ಗುಜರಾತ್ನ ಅಹಮದಾಬಾದ್ನಲ್ಲಿ ಹಿಂದೂ ಬಹುಸಂಖ್ಯಾತ ಪ್ರದೇಶವೊಂದರಲ್ಲಿ ವ್ಯಾಪಾರ ಮಾಡುತ್ತಿದ್ದ ಮುಸ್ಲಿಂ ಬೀದಿ ವ್ಯಾಪಾರಿಗೆ ಬಜರಂಗದಳ ಸದಸ್ಯರು ಬೆದರಿಕೆ ಹಾಕಿ ಅಲ್ಲಿಂದ ಅಂಗಡಿ ತೆರವುಗೊಳಿಸಿದ್ದಾರೆ.
ಮುಸ್ಲಿಂ ವ್ಯಾಪಾರಿಯ ಗುರುತನ್ನು ಕೇಳಿದ ಹಿಂದುತ್ವ ಗೂಂಡಾಗಳು, ನಂತರ ಅವರನ್ನು ಅಲ್ಲಿಂದ ಹೊರಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ನರೋಡಾ ಪ್ರದೇಶದಲ್ಲಿ ನಡೆದ ಈ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಪ್ರಕರಣ ಬೆಳಕಿಗೆ ಬಂದಿದೆ.
ಶಹಜಹಾನ್ ಎಂದು ಗುರುತಿಸಲಾದ ಮಾರಾಟಗಾರನನ್ನು, ತಲೆಗೆ ಕೇಸರಿ ವಸ್ತ್ರ ಧರಿಸಿದ ಪುಂಡರ ಗುಂಪೊಂದು ಎದುರಾಗಿದೆ. ವ್ಯಾಪಾರಿಯ ಗುರುತಿನ ದಾಖಲೆಗಳನ್ನು ಕೇಳಿದ್ದು, ಹಿಂದು ಬಹುಸಂಖ್ಯಾತ ಪ್ರದೇಶದಲ್ಲಿ ಅಂಗಡಿ ಏಕೆ ಇಟ್ಟಿದ್ದೀರಿ ಎಂದು ಪ್ರಶ್ನಿಸುತ್ತಿರುವುದು ವೀಡಿಯೊದಲ್ಲಿ ಕಾಣಬಹುದು. ಅವರ ಆಧಾರ್ ಕಾರ್ಡ್ ಪರಿಶೀಲಿಸಿ ಅವರ ಹೆಸರನ್ನು ತಿಳಿದುಕೊಂಡ ನಂತರ, ‘ಹಿಂದೂಗಳಿಗೆ ಮಾತ್ರ ಆ ಪ್ರದೇಶದಲ್ಲಿ ಕೆಲಸ ಮಾಡಲು ಅವಕಾಶವಿದೆ’ ಎಂದು ಹೇಳಿ ಅವರನ್ನು ಹೊರಹೋಗುವಂತೆ ಒತ್ತಾಯಿಸಿದ್ದಾರೆ.
ವ್ಯಕ್ತಿಯೊಬ್ಬರ ಧಾರ್ಮಿಕ ಗುರುತಿನ ಆಧಾರದ ಮೇಲೆ ಅವರಿಗೆ ವ್ಯಾಪಾರಕ್ಕೆ ಅವಕಾಶ ನೀಡದೇ ಇರುವುದರ ಬಗ್ಗೆ ಗಂಭೀರ ಕಳವಳಗಳನ್ನು ಹುಟ್ಟುಹಾಕಿದೆ. “ಹಿಂದೂ ಪ್ರದೇಶ” ಎಂದು ವಿವರಿಸಿದ ಸ್ಥಳದಲ್ಲಿ ಹಿಂದೂಯೇತರರಿಗೆ ಸೇರಿದ ಅಂಗಡಿಗಳನ್ನು ಅನುಮತಿಸಲಾಗುವುದಿಲ್ಲ ಎಂದು ಗುಂಪಿನ ಸದಸ್ಯರು ಇತರ ಮಾರಾಟಗಾರರಿಗೆ ಎಚ್ಚರಿಕೆ ನೀಡುವುದು ಸಹ ವಿಡಿಯೊದಲ್ಲಿ ಸೆರೆಯಾಗಿದೆ.


