ಚಂಡೀಗಢದಲ್ಲಿರುವ ಪಂಜಾಬ್ ಬಿಜೆಪಿ ಕಚೇರಿಯ ಹೊರಗೆ ಸ್ಫೋಟ ನಡೆಸಿದ ಆರೋಪದ ಮೇಲೆ ಇಬ್ಬರು ಶಂಕಿತರ ಮನೆಗಳ ಮೇಲೆ
ಪಂಜಾಬ್ ಪೊಲೀಸರ ಗುಪ್ತಚರ ನಿಗ್ರಹ ದಳವು ಇಂದು ಮುಂಜಾನೆ ದಾಳಿ ನಡೆಸಿದೆ.
ರೋಪರ್ ಜಿಲ್ಲೆಯ ಮೊರಿಂಡಾ ಪ್ರದೇಶದ ರಟ್ಟನ್ಗಢ ಗ್ರಾಮದಲ್ಲಿ ಇಬ್ಬರು ಶಂಕಿತರ ಮನೆಗಳ ಮೇಲೆ ದಾಳಿ ನಡೆಸಿದ್ದು, ಏಪ್ರಿಲ್ 2ರ, ಬುಧವಾರ ಸಂಜೆ ಚಂಡೀಗಢದಲ್ಲಿರುವ ಪಂಜಾಬ್ ಬಿಜೆಪಿ ಕಚೇರಿಯ ಹೊರಗೆ ಸ್ಫೋಟ ನಡೆಸಿದ ಆರೋಪ ಅವರ ಮೇಲಿದೆ.
ಪೊಲೀಸ್ ಅಧಿಕಾರಿಗಳು ದೃಢೀಕರಿಸದಿದ್ದರೂ, ಕುಟುಂಬ ಸದಸ್ಯರು ಅಮನ್ಪ್ರೀತ್ ಸಿಂಗ್ ಅವರನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ. ಈ ಮಧ್ಯೆ, ದಾಳಿಯ ಸಮಯದಲ್ಲಿ ಪೊಲೀಸರಿಗೆ ಪ್ರಮುಖ ಆರೋಪಿ ಗುರ್ತೇಜ್ ಸಿಂಗ್ ಪತ್ತೆಯಾಗಲಿಲ್ಲ.
ಮೂಲಗಳ ಪ್ರಕಾರ, ಸ್ಫೋಟದಲ್ಲಿ ರ್ಯಾಪಿಡೊ ಬೈಕ್ ಸವಾರ ಗುರ್ತೇಜ್ ಭಾಗಿಯಾಗಿದ್ದಾನೆ ಎಂಬ ಶಂಕೆ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ.
ಅಮನ್ ಪ್ರೀತ್ ಸಿಂಗ್ ಅವರ ಪತ್ನಿ ತಮ್ಮ ಪತಿಗೆ ಗುರ್ತೇಜ್ ಸಿಂಗ್ ಜೊತೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
ಇದಲ್ಲದೆ, ಗುರ್ತೇಜ್ ಅವರ ತಾಯಿ, ಕಳೆದ 3-4 ವರ್ಷಗಳಿಂದ ಅವರ ಕುಟುಂಬವು ಅವರ ಸಂಪರ್ಕದಲ್ಲಿಲ್ಲ ಮತ್ತು ಅನಗತ್ಯವಾಗಿ ಕಿರುಕುಳ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.
ತಮ್ಮ ಮಗ ಚಂಡೀಗಢದಲ್ಲಿ ರ್ಯಾಪಿಡೋ ಚಾಲಕನಾಗಿ ಕೆಲಸ ಮಾಡುತ್ತಿದ್ದಾನೆಂದು ಜನರಿಂದ ತಿಳಿದುಕೊಂಡೆ ಎಂದಿರುವ ಅವರು, “ಅವನು ಏನಾದರೂ ತಪ್ಪು ಮಾಡಿದ್ದರೆ ಪೊಲೀಸರು ಅವನನ್ನು ಬಂಧಿಸಬೇಕು, ಆದರೆ ಕುಟುಂಬದ ಇತರ ಸದಸ್ಯರಿಗೆ ಕಿರುಕುಳ ನೀಡಬಾರದು” ಎಂದು ಕೇಳಿಕೊಂಡಿದ್ದಾರೆ.
ಪ್ರಧಾನ ಕಚೇರಿಯ ಪೊಲೀಸ್ ತಂಡಗಳು ದಾಳಿ ನಡೆಸಿದ್ದು, ಅದರ ಬಗ್ಗೆ ತಮಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ಎಸ್ಎಸ್ಪಿ ರೋಪರ್ ಮಣಿಂದರ್ ಸಿಂಗ್ ಹೇಳಿದ್ದಾರೆ.
ಘಟನೆ ಹಿನ್ನೆಲೆ
ಚಂಡೀಗಢದ ಸೆಕ್ಟರ್ 37 ರಲ್ಲಿರುವ ಪಂಜಾಬ್ ಬಿಜೆಪಿ ಕಚೇರಿಯ ಮೇಲೆ ಬುಧವಾರ ಸಂಜೆ ಇಬ್ಬರು ವ್ಯಕ್ತಿಗಳು ಹ್ಯಾಂಡ್ ಗ್ರೆನೇಡ್ ಎಸೆದಿದ್ದು, ಆ ಪ್ರದೇಶದಲ್ಲಿ ಭೀತಿ ಉಂಟಾಗಿದ್ದು, ಭದ್ರತಾ ಎಚ್ಚರಿಕೆ ನೀಡಲಾಗಿತ್ತು.
ಅದೃಷ್ಟವಶಾತ್, ಬಿಜೆಪಿ ಕಚೇರಿಯ ಆವರಣ ಗೋಡೆಯಿಂದ ಕೆಳಗೆ ಬಿದ್ದು ಪಾರ್ಕಿಂಗ್ ಸ್ಥಳದಲ್ಲಿ ಗ್ರೆನೇಡ್ ಸ್ಫೋಟಗೊಂಡಿದ್ದರಿಂದ ಯಾರಿಗೂ ಗಾಯಗಳಾಗಿಲ್ಲ. ಸಿಸಿಟಿವಿ ಕ್ಯಾಮೆರಾಗಳು ಇಬ್ಬರು ಶಂಕಿತರ ಮುಖಗಳನ್ನು ಸೆರೆಹಿಡಿದಿದ್ದು, ಅವರನ್ನು ಗುರುತಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದರು.


