸಬಹುದಾದ ಅಪರಾಧವಿಲ್ಲ. ಅಲ್ಲದೆ ಇದು ಸಿವಿಲ್ ಸ್ವರೂಪದ ಪ್ರಕರಣವಾಗಿದೆ ಎಂದಿದ್ದರು.
ತನ್ನ ಮೊದಲ ದೂರು ತಿರಸ್ಕೃತಗೊಂಡ ಬಳಿಕ, ಜೂನ್ 2009 ರಲ್ಲಿ ದೂರುದಾರರು ಮಲಾಡ್ ಪೊಲೀಸ್ ಠಾಣೆಗೆ ಎರಡನೇ ದೂರು ನೀಡಿದ್ದರು. ಆದರೆ, ಮತ್ತೊಮ್ಮೆ ದೂರು ತಿರಸ್ಕೃತಗೊಂಡಿತ್ತು. ಈ ಪ್ರಕರಣ ಸಿವಿಲ್ ಸ್ವರೂಪದ್ದಾಗಿದೆ ಎಂದು ಪೊಲೀಸರು ಎರಡನೇ ಬಾರಿಯೂ ಹೇಳಿದ್ದರು.
ನಂತರ ಡಿಸೆಂಬರ್ 2009ರಲ್ಲಿ ದೂರುದಾರರು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯದ ಆದೇಶದ ನಂತರ ವಿಲೇ ಪಾರ್ಲೆ ಪೊಲೀಸರು ಎಫ್ಐಆರ್ ದಾಖಲಿಸಿದ್ದರು.
ಈ ಪ್ರಕರಣವು ನಂತರ ಇಡಿಯ ಗಮನ ಸೆಳೆದಿತ್ತು. ಡೆವಲಪರ್ ಹಣ ಅಕ್ರಮ ವರ್ಗಾವಣೆ ಮಾಡಿದ್ದಾರೆ ಎಂದು ಇಡಿ ಆರೋಪಿಸಿತ್ತು.
ಡೆವಲಪರ್ಗೆ ಸಂಬಂಧಿತ ಕಂಪನಿಗಳಲ್ಲಿ ಒಂದರಿಂದ ಪಡೆದ ಹಣ ಒಟ್ಟು 4.27 ಕೋಟಿ ರೂಪಾಯಿ ಅಕ್ರಮ ಆದಾಯವಾಗಿದ್ದು, ನವೀಕರಣ ಒಪ್ಪಂದಕ್ಕೆ ಸಂಬಂಧಿಸಿದ ವಂಚನೆ ಚಟುವಟಿಕೆಗಳು ಮತ್ತು ಇದಕ್ಕೆ ಸಂಬಂಧವಿದೆ ಎಂದು ಇಡಿ ಆರೋಪಿಸಿತ್ತು.
ನ್ಯಾಯಾಲಯದ ವಿಚಾರಣೆಯ ಸಮಯದಲ್ಲಿ, ಡೆವಲಪರ್ ಪರ ವಕೀಲರು ಈ ಪ್ರಕರಣದ ಹಿಂದೆ ಯಾವುದೇ ಕ್ರಿಮಿನಲ್ ಉದ್ದೇಶವಿಲ್ಲ. ಇದೊಂದು ಸಿವಿಲ್ ವಿವಾದ ಎಂದಿದ್ದರು. ಡೆವಲಪರ್ ಯಾವುದೇ ತಪ್ಪು ಮಾಡಿಲ್ಲ ಎಂದು ಪೊಲೀಸರು ಈಗಾಗಲೇ ಹೇಳಿದ್ದಾರೆ ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ದರು. ಆದರೂ,ಇಡಿ ಹಣ ವರ್ಗಾವಣೆಯ ತನ್ನ ಆರೋಪಗಳನ್ನು ಮುಂದಿಡುತ್ತಲೇ ಇತ್ತು.
ಈ ಪ್ರಕರಣವನ್ನು ಇಡಿ ನಿರ್ವಹಿಸಿದ ರೀತಿಗೆ ನ್ಯಾಯಮೂರ್ತಿ ಜಾಧವ್ ಅವರು ಅಸಮಧಾನ ವ್ಯಕ್ತಪಡಿಸಿದ್ದಾರೆ. ಪ್ರಕರಣದಲ್ಲಿ ವಂಚನೆಯ ಯಾವುದೇ ಅಂಶಗಳು ಕಂಡುಬಂದಿಲ್ಲ ಮತ್ತು ಮುಂಬೈನಲ್ಲಿ ಅಭಿವೃದ್ಧಿ ಯೋಜನೆಗಳು ಸಾಮಾನ್ಯವಾಗಿ ಹೇಗೆ ನಡೆಯುತ್ತವೆಯೋ ಅದಕ್ಕೆ ಅನುಗುಣವಾಗಿ ಡೆವಲಪರ್ ವರ್ತಿಸಿದ್ದಾರೆ ಎಂದು ನ್ಯಾಯಾಧೀಶರು ಹೇಳಿದ್ದಾರೆ. ಇಡಿಯ ಅಸ್ಪಷ್ಟ ಮತ್ತು ಆಧಾರರಹಿತ ಆರೋಪಗಳ ವಿರುದ್ದ ಕಿಡಿಕಾರಿ ದಂಡ ವಿಧಿಸಿದ್ದಾರೆ.
ಕ್ಯಾಂಪಸ್ ನೇಮಕಾತಿಗಳಲ್ಲಿ ಜಾತಿ ತಾರತಮ್ಯ : ಐಐಟಿಗಳು, ಕೇಂದ್ರ ಸರ್ಕಾರಕ್ಕೆ ಎಸ್ಸಿ ಆಯೋಗದಿಂದ ನೋಟಿಸ್


