ಅಯೋಧ್ಯ ಪ್ರಕರಣದಲ್ಲಿ ಅಲ್ಲಿ ರಾಮಮಂದಿರ ಕಟ್ಟುವಂತೆ ಸುಪ್ರೀಂ ಕೋರ್ಟ್ ತೀರ್ಪು ನೀಡದ ಬೆನ್ನಲ್ಲೇ ರಾಮಮಂದಿರ ನಿರ್ಮಾಣ ಮತ್ತು ನಿರ್ವಹಣೆಯ ಜವಾಬ್ದಾರಿಯನ್ನು ನಮಗೆ ನೀಡಬೇಕೆಂದು ಮೂರು ಟ್ರಸ್ಟ್ಗಳು ತೀವ್ರ ಪೈಪೋಟಿ ನಡೆಸುತ್ತಿವೆ.
ಸುಪ್ರೀಂ ಕೋರ್ಟ್ ತನ್ನ ನವೆಂಬರ್ 09ರ ತೀರ್ಪಿನಲ್ಲಿ ವಿವಾದಿತ ಜಾಗದಲ್ಲಿ ರಾಮಮಂದಿರ ನಿರ್ಮಾಣ ಮಾಡಲು ಟ್ರಸ್ಟ್ ಒಂದನ್ನು ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಇದೇ ಸಂದರ್ಭದಲ್ಲಿ ಮಸೀದಿ ನಿರ್ಮಾಣಕ್ಕೆ ಸುನ್ನಿ ವಕ್ಪ್ ಬೋರ್ಡ್ಗೆ ಬೇರೆಡೆ 5 ಎಕರೆ ಜಾಗ ನೀಡುವಂತೆ ಉತ್ತರ ಪ್ರದೇಶ ಸರ್ಕಾರಕ್ಕೂ ಸಹ ಆದೇಶಿಸಿತ್ತು.
ಈಗ ಕೇಂದ್ರ ಸರ್ಕಾರವು ವಿವಿಧ ಪಕ್ಷಗಳ, ವಿವಿಧ ಧಾರೆಯ, ವಿವಿಧ ಹಿನ್ನೆಲೆಯ ವ್ಯಕ್ತಿಗಳನ್ನೊಳಗೊಂಡ ಟ್ರಸ್ಟ್ ಅನ್ನು ರಚಿಸಲು ಮುಂದಾಗಿದೆ. ಇದೇ ಸಂದರ್ಭದಲ್ಲಿ ರಾಮಮಂದಿರ ಹೋರಾಟದಲ್ಲಿ ಎರಡು ದಶಕಗಳಿಂದ ತೊಡಗಿಕೊಂಡಿರುವ ವಿವಿಧ ಗುಂಪುಗಳು ವಿವಿಧ ಅಭಿಪ್ರಾಯವನ್ನು ಹೊಂದಿವೆ. ಕೆಲವು ಪುರೋಹಿತರ ಕೇಂದ್ರ ಸರ್ಕಾರ ಹೊಸ ಟ್ರಸ್ಟ್ ರಚಿಸಲಿ ಎಂದು ಬಯಸಿದರೆ ಉಳಿದವರು ಬೇಡ ಎನ್ನುತ್ತಿದ್ದಾರೆ. ಇದರ ನಡುವೆ ಶ್ರೀ ರಾಮ್ ಜನ್ಮಭೂಮಿ ನ್ಯಾಸ್, ರಾಮಾಲಯ ಮತ್ತು ಶ್ರೀ ರಾಮ್ ಜನ್ಮಭೂಮಿ ಮಂದಿರ ನಿರ್ಮಣ್ ನ್ಯಾಸ್ ಎಂಬ ಮೂರು ಟ್ರಸ್ಟ್ಗಳು ಆ ಹಕ್ಕು ತಮಗೆ ಸಿಗಬೇಕೆಂದು ಪಟ್ಟು ಹಿಡಿದಿವೆ.
ವಿಶ್ವ ಹಿಂದೂ ಪರಿಷತ್ನಿಂದ
ವಿಶ್ವ ಹಿಂದೂ ಪರಿಷತ್ (ವಿಎಚ್ಪಿ)ನ ಒಡೆತನದಲ್ಲಿರುವ ಶ್ರೀ ರಾಮ್ ಜನ್ಮಭೂಮಿ ನ್ಯಾಸ್ ಟ್ರಸ್ಟ್ 1985 ರಲ್ಲಿ ಸ್ಥಾಪನೆಯಾದ ಅತ್ಯಂತ ಹಳೆಯ ಟ್ರಸ್ಟ್ ಆಗಿದೆ. ಮಣಿದಾಸ್ ಚಾವ್ನಿಯ ಉತ್ತರಾಧಿಕಾರಿ ಮಹಂತ್ ನಿತ್ಯ ಗೋಪಾಲ್ ದಾಸ್ ಇದರ ಅಧ್ಯಕ್ಷರಾಗಿದ್ದಾರೆ.
ಟ್ರಸ್ಟ್, 1990 ರಿಂದ, ಪ್ರತಿಮೆಗಳ ತಯಾರಿಕೆ ಮತ್ತು ಕೆತ್ತನೆಯಲ್ಲಿ ತೊಡಗಿರುವ ಮೂರು ಕಾರ್ಯಾಗಾರಗಳನ್ನು (ಕಾರ್ಯಶಾಲ್) ನಿರ್ವಹಿಸುತ್ತದೆ. ಈ ಟ್ರಸ್ಟ್ಗೆ ಅಯೋಧ್ಯೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಭೂಮಿ ಇದೆ ಮತ್ತು ಟ್ರಸ್ಟ್ನ ಬ್ಯಾಂಕ್ ಖಾತೆಯಲ್ಲಿ ಸುಮಾರು 8 ಕೋಟಿ ರೂ ಇದೆ.
ಸುಪ್ರೀಂ ಕೋರ್ಟ್ ತೀರ್ಪು ಹೊರಬಂದಾಗಿನಿಂದ, ವಿಎಚ್ಪಿ ಈ ಟ್ರಸ್ಟ್ನ ಮೇಲ್ವಿಚಾರಣೆಯಲ್ಲಿ ಮಾತ್ರವೇ ರಾಮಮಂದಿರವನ್ನು ನಿರ್ಮಿಸಬೇಕೆಂದು ಹೇಳುತ್ತಿದೆ. “ಈಗ ಸಮಯ ಬಂದಿದೆ, ಕಾರ್ಯಶಾಲೆಗಳಲ್ಲಿ ಪ್ರತಿಮೆಗಳು ಸಿದ್ಧವಾಗಿದ್ದು ದೇವಾಲಯದಲ್ಲಿ ಸ್ಥಾಪಿಸಲಾಗುವುದು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಜಿ ಮತ್ತು ಪ್ರಧಾನಿ ಮೋದಿ ಜಿ ಅವರ ಅಧಿಕಾರಾವಧಿಯಲ್ಲಿ ಶೀಘ್ರದಲ್ಲೇ ಭವ್ಯವಾದ ದೇವಾಲಯವನ್ನು ನಿರ್ಮಿಸಲಾಗುವುದು. ನಾನು ಈ ಟ್ರಸ್ಟ್ನ ಮುಖ್ಯಸ್ಥನಾಗಿದ್ದೇನೆ ಮತ್ತು ಎಲ್ಲವನ್ನೂ ಯೋಗಿ ಜಿ, ಮೋದಿ ಜಿ ಮತ್ತು ನನ್ನ ಅಡಿಯಲ್ಲಿ ಮಾಡಲಾಗುವುದು” ಎಂದು ಅಧ್ಯಕ್ಷ ಮಹಂತ್ ನಿತ್ಯ ಗೋಪಾಲ್ ದಾಸ್ ಹೇಳಿದ್ದಾರೆ.
ಮಂದಿರ ನಿರ್ಮಾಣಕ್ಕಾಗಿ ಪ್ರಧಾನಿ ಯಾವುದೇ ಹೊಸ ಟ್ರಸ್ಟ್ ಅನ್ನು ರಚಿಸುವುದಿಲ್ಲ ಎಂದು ಅವರು ಹೇಳಿದ್ದಾರೆ. ಅಲ್ಲದೇ ಅಯೋಧ್ಯೆಯಲ್ಲಿ ದೇವಾಲಯದ ನಿರ್ಮಾಣಕ್ಕೆ ಹಕ್ಕು ಸಾಧಿಸಲು ಬೇರೆ ಯಾವುದೇ ಟ್ರಸ್ಟ್ಗೆ ಯಾವುದೇ ಆಧಾರವಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.
ರಾಮಾಲಯದಿಂದ
1992 ರ ಡಿಸೆಂಬರ್ 6 ರಂದು ಬಾಬರಿ ಮಸೀದಿಯನ್ನು ನೆಲಸಮಗೊಳಿಸಿದ ನಂತರ, ಆಗಿನ ಪ್ರಧಾನಿ ಪಿ.ವಿ.ನರಸಿಂಹ್ರಾವ್ರವರ ಪ್ರಯತ್ನವನ್ನು ಅನುಸರಿಸಿ 1995 ರಲ್ಲಿ ರಾಮಾಲಯ ಟ್ರಸ್ಟ್ ರಚನೆಯಾಯಿತು. ಇದರ ನೇತೃತ್ವವನ್ನು ದ್ವಾರಕಾ ಪೀಠದ ಶಂಕರಾಚಾರ್ಯರು, ಸ್ವಾಮಿ ಸ್ವರೂಪಾನಂದ್ ಸರಸ್ವತಿ ಮತ್ತು ಇತರ 25 ಸಂತರು ವಹಿಸಿದ್ದರು.
ರಾಮಲಯ ಟ್ರಸ್ಟ್ನ ಕಾರ್ಯದರ್ಶಿ ಅವಿಮುಕ್ತೇಶ್ವರಾನಂದ್ ಅವರು, ವಿಎಚ್ಪಿಯ ಶ್ರೀ ರಾಮ್ ಜನ್ಮಭೂಮಿ ನ್ಯಾಯಾಸ್ ಅವರು 2.77 ಎಕರೆ ಪ್ರದೇಶದಲ್ಲಿ ಮಾತ್ರ ದೇವಾಲಯ ನಿರ್ಮಾಣಕ್ಕೆ ಸಿದ್ಧತೆಗಳನ್ನು ಹೊಂದಿದ್ದರೆ, 70 ಎಕರೆ ಪ್ರದೇಶದಲ್ಲಿ ಭವ್ಯವಾದ ದೇವಾಲಯವನ್ನು ನಿರ್ಮಿಸಲು ರಾಮಾಲಯ ಸಿದ್ಧವಾಗಿದೆ ಎಂದು ಹೇಳಿದ್ದಾರೆ.
ದೇವಾಲಯದ ನಿರ್ಮಾಣಕ್ಕಾಗಿ ರಾಮಾಲಯ ಯಾವುದೇ ರೀತಿಯ ದೇಣಿಗೆ ಪಡೆಯಲು ಹೋಗುವುದಿಲ್ಲ ಎಂದು ಅವರು ಹೇಳಿದ್ದಾರೆ. ದೇವಾಲಯದ ನಿರ್ಮಾಣವು ಸರ್ಕಾರದ ವ್ಯಾಪ್ತಿಗೆ ಬರದ ಕಾರಣ ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ಯಾವುದೇ ಹಣಕಾಸಿನ ಸಹಾಯವನ್ನು ಸಹ ಪಡೆಯುವುದಿಲ್ಲ ಎಂದು ಟ್ರಸ್ಟ್ ಹೇಳಿಕೊಂಡಿದೆ.
ಶ್ರೀ ರಾಮ ಜನ್ಮಭೂಮಿ ಮಂದಿರ ನಿರ್ಮಣ್ ನ್ಯಾಸ್ನ ಅಧ್ಯಕ್ಷರು ಸ್ವತಃ ರಾಮಾಲಯದ ಕಾರ್ಯಕಾರಿ ಸಮಿತಿಯಲ್ಲಿರುವ ಕಾರಣ ಅವರು ನಮ್ಮ ಹಕ್ಕನ್ನು ವಿರೋಧಿಸುವುದಿಲ್ಲ ಎಂದು ರಾಮಲಯ ಟ್ರಸ್ಟ್ ಹೇಳಿದೆ. ಜೊತೆಗೆ ಅಯೋಧ್ಯೆಯಲ್ಲಿ ರಾಮ ದೇವಾಲಯವನ್ನು ನಿರ್ಮಿಸುವುದಾಗಿ ರಾಮಾಲಯ ಟ್ರಸ್ಟ್ ಈಗಾಗಲೇ ಪ್ರಧಾನ ಮಂತ್ರಿಗೆ ಪತ್ರ ಬರೆದಿದೆ.
ಶ್ರೀ ರಾಮ್ ಜನ್ಮಭೂಮಿ ಮಂದಿರ ನಿರ್ಮಣ್ ನ್ಯಾಸ್ ವತಿಯಿಂದ
ಮೇಲಿನ ಎರಡು ಟ್ರಸ್ಟ್ಗಳ ಅಭಿಪ್ರಾಯಕ್ಕೆ ವಿರುದ್ಧವಾದ ದಿಕ್ಕಿನಲ್ಲಿ ಶ್ರೀ ರಾಮ್ ಜನ್ಮಭೂಮಿ ಮಂದಿರ ನಿರ್ಮಣ್ ನ್ಯಾಸ್ ಮುಖ್ಯಸ್ಥ ಮಹಂತ್ ಜನ್ಮೆಜಯ್ ಶರಣ್, ಸುಪ್ರೀಂ ಕೋರ್ಟ್ ತನ್ನ ಇತ್ತೀಚಿನ ತೀರ್ಪಿನಲ್ಲಿ ದೇವಾಲಯದ ನಿರ್ಮಾಣವನ್ನು ಕೈಗೊಳ್ಳಲು ಈಗಾಗಲೇ ಅಸ್ತಿತ್ವದಲ್ಲಿರುವ ಯಾವುದೇ ಟ್ರಸ್ಟ್ ಅನ್ನು ಹೆಸರಿಸಿಲ್ಲ ಎಂದು ಹೇಳುತ್ತಾರೆ. ಅಯೋಧ್ಯೆಯಲ್ಲಿ ಭವ್ಯವಾದ ರಾಮ ದೇವಾಲಯದ ನಿರ್ಮಾಣವನ್ನು ಸಾಮರಸ್ಯದ ವಾತಾವರಣದಲ್ಲಿ ಪ್ರಾರಂಭಿಸಬೇಕು ಮತ್ತು ವಿಎಚ್ಪಿ ಈ ಬಗ್ಗೆ ಏಕಮಾತ್ರವಾಗಿ ಹೇಳಿಕೊಂಡರೆ ಅದಕ್ಕೆ ನಮ್ಮ ವಿರೋಧವಿದೆ ಎಂದು ಅವರು ಹೇಳಿದ್ದಾರೆ.
ಎಲ್ಲಾ ಟ್ರಸ್ಟ್ಗಳನ್ನು ಭಗವಾನ್ ರಾಮನ ಹೆಸರಿನಲ್ಲಿ ಮಾಡಲಾಗಿದ್ದು, ಅದರ ಪ್ರಕಾರ ಹೊಸದನ್ನು ರೂಪಿಸಲು ಸರ್ಕಾರವು ಎಲ್ಲಾ ಟ್ರಸ್ಟ್ಗಳಿಂದ ತಲಾ ಒಬ್ಬ ಸದಸ್ಯರನ್ನು ಸೇರಿಸಿಕೊಳ್ಳಬೇಕು ಮತ್ತು ಹೊಸ ಟ್ರಸ್ಟ್ನ ಕಾರ್ಯಚಟುವಟಿಕೆಯನ್ನು ಸರ್ಕಾರ ಮೇಲ್ವಿಚಾರಣೆ ಮಾಡಬೇಕು ಎಂದು ಇವರು ಹೇಳಿದ್ದಾರೆ.
ಹೊಸ ಟ್ರಸ್ಟ್ ರಚಿಸಲು ಸಮಯ ಬೇಕು
ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಟ್ರಸ್ಟ್ ರಚಿಸುವಂತೆ ನಿರ್ದೇಶನ ನೀಡಿದೆ, ಅದಕ್ಕೆ ಹೆಚ್ಚಿನ ಸಮಯ ಬೇಕು ಎಂದು ರಾಮ್ ಲಲ್ಲಾ ವಿರಾಜ್ಮಾನ್ನ ಮುಖ್ಯ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಹೇಳಿದ್ದಾರೆ. ಹೊಸ ಟ್ರಸ್ಟ್ ಜಾರಿಯಲ್ಲಿದ್ದರೆ ಮಾತ್ರ ಎಲ್ಲವನ್ನು ಸಕರಾತ್ಮಕವಾಗಿ ನಿಭಾಯಿಸಬಹುದು ಎಂದಿದ್ದಾರೆ.
ಭಗವಾನ್ ರಾಮನ ಹೆಸರಿನಲ್ಲಿರುವ ಎಲ್ಲಾ ಟ್ರಸ್ಟ್ಗಳು ತಮ್ಮ ಎಲ್ಲಾ ಆಸ್ತಿ ಮತ್ತು ಹಣವನ್ನು ಜೊತೆಗೆ ಈ ಉದ್ದೇಶಕ್ಕಾಗಿ ಸಂಗ್ರಹಿಸಿದ ಹಣವನ್ನು ಸರ್ಕಾರಕ್ಕೆ ಹಸ್ತಾಂತರಿಸಬೇಕು ಎಂದೂ ಅವರು ಹೇಳಿದ್ದಾರೆ.
ನಿರ್ಮೋಹಿ ಅಖಾರಾ
ನಿರ್ಮೋಹಿ ಅಖರಾ ಸಹ ದೀರ್ಘಕಾಲದ ಈ ಭೂ ವಿವಾದಕ್ಕೆ ಒಂದು ಪಕ್ಷವಾಗಿತ್ತು. ದೇವಾಲಯಕ್ಕಾಗಿ ವಿವಿಧ ಟ್ರಸ್ಟ್ಗಳು ಸಂಗ್ರಹಿಸಿದ ಎಲ್ಲಾ ಹಣ, ಇಟ್ಟಿಗೆಗಳು, ಪ್ರತಿಮೆಗಳು ಮತ್ತು ಭೂಮಿಯನ್ನು ಸರ್ಕಾರಕ್ಕೆ ಹಸ್ತಾಂತರಿಸಬೇಕು ಎಂದು ಅಖಾರ ಮಹಂತ್ ದಿನೇಂದ್ರ ದಾಸ್ ಹೇಳುತ್ತಾರೆ. ಕಾರಣ ಇವೆಲ್ಲವನ್ನೂ ಭಗವಾನ್ ರಾಮನ ಹೆಸರಿನಲ್ಲಿ ಸಂಗ್ರಹಿಸಲಾಗಿದೆ ಎಂದು ಅವರು ಹೇಳುತ್ತಾರೆ. ಟ್ರಸ್ಟ್ ಅನ್ನು ಕೇಂದ್ರ ಸರ್ಕಾರವು ನಿಯಂತ್ರಿಸಿದರೆ ಮಾತ್ರ ಅಯೋಧ್ಯೆ ಮತ್ತು ಸುತ್ತಮುತ್ತ ಸಮಗ್ರ ಅಭಿವೃದ್ಧಿಯಾಗುತ್ತದೆ ಎಂದು ಅವರು ಹೇಳಿದ್ದಾರೆ.
ಕೃಪೆ: ವಿವೇಕ್ ಅವಸ್ಥಿ- ದಿ ಫೆಡರಲ್