ಕಳೆದ 13 ವರ್ಷಗಳಿಂದ ಕೋಮಾದಲ್ಲಿದ್ದು ಜೀವನ್ಮರಣ ಹೋರಾಟ ನಡೆಸಿ, ಅಂತಿಮವಾಗಿ 2026ರ ಮಾರ್ಚ್ 11ರಂದು ನಿಷ್ಕ್ರಿಯ ದಯಾಮರಣಕ್ಕೆ ಸುಪ್ರೀಂ ಕೋರ್ಟ್ನಿಂದ ಅನುಮತಿ ಪಡೆದ 32 ವರ್ಷದ ಯುವಕ ಹರೀಶ್ ರಾಣಾ, ಮಂಗಳವಾರ (ಮಾ.24) ದೆಹಲಿ ಏಮ್ಸ್ನಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ.
ವರದಿಗಳ ಪ್ರಕಾರ, ಗಾಝಿಯಾಬಾದ್ನ ತಮ್ಮ ಮನೆಯಲ್ಲಿದ್ದ ರಾಣಾ ಅವರನ್ನು ಮಾರ್ಚ್ 14ರಂದು ದೆಹಲಿ ಏಮ್ಸ್ನ ಡಾ. ಬಿ.ಆರ್ ಅಂಬೇಡ್ಕರ್ ಇನ್ಸ್ಟಿಟ್ಯೂಟ್ ರೋಟರಿ ಕ್ಯಾನ್ಸರ್ ಆಸ್ಪತ್ರೆಯ ಉಪಶಮನ ಆರೈಕೆ (ಪ್ಯಾಲಿಯೇಟಿವ್ ಕೇರ್) ಘಟಕಕ್ಕೆ ಸ್ಥಳಾಂತರಿಸಲಾಗಿತ್ತು.
ಅರಿವಳಿಕೆ ಮತ್ತು ಉಪಶಮನ ವೈದ್ಯಕೀಯ ವಿಭಾಗದ ಮುಖ್ಯಸ್ಥರಾದ ಡಾ. ಸೀಮಾ ಮಿಶ್ರಾ ಅವರ ನೇತೃತ್ವದ ಬಹುಶಿಸ್ತೀಯ ತಂಡಕ್ಕೆ ರಾಣಾ ಅವರ ನಿಷ್ಕ್ರಿಯ ದಯಾಮರಣ ಪ್ರಕ್ರಿಯೆಯನ್ನು ಜಾರಿಗೆ ತರುವ ಜವಾಬ್ದಾರಿಯನ್ನು ನೀಡಲಾಗಿತ್ತು.
ಈ ತಂಡವು ನ್ಯೂರೋಸರ್ಜರಿ (ನರಶಸ್ತ್ರಚಿಕಿತ್ಸೆ), ಆಂಕೋ-ಅನಸ್ತೇಶಿಯಾ, ಉಪಶಮನ ವೈದ್ಯಕೀಯ ಮತ್ತು ಮನೋವೈದ್ಯಶಾಸ್ತ್ರದ ತಜ್ಞರನ್ನು ಒಳಗೊಂಡಿತ್ತು. ಇದು ಈ ಪ್ರಕ್ರಿಯೆಯ ಸಂಕೀರ್ಣತೆ ಮತ್ತು ಸೂಕ್ಷ್ಮತೆಯನ್ನು ಪ್ರತಿಬಿಂಬಿಸುತ್ತದೆ.
ವೈದ್ಯರ ತಂಡವು ಸ್ಥಾಪಿತ ವೈದ್ಯಕೀಯ ಶಿಷ್ಟಾಚಾರಗಳನ್ನು ಅನುಸರಿಸಿ ಮತ್ತು ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ, ನಿಕಟ ಮೇಲ್ವಿಚಾರಣೆಯಲ್ಲಿ ರಾಣಾ ಅವರಿಗೆ ನೀಡಲಾಗುತ್ತಿದ್ದ ಕೃತಕ ಪೌಷ್ಟಿಕಾಂಶದ ಬೆಂಬಲವನ್ನು ಹಂತ ಹಂತವಾಗಿ ಹಿಂತೆಗೆದುಕೊಂಡಿದೆ.
ಗೌರವ, ವೈದ್ಯಕೀಯ ನೈತಿಕತೆ ಮತ್ತು ಕಾನೂನು ಸುರಕ್ಷತೆಗಳ ಮೇಲೆ ಗಮನ ಕೇಂದ್ರೀಕರಿಸುವ ಮೂಲಕ, ಭಾರತದ ವಿಕಸನಗೊಳ್ಳುತ್ತಿರುವ ‘ಜೀವನದ ಅಂತ್ಯದ ಆರೈಕೆ’ (end-of-life care) ವಿಧಾನದಲ್ಲಿ ಇವರ ಪ್ರಕರಣವನ್ನು ಒಂದು ಮೈಲಿಗಲ್ಲು ಎಂದು ಪರಿಗಣಿಸಲಾಗಿದೆ.
ದೆಹಲಿ ಮೂಲದ ಹರೀಶ್ ರಾಣಾ 2013ರಲ್ಲಿ ಕಟ್ಟಡದ ನಾಲ್ಕನೇ ಮಹಡಿಯಿಂದ ಬಿದ್ದ ಪರಿಣಾಮ ತೀವ್ರ ಮೆದುಳಿನ ಗಾಯಕ್ಕೆ ಒಳಗಾಗಿ ಶೇಕಡ 100ರಷ್ಟು ದೈಹಿಕ ಅಸಾಮರ್ಥ್ಯಕ್ಕೆ ಒಳಗಾಗಿದ್ದರು.
ಹರೀಶ್ ಅವರ ತಂದೆ ಅಶೋಕ್ ರಾಣಾ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಕೆ.ವಿ. ವಿಶ್ವನಾಥನ್ ಅವರ ಸುಪ್ರೀಂ ಕೋರ್ಟ್ ಪೀಠ, ಹರೀಶ್ ಅವರ ಕೃತಕ ಜೀವರಕ್ಷಕ ವ್ಯವಸ್ಥೆಯನ್ನು ತೆಗೆಯಲು ಅನುಮತಿ ನೀಡಿತ್ತು.
ಕಳೆದ 13 ವರ್ಷಗಳಿಂದ ಮಗ ಅನುಭವಿಸುತ್ತಿರುವ ವೇದನೆಯನ್ನು ನೋಡಲಾರದೆ ಮತ್ತು ಅವನ ಆರೈಕೆಗಾಗಿ ತಮ್ಮ ಮನೆಯನ್ನೇ ಮಾರಾಟ ಮಾಡಿ ಆರ್ಥಿಕವಾಗಿ ಕಷ್ಟದಲ್ಲಿರುವ ಕಾರಣ, ಮಗನಿಗೆ ಗೌರವಯುತ ಸಾವು ನೀಡುವಂತೆ ಅಶೋಕ್ ರಾಣಾ ತಮ್ಮ ಅರ್ಜಿಯಲ್ಲಿ ಮನವಿ ಮಾಡಿದ್ದರು.
ಆರಂಭದಲ್ಲಿ ಹರೀಶ್ ಅವರ ಪೋಷಕರಾದ ಅಶೋಕ್ ರಾಣಾ ಮತ್ತು ನಿರ್ಮಲಾ ದೇವಿ ಇಬ್ಬರೂ ಸೇರಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ಅರ್ಜಿಯನ್ನು ತಿರಸ್ಕರಿಸಿದ ನಂತರ, ಅಶೋಕ್ ರಾಣಾ ಅವರು ಸುಪ್ರೀಂ ಕೋರ್ಟ್ನಲ್ಲಿ ‘ಮಿಸ್ಸಲೇನಿಯಸ್ ಅಪ್ಲಿಕೇಶನ್’ ಸಲ್ಲಿಸಿದ್ದರು.
ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ CAN (Clinically Administered Nutrition – ವೈದ್ಯಕೀಯವಾಗಿ ನೀಡಲಾಗುವ ಪೋಷಣೆ) ಒಂದು ವೈದ್ಯಕೀಯ ಚಿಕಿತ್ಸೆ ಎಂದು ಹೇಳಿತ್ತು. ಪ್ರಾಥಮಿಕ ಮತ್ತು ದ್ವಿತೀಯ ವೈದ್ಯಕೀಯ ಮಂಡಳಿಗಳ ಅತ್ಯುತ್ತಮ ತೀರ್ಪಿನ ಮೂಲಕ ಇದನ್ನು ತೆಗೆದು ಹಾಕಬಹುದು ಎಂದು ಅಭಿಪ್ರಾಯಪಟ್ಟಿತ್ತು.
ಹರೀಶ್ ರಾಣಾ ಪೋಷಕರು, ಪ್ರಾಥಮಿಕ ಮತ್ತು ದ್ವಿತೀಯ ವೈದ್ಯಕೀಯ ಮಂಡಳಿಗಳು, ರೋಗಿಗೆ ನೀಡಲಾಗುವ CAN ಅನ್ನು ನಿಲ್ಲಿಸಬೇಕು ಎಂಬ ಅಭಿಪ್ರಾಯಕ್ಕೆ ಬಂದಿದ್ದಾರೆ. ಏಕೆಂದರೆ ಅದು ರೋಗಿಯ ಹಿತಾಸಕ್ತಿಗೆ ಒಳಪಟ್ಟಿಲ್ಲ ಎಂದು ನ್ಯಾಯಾಲಯ ತಿಳಿಸಿತ್ತು.
ಪ್ರಾಥಮಿಕ ಮತ್ತು ದ್ವಿತೀಯ ವೈದ್ಯಕೀಯ ಮಂಡಳಿಗಳು ಜೀವದಾನ ವ್ಯವಸ್ಥೆಯನ್ನು (Life Support) ಹಿಂತೆಗೆದುಕೊಳ್ಳಲು ಪ್ರಮಾಣೀಕರಿಸಿದ ನಂತರ, ಅದರಲ್ಲಿ ನ್ಯಾಯಾಲಯದ ಹಸ್ತಕ್ಷೇಪದ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿತ್ತು. ಆದಾಗ್ಯೂ, ಇದು ಈ ರೀತಿಯ ಮೊದಲ ಪ್ರಕರಣವಾದ್ದರಿಂದ ನ್ಯಾಯಾಲಯದ ಉಲ್ಲೇಖದ ಅಗತ್ಯವಿದೆ ಎಂದು ಪೀಠ ತಿಳಿಸಿತ್ತು. ಇದೇ ವೇಳೆ, ಜೀವದಾನ ವ್ಯವಸ್ಥೆಯನ್ನು ಹಿಂತೆಗೆದುಕೊಳ್ಳುವ ಪ್ರಕ್ರಿಯೆಯು ಅತ್ಯಂತ ಗೌರವಯುತವಾದ ರೀತಿಯಲ್ಲಿ ನಡೆಯಬೇಕು ಎಂದು ನ್ಯಾಯಾಲಯವು ಕಟ್ಟುನಿಟ್ಟಾಗಿ ಸೂಚಿಸಿತ್ತು.
ಹರೀಶ್ ರಾಣಾ ಮೂಲತಃ ದೆಹಲಿಯವರು. 2013ರಲ್ಲಿ ಚಂಡೀಗಢದಲ್ಲಿ ಬಿ.ಟೆಕ್ (ಸಿವಿಲ್ ಎಂಜಿನಿಯರಿಂಗ್) ಓದುತ್ತಿದ್ದಾಗ, ಅವರು ತಂಗಿದ್ದ ವಸತಿಗೃಹದ ನಾಲ್ಕನೇ ಮಹಡಿಯಿಂದ ಬಿದ್ದಿದ್ದರು.
ಇದರಿಂದ ಅವರ ಮೆದುಳಿಗೆ ತೀವ್ರ ಪೆಟ್ಟು ಬಿದ್ದು, ಕಳೆದ 13 ವರ್ಷಗಳಿಂದ ಸಂಪೂರ್ಣ ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದರು. ಚಿಕಿತ್ಸೆ ನೀಡಿದರೂ ಯಾವುದೇ ಸುಧಾರಣೆ ಕಂಡುಬಂದಿರಲಿಲ್ಲ.


