ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.
ಪಶ್ಚಿಮ ಮೇದಿನಿಪುರದ ಚಂದ್ರಕೋಣದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ವಿಧಾನಸಭಾ ಕ್ಷೇತ್ರಗಳಲ್ಲಿ ಟಿಎಂಸಿ ಅಭ್ಯರ್ಥಿಗಳು ಯಾರೆಂಬುದನ್ನು ನಿರ್ಲಕ್ಷಿಸಿ, ಎಲ್ಲಾ 294 ಸ್ಥಾನಗಳಲ್ಲಿಯೂ ತನ್ನನ್ನು ಅಭ್ಯರ್ಥಿಯಾಗಿ ಪರಿಗಣಿಸುವಂತೆ ಸಭೆಯ ಮುಂದೆ ತಮ್ಮ ಮನವಿಯನ್ನು ಪುನರುಚ್ಚರಿಸಿದರು.
ಹೊಸ ಮತದಾರರನ್ನು ಸೇರಿಸಲು ಒಂದೇ ದಿನದಲ್ಲಿ ಸುಮಾರು 30,000 ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂಬ ಮಾಹಿತಿ ಬಂದ ನಂತರ, ಅಭಿಷೇಕ್ ಬ್ಯಾನರ್ಜಿ ಅವರು ನಿನ್ನೆ ತಮ್ಮ ಪ್ರಚಾರ ಕಾರ್ಯದ ಮಧ್ಯದಿಂದ ಕೋಲ್ಕತ್ತಾದ ಚುನಾವಣಾ ಆಯೋಗದ ಕಚೇರಿಗೆ ಧಾವಿಸಬೇಕಾಯಿತು ಎಂಬುವುದಾಗಿ ನನಗೆ ತಿಳಿಸಿದರು ಎಂದು ಮಮತಾ ಬ್ಯಾನರ್ಜಿ ಹೇಳಿದರು.
ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ಬಂಗಾಳದ ಮತದಾರರ ಪಟ್ಟಿಯಲ್ಲಿ ಸೇರಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಬಿಹಾರದಲ್ಲಿ ಮಾಡಿದಂತೆ ರೈಲ್ವೆ ಮೂಲಕ ಹೊರರಾಜ್ಯಗಳ ಮತದಾರರನ್ನು ಸಾಗಿಸಲು ಮತ್ತು ಅಸನ್ಸೋಲ್ ಮತ್ತು ಖರಗ್ಪುರ ಕ್ಷೇತ್ರಗಳಲ್ಲಿ ಮತದಾನ ಮಾಡುವಂತೆ ಅವರನ್ನು ಒತ್ತಾಯಿಸಲು ಬಿಜೆಪಿಯವರು ಯೋಜಿಸುತ್ತಿದ್ದಾರೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದರು.
ಬಂಗಾಳದೊಂದಿಗೆ ಯಾವುದೇ ಕಾನೂನುಬದ್ಧ ಸಂಬಂಧವಿಲ್ಲದ ಮತ್ತು ಇಲ್ಲಿನ ನಿಜವಾದ ನಿವಾಸಿಗಳಲ್ಲದವರ ಫಾರ್ಮ್ 6 ಅಕ್ರಮ, ಅಸಂವಿಧಾನಿಕ ಮತ್ತು ಮೂಲಭೂತವಾಗಿ ಅಪ್ರಜಾಪ್ರಭುತ್ವವಾಗಿದ್ದು, ಇದು ದುರುದ್ದೇಶಪೂರಿತ ಉದ್ದೇಶವನ್ನು ಪ್ರತಿಬಿಂಬಿಸುತ್ತದೆ ಎಂದು ಮಮತಾ ಬ್ಯಾನರ್ಜಿ ಅವರು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರಿಗೆ ಬರೆದ ಕಟುವಾದ ಪತ್ರದಲ್ಲಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.


