ನರೇಗಾ ಯೋಜನೆ ಮುಂದುವರಿಸಲು ರಾಷ್ಟ್ರಪತಿ ಆದೇಶ ಹೊರಡಿಸಬೇಕು. ವಿಬಿ–ಜಿ ರಾಮ್ ಜಿ ಕಾಯ್ದೆಯನ್ನು ರಾಜ್ಯ ಸರ್ಕಾರ ತಿರಸ್ಕರಿಸಬೇಕು ಎಂದು ಆಗ್ರಹಿಸಿ ‘ಮನರೇಗಾ ರಕ್ಷಣಾ ಒಕ್ಕೂಟ’ದ ಮಹಾ ಪಂಚಾಯತ್ನಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ಸೋಮವಾರ (ಫೆ.2) ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಮನರೇಗಾ ರಕ್ಷಣಾ ಒಕ್ಕೂಟದ ವತಿಯಿಂದ ಮನರೇಗಾ ಯೋಜನೆ ಉಳಿಸಿ ಆಂದೋಲನದ ಭಾಗವಾಗಿ ನಡೆದ ‘ಮಹಾ ಪಂಚಾಯತ್ನಲ್ಲಿ, ಪಂಚಾಯತ್ ತೆಗೆದುಕೊಂಡಿರುವ ನಿರ್ಣಯಗಳನ್ನು ರಾಜ್ಯ ಸರ್ಕಾರ ರಾಜ್ಯಪಾಲರ ಮೂಲಕ ರಾಷ್ಟ್ರಪತಿಗೆ ಕಳುಹಿಸಿಕೊಡಬೇಕು. ನರೇಗಾವನ್ನು ಬಲಗೊಳಿಸುವ ಕ್ರಮಗಳನ್ನು ರಾಜ್ಯ ಸರ್ಕಾರ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.
ಹೋರಾಟಗಾರ ನೂರ್ ಶ್ರೀಧರ್ ಮಾತನಾಡಿ, ಗ್ರಾಮೀಣ ಭಾಗದ ಬಡವರ ಬೆನ್ನೆಲುಬಾಗಿದ್ದ ಸಂವಿಧಾನದಬದ್ಧ ಹಕ್ಕು ನರೇಗಾ ಯೋಜನೆಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ. ಜನರನ್ನು ಅತಂತ್ರಗೊಳಿಸುವ, ಎಲ್ಲಾ ತೀರ್ಮಾನಗಳನ್ನು ಕೈಗೊಳ್ಳುವ ಹಕ್ಕನ್ನು ಕೇಂದ್ರ ಸರ್ಕಾರವೇ ವಶಪಡಿಸಿಕೊಳ್ಳುವ ಮತ್ತು ಜವಾಬ್ದಾರಿಯನ್ನು ರಾಜ್ಯ ಸರ್ಕಾರದ ಮೇಲೆ ಹೊರಿಸುವ ವಿಬಿ-ಜಿ ರಾಮ್ ಜಿ ಕಾಯ್ದೆಯನ್ನು ಜಾರಿಗೆ ತಂದಿದೆ ಎಂದರು.
ವಿಕೇಂದ್ರೀಕರಣದ ಸಂಕೇತವಾಗಿದ್ದ ನರೇಗಾವನ್ನು ರದ್ದು ಮಾಡಿ ಈಗ ಕೇಂದ್ರೀಕರಣದ ಯೋಜನೆಯನ್ನು ಜಾರಿಗೆ ತರಲಾಗಿದೆ. ನರೇಗಾವನ್ನು ಮುಂದುವರಿಸಬೇಕು. ಅಲ್ಲದೇ ಕುಟುಂಬಕ್ಕೆ ನೂರು ದಿನ ಕೆಲಸ ಎಂಬುದನ್ನು ಪ್ರತಿ ವ್ಯಕ್ತಿಗೆ ನೂರು ದಿನ ಎಂದು ಪರಿವರ್ತಿಸಬೇಕು. ಪ್ರತಿ ಕುಟುಂಬಕ್ಕೆ ಸರಾಸರಿ 300 ದಿನ ಕೆಲಸ ಸಿಗುವಂತೆ ಮಾಡಬೇಕು. ಕನಿಷ್ಠ ಕೂಲಿಯನ್ನು 600 ರೂ.ಕ್ಕೆ ಏರಿಸಬೇಕು ಎಂದು ಅವರು ಒತ್ತಾಯಿಸಿದರು.
ನರೇಗಾ ಯೋಜನೆಯಲ್ಲಿ ಬೇಡಿಕೆ ಇದ್ದಷ್ಟು ದಿನ ಕೆಲಸ ಎಂದಿತ್ತು, ‘ವಿಬಿ-ಜಿ ರಾಮ್ ಜಿ’ಯಲ್ಲಿ ಅಗತ್ಯ ಇರುವಷ್ಟು ಕೆಲಸ ಎಂದು ಪರಿವರ್ತನೆ ಮಾಡಲಾಗಿದೆ. ಕೆಲಸ ಮಾಡುವ ಹಕ್ಕು ಕಿತ್ತುಕೊಳ್ಳಲಾಗಿದೆ. ಉದ್ಯೋಗ ಖಾತ್ರಿ ಇಲ್ಲದಾಗಿದೆ. ಯಾವ ಕೆಲಸ ಎಂಬುವುದನ್ನು ಗ್ರಾಮ ಪಂಚಾಯಿತಿ ತೀರ್ಮಾನ ಮಾಡುತ್ತಿತ್ತು. ಇನ್ನು ಮುಂದೆ ಕೇಂದ್ರ ಸರ್ಕಾರ ನಿರ್ಧಾರ ಮಾಡುತ್ತದೆ. ಕೃಷಿ ಕೂಲಿಯನ್ನು ಹೊರಗಿಡಲಾಗಿದೆ. ಕೇಂದ್ರ ಸರ್ಕಾರ ರಾಜ್ಯದ ಪಾಲನ್ನು ಬಿಟ್ಟು 2.3 ಲಕ್ಷ ಕೋಟಿ ರೂ. ಈ ಯೋಜನೆಗೆ ಮೀಸಲಿಡಬೇಕಿತ್ತು. ಆದರೆ, ಬಜೆಟ್ನಲ್ಲಿ 95 ಸಾವಿರ ಕೋಟಿ ರೂ. ಮೀಸಲಿಟ್ಟಿದೆ. ಇದು ಕೆಲಸ ಕಡಿಮೆ ಮಾಡುವ ಹುನ್ನಾರ ಎಂದು ದೂರಿದರು.
ಶೇ.40 ರಷ್ಟು ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಬೇಕು ಎಂಬ ಹೊರೆ ಹೊರಿಸಲಾಗಿದೆ. ಇದನ್ನು ತೆಗೆದು ಹಾಕಬೇಕು. ನರೇಗಾದಲ್ಲಿ ಮಧ್ಯವರ್ತಿಗಳಿಗೆ ಅವಕಾಶ ಇರಲಿಲ್ಲ. ‘ವಿಬಿ-ಜಿ ರಾಮ್ ಜಿ’ಯಲ್ಲಿ ಮಧ್ಯವರ್ತಿಗಳಿಗೆ ಅವಕಾಶ ನೀಡಲಾಗಿದೆ. ಹಾಗಾಗಿ ನರೇಗಾವನ್ನು ಮತ್ತೆ ಸ್ಥಾಪಿಸಬೇಕು ಎಂದು ನೂರ್ ಶ್ರೀಧರ್ ಒತ್ತಾಯಿಸಿದರು.
ಮಹಾಪಂಚಾಯತ್ನಲ್ಲಿ ಮನರೇಗಾ ರಕ್ಷಣಾ ಒಕ್ಕೂಟ, ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ, ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ, ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ, ಕರ್ನಾಟಕ ಜನಶಕ್ತಿ, ಸಿಪಿಐಎಂಎಲ್, ನಮ್ಮೂರ ಭೂಮಿ ನಮಗಿರಲಿ ಅನ್ಯರಿಗಲ್ಲ ಸಂಘಟನೆ, ಜಾಗೃತ ಮಹಿಳಾ ಒಕ್ಕೂಟ, ಬಳ್ಳಿ ಬಳಗ–ಸುಸ್ಥಿರ ಕೃಷಿಕರ ವೇದಿಕೆ, ಎಫ್ಇಎಸ್, ಭೂಶಕ್ತಿ ಕೇಂದ್ರ, ಎಐಎಆರ್ಎಲ್ಐ, ಆರ್ಐಎಆರ್ಡಬ್ಲಯೂ, ರೈತ ಸಂಘಟನೆಗಳು, ದಲಿತ ಸಂಘರ್ಷ ಸಮಿತಿಗಳು, ಎಪಿಯು, ಕಾರ್ಮಿಕ ಸಂಘಟನೆಗಳ ಮುಖಂಡರು, ಸಾಹಿತಿಗಳು, ಚಿಂತಕರು ಭಾಗವಹಿಸಿದ್ದರು.


