ಬಾಂಗ್ಲಾದೇಶದ ಮೈಮೆನ್ಸಿಂಗ್ ಜಿಲ್ಲೆಯಲ್ಲಿ ಹಿಂದೂ ಯುವಕ ದೀಪು ಚಂದ್ರ ದಾಸ್ ಅವರ ಮೇಲೆ ನಡೆದ ಗುಂಪು ಹಲ್ಲೆಯನ್ನು ಜಮಿಯತ್ ಉಲಮಾ-ಇ-ಹಿಂದ್ ಅಧ್ಯಕ್ಷ ಮೌಲಾನಾ ಮಹಮೂದ್ ಮದನಿ ಭಾನುವಾರ ತೀವ್ರವಾಗಿ ಖಂಡಿಸಿದ್ದಾರೆ. ಇಂತಹ ಕೃತ್ಯಗಳು ನಾಚಿಕೆಗೇಡು ಮತ್ತು ಇಸ್ಲಾಂ ವಿರುದ್ಧವಾಗಿವೆ ಎಂದು ಹೇಳಿದ್ದಾರೆ.
ನೇಪಾಳ ಮತ್ತು ಪ್ರಪಂಚದಾದ್ಯಂತ ಹೆಚ್ಚುತ್ತಿರುವ ಉಗ್ರವಾದವನ್ನು ದೃಢವಾಗಿ ಎದುರಿಸಬೇಕು ಎಂದು ಅವರು ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಸಮುದಾಯಕ್ಕೆ ಎಚ್ಚರಿಕೆ ನಿಡಿದ್ದಾರೆ.
“ಈ ಹತ್ಯೆ ನಮಗೆ ಅವಮಾನ ಮತ್ತು ನೋವು ತಂದಿದೆ. ಇದು ತುಂಬಾ ನಾಚಿಕೆಗೇಡಿನ ಸಂಗತಿ. ಮುಸ್ಲಿಮರು ಇಂತಹ ಕೆಲಸಗಳನ್ನು ಮಾಡಿದಾಗ, ನಾವು ನಾಚಿಕೆಯಿಂದ ತಲೆ ತಗ್ಗಿಸುತ್ತೇವೆ, ನಾಗರಿಕ ಸಮಾಜದಲ್ಲಿ ಯಾರಿಗೂ ಇನ್ನೊಬ್ಬ ಮನುಷ್ಯನನ್ನು ಕೊಲ್ಲುವ ಹಕ್ಕಿಲ್ಲ” ಎಂದು ಅವರು ಹೇಳಿದರು.
“ತಪ್ಪು ಯಾರೇ ಮಾಡಿದರೂ ಸೂಕ್ತ ಶಿಕ್ಷೆ ಪ್ರಕ್ರಿಯೆಯನ್ನು ಅನುಸರಿಸಬೇಕು. ಶಿಕ್ಷೆಗೆ ಒಂದು ಪ್ರಕ್ರಿಯೆ ಇದೆ, ಆ ಪ್ರಕ್ರಿಯೆಯನ್ನು ಅನುಸರಿಸಬೇಕು. ಅಪರಾಧಿಗಳು ಮುಸ್ಲಿಮರಾಗಿದ್ದರೆ ಮತ್ತು ಬಲಿಪಶು ಮುಸ್ಲಿಮನಲ್ಲದಿದ್ದರೆ ಅಪರಾಧವು ಇನ್ನಷ್ಟು ಘೋರವಾಗುತ್ತದೆ. ನಾವು ಇದನ್ನು ಬಲವಾಗಿ ಖಂಡಿಸುತ್ತೇವೆ” ಎಂದು ಅವರು ಹೇಳಿದರು.
ಯಾವುದೇ ಸಂದರ್ಭಗಳಲ್ಲಿ ಇಸ್ಲಾಂ ಹಿಂಸೆ ಅಥವಾ ಅವಮಾನವನ್ನು ಅನುಮತಿಸುವುದಿಲ್ಲ ಎಂದು ಮದನಿ ಹೇಳಿದರು. “ಯಾರನ್ನಾದರೂ ಕೊಲ್ಲುವುದು ಅಥವಾ ಯಾರನ್ನಾದರೂ ಅವಮಾನಿಸುವುದು ಇಸ್ಲಾಂ ಅನುಮತಿಸದ ವಿಷಯ. ಇಸ್ಲಾಂ ಯಾವುದೇ ಬೆಲೆಯಲ್ಲಿ ಅದನ್ನು ಅನುಮತಿಸುವುದಿಲ್ಲ. ಎಷ್ಟೇ ಖಂಡನೆಗಳು ಸಾಕಾಗುವುದಿಲ್ಲ” ಎಂದು ಅವರು ಹೇಳಿದರು.
ಉಗ್ರವಾದದ ಹೆಚ್ಚುತ್ತಿರುವ ಹರಡುವಿಕೆಯ ಬಗ್ಗೆಯೂ ಅವರು ಕಳವಳ ವ್ಯಕ್ತಪಡಿಸಿದರು. “ಈ ಇಡೀ ಉಪಖಂಡದಾದ್ಯಂತ ಉಗ್ರವಾದ ಹೆಚ್ಚುತ್ತಿರುವುದು ದುರದೃಷ್ಟಕರ. ಇದನ್ನು ಈ ಪ್ರದೇಶ ಮತ್ತು ವಿಶ್ವಾದ್ಯಂತ ನಿಗ್ರಹಿಸಿ ಎದುರಿಸಬೇಕು. ಇಡೀ ಜಗತ್ತು ಇದೇ ರೀತಿಯ ಪರಿಸ್ಥಿತಿಯನ್ನು ಎದುರಿಸುತ್ತಿದೆ” ಎಂದು ಅವರು ಹೇಳಿದರು.
ಬಾಂಗ್ಲಾದೇಶದಲ್ಲಿ ಸರಣಿ ಹಿಂಸಾತ್ಮಕ ಘಟನೆಗಳ ನಂತರ ಹೆಚ್ಚಿದ ಉದ್ವಿಗ್ನತೆಯ ನಡುವೆ ಈ ಖಂಡನೆ ಬಂದಿತು. ಪ್ರವಾದಿ ಮುಹಮದ್ ಅವರನ್ನು ಅವಮಾನಿಸಲಾಗಿದೆ ಎಂಬ ಆರೋಪದ ಮೇಲೆ ಗುಂಪೊಂದು ಥಳಿಸಿ ಕೊಂದ ಆರೋಪದ ಮೇಲೆ 27 ವರ್ಷದ ದೀಪು ಚಂದ್ರ ದಾಸ್ ಅವರ ಹತ್ಯೆಗೆ ಸಂಬಂಧಿಸಿದಂತೆ, ಅಧಿಕಾರಿಗಳು ಹತ್ತು ಜನರನ್ನು ಬಂಧಿಸಿದ್ದಾರೆ. ಗುಂಪುಹತ್ಯೆ ಬಳಿಕ ಯುವಕನ ದೇಹಕ್ಕೆ ಬೆಂಕಿ ಹಚ್ಚಲಾಯಿತು. ಈ ಘಟನೆ ಡಿಸೆಂಬರ್ 18 ರಂದು ನಡೆದಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಯಿತು.
ಬಾಂಗ್ಲಾದೇಶದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಅವರು ಎಕ್ಸ್ನಲ್ಲಿ ಪೋಸ್ಟ್ ಮಾಡುವ ಮೂಲಕ ಬಂಧನಗಳನ್ನು ದೃಢಪಡಿಸಿದರು. ಕಾನೂನು ಜಾರಿ ಸಂಸ್ಥೆಗಳು ಈ ಪ್ರಕರಣದಲ್ಲಿ ಹತ್ತು ಜನರನ್ನು ವಶಕ್ಕೆ ಪಡೆದಿವೆ ಎಂದು ಹೇಳಿದರು. ಕ್ಷಿಪ್ರ ಕಾರ್ಯಾಚರಣಾ ಬೆಟಾಲಿಯನ್ ಏಳು ಶಂಕಿತರನ್ನು ಬಂಧಿಸಿದರೆ, ಪೊಲೀಸರು ಇತರ ಮೂವರನ್ನು ಬಂಧಿಸಿದ್ದಾರೆ.
ಈ ಮಧ್ಯೆ, ಬಂದರು ನಗರದಲ್ಲಿನ ಭಾರತದ ಸಹಾಯಕ ಹೈಕಮಿಷನ್ನಲ್ಲಿ ನಡೆದ ಭದ್ರತಾ ಘಟನೆಯ ನಂತರ ಚಿತ್ತಗಾಂಗ್ನಲ್ಲಿರುವ ಭಾರತೀಯ ವೀಸಾ ಅರ್ಜಿ ಕೇಂದ್ರವು ಭಾನುವಾರದಿಂದ ಎಲ್ಲಾ ವೀಸಾ ಕಾರ್ಯಾಚರಣೆಗಳನ್ನು ತಕ್ಷಣ ಸ್ಥಗಿತಗೊಳಿಸುವುದಾಗಿ ಘೋಷಿಸಿತು. ಭದ್ರತಾ ಕಾಳಜಿಯಿಂದಾಗಿ ಮುಂದಿನ ಸೂಚನೆ ಬರುವವರೆಗೆ ವೀಸಾ ಸೇವೆಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಕೇಂದ್ರವು ಹೇಳಿಕೆಯಲ್ಲಿ ತಿಳಿಸಿದೆ.
ಬಾಂಗ್ಲಾದೇಶದಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದ್ದು, ಪ್ರಮುಖ ಕಾರ್ಯಕರ್ತ ಷರೀಫ್ ಉಸ್ಮಾನ್ ಹಾದಿ ಅವರ ಹತ್ಯೆಯ ನಂತರ ಢಾಕಾದಲ್ಲಿ ಪ್ರತಿಭಟನೆಗಳು ವರದಿಯಾಗಿವೆ. ಇದು ಕಾನೂನು -ಸುವ್ಯವಸ್ಥೆ ಮತ್ತು ದೇಶದಲ್ಲಿ ಹೆಚ್ಚುತ್ತಿರುವ ಹಿಂಸಾಚಾರದ ಬಗ್ಗೆ ಭಯವನ್ನು ಹೆಚ್ಚಿಸಿದೆ.


