Homeಅಂತರಾಷ್ಟ್ರೀಯ'ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ': ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

- Advertisement -
- Advertisement -

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ.

ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ ಹಲ್ಲೆ, ಹಸಿವು ಮತ್ತು ಲೈಂಗಿಕ ದೌರ್ಜನ್ಯದಂತಹ ಗಂಭೀರ ಹಿಂಸೆಗಳಿಗೆ ಒಳಗಾಗುತ್ತಿದ್ದಾರೆ ಎಂದು ಸಾಕ್ಷ್ಯಗಳನ್ನು ಒಳಗೊಂಡ ವರದಿ ಬಿಡುಗಡೆ ಮಾಡಿದೆ.

ಅಕ್ಟೋಬರ್ 2023ರ ಹಮಾಸ್ ದಾಳಿಯ ನಂತರ ಇಸ್ರೇಲ್‌ನಿಂದ ಬಂಧನಕ್ಕೊಳಗಾದ 59 ಪ್ಯಾಲೆಸ್ತೀನ್ ಪತ್ರಕರ್ತರನ್ನು ಸಿಪಿಜೆ ಸಂದರ್ಶಿಸಿದೆ. ಇವರಲ್ಲಿ ಒಬ್ಬರನ್ನು ಹೊರತುಪಡಿಸಿ ಉಳಿದೆಲ್ಲಾ 58 ಪತ್ರಕರ್ತರು ತಮಗೆ ದೈಹಿಕ ಹಿಂಸೆ, ಲೈಂಗಿಕ ದೌರ್ಜನ್ಯ ಮತ್ತು ಅಮಾನವೀಯ ಕಿರುಕುಳ ನೀಡಲಾಗಿದೆ ಎಂದು ಸಾಕ್ಷ್ಯ ನೀಡಿದ್ದಾರೆ.

ನಿರಂತರ ಥಳಿತ, ಹಸಿವಿನಿಂದ ಇರಿಸುವುದು, ಕಣ್ಣಿಗೆ ಬಟ್ಟೆ ಕಟ್ಟಿ ಅತಿ ಹೆಚ್ಚಿನ ಶಬ್ದದ ಸಂಗೀತ ಕೇಳಿಸುವುದು ಮತ್ತು ವೈದ್ಯಕೀಯ ನೆರವು ನಿರಾಕರಿಸುವಂತಹ ತೀವ್ರ ಕಿರುಕುಳಗಳನ್ನು ಪತ್ರಕರ್ತರು ವಿವರಿಸಿದ್ದಾರೆ. ಜೈಲಿನಲ್ಲಿ ನೀಡುತ್ತಿದ್ದ ಅಸಮರ್ಪಕ ಆಹಾರದಿಂದಾಗಿ ಅವರು ಸರಾಸರಿ 23.5 ಕೆಜಿ ತೂಕ ಕಳೆದುಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.

ಇಸ್ರೇಲ್ ಅಧಿಕಾರಿಗಳು ನಡೆಸಿದ್ದಾರೆನ್ನಲಾದ ಈ ದೌರ್ಜನ್ಯಗಳು ಅತ್ಯಂತ ಭೀಕರವಾಗಿವೆ. ಪತ್ರಕರ್ತರಿಗೆ ಬೆತ್ತದಿಂದ ಹೊಡೆಯುವುದು, ವಿದ್ಯುತ್ ಶಾಕ್ ನೀಡುವುದು ಮತ್ತು ಮಲಚರಂಡಿ ನೀರಿನಲ್ಲಿ ನಿಲ್ಲಿಸುವುದು ಸೇರಿದಂತೆ ಅತೀವ ವೇದನೆ ನೀಡುವ ದೈಹಿಕ ಭಂಗಿಗಳಲ್ಲಿ ಇರಿಸುವಂತಹ ಕ್ರೂರ ಕೃತ್ಯಗಳು ನಡೆದಿವೆ ಎಂದು ವರದಿ ಹೇಳಿದೆ. ಅಷ್ಟೇ ಅಲ್ಲದೆ, ಲೈಂಗಿಕ ದೌರ್ಜನ್ಯವೂ ನಡೆದಿದ್ದು, ಇಬ್ಬರು ಪತ್ರಕರ್ತರು ತಾವು ಅತ್ಯಾಚಾರಕ್ಕೆ ಒಳಗಾಗಿರುವುದಾಗಿ ಸಾಕ್ಷ್ಯ ನುಡಿದಿದ್ದಾರೆ ಎಂದಿದೆ.

ಪತ್ರಕರ್ತ ಸಾಮಿ ಅಲ್-ಸಾಯಿ ಅವರು ಇಸ್ರೇಲ್‌ನ ಮೆಗಿಡ್ಡೊ ಕಾರಾಗೃಹದಲ್ಲಿ ತಮಗಾದ ಭೀಕರ ಅನುಭವವನ್ನು ವಿವರಿಸಿದ್ದಾರೆ. ಸೈನಿಕರು ತಮ್ಮನ್ನು ಬೆತ್ತಲೆಗೊಳಿಸಿ ಸಣ್ಣ ಕೋಣೆಯಲ್ಲಿ ಇರಿಸಿ ಬೆತ್ತ ಮತ್ತು ಇತರ ವಸ್ತುಗಳಿಂದ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಅವರು ದೂರಿದ್ದಾರೆ ಎಂದಿರುವ ವರದಿ, ಈ ಘೋರ ಕಿರುಕುಳವು ಅವರನ್ನು ತೀವ್ರವಾದ ಮಾನಸಿಕ ಖಿನ್ನತೆ ಮತ್ತು ಆಘಾತಕ್ಕೆ ತಳ್ಳಿದೆ ಎಂದು ತಿಳಿಸಿದೆ.

ಸಿಪಿಜೆ ಸಾಕ್ಷ್ಯಗಳಲ್ಲಿ ಲೈಂಗಿಕ ದೌರ್ಜನ್ಯದ ವಿವರಣೆಗಳು ಪದೇ ಪದೇ ಕಂಡುಬಂದಿವೆ. ಪತ್ರಕರ್ತರನ್ನು ಅವಮಾನಿಸಲು, ಭಯಭೀತರನ್ನಾಗಿಸಲು ಮತ್ತು ಅವರ ಮನಸ್ಸಿನ ಮೇಲೆ ಶಾಶ್ವತವಾಗಿ ಮಾಯದ ಗಾಯವನ್ನುಂಟುಮಾಡುವ ಉದ್ದೇಶದಿಂದ ಈ ಹಲ್ಲೆಗಳನ್ನು ನಡೆಸಲಾಗಿದೆ ಎಂದು ವರದಿ ಉಲ್ಲೇಖಿಸಿದೆ.

“ನಾವು ನಿಮ್ಮ ಕುಟುಂಬಸ್ಥರನ್ನು ಕೊಲ್ಲುತ್ತೇವೆ”

ಸಿಪಿಜೆಯ ಇತರ ಸಾಕ್ಷ್ಯಗಳು ಪತ್ರಕರ್ತರು ಅನುಭವಿಸಿದ ಮಾನಸಿಕ ಹಿಂಸೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿವೆ. ಕುಟುಂಬ ಸದಸ್ಯರನ್ನು ಕೊಲ್ಲುವ ಬೆದರಿಕೆ ಹಾಕುವುದು, ಅತಿ ಹೆಚ್ಚಿನ ಶಬ್ದದ ಸಂಗೀತದ ಮೂಲಕ ನಿದ್ರಾಹೀನತೆ ಉಂಟುಮಾಡುವುದು ಮತ್ತು ಗಂಭೀರ ಮೂಳೆ ಮುರಿತ ಹಾಗೂ ಕಣ್ಣಿನ ಗಾಯಗಳಿಗೆ ಚಿಕಿತ್ಸೆ ನೀಡದೆ ವೈದ್ಯಕೀಯ ನಿರ್ಲಕ್ಷ್ಯ ತೋರುವುದು ಸೇರಿದಂತೆ ಹತ್ತು ಹಲವು ಕ್ರೂರ ವಿಧಾನಗಳನ್ನು ಅಲ್ಲಿ ಬಳಸಲಾಗಿದೆ ಎಂದು ವರದಿ ಹೇಳಿದೆ.

ಪತ್ರಕರ್ತ ಅಮೀನ್ ಬರಾಕಾ ಅವರು ಅಲ್-ಜಝೀರಾ ಸಂಸ್ಥೆಯೊಂದಿಗೆ ಕೆಲಸ ಮಾಡುತ್ತಿದ್ದ ಕಾರಣಕ್ಕಾಗಿ ತಮಗೆ ಪದೇ ಪದೇ ಬೆದರಿಕೆ ಹಾಕಲಾಗುತ್ತಿತ್ತು ಎಂದು ತಿಳಿಸಿರುವುದಾಗಿ ವರದಿ ಉಲ್ಲೇಖಿಸಿದೆ.

ಒಬ್ಬ ಇಸ್ರೇಲಿ ಸೈನಿಕ ಅರೆಬಿಕ್ ಭಾಷೆಯಲ್ಲಿ, “ಅಲ್- ಜಝೀರಾ ವರದಿಗಾರ ವೇಲ್ ಅಲ್-ದಹ್ದೂಹ್ ನಮ್ಮನ್ನು ವಿರೋಧಿಸಿ ಗಾಝಾ ಪಟ್ಟಿಯಲ್ಲೇ ಉಳಿದುಕೊಂಡಿದ್ದಕ್ಕಾಗಿ ನಾವು ಅವನ ಕುಟುಂಬವನ್ನೇ ಕೊಂದೆವು. ನಿನ್ನ ಕುಟುಂಬವನ್ನೂ ನಾವು ಕೊಲ್ಲುತ್ತೇವೆ” ಎಂದು ಬರಾಕಾ ಅವರು ಸಿಪಿಜೆ ವರದಿಗೆ ತಿಳಿಸಿದ್ದಾರೆ.

“ನನ್ನನ್ನು ವರ್ಗಾವಣೆ ಮಾಡಿದ ಪ್ರತಿಯೊಂದು ಜೈಲಿನಲ್ಲೂ ನಾನು ದೈಹಿಕ ದೌರ್ಜನ್ಯಕ್ಕೆ ಒಳಗಾಗಿದ್ದೇನೆ. ಹೊಟ್ಟೆಗೆ ಬಿದ್ದ ಪೆಟ್ಟುಗಳಿಂದ ನಾನು ಇಂದಿಗೂ ನೋವು ಅನುಭವಿಸುತ್ತಿದ್ದೇನೆ ಮತ್ತು ನನಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ” ಎಂದಿದ್ದಾರೆ.

“ಇವು ಕೇವಲ ಬಿಡಿ ಘಟನೆಗಳಲ್ಲ. ಪತ್ರಕರ್ತರನ್ನು ಬೆದರಿಸಲು, ಅವರ ಧ್ವನಿಯನ್ನು ಅಡಗಿಸಲು ಮತ್ತು ಸತ್ಯವನ್ನು ಹೊರಹಾಕುವ ಅವರ ಸಾಮರ್ಥ್ಯವನ್ನು ನಾಶಮಾಡಲು ರೂಪಿಸಲಾದ ಉದ್ದೇಶಪೂರ್ವಕ ತಂತ್ರವನ್ನು ಇವು ಬಹಿರಂಗಪಡಿಸುತ್ತವೆ” ಎಂದು ಸಿಪಿಜೆ ಪ್ರಾದೇಶಿಕ ನಿರ್ದೇಶಕಿ ಸಾರಾ ಕುದಾ ಹೇಳಿದ್ದಾರೆ.

ಸಿಪಿಜೆ ತಿಳಿಸಿರುವಂತೆ, ಜೈಲಿನಲ್ಲಿರುವ ಅನೇಕ ಪತ್ರಕರ್ತರಿಗೆ ಕನಿಷ್ಠ ಕಾನೂನು ರಕ್ಷಣೆಗಳನ್ನು ಸಹ ನೀಡಲಾಗಿಲ್ಲ.

ಸಂದರ್ಶಿಸಲಾದವರಲ್ಲಿ ಶೇಕಡ 80ರಷ್ಟು ಜನರು ಇಸ್ರೇಲ್‌ನ ಆಡಳಿತಾತ್ಮಕ ಬಂಧನ ವ್ಯವಸ್ಥೆಯಡಿಯಲ್ಲಿ ಬಂಧಿಸಲ್ಪಟ್ಟಿದ್ದರು. ಅಂದರೆ ಅವರ ವಿರುದ್ಧ ಯಾವುದೇ ಆರೋಪಗಳನ್ನು ಹೊರಿಸಲಾಗಿಲ್ಲ. ನಾಲ್ವರಲ್ಲಿ ಒಬ್ಬರು ತಮಗೆ ವಕೀಲರೊಂದಿಗೆ ಮಾತನಾಡಲು ಅವಕಾಶ ಸಿಕ್ಕಿಲ್ಲ ಎಂದಿದ್ದಾಗಿ ಸಿಪಿಜೆ ತಿಳಿಸಿದೆ.

ಸಂದರ್ಶನಕ್ಕೊಳಗಾದವರಲ್ಲಿ ಬಹುಪಾಲು ಪತ್ರಕರ್ತರು ತಾವು ತೀವ್ರ ಹಸಿವು ಅಥವಾ ಅಪೌಷ್ಟಿಕತೆಯನ್ನು ಅನುಭವಿಸಿರುವುದಾಗಿ ವರದಿ ಮಾಡಿದ್ದಾರೆ ಎಂದು ಸಿಪಿಜೆ ಹೇಳಿದೆ. ಇದನ್ನು ಪುಷ್ಟೀಕರಿಸುವಂತಹ ಬಂಧಿತರ ವೆರಿಫೈಡ್ ಫೋಟೋಗಳನ್ನು ಅದು ಹಂಚಿಕೊಂಡಿದೆ. ಅವುಗಳಲ್ಲಿ ಪತ್ರಕರ್ತರ ‘ಬಾಡಿದ ಮುಖಗಳು, ಎದ್ದು ಕಾಣುವ ಪಕ್ಕೆಲುಬುಗಳು ಮತ್ತು ಗುಳಿಬಿದ್ದ ಕೆನ್ನೆಗಳು’ ಕಂಡುಬಂದಿವೆ.

ಕೆಲವು ಪತ್ರಕರ್ತರು ತಾವು ಕೇವಲ ಬೂಸ್ಟ್ ಹಿಡಿದಿ ರೊಟ್ಟಿ ಮತ್ತು ಕೊಳೆತ ಆಹಾರ ತಿಂದು ಬದುಕಿದ್ದಾಗಿ ತಿಳಿಸಿದ್ದಾರೆ. ಇಸ್ರೇಲ್ ವಶದಲ್ಲಿದ್ದ ಅವಧಿಯಲ್ಲಿ ಈ ಬಂಧಿತರು ಸರಾಸರಿ 23.5 ಕಿಲೋಗ್ರಾಂ ತೂಕ ಕಳೆದುಕೊಂಡಿದ್ದಾರೆ ಎಂದು ಸಿಪಿಜೆ ವರದಿ ಮಾಡಿದೆ. ಈ ಭೀಕರ ಪರಿಸ್ಥಿತಿಯನ್ನು ವಿವರಿಸುತ್ತಾ ಪತ್ರಕರ್ತ ಇಮಾದ್ ಇಫ್ರಾಂಜಿ, “ನಾವು ನರಕದಿಂದ ಮರಳಿ ಬಂದಿದ್ದೇವೆ” ಎಂದು ಹೇಳಿದ್ದಾರೆ.

ಸಿಪಿಜೆ ಮುಖ್ಯಸ್ಥರಾದ ಜೋಡಿ ಗಿನ್ಸ್‌ಬರ್ಗ್ ಅವರು, ಇಸ್ರೇಲಿ ಜೈಲುಗಳಲ್ಲಿ ಪತ್ರಕರ್ತರ ಮೇಲೆ ನಡೆಯುತ್ತಿರುವ ವ್ಯಾಪಕ ದೌರ್ಜನ್ಯಗಳ ವಿರುದ್ಧ ಅಂತಾರಾಷ್ಟ್ರೀಯ ಸಮುದಾಯವು ‘ತಕ್ಷಣ ಕ್ರಮ ಕೈಗೊಳ್ಳಬೇಕು’ ಎಂದು ಕರೆ ನೀಡಿದ್ದಾರೆ.

“ಮಾನವೀಯ ಕಾನೂನುಗಳು ಬಂಧಿತರನ್ನು ನಡೆಸಿಕೊಳ್ಳುವ ಬಗ್ಗೆ ಸ್ಪಷ್ಟವಾದ ಮಾನದಂಡಗಳನ್ನು ರೂಪಿಸಿವೆ. ಈ ಮಾನದಂಡಗಳನ್ನು ಪಾಲಿಸುವಲ್ಲಿ ವಿಫಲರಾಗಿರುವುದಕ್ಕೆ ಅರ್ಥಪೂರ್ಣವಾದ ಹೊಣೆಗಾರಿಕೆ ಇರಲೇಬೇಕು” ಎಂದು ಗಿನ್ಸ್‌ಬರ್ಗ್ ಪ್ರತಿಪಾದಿಸಿದ್ದಾರೆ.

ಇಸ್ರೇಲಿ ಅಧಿಕಾರಿಗಳು ತಮ್ಮ ವಶದಲ್ಲಿರುವ ಪ್ಯಾಲೆಸ್ತೀನ್‌ ಕೈದಿಗಳ ಮೇಲೆ ಚಿತ್ರಹಿಂಸೆ ಮತ್ತು ಅತ್ಯಾಚಾರ ಸೇರಿದಂತೆ ವ್ಯಾಪಕವಾದ ದೌರ್ಜನ್ಯ ಎಸಗುತ್ತಿದ್ದಾರೆ ಎಂಬ ಆರೋಪಗಳನ್ನು ದೀರ್ಘಕಾಲದಿಂದ ಕೇಳಿ ಬರುತ್ತಿದೆ. ಅದರಲ್ಲೂ ವಿಶೇಷವಾಗಿ ಕುಖ್ಯಾತ Sde Teiman ಬಂಧನ ಕೇಂದ್ರದಲ್ಲಿ ಇಂತಹ ಘಟನೆಗಳು ಹೆಚ್ಚು ವರದಿಯಾಗಿವೆ. ಕಳೆದ ವರ್ಷ, ಇಸ್ರೇಲಿ ಜೈಲು ಕಾವಲುಗಾರರು ಪ್ಯಾಲೆಸ್ತೀನ್ ಕೈದಿಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದ ದೃಶ್ಯಗಳು ಸೋರಿಕೆಯಾಗಿ, ಇಸ್ರೇಲ್‌ನಲ್ಲಿ ದೊಡ್ಡ ಮಟ್ಟದ ಆಕ್ರೋಶಕ್ಕೆ ಕಾರಣವಾಗಿತ್ತು.

ಇಸ್ರೇಲ್‌ನ ರಾಷ್ಟ್ರೀಯ ಭದ್ರತಾ ಸಚಿವ ಇಟಮಾರ್ ಬೆನ್-ಗ್ವಿರ್ ಈ ಹಿಂದೆ ಪ್ಯಾಲೆಸ್ತೀನ್ ಕೈದಿಗಳ ಅಮಾನವೀಯ ಸ್ಥಿತಿಯನ್ನು ಬಹಿರಂಗವಾಗಿಯೇ ಸಂಭ್ರಮಿಸಿದ್ದರು. ಅಷ್ಟೇ ಅಲ್ಲದೆ, ಜೈಲಿನಲ್ಲಿರುವ ಕೈದಿಗಳಿಗೆ ನೀಡುವ ಆಹಾರದ ಪ್ರಮಾಣವನ್ನು ಕಾನೂನಿನ ಪ್ರಕಾರ ಅಗತ್ಯವಿರುವ ಕನಿಷ್ಠ ಮಟ್ಟಕ್ಕೆ ಸೀಮಿತಗೊಳಿಸುವುದಾಗಿ ಅವರು ಹೇಳಿದ್ದರು. ಈ ಹೇಳಿಕೆಗಳು ಇಸ್ರೇಲಿ ಜೈಲುಗಳಲ್ಲಿನ ಹಸಿವು ಮತ್ತು ಕಿರುಕುಳದ ಆರೋಪಗಳಿಗೆ ಪುಷ್ಟಿ ನೀಡುವಂತಿವೆ ಎಂದು ಮಾನವ ಹಕ್ಕುಗಳ ಸಂಘಟನೆಗಳು ತಿಳಿಸಿವೆ.

ಗಾಝಾ ಯುದ್ಧದ ಸಮಯದಲ್ಲಿ ಇಸ್ರೇಲ್ ಉದ್ದೇಶಪೂರ್ವಕವಾಗಿ ಪ್ಯಾಲೆಸ್ತೀನ್ ಪತ್ರಕರ್ತರನ್ನು ಗುರಿಯಾಗಿಸಿಕೊಂಡಿರುವ ವಿಷಯವು ಸಾಕ್ಷ್ಯಾಧಾರಗಳೊಂದಿಗೆ ದಾಖಲಾಗಿದೆ. ಯುದ್ಧ ಆರಂಭವಾದಾಗಿನಿಂದ ಈವರೆಗೆ ಗಾಝಾದಲ್ಲಿ ಇಸ್ರೇಲ್ ನಡೆಸಿದ ದಾಳಿಗಳಲ್ಲಿ ಸುಮಾರು 300 ಪತ್ರಕರ್ತರು ಮತ್ತು ಮಾಧ್ಯಮ ಸಿಬ್ಬಂದಿ ಹತರಾಗಿದ್ದಾರೆ ಎಂದು Shireen.ps ವೆಬ್‌ಸೈಟ್‌ನ ಅಂಕಿಅಂಶಗಳು ತಿಳಿಸಿವೆ. ಈ ವೆಬ್‌ಸೈಟ್‌ಗೆ 2022ರಲ್ಲಿ ಆಕ್ರಮಿತ ವೆಸ್ಟ್ ಬ್ಯಾಂಕ್‌ನಲ್ಲಿ ಇಸ್ರೇಲಿ ಪಡೆಗಳಿಂದ ಗುಂಡೇಟು ತಿಂದು ಮೃತಪಟ್ಟ ಅಲ್ ಜಝೀರಾದ ಪತ್ರಕರ್ತೆ ಶಿರೀನ್ ಅಬು ಅಕ್ಲೆ ಅವರ ಹೆಸರನ್ನು ಇಡಲಾಗಿದೆ.

ಆಗಸ್ಟ್ 2025ರಲ್ಲಿ ಇಸ್ರೇಲ್ ದಕ್ಷಿಣ ಗಾಝಾದ ಆಸ್ಪತ್ರೆಯೊಂದರ ಮೇಲೆ ‘ಡಬಲ್-ಟ್ಯಾಪ್’ ವೈಮಾನಿಕ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಅಲ್- ಜಝೀರಾದ ಛಾಯಾಗ್ರಾಹಕ ಮೊಹಮ್ಮದ್ ಸಲಾಮಾ ಸೇರಿದಂತೆ ಐವರು ಪತ್ರಕರ್ತರು ಹತರಾಗಿದ್ದರು. ಮೃತಪಟ್ಟವರಲ್ಲಿ ರಾಯಿಟರ್ಸ್ ಮತ್ತು ಅಸೋಸಿಯೇಟೆಡ್ ಪ್ರೆಸ್ ಸಂಸ್ಥೆಗಳ ಪರವಾಗಿ ಕೆಲಸ ಮಾಡುತ್ತಿದ್ದ ಪತ್ರಕರ್ತರೂ ಸೇರಿದ್ದರು.

ಈ ‘ಡಬಲ್-ಟ್ಯಾಪ್’ ತಂತ್ರವು (ಮೊದಲ ದಾಳಿಯ ನಂತರ ರಕ್ಷಣಾ ಕಾರ್ಯಕ್ಕೆ ಧಾವಿಸುವವರನ್ನು ಗುರಿಯಾಗಿಸಿ ಎರಡನೇ ದಾಳಿ ಮಾಡುವುದು) ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಖಂಡನೆಗೆ ಗುರಿಯಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR: 43ಲಕ್ಷದಲ್ಲಿ ನೋಟಿಸ್ ತಲುಪಿರುವುದು 25ಲಕ್ಷ ಜನರಿಗೆ ಮಾತ್ರ, ಬಾಕಿ 18ಲಕ್ಷ ಜನರಿಗೆ ಇನ್ನು ನೋಟಿಸ್ಸೇ ತಲುಪಿಲ್ಲ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಆಡಳಿತಾತ್ಮಕ ಗೊಂದಲ ಹಾಗೂ ಯಾಂತ್ರಿಕ ಲೋಪಗಳ ಜಾಲದಲ್ಲಿ ಸಿಲುಕಿಬಿದ್ದಿದೆ. ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಬಿಡುಗಡೆ ಮಾಡಿರುವ ಇತ್ತೀಚಿನ ದತ್ತಾಂಶವೇ ಆಯೋಗದ...

ಕಾಳಿಘಾಟ್‌ನಲ್ಲಿ ‘ಮೀನಿನ ಪ್ರಸಾದ’ ಸ್ವೀಕರಿಸಿದ ಸುವೇಂದು ಅಧಿಕಾರಿ; ಬಾಗೇಶ್ವರ್ ಬಾಬಾ ‘ಮಾಂಸಾಹಾರ’ ವಿವಾದಕ್ಕೆ ಹೊಸ ತಿರುವು!

ದುರ್ಗಾ ಪೂಜೆ ಸಂದರ್ಭದಲ್ಲಿ ಮೀನು–ಮಾಂಸ ಸೇವನೆ ಕುರಿತು ಬಾಗೇಶ್ವರ್ ಧಾಮದ ಧೀರೇಂದ್ರ ಕೃಷ್ಣ ಶಾಸ್ತ್ರಿ ನೀಡಿರುವ ಹೇಳಿಕೆ ಪಶ್ಚಿಮ ಬಂಗಾಳದಲ್ಲಿ ವಿವಾದಕ್ಕೆ ಕಾರಣವಾಗಿರುವ ನಡುವೆಯೇ, ಮುಖ್ಯಮಂತ್ರಿ ಸುವೇಂದು ಅಧಿಕಾರಿ ಕಾಳಿಘಾಟ್ʼನ ಕಾಳಿ ದೇವಸ್ಥಾನದಲ್ಲಿ...

ಎಸ್‌ಐಆರ್‌: ಹೈದರಾಬಾದ್, ಸಿಕಂದರಾಬಾದ್‌ನಲ್ಲಿ ಲಕ್ಷಾಂತರ ಮತದಾರರ ಹೆಸರು ಅಳಿಸುವಿಕೆ; 2029ರ ಚುನಾವಣೆಗೂ ಮುನ್ನ ಗಂಭೀರ ಆತಂಕ

ಹೈದರಾಬಾದ್: ತೆಲಂಗಾಣದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಡಿ ಮತದಾರರ ಪಟ್ಟಿಯಿಂದ ಭಾರೀ ಪ್ರಮಾಣದಲ್ಲಿ ಹೆಸರುಗಳನ್ನು ತೆಗೆದುಹಾಕಲಾಗಿರುವುದು ಮುಂದಿನ ಚುನಾವಣೆಯ ರಾಜಕೀಯ ಲೆಕ್ಕಾಚಾರಗಳ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯನ್ನು ಹುಟ್ಟುಹಾಕಿದೆ....

9/11 ದಾಳಿಗೆ 25 ವರ್ಷ: ‘ಭಯೋತ್ಪಾದನೆ ವಿರುದ್ಧದ ಯುದ್ಧ’ ಮತ್ತು ಕುಸಿದ ಪ್ರಜಾಪ್ರಭುತ್ವದ ಮೌಲ್ಯಗಳು

ನ್ಯೂಯಾರ್ಕ್‌ನ ಪ್ರತಿಷ್ಠಿತ ವರ್ಲ್ಡ್ ಟ್ರೇಡ್ ಸೆಂಟರ್ ಅವಳಿ ಗೋಪುರಗಳ ಮೇಲೆ ನಡೆದ ಭೀಕರ ಭಯೋತ್ಪಾದನಾ ದಾಳಿಗೆ ಇಂದಿಗೆ ಭರ್ತಿ 25 ವರ್ಷಗಳು ತುಂಬಿವೆ. ಈ ಕಾಲು ಶತಮಾನದ ಅವಧಿಯಲ್ಲಿ 'ಭಯೋತ್ಪಾದನೆ ವಿರುದ್ಧದ ಜಾಗತಿಕ...

‘ಈ ಪ್ರಕ್ರಿಯೆಯೇ ಶಿಕ್ಷೆಯಾಗಿದೆ’: ಉಮರ್ ಖಾಲಿದ್ ದೀರ್ಘ ಜೈಲುವಾಸದ ಬಗ್ಗೆ ಮಾಜಿ ನ್ಯಾಯಮೂರ್ತಿ ದೀಪಕ್ ಗುಪ್ತಾ ತೀವ್ರ ಟೀಕೆ

ನವದೆಹಲಿ: ಮಾನವ ಹಕ್ಕುಗಳ ಕಾರ್ಯಕರ್ತ, ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಅವರ ದೀರ್ಘಕಾಲದ ವಿಚಾರಣಾಪೂರ್ವ ಬಂಧನ, ಎಲ್ಗರ್ ಪರಿಷತ್ ಪ್ರಕರಣದ ಆರೋಪಿಗಳ ವರ್ಷಗಳ ಜೈಲುವಾಸ ಹಾಗೂ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ನ್ಯಾಯಾಂಗದ...

‘ದೇಶವಿರೋಧಿ ಮನಸ್ಥಿತಿಯಲ್ಲ’: ಜಿ.ಎನ್. ಸಾಯಿಬಾಬಾ ಸ್ಮರಣೆ ಪ್ರಕರಣದಲ್ಲಿ ‘ಟಿಸ್’ ಮಾಜಿ ವಿದ್ಯಾರ್ಥಿಗೆ ಜಾಮೀನು!

ದೆಹಲಿ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ ದಿವಂಗತ ಜಿ.ಎನ್. ಸಾಯಿಬಾಬಾ ಅವರ ಸ್ಮರಣಾರ್ಥ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (TISS) ಕ್ಯಾಂಪಸ್‌ನಲ್ಲಿ ನಡೆದ ಅನುಮತಿರಹಿತ ಕಾರ್ಯಕ್ರಮಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಂಧಿತರಾಗಿದ್ದ ಮಾಜಿ ವಿದ್ಯಾರ್ಥಿ...

ಜನಾಕ್ರೋಶದ ನಡುವೆಯೇ ಎಸ್ಐಆರ್ ಸಮರ್ಥಿಸಿಕೊಂಡ ಮುಖ್ಯ ಚುನಾವಣಾ ಆಯುಕ್ತ: ‘ರಾಜಕೀಯ ದಾಳಿಗಳಿಂದ ಆಯೋಗ ವಿಚಲಿತವಾಗದು’ ಎಂದ ಜ್ಞಾನೇಶ್ ಕುಮಾರ್

ಅಹಮದಾಬಾದ್: ದೇಶದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತು ರಾಜಕೀಯ ಪಕ್ಷಗಳು, ನಾಗರಿಕ ಸಂಘಟನೆಗಳು ಹಾಗೂ ವಿವಿಧ ವಲಯಗಳಿಂದ ತೀವ್ರ ಟೀಕೆಗಳು ವ್ಯಕ್ತವಾಗುತ್ತಿರುವ ನಡುವೆಯೇ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್...

ಕರ್ನಾಟಕ ಎಸ್ಐಆರ್: ಹೆಸರಿನ ಸಣ್ಣ ವ್ಯತ್ಯಾಸಕ್ಕಾಗಿ ನಿವೃತ್ತ ಐಎಎಸ್ ಅಧಿಕಾರಿ ಎ.ಬಿ. ಇಬ್ರಾಹಿಂ ಅವರಿಗೆ ನೋಟಿಸ್; ‘ಸುಳ್ಳು ಮಾಹಿತಿ ನೀಡಿದರೆ ಜೈಲು’ ಎಂಬ ಬೆದರಿಕೆ

ಮೈಸೂರು: ಸುಮಾರು ಮೂರೂವರೆ ದಶಕಗಳ ಕಾಲ ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಸೇವೆ ಸಲ್ಲಿಸಿ, ಸ್ವತಃ ಚುನಾವಣಾ ಪ್ರಕ್ರಿಯೆಯ ಜವಾಬ್ದಾರಿಯುತ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ್ದ ನಿವೃತ್ತ ಐಎಎಸ್ ಅಧಿಕಾರಿ ಎ.ಬಿ. ಇಬ್ರಾಹಿಂ ಅವರೇ ಇದೀಗ ತಮ್ಮ...

SIR : ತಾಯಿಯೊಂದಿಗೆ ಮ್ಯಾಪಿಂಗ್ ಮಾಡಿದರೂ ಅಜ್ಜನ ವಯಸ್ಸಿನ ವ್ಯತ್ಯಾಸದ ನೆಪ ಹೇಳಿ ನೋಟಿಸ್ ನೀಡಿದ ಚುನಾವಣಾ ಆಯೋಗ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ದಿನಕ್ಕೊಂದು ವಿಲಕ್ಷಣ ಹಾಗೂ ಯಾಂತ್ರಿಕ ದೋಷಗಳನ್ನು ಹೊರಹಾಕುತ್ತಿದ್ದು, ಪ್ರಜಾಪ್ರಭುತ್ವದ ಹಕ್ಕನ್ನು ಚಲಾಯಿಸಲು ಬಯಸುವ ನೈಜ ಮತದಾರರನ್ನು ಆತಂಕಕ್ಕೆ ತಳ್ಳುತ್ತಿದೆ. ಬ್ಯಾಟರಾಯನಪುರ...

ಬ್ಯಾಂಕ್ ಮುಷ್ಕರ: ದೇಶಾದ್ಯಂತ ಶಾಖಾ ಸೇವೆಗಳಿಗೆ ಅಡಚಣೆ; ವಾರಾಂತ್ಯ, ಗಣೇಶ ಚತುರ್ಥಿಯಿಂದ ಹಲವು ದಿನ ಸೇವೆ ವ್ಯತ್ಯಯ 

ನವದೆಹಲಿ: ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಕರೆ ನೀಡಿರುವ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಸೆಪ್ಟೆಂಬರ್ 11ರಂದು (ಇಂದು) ನಡೆಯುತ್ತಿದ್ದು, ದೇಶದಾದ್ಯಂತ ಬ್ಯಾಂಕ್ ಗ್ರಾಹಕರ ಸಾಮಾನ್ಯ ಸೇವೆಗಳ ಮೇಲೆ ಪರಿಣಾಮ ಬೀರುವ...