ಶನಿವಾರ (ಡಿಸೆಂಬರ್ 20, 2025) ಬೆಳಗಿನ ಜಾವ ಅಸ್ಸಾಂನ ಹೊಜೈ ಜಿಲ್ಲೆಯಲ್ಲಿ ಸಾಯಿರಂಗ್-ನವದೆಹಲಿ ರಾಜಧಾನಿ ಎಕ್ಸ್ಪ್ರೆಸ್ ರೈಲು ಡಿಕ್ಕಿ ಹೊಡೆದ ಪರಿಣಾಮ ಎಂಟು ಆನೆಗಳು ಸಾವನ್ನಪ್ಪಿದ್ದು, ಒಂದು ಗಾಯಗೊಂಡಿದೆ ಎಂದು ವರದಿಯಾಗಿದೆ.
ಘಟನೆಯಲ್ಲಿ ಐದು ಬೋಗಿಗಳು ಮತ್ತು ರೈಲಿನ ಇಂಜಿನ್ ಹಳಿತಪ್ಪಿದ್ದು, ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಈಶಾನ್ಯ ಗಡಿ ರೈಲ್ವೆ (ಎನ್ಎಫ್ಆರ್) ವಕ್ತಾರರು ತಿಳಿಸಿದ್ದಾರೆ.
ನವದೆಹಲಿಗೆ ತೆರಳುತ್ತಿದ್ದ ರೈಲು ಬೆಳಗಿನ ಜಾವ 2.17ರ ಸುಮಾರಿಗೆ ಆನೆಗಳ ಹಿಂಡಿಗೆ ಡಿಕ್ಕಿ ಹೊಡೆದಿದೆ ಎಂದು ಹೇಳಿದ್ದಾರೆ.
ಹೊಜೈ ಜಿಲ್ಲೆಯ ಚಾಂಗ್ಜುರೈ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ನಾಗಾಂವ್ ವಿಭಾಗೀಯ ಅರಣ್ಯ ಅಧಿಕಾರಿ ಸುಹಾಶ್ ಕದಮ್ ಹೇಳಿರುವುದಾಗಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಸುಹಾಶ್ ಕದಮ್ ಮತ್ತು ಇತರ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ತಲುಪಿದ್ದಾರೆ ಎಂದು ಪಿಟಿಐ ಉಲ್ಲೇಖಿಸಿದೆ.
ಘಟನೆ ಹಿನ್ನೆಲೆ, ಜಮುನಾಮುಖ್-ಕಂಪುರ ವಿಭಾಗದ ಮೂಲಕ ಹಾದುಹೋಗಬೇಕಿದ್ದ ರೈಲುಗಳನ್ನು ಯುಪಿ ಮಾರ್ಗದ ಮೂಲಕ ತಿರುಗಿಸಲಾಗಿದ್ದು, ಪುನಃಸ್ಥಾಪನೆ ಕಾರ್ಯ ನಡೆಯುತ್ತಿದೆ ಸುಹಾಶ್ ಕದಮ್ ತಿಳಿಸಿದ್ದಾರೆ.


