ಅಬಕಾರಿ ನೀತಿ ಪ್ರಕರಣದಲ್ಲಿ ತಮ್ಮನ್ನು ಖುಲಾಸೆಗೊಳಿಸಿದ ಆದೇಶದ ವಿರುದ್ಧ ಸಿಬಿಐ ಸಲ್ಲಿಸಿರುವ ಮರುಪರಿಶೀಲನಾ ಅರ್ಜಿಯ ವಿಚಾರಣೆಯಿಂದ ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅವರು ಹಿಂದೆ ಸರಿಯಬೇಕು ಎಂದು ಕೋರಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಇತರ ಆರೋಪಿಗಳು ಸಲ್ಲಿಸಿದ್ದ ಅರ್ಜಿಯ ಮೇಲಿನ ತೀರ್ಪನ್ನು ದೆಹಲಿ ಹೈಕೋರ್ಟ್ ಸೋಮವಾರ (ಏ.13) ಕಾಯ್ದಿರಿಸಿದೆ.
ಸೋಮವಾರ ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅವರ ಪೀಠದ ಮುಂದೆ ಖುದ್ದು ಹಾಜರಾದ ಕೇಜ್ರಿವಾಲ್, ನ್ಯಾಯಮೂರ್ತಿಗಳು ಬಿಜೆಪಿ ಮತ್ತು ಆರ್ಎಸ್ಎಸ್ಗೆ ಸಂಬಂಧಿಸಿದ ಅಧಿವಕ್ತ ಪರಿಷತ್ನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ ಎಂದು ಆರೋಪಿಸಿದ್ದಾರೆ ಮತ್ತು ತಾರತಮ್ಯದ ಆತಂಕ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಸಿಬಿಐ ಪರ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ನ್ಯಾಯಮೂರ್ತಿಗಳ ನಡೆಯನ್ನು ಸಮರ್ಥಿಸಿಕೊಂಡರು. ಆ ಕಾರ್ಯಕ್ರಮವನ್ನು “ಬಾರ್ ಅಸೋಸಿಯೇಷನ್” ಆಯೋಜಿಸಿತ್ತು ಮತ್ತು ಸುಪ್ರೀಂ ಕೋರ್ಟ್ ಹಾಗೂ ವಿವಿಧ ಹೈಕೋರ್ಟ್ಗಳ ಹಾಲಿ ನ್ಯಾಯಮೂರ್ತಿಗಳೂ ಅದರಲ್ಲಿ ಪಾಲ್ಗೊಂಡಿದ್ದರು, ಆದ್ದರಿಂದ ಇದರಲ್ಲಿ ಯಾವುದೇ ತಪ್ಪಿಲ್ಲ ಎಂದು ಅವರು ವಾದಿಸಿದ್ದಾರೆ.
ವಿಚಾರಣಾ ನ್ಯಾಯಾಲಯ ಮೂರು ತಿಂಗಳ ಸುದೀರ್ಘ ವಿಚಾರಣೆಯ ನಂತರ ನೀಡಿದ್ದ ಖುಲಾಸೆ ಆದೇಶವನ್ನು ಹೈಕೋರ್ಟ್ ಕೇವಲ ಐದು ನಿಮಿಷಗಳ ವಿಚಾರಣೆಯಲ್ಲಿ ತಪ್ಪೆಂದು ಘೋಷಿಸಿದೆ. ನಾನು ನಿಜವಾಗಿಯೂ ಆಘಾತಕ್ಕೊಳಗಾಗಿದ್ದೇನೆ ಎಂದು ನ್ಯಾಯಮೂರ್ತಿ ಶರ್ಮಾ ಪೀಠದ ಮುಂದೆ ಕೇಜ್ರಿವಾಲ್ ಹೇಳಿದ್ದಾರೆ ಮತ್ತು ನ್ಯಾಯಾಲಯ ಪಕ್ಷಪಾತ ಮಾಡುತ್ತಿದೆಯೇ ಎಂದು ಪ್ರಶ್ನಿಸಿದ್ದಾರೆ. “ನನಗೆ ಇಲ್ಲಿ ನ್ಯಾಯ ಸಿಗುತ್ತದೆಯೇ ಎಂಬ ಬಗ್ಗೆ ಗಂಭೀರ ಅನುಮಾನಗಳು ಮತ್ತು ಆತಂಕಗಳು ಶುರುವಾಗಿವೆ” ಎಂದಿದ್ದಾರೆ. ಅಷ್ಟೇ ಅಲ್ಲದೆ, ಕೇಜ್ರಿವಾಲ್ ಮತ್ತು ಮನೀಶ್ ಸಿಸೋಡಿಯಾ ಅವರ ಜಾಮೀನು ಅರ್ಜಿಗಳು ಸೇರಿದಂತೆ ಐದು ವಿಷಯಗಳಲ್ಲಿ ನ್ಯಾಯಮೂರ್ತಿಗಳು ನೀಡಿದ ಆದೇಶಗಳು ಬಹುತೇಕ ಅಂತಿಮ ತೀರ್ಪು ನೀಡಿದಂತೆಯೇ ಇವೆ ಎಂದು ಕೇಜ್ರಿವಾಲ್ ಪರ ವಕೀಲರು ವಾದ ಮಂಡಿಸಿದ್ದಾರೆ.
ಕಳೆದ ವಿಚಾರಣೆಯ ಸಮಯದಲ್ಲಿ, ಕೇಜ್ರಿವಾಲ್ ಅವರು ನ್ಯಾಯಮೂರ್ತಿಗಳ ಹಿಂದೆ ಸರಿಯುವಿಕೆಯ (recusal) ಅರ್ಜಿಯ ಬಗ್ಗೆ ವೈಯಕ್ತಿಕವಾಗಿ ವಾದ ಮಂಡಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ಆದರೆ, ಸಿಬಿಐ ಪರ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಕೇಜ್ರಿವಾಲ್ ವೈಯಕ್ತಿಕವಾಗಿ ವಾದ ಮಂಡಿಸಲು ಬಯಸಿದರೆ ಮೊದಲು ತಮ್ಮ ಪರ ವಕೀಲರನ್ನು ಆ ಜವಾಬ್ದಾರಿಯಿಂದ ಮುಕ್ತಗೊಳಿಸಬೇಕು ಎಂದು ಹೇಳಿದ್ದರು. ಈ ನ್ಯಾಯಾಲಯ ನಿಮ್ಮ ಅತಿರಂಜಿತ ನಾಟಕೀಯ ಪ್ರದರ್ಶನಗಳಿಗೆ ವೇದಿಕೆಯಲ್ಲ ಎಂದು ಮಾರ್ಮಿಕವಾಗಿ ಟೀಕಿಸಿದ್ದರು.
ಕಳೆದ ವಿಚಾರಣೆಯಲ್ಲಿ ಅರವಿಂದ್ ಕೇಜ್ರಿವಾಲ್ ಮತ್ತು ಇತರ ಐವರು ಆರೋಪಿಗಳು ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅವರು ಈ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿದ್ದರು. ಇದಕ್ಕೆ ಪ್ರಮುಖ ಕಾರಣವಾಗಿ ಅವರು ‘ಅಖಿಲ ಭಾರತೀಯ ಅಧಿವಕ್ತ ಪರಿಷತ್’ (ಎಬಿಎಪಿ) ನೊಂದಿಗೆ ನ್ಯಾಯಮೂರ್ತಿಗಳು ಹೊಂದಿದ್ದಾರೆನ್ನಲಾದ ಸೌಹಾರ್ದಯುತ ಸಂಬಂಧ ಮತ್ತು ವೈಚಾರಿಕ ಒಡನಾಟವನ್ನು ಉಲ್ಲೇಖಿಸಿದ್ದರು. ವಕೀಲರ ಸಂಘಟನೆಯಾದ ಎಬಿಎಪಿ, ಆರ್ಎಸ್ಎಸ್ನ ಒಂದು ಅಂಗಸಂಸ್ಥೆ ಎಂದು ಪರಿಗಣಿಸಲ್ಪಟ್ಟಿದೆ. ನ್ಯಾಯಮೂರ್ತಿಗಳು ಈ ಸಂಘಟನೆಯ ಕಾರ್ಯಕ್ರಮಗಳಲ್ಲಿ ಈ ಹಿಂದೆ ಭಾಗವಹಿಸಿರುವುದು ತಮಗೆ ನ್ಯಾಯ ಸಿಗುವ ಬಗ್ಗೆ ‘ಪಕ್ಷಪಾತದ ಆತಂಕ’ ಮೂಡಿಸಿದೆ ಎಂದು ಕೇಜ್ರಿವಾಲ್ ಹೇಳಿದ್ದರು.
ಕೇಜ್ರಿವಾಲ್ ವಾದ ಆಲಿಸಿದ ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅವರು, “ನ್ಯಾಯಾಧೀಶರು ಪ್ರಕರಣದಿಂದ ಹಿಂದೆ ಸರಿಯುವ (Recusal) ಕಾನೂನಿನ ಬಗ್ಗೆ ನಾನು ಸಾಕಷ್ಟು ತಿಳಿದುಕೊಂಡೆ. ನನ್ನ ಜೀವನದಲ್ಲೇ ಮೊದಲ ಬಾರಿಗೆ ಯಾರೋ ಒಬ್ಬರು ನನ್ನನ್ನು ಈ ಕೇಸ್ನಿಂದ ಹಿಂದೆ ಸರಿಯಲು ಕೇಳಿಕೊಂಡಿದ್ದಾರೆ. ಇದರಿಂದ ನನಗೆ ಹೊಸ ವಿಷಯಗಳು ತಿಳಿಯಲು ಸಾಧ್ಯವಾಯಿತು. ಈ ಪ್ರಕರಣದಲ್ಲಿ ನಾನು ಒಂದು ಉತ್ತಮ ತೀರ್ಪು ನೀಡುತ್ತೇನೆ ಎಂಬ ಭರವಸೆ ನನಗಿದೆ” ಎಂದು ಹೇಳಿದ್ದಾರೆ. ಆದೇಶ ಕಾಯ್ದಿರಿಸಿದ್ದಾರೆ ಎಂದು ವರದಿಗಳು ಹೇಳಿವೆ.
ಸಿಬಿಐ ಏಪ್ರಿಲ್ 7ರಂದು ಸಲ್ಲಿಸಿದ ತನ್ನ ಅಫಿಡವಿಟ್ನಲ್ಲಿ ಕೇಜ್ರಿವಾಲ್ ಅವರ ನ್ಯಾಯಮೂರ್ತಿಗಳ ಹಿಂದೆ ಸರಿಯುವಿಕೆಯ ಕೋರಿಕೆಯನ್ನು ಬಲವಾಗಿ ವಿರೋಧಿಸಿದೆ. “ಕಾನೂನು ವಿಚಾರಗೋಷ್ಠಿಯ ವಿಷಯವು ರಾಜಕೀಯವಾಗಿಲ್ಲದಿದ್ದಾಗ, ಅದರಲ್ಲಿ ಭಾಗವಹಿಸುವುದು ವಿಚಾರಣೆಯಿಂದ ಹಿಂದೆ ಸರಿಯಲು ಎಂದಿಗೂ ಕಾರಣವಾಗಲಾರದು. ಆದ್ದರಿಂದ ಇದು ಯಾವುದೇ ಸದ್ಧಾಂತಿಕ ಸಂಬಂಧವನ್ನು ಪ್ರದರ್ಶಿಸುವುದಿಲ್ಲ” ಎಂದು ಸಿಬಿಐ ಹೇಳಿದೆ. ನ್ಯಾಯಮೂರ್ತಿಗಳ ಮೇಲೆ ಪಕ್ಷಪಾತದ ಆರೋಪ ಹೊರಿಸಲು ಇಂತಹ ನಿರ್ಲಜ್ಜ ಮತ್ತು ವ್ಯಾಪಕವಾದ ಆಕ್ಷೇಪಗಳನ್ನು ಮಾಡುವುದು ನ್ಯಾಯಾಲಯದ ನಿಂದನೆಯಾಗುತ್ತದೆ ಎಂದು ಸಿಬಿಐ ವಾದಿಸಿದೆ.


