ಲೋಕಸಭೆಯ ಬಜೆಟ್ ಅಧಿವೇಶನದ ಎರಡನೇ ಹಂತದ ಕಾರ್ಯ ಕಲಾಪಗಳು ಸೋಮವಾರ (ಮಾ.9) ಭಾರೀ ಗದ್ದಲದೊಂದಿಗೆ ಆರಂಭಗೊಂಡಿತು.
ಪಶ್ಚಿಮ ಏಷ್ಯಾದ ಪರಿಸ್ಥಿತಿಯ ಕುರಿತು ಚರ್ಚಿಸಲು ಆಗ್ರಹಿಸಿ ಪ್ರತಿಪಕ್ಷಗಳು ತೀವ್ರ ಪ್ರತಿಭಟನೆ ನಡೆಸಿದ ಹಿನ್ನೆಲೆ, ಸ್ಪೀಕರ್ ಪೀಠದಲ್ಲಿದ್ದ ಬಿಜೆಪಿ ಸಂಸದ ಜಗದಾಂಬಿಕ ಪಾಲ್ ಕಲಾಪವನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಿದರು.
ಬೆಳಿಗ್ಗೆ 11 ಗಂಟೆಗೆ ಸದನ ಸಭೆ ಸೇರಿದಾಗ ಅಗಲಿದವರಿಗೆ ಸಂತಾಪ ಸೂಚಿಸಲಾಯಿತು. ಬಳಿಕ ಸ್ಪೀಕರ್ ಸದನವನ್ನು ಮಧ್ಯಾಹ್ನ 12 ಗಂಟೆಗೆ ಮುಂದೂಡಿದರು. 12 ಗಂಟೆಗೆ ಮತ್ತೆ ಸಭೆ ಸೇರಿದಾಗ, ವಿದೇಶಾಂಗ ಸಚಿವ ಡಾ. ಎಸ್ ಜೈಶಂಕರ್ ಅವರು ಪಶ್ಚಿಮ ಏಷ್ಯಾದ ಪರಿಸ್ಥಿತಿಯ ಬಗ್ಗೆ ಸ್ವಯಂಪ್ರೇರಿತ ಹೇಳಿಕೆ ನೀಡಿದರು.
ಈ ವೇಳೆ ಕಾಂಗ್ರೆಸ್, ಡಿಎಂಕೆ, ಎಸ್ಪಿ ಮತ್ತು ಇತರ ವಿರೋಧ ಪಕ್ಷಗಳ ಸದಸ್ಯರು ಪ್ಲೆಕಾರ್ಡ್ ಪ್ರದರ್ಶಿಸುತ್ತಾ ಸದನದ ಬಾವಿಗಿಳಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸ್ಪೀಕರ್, ಸದನದಲ್ಲಿ ಪ್ಲೆಕಾರ್ಡ್ ಹಿಡಿಯುವಂತಿಲ್ಲ, ಇದು ನಿಯಮಗಳಿಗೆ ವಿರುದ್ದ ಎಂದರು. ಆದರೆ, ವಿಪಕ್ಷ ಸದಸ್ಯರು ತಮ್ಮ ಪ್ರತಿಭಟನೆ ಮುಂದುವರಿಸಿದರು.
ಈ ಮಧ್ಯೆ ಎದ್ದು ನಿಂತ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಸದನದೊಳಗೆ ವಿಪಕ್ಷ ಸದಸ್ಯರ ವರ್ತನೆಯನ್ನು ಖಂಡಿಸಿದರು. “ನನ್ನ ಜೀವಿತಾವಧಿಯಲ್ಲಿ ಇಂತಹ ಬೇಜವಾಬ್ದಾರಿ ವಿರೋಧ ಪಕ್ಷವನ್ನು ಎಂದಿಗೂ ನೋಡಿಲ್ಲ” ಎಂದು ಹೇಳಿದರು.
ಲೋಕಸಭೆ ಸ್ಪೀಕರ್ ವಿರುದ್ಧ ನಿರ್ಣಯಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ನೋಟಿಸ್ ನೀಡಿವೆ ಮತ್ತು ಅದನ್ನು ಇಂದಿನ ಚರ್ಚೆಗೆ ಪಟ್ಟಿ ಮಾಡಲಾಗಿದೆ. ಆದರೆ, ಪ್ರತಿಪಕ್ಷಗಳು ಗೊಂದಲಕ್ಕೊಳಗಾಗಿದ್ದು, ಇಂದು ಇತರ ವಿಷಯಗಳ ಕುರಿತು ಚರ್ಚೆಗೆ ಒತ್ತಾಯಿಸುತ್ತಿವೆ ಎಂದು ರಿಜಿಜು ತಿಳಿಸಿದರು.
ಸ್ಪೀಕರ್ ಕೋರಿಕೆಯ ಹೊರತಾಗಿಯೂ, ವಿರೋಧ ಪಕ್ಷಗಳು ಪ್ರತಿಭಟನೆಯನ್ನು ಮುಂದುವರೆಸಿದ್ದರಿಂದ ಸದನವನ್ನು ಮಧ್ಯಾಹ್ನ 3 ಗಂಟೆಯವರೆಗೆ ಮುಂದೂಡಲಾಯಿತು.


