ಇಂಡಿಗೋ ವಿಮಾನಗಳ ಹಾರಾಟ ವ್ಯತ್ಯಯದಿಂದ ಉಂಟಾದ ರಾಷ್ಟ್ರವ್ಯಾಪಿ ವಿಮಾನಯಾನ ಬಿಕ್ಕಟ್ಟಿನ ಕುರಿತು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ವಿಚಾರಣೆ ಅಥವಾ ನ್ಯಾಯಾಂಗ ತನಿಖೆ ಮಾಡಿಸುವಂತೆ ಕೋರಿ ರಾಜ್ಯಸಭಾ ಸಂಸದ ಜಾನ್ ಬ್ರಿಟ್ಟಾಸ್ ಪ್ರಧಾನಿ ನರೇಂದ್ರ ಮೋದಿಯವರಿಗೆ ಶನಿವಾರ (ಡಿಸೆಂಬರ್ 6) ಪತ್ರ ಬರೆದಿದ್ದಾರೆ.
ವಿಮಾನ ಪ್ರಯಾಣಿಕರ ಸುರಕ್ಷತೆಗಾಗಿ ತಂದ ನಿಯಮವನ್ನು ವಿಮಾನಯಾನ ಸಂಸ್ಥೆಗಳು ತಮ್ಮ ಲಾಭಕ್ಕಾಗಿ ದುರುಪಯೋಗಪಡಿಸಿಕೊಂಡವರು, ಜನರಿಗೆ ಅತಿ ಹೆಚ್ಚು ದರ ವಿಧಿಸಿದವು. ಆ ನಂತರ ನಿಯಮವೇ ವಿಫಲವಾದಾಗ ಅದನ್ನು ರದ್ದುಗೊಳಿಸಿ ಸರ್ಕಾರ ಮತ್ತು ವಿಮಾನಯಾನ ನಿಯಂತ್ರಣ ಪ್ರಾಧಿಕಾರಗಳು ತಮ್ಮ ದೊಡ್ಡ ತಪ್ಪನ್ನು ಮುಚ್ಚಿಹಾಕಿದವು ಎಂಬುದು ಜಾನ್ ಬ್ರಿಟ್ಟಾಸ್ ಅವರ ಮುಖ್ಯ ಆರೋಪವಾಗಿದೆ.
“ದೇಶದ ಅತಿ ದೊಡ್ಡ ವಿಮಾನಯಾನ ಕಂಪನಿಯಾದ ಇಂಡಿಗೋ (ಇದು ದೇಶೀಯ ಮಾರುಕಟ್ಟೆಯಲ್ಲಿ 63-65% ಪಾಲನ್ನು ಹೊಂದಿದೆ) ಇದ್ದಕ್ಕಿದ್ದಂತೆ ಸಾವಿರಾರು ವಿಮಾನಗಳನ್ನು ರದ್ದುಗೊಳಿಸಿದ್ದರಿಂದ ಅಥವಾ ತಡಮಾಡಿದ್ದರಿಂದ ದೇಶದಾದ್ಯಂತ ವಿಮಾನ ಪ್ರಯಾಣ ವ್ಯವಸ್ಥೆ ಸಂಪೂರ್ಣವಾಗಿ ತತ್ತರಿಸಿ ಹೋಯಿತು”
“ಒಂದೇ ಖಾಸಗಿ ಕಂಪನಿಗೆ ಇಷ್ಟೊಂದು ದೊಡ್ಡ ಮಾರುಕಟ್ಟೆ ಪ್ರಾಬಲ್ಯ (monopoly) ಇರುವುದರಿಂದ, ಆ ಒಂದು ಕಂಪನಿಯ ವೈಫಲ್ಯವೇ ಒಟ್ಟಾರೆಯಾಗಿ ದೇಶದ ವಿಮಾನಯಾನ ವ್ಯವಸ್ಥೆಯ ವೈಫಲ್ಯವಾಗಿ ಪರಿಣಮಿಸಿತು”
“ಇದರಿಂದ ಸಾವಿರಾರು ಪ್ರಯಾಣಿಕರು ವಿಮಾನ ನಿಲ್ದಾಣದಲ್ಲೇ ನೆಲದಲ್ಲಿ ಮಲಗುವ ಪರಿಸ್ಥಿತಿ ಉಂಟಾಯಿತು. ತೀವ್ರ ಆನಾರೋಗ್ಯದಿಂದ ಇದ್ದ ತಮ್ಮ ಸಂಬಂಧಿಕರನ್ನು ತುರ್ತಾಗಿ ನೋಡಲು ಹೊರಟವರು, ಮೃತ ಸಂಬಂಧಿಕರ ಮುಖವನ್ನು ಕೊನೆಯದಾಗಿ ಕಾಣಲು ತೆರಳುತ್ತಿದ್ದವರು, ಆಪ್ತರ ಮದುವೆಯಲ್ಲಿ ಪಾಲ್ಗೊಳ್ಳಲು ಹೊರಟವರು, ಉದ್ಯೋಗ ಸಂದರ್ಶನಕ್ಕೆ ಹಾಜರಾಗಲು ಅಥವಾ ಕೆಲಸದ ಮೊದಲ ದಿನ ಕಚೇರಿಗೆ ತೆರಳಲು ಹೊರವರು ಸೇರಿದಂತೆ ಸಾವಿರಾರು ಜನರು ಸಂಕಷ್ಟಗಳನ್ನು ಎದುರಿಸಿದರು. ಹಾಗಾಗಿ, ವಿಮಾನಯಾನ ಬಿಕ್ಕಟ್ಟಿನಿಂದ ಉಂಟಾದ ಮಾನವೀಯ ನೋವು ಮತ್ತು ಆರ್ಥಿಕ ನಷ್ಟ ಎರಡೂ ಎಂದಿಗೂ ಕಂಡಿರದಷ್ಟು ದೊಡ್ಡದು ಮತ್ತು ಸಾಕ್ಷ್ಯಕ್ಕೆ ನಿಲುಕದ್ದು” ಎಂದು ಜಾನ್ ಬ್ರಿಟ್ಟಾಸ್ ಪ್ರಧಾನಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಈ ಒತ್ತಡವನ್ನು ಮೊದಲೇ ಊಹಿಸಬಹುದಾಗಿದ್ದರೂ, ವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಬಿದ್ದ ನಂತರ, ಮೊದಲು ಕಟ್ಟುನಿಟ್ಟಾಗಿ ಜಾರಿಗೊಳಿಸಿದ್ದ ಸುರಕ್ಷಾ ನಿಯಮಗಳನ್ನೇ ತುರ್ತಾಗಿ ದುರ್ಬಲಗೊಳಿಸಲಾಯಿತು ಅಥವಾ ಹಿಂತೆಗೆದುಕೊಳ್ಳಲಾಯಿತು. ಇದು ಗಂಭೀರವಾದ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ: ಪ್ರಯಾಣಿಕರ ಸುರಕ್ಷತೆಯನ್ನು ಕೇವಲ ವ್ಯಾಪಾರಿ ಲಾಭ ಮತ್ತು ಸೌಲಭ್ಯಕ್ಕಾಗಿ ತ್ಯಾಗ ಮಾಡಲಾಯಿತೇ? ಎಂದು ಬ್ರಿಟ್ಟಾಸ್ ಪ್ರಶ್ನಿಸಿದ್ದಾರೆ.
ವಿಮಾನಯಾನವನ್ನು ನೋಡಿಕೊಳ್ಳುವ ಸರ್ಕಾರದ ನಿಯಂತ್ರಣ ಸಂಸ್ಥೆಗಳು ತಮ್ಮ ಕೆಲಸವನ್ನು ಸರಿಯಾಗಿ ಮಾಡುತ್ತಿಲ್ಲ. ಎರಡು ದೊಡ್ಡ ವಿಮಾನ ಕಂಪನಿಗಳು ಬಹುತೇಕ ಎಲ್ಲಾ ವಿಮಾನ ಸೇವೆಗಳನ್ನು ತಮ್ಮ ಕಬಳಿಕೆಯಲ್ಲಿ ಇಟ್ಟುಕೊಂಡಿವೆ, ಇದರಿಂದ ಇತರ ಕಂಪನಿಗಳಿಗೆ ಸ್ಪರ್ಧೆ ಮಾಡುವ ಅವಕಾಶ ಕಡಿಮೆಯಾಗುತ್ತಿದೆ.
ಅದೇ ಸಮಯದಲ್ಲಿ, ಹಲವಾರು ಪ್ರಮುಖ ವಿಮಾನ ನಿಲ್ದಾಣಗಳನ್ನು ಖಾಸಗಿ ಕಂಪನಿಗಳಿಗೆ ವಹಿಸಲಾಗಿ, ಅವುಗಳನ್ನು ವ್ಯವಹಾರದಂತೆ ನಡೆಸಲಾಗುತ್ತಿದೆ. ಇದರ ಪರಿಣಾಮವಾಗಿ ಹೊಸ ವಿಮಾನ ನಿಲ್ದಾಣಗಳು ಅಥವಾ ಚಿಕ್ಕ ಪ್ರಾದೇಶಿಕ ವಿಮಾನ ನಿಲ್ದಾಣಗಳಿಗೆ ಬೆಳೆಯಲು ಅವಕಾಶ ಸಿಗುತ್ತಿಲ್ಲ.
“ಇದಲ್ಲದೆ, ವಿಮಾನಗಳ ಸುರಕ್ಷತಾ ನಿಯಮಗಳನ್ನು ಕೂಡ ಸಡಿಲಗೊಳಿಸಲಾಗುತ್ತಿದೆ. ವಿಮಾನಯಾನ ಕಂಪನಿಗಳು ಜನರಿಂದ ಹೆಚ್ಚು ಹಣ ವಸೂಲಿ ಮಾಡಿ ಲಾಭ ಪಡೆಯುತ್ತಿದ್ದರೂ, ಸರ್ಕಾರ ಇದನ್ನು ತಡೆಯಲು ಕ್ರಮಕೈಗೊಳ್ಳುತ್ತಿಲ್ಲ. ಸರ್ಕಾರಕ್ಕೆ ಅಧಿಕಾರವೂ ಇದೆ, ಸಂಸತ್ ಸಮಿತಿಯ ಸಲಹೆಯೂ ಇದೆ. ಆದರೂ, ಅವರು ಸರಿಯಾದ ಕ್ರಮ ತೆಗೆದುಕೊಳ್ಳದೆ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ” ಜಾನ್ ಬ್ರಿಟ್ಟಾಸ್ ಪತ್ರದಲ್ಲಿ ಆರೋಪಿಸಿದ್ದಾರೆ.
“ವಿಮಾನಯಾನ ಕ್ಷೇತ್ರದಲ್ಲಿ ಪ್ರಸ್ತುತ ಇರುವ ಸಮಸ್ಯೆಗಳು ತುಂಬಾ ಗಂಭೀರವಾದದ್ದು, ಅದನ್ನು ಆಂತರಿಕ ಪರಿಶೀಲನೆಗಳು ಅಥವಾ ಸಲಹಾ ಪತ್ರಗಳ ಮೂಲಕ ಸರಿಪಡಿಸುವುದು ಸಾಧ್ಯವಿಲ್ಲ. ಸರ್ಕಾರದ ಮೇಲಿನ ಜನರ ನಂಬಿಕೆ ಉಳಿಯಬೇಕಾದರೆ, ಸಂಪೂರ್ಣವಾಗಿ ಸ್ವತಂತ್ರ, ಪಾರದರ್ಶಕ ಮತ್ತು ನಿಗದಿತ ಅವಧಿಯಲ್ಲಿ ಮುಗಿಯುವ ದೊಡ್ಡ ತನಿಖೆಯನ್ನು ಆರಂಭಿಸಬೇಕು. ಈ ತನಿಖೆಗೆ ನಿಯಂತ್ರಣ ಇಲಾಖೆಯ ದಾಖಲೆಗಳು, ವಿಮಾನಯಾಣ ಕಂಪನಿಗಳು ಎಷ್ಟು ಸಿದ್ಧವಾಗಿದ್ದವು ಎಂಬ ಮಾಹಿತಿಗಳು, ಹಾಗೂ ಟಿಕೆಟ್ ದರ ಏರಿಕೆಯ ವಿವರಗಳು ಎಲ್ಲವೂ ಲಭ್ಯವಾಗಬೇಕು. ಈ ಎಲ್ಲಾ ವಿಷಯಗಳನ್ನು ಸಂಪೂರ್ಣವಾಗಿ ಪರಿಶೀಲಿಸಲು ಒಂದು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಅಥವಾ ನ್ಯಾಯಾಂಗ ತನಿಖಾ ಆಯೋಗವನ್ನು ರಚಿಸಬೇಕು. ಜೊತೆಗೆ, ದೊಡ್ಡ ಪ್ರಮಾಣದ ವಿಳಂಬಗಳು ಅಥವಾ ಸೇವಾ ವ್ಯತ್ಯಯಗಳು ಸಂಭವಿಸಿದಾಗ ಪ್ರಯಾಣಿಕರಿಗೆ ಸ್ವಯಂ ಪರಿಹಾರ, ನ್ಯಾಯಯುತ ಸೇವೆ ಮತ್ತು ಪಾರದರ್ಶಕ ಟಿಕೆಟ್ ದರ ದೊರಕುವಂತೆ ಮಾಡಲು ‘ಪ್ರಯಾಣಿಕರ ಹಕ್ಕುಗಳ ಕಾಯ್ದೆ’ಯನ್ನು ತಕ್ಷಣ ಜಾರಿಗೊಳಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ಸಂಸದ ಜಾನ್ ಬ್ರಿಟ್ಟಾಸ್ ಪತ್ರದಲ್ಲಿ ಒತ್ತಿ ಹೇಳಿದ್ದಾರೆ.


