ಬಿಜೆಪಿಯ ಮಾಜಿ ಸಂಸದ ಸುಖ್ವೀರ್ ಸಿಂಗ್ ಜೌನ್ಪುರಿಯಾ ಅವರು, ಮುಸ್ಲಿಮರೆಂದು ಗೊತ್ತಾದ ಬಳಿಕ ಮಹಿಳೆಯರಿಗೆ ವಿತರಿಸಿದ್ದ ಕಂಬಳಿಯನ್ನು ವಾಪಸ್ ಪಡೆದಿದ್ದಾರೆ ಎಂದು ರಾಜಸ್ಥಾನ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಟಿಕರಾಮ್ ಜುಲ್ಲಿ ಭಾನುವಾರ (ಫೆ.22) ಆರೋಪಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋ ಉಲ್ಲೇಖಿಸಿ ಜುಲ್ಲಿ ನೀಡಿರುವ ಹೇಳಿಕೆ ಪ್ರಕಾರ, ರಾಜಸ್ಥಾನದ ಟೋಂಕ್ ಜಿಲ್ಲೆಯ ನಿವಾಯ್ ತಾಲೂಕಿನ ಕರೇಡಾ ಗ್ರಾಮದಲ್ಲಿ ಸುಖ್ವೀರ್ ಸಿಂಗ್ ಜೌನ್ಪುರಿಯಾ ಮಹಿಳೆಯರಿಗೆ ಕಂಬಳಿ ವಿತರಿಸುತ್ತಿದ್ದರು. ಈ ವೇಳೆ ಕಂಬಳಿ ಪಡೆದ ಕೆಲ ಮಹಿಳೆಯ ಮುಸ್ಲಿಮರು ಎಂದು ಗೊತ್ತಾಗಿದೆ. ಹಾಗಾಗಿ, ಅವರನ್ನು ಅಮಾನಿಸಿದ ಜೌನ್ಪುರಿಯಾ, ಕೊಟ್ಟಿದ್ದ ಕಂಬಳಿಯನ್ನು ವಾಪಸ್ ಪಡೆದು ಸ್ಥಳದಿಂದ ತೆರಳುವಂತೆ ಸೂಚಿಸಿದ್ದಾರೆ.
ಮಾಜಿ ಸಂಸದರೊಬ್ಬರು ಬಡ ಮಹಿಳೆಗೆ ಅವರ ಧರ್ಮ ಕೇಳಿ ಕೊಟ್ಟ ಕಂಬಳಿಯನ್ನು ವಾಪಸ್ ತೆಗೆದುಕೊಂಡಿರುವುದು ಅತ್ಯಂತ ಖಂಡನೀಯ ಎಂದು ಟಿಕರಾಮ್ ಜುಲ್ಲಿ ಹೇಳಿದ್ದಾರೆ.
ಮಾಜಿ ಸಂಸದರ ವರ್ತನೆಗೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದಾಗ, ಅವರಿಗೆ ಬೆದರಿಕೆ ಹಾಕಿದ್ದಾರೆ. ಈ ತಾರತಮ್ಯವನ್ನು ಗ್ರಾಮಸ್ಥರು ತೀವ್ರವಾಗಿ ಆಕ್ಷೇಪಿಸಿದ್ದಾರೆ. ಸಂಸದರಂತಹ ಹುದ್ದೆಯನ್ನು ಅಲಂಕರಿಸಿದ್ದ ಸಾರ್ವಜನಿಕ ಪ್ರತಿನಿಧಿಯೊಬ್ಬರು ಈ ರೀತಿ ವರ್ತಿಸುವುದು ಖಂಡನೀಯ ಎಂದಿದ್ದಾರೆ.
ಸ್ಥಳೀಯರ ಪ್ರಕಾರ, ಭಾನುವಾರ ಮಧ್ಯಾಹ್ನ ಕಂಬಳಿ ವಿತರಣಾ ಕಾರ್ಯಕ್ರಮದ ವೇಳೆ ಈ ಘಟನೆ ನಡೆದಿದೆ. ಮೊದಲು ಸೇರಿದ್ದ ಎಲ್ಲಾ ಮಹಿಳೆಯರಿಗೆ ಸುಖ್ಬೀರ್ ಸಿಂಗ್ ಕಂಬಳಿ ವಿತರಿಸಿದ್ದರು. ನಂತರ ಅವರಲ್ಲಿ ಕೆಲವರು ಮುಸ್ಲಿಮರು ಎಂದು ತಿಳಿದು ವಾಪಸ್ ಪಡೆದಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ವೈರಲ್ ವಿಡಿಯೋದಲ್ಲಿ, “ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವವರಿಗೆ ಕಂಬಳಿ ಪಡೆಯುವ ಹಕ್ಕಿಲ್ಲ” ಎಂದು ಜೌನ್ಪುರಿಯಾ ಹೇಳಿರುವುದು ಕೇಳಿ ಬಂದಿದೆ.
ಇದು ಸರ್ಕಾರಿ ಯೋಜನೆಯಲ್ಲ, ಬದಲಾಗಿ ತಮ್ಮ ಸ್ವಂತ ಹಣದಿಂದ ಮಾಡುತ್ತಿರುವ ವೈಯಕ್ತಿಕ ಕಾರ್ಯಕ್ರಮ ಎಂದು ಅವರು ತಮ್ಮ ನಡೆಯನ್ನು ಜೌನ್ಪುರಿಯಾ ಸಮರ್ಥಿಸಿಕೊಂಡಿದ್ದಾರೆ.
ವೈರಲ್ ವಿಡಿಯೋವನ್ನು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನಾಟೆ, “ಬಿಜೆಪಿಯ ಮಾಜಿ ಸಂಸದ ಸುಖ್ವೀರ್ ಸಿಂಗ್ ಜೌನ್ಪುರಿಯಾ ಅವರು ಟೋಂಕ್ನಲ್ಲಿ ಕಂಬಳಿ ಹಂಚುತ್ತಿದ್ದರು. ಈ ವೇಳೆ ಅವರು ಬಡ ಮುಸ್ಲಿಂ ಮಹಿಳೆಯರನ್ನು ಅವಮಾನಿಸಿ, ಅವರಿಂದ ಕಂಬಳಿಯನ್ನು ವಾಪಸ್ ಪಡೆದಿದ್ದಾರೆ. ವಾಸ್ತವವಾಗಿ, ಸಂಕುಚಿತ ಮತ್ತು ಅಸಹ್ಯಕರ ಮನಸ್ಥಿತಿಯ ಈ ಮನುಷ್ಯನೇ ಹೃದಯ ಮತ್ತು ಆಲೋಚನೆಗಳಲ್ಲಿ ನಿಜವಾದ ಬಡವನಾಗಿದ್ದಾನೆ. ಜನರು ಪ್ರತಿಭಟಿಸಿ ಸರಿಯಾದ ಕೆಲಸವನ್ನೇ ಮಾಡಿದ್ದಾರೆ; ಅವರು ಆ ಕಂಬಳಿಯನ್ನು ಅವನ ಮುಖಕ್ಕೇ ಎಸೆಯಬೇಕಿತ್ತು” ಬರೆದುಕೊಂಡಿದ್ದಾರೆ.


