ಶಾಮನೂರು ಶಿವಶಂಕರಪ್ಪ ನಿಧನದ ಬಳಿಕ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಉಪ ಚುನಾವಣೆಯು ಕಾಂಗ್ರೆಸ್ ಪಕ್ಷದಲ್ಲಿ ಗೊಂದಲ ಮತ್ತು ವಿವಾದ ಉಂಟುಮಾಡಿದೆ. ಮತದಾನ ಮುಗಿದ ಬಳಿಕ, ಕಾಂಗ್ರೆಸ್ ಪಕ್ಷವು ಮುಸ್ಲಿಂ ನಾಯಕರಾದ ನಸೀರ್ ಅಹಮದ್ ಮತ್ತು ಅಬ್ದುಲ್ ಜಬ್ಬಾರ್ ಅವರ ಮೇಲೆ ಕ್ರಮ ತೆಗೆದುಕೊಂಡಿದೆ. ಅಲ್ಪಸಂಖ್ಯಾತ ನಾಯಕರ ಮೇಲಿನ ಕಾಂಗ್ರೆಸ್ ಪಕ್ಷದ ಈ ನಿರ್ದಾಕ್ಷೀಣ್ಯ ಕ್ರಮವು ಸಾರ್ವಜನಿಕವಾಗಿ ಟೀಕೆಗೂ ಕಾರಣವಾಗಿದೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಎದ್ದೇಳು ಕರ್ನಾಟಕ ಸಂಘಟನೆ, “ದಾವಣಗೆರೆ ರಾಜಕಾರಣವು ಕಾಂಗ್ರೆಸ್ ಹಿಡಿದಿರುವ ಅಧಃಪತನ ಹಾದಿಯ ಪ್ರತ್ಯಕ್ಷ ದರ್ಶನವಾಗಿದೆ. ಆತ್ಮಾವಲೋಕನಕ್ಕೆ ಸಿದ್ಧವಿಲ್ಲದ ಕಾಂಗ್ರೆಸ್ಸಿನಿಂದ ಅಲ್ಪಸಂಖ್ಯಾತರ ಭಾವನೆಗಳ ಮೇಲೆ ಹಲ್ಲೆ ನಡೆಯುತ್ತಿದ್ದು, ಜಾತ್ಯಾತೀತ ಮೌಲ್ಯಗಳಿಗೆ ತಿಲಾಂಜಲಿ ಇಟ್ಟು, ಜಾತಿ ಮತ್ತು ಕುಟುಂಬ ರಾಜಕಾರಣಕ್ಕೆ ರತ್ನಗಂಬಳಿ ಹಾಕಿದೆ” ಎಂದು ಆಕ್ರೋಶ ಹೊರಹಾಕಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಎದ್ದೇಳು ಕರ್ನಾಟಕ, “ದಾವಣಗೆರೆ ಉಪಚುನಾವಣೆಗೆ ಟಿಕೆಟ್ ನೀಡುವ ವಿಚಾರದಲ್ಲಿ ಕಾಂಗ್ರೆಸ್ ನಡೆದುಕೊಂಡ ರೀತಿ ಜಿಗುಪ್ಸೆ ಮೂಡಿಸಿದರೆ, ಅದು ಈಗ ತನ್ನದೇ ಪಕ್ಷದ ಅಲ್ಪಸಂಖ್ಯಾತ ಮುಖಂಡರ ಮೇಲೆ ತೆಗೆದುಕೊಳ್ಳುತ್ತಿರುವ ಸೇಡಿನ ಕ್ರಮಗಳು ಆಕ್ರೋಶ ಹುಟ್ಟಿಸುತ್ತಿವೆ” ಎಂದು ಆಕ್ರೋಶ ಹೊರಹಾಕಿದ್ದಾರೆ.
“ಮಾತಿನಲ್ಲಿ ಜಾತ್ಯತೀತತೆ ಇದ್ದರೂ ಅದರ ನಡುವಳಿಕೆ ಕರ್ನಾಟಕ ಜಾತ್ಯಾತೀತ ಶಕ್ತಿಗಳನ್ನು ದುರ್ಬಲಗೊಳಿಸುವ ರೀತಿಯಲ್ಲಿ ಇದೆ ಎಂಬುದನ್ನು ನೇರ ಮಾತುಗಳಲ್ಲಿ ಹೇಳಲೇಬೇಕಾದ ಸಂದರ್ಭ ಎದುರಾಗಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯ ಅತ್ಯಂತ ಹೆಚ್ಚಿನ ಜನಸಂಖ್ಯಾ ಬಾಹುಳ್ಯವಿದ್ದರೂ ಲಿಂಗಾಯತ ಸಮುದಾಯದ ಶಾಮನೂರು ಶಿವಶಂಕರಪ್ಪ ಅವರೇ ಕಳೆದ 30 ವರ್ಷಗಳಿಂದ ಕಾಂಗ್ರೆಸ್ ಶಾಸಕರಾಗಿ ಮುಂದುವರೆಯುತ್ತಾ ಬಂದಿದ್ದಾರೆ. ಅವರ ನಿಧನದ ನಂತರ ಈ ಕ್ಷೇತ್ರವನ್ನು ಮುಸ್ಲಿಂ ಸಮುದಾಯಕ್ಕೆ ನೀಡಲಾಗುತ್ತದೆ ಎಂಬ ಭರವಸೆಯನ್ನು ಕಾಂಗ್ರೆಸ್ ನಾಯಕತ್ವ ನೀಡಿತ್ತು, ಕೇವಲ ಮುಸ್ಲಿಂ ಮಾತ್ರವಲ್ಲ ಕುಟುಂಬ ರಾಜಕಾರಣವನ್ನು ವಿರೋಧಿಸುವ ಎಲ್ಲ ಜಾತ್ಯತೀತ ಶಕ್ತಿಗಳ ಬಯಕೆಯೂ ಆಗಿತ್ತು. ಆದರೆ ಕುಟುಂಬ, ಜಾತಿ ಹಾಗೂ ಹಣದ ಬಲದ ಮುಂದೆ ಕಾಂಗ್ರೆಸ್ಸಿನ ಹೈಕಮಾಂಡ್ ಹಾಗೂ ರಾಜ್ಯ ನಾಯಕತ್ವ ಮಂಡಿಯೂರಿದ ಬಗೆ ಎಲ್ಲರಿಗೂ ಜಿಗುಪ್ಸೆ ಮೂಡಿಸಿತ್ತು. ಕಾಂಗ್ರೆಸ್ಸಿನ ಹಸಿಹಸಿ ಅವಕಾಶವಾದಿ ನಿಲುವಿನಿಂದ ಬೇಸತ್ತು ಕೇವಲ ಮುಸ್ಲಿಂ ಸಮುದಾಯದ ಮುಖಂಡರು ಮಾತ್ರವಲ್ಲ ಯಾವ ಜಾತ್ಯಾತೀತ ಶಕ್ತಿಗಳು ಸಹ ಇಲ್ಲಿನ ಚುನಾವಣಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಲಿಲ್ಲ” ಎಂದು ಹೇಳಿದ್ದಾರೆ.
“ಎದ್ದೇಳು ಕರ್ನಾಟಕದ ವಿಚಾರಕ್ಕೆ ಬರುವುದಾದರೆ, 2023 ರ ಚುನಾವಣೆಯಲ್ಲಿ ಕರ್ನಾಟಕದ ನಾಗರೀಕ ಸಂಘಟನೆಗಳ ಸಂಯುಕ್ತ ಶಕ್ತಿಯಾಗಿ ಎದ್ದೇಳು ಕರ್ನಾಟಕ ತನ್ನನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡು ಕೆಲಸ ಮಾಡಿ ಸಂವಿಧಾನ ವಿರೋಧಿ ಬಿಜೆಪಿಯನ್ನು ಸೋಲಿಸುವುದರಲ್ಲಿ ಮಹತ್ವದ ಪಾತ್ರ ನಿರ್ವಹಿಸಿತ್ತು. 2025ರಲ್ಲಿ ನಡೆದ ಉಪ ಚುನಾವಣೆಗಳಲ್ಲೂ ಶಿಗ್ಗಾಂವಿ ಹಾಗೂ ಸಂಡೂರು ಕ್ಷೇತ್ರದಲ್ಲಿ ತನ್ನದೇ ರೀತಿಯಲ್ಲಿ ಸಕಾರಾತ್ಮಕ ಕೊಡುಗೆ ನೀಡಿತ್ತು. ಆದರೆ ಕಾಂಗ್ರೆಸ್ ನಡೆದುಕೊಂಡ ರೀತಿಯಿಂದಾಗಿ ನಾವು ಈ ಬಾರಿಯ ಉಪ ಚುನಾವಣೆಯಲ್ಲಿ ಮಧ್ಯ ಪ್ರವೇಶಿಸದೇ ಇರಲು ತೀರ್ಮಾನಿಸಿದೆವು. ಇದು ಎದ್ದೇಳು ಕರ್ನಾಟಕದ ಕತೆ ಮಾತ್ರವಲ್ಲ, ಬಹುಪಾಲು ಜನಪರ ಸಂಘಟನೆಗಳ ನಿಲುವು ಸಹ ಇದೇ ಆಗಿತ್ತು” ಎಂದಿದ್ದಾರೆ.
“ದಾವಣಗೆರೆಯ ಜಾತ್ಯಾತೀತ ಶಕ್ತಿಗಳ ಮುಂದೆ ಹಾಗೂ ಅಲ್ಪಸಂಖ್ಯಾತ ಸಮುದಾಯದ ಮುಂದೆ ದೊಡ್ಡ ಇಕ್ಕಟ್ಟು ಸೃಷ್ಟಿಯಾಗಿತ್ತು. ಕಾಂಗ್ರೆಸ್ಸಿನ ನಿಲುವನ್ನಂತೂ ಯಾರೂ ಒಪ್ಪುವ ಮಾತೇ ಇರಲಿಲ್ಲ. ಆದರೆ ಕೆಲವರು ಕಾಂಗ್ರೆಸ್ಸನ್ನು ಬೈದುಕೊಂಡು ಕಾಂಗ್ರೆಸ್ಸಿಗೇ ಮತ ಹಾಕಿದರು. ಕೆಲವರು ಕೋಮುವಾದಿಗಳನ್ನು ಮುಂದೆ ನೋಡಿಕೊಳ್ಳೋಣ, ಈ ಬಾರಿ ಕಾಂಗ್ರೆಸ್ಸಿಗೆ ಪಾಠ ಕಲಿಸಲೇಬೇಕು ಎಂದು ಇತರೆ ಅಭ್ಯರ್ಥಿಗಳಿಗೆ ಓಟು ಹಾಕಿದರು. ಕೆಲವರು ಓಟು ಮಾಡಲಿಕ್ಕೇ ಹೋಗಲಿಲ್ಲ. ಫಲಿತಾಂಶ ಏನೇ ಬರಬಹುದು, ಅಲ್ಪ ಅಂತರದಲ್ಲಿ ಕಾಂಗ್ರೆಸ್ ಅಬ್ಯರ್ಥಿ ಹಣ ಬಲದ ಮೇಲೆ ಗೆದ್ದರೂ ಗೆಲ್ಲಬಹುದು, ಆದರೆ ಕಾಂಗ್ರೆಸ್ ನೈತಿಕವಾಗಿ ಸೋತಾಗಿದೆ” ಎಂದು ಸಂಘಟನೆ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.
“ಕಾಂಗ್ರೆಸ್ಸಿನ ಈ ನೈತಿಕ ಸೋಲಿನ ಹೊಣೆ ಹೊರಬೇಕಾಗಿರುವುದು ಯಾರು? ನಿಸ್ಸಂಶಯವಾಗಿ ಕಾಂಗ್ರೆಸ್ಸಿನ ಹೈಕಮಾಂಡ್, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು. ಕಾಂಗ್ರೆಸ್ಸಿನ ಈ ಸ್ಥಿತಿಗೆ ಕಾರಣವಾಗಿರುವ ಈ ನಾಯಕರು ಆತ್ಮಾವಲೋಕನ ಮಾಡಿಕೊಳ್ಳುವ ಬದಲು ನೊಂದಿದ್ದ ದಾವಣಗೆರೆಯ ಅಲ್ಪಸಂಖ್ಯಾತ ಸಮುದಾಯದ ಭಾವನೆಗಳಿಗೆ ಸ್ಪಂದಿಸಿದ ನಾಯಕರ ತಲೆದಂಡಕ್ಕೆ ಹೊರಟಿರುವುದು ಅಕ್ಷಮ್ಯ ಅಪರಾಧ. ಇದನ್ನು ಎದ್ದೇಳು ಕರ್ನಾಟಕ ತೀವ್ರ ರೀತಿಯಲ್ಲಿ ಖಂಡಿಸುತ್ತದೆ. ದಾವಣಗೆರೆಯ ಈ ಬಲಾಢ್ಯ ಕುಟುಂಬದವರು ಜಾತಿ ಕಾರಣಕ್ಕೆ ಬಿಜೆಪಿಯ ರಾಘವೇಂದ್ರ ಅವರನ್ನು ಗೆಲ್ಲಿಸಿ ಎಂದು ಬಹಿರಂಗವಾಗಿ ಕರೆ ಕೊಟ್ಟಾಗಲೂ ಯಾವುದೇ ಕ್ರಮ ತೆಗೆದುಕೊಳ್ಳದೆ ತೆಪ್ಪಗಿದ್ದ ಕಾಂಗ್ರೆಸ್ ಮುಖಂಡರು
ಈಗ ಇಲ್ಲದ ಕಾರಣ ಹುಡುಕಿ ಅಲ್ಪಸಂಖ್ಯಾತ ಮುಖಂಡರನ್ನು ದಮನಿಸಲು, ಅಲ್ಪಸಂಖ್ಯಾತ ಮುಖಂಡರ ನಡುವೆ ಒಡಕು ತರಲು ಪ್ರಯತ್ನಿಸುತ್ತಿರುವುದು ನಾಚಿಕೆಗೇಡಿನ ವಿಚಾರವಾಗಿದೆ” ಎಂದು ಆಕ್ರೋಶ ಹೊರಹಾಕಿದ್ದಾರೆ.
“ಕಾಂಗ್ರೆಸ್ ಇದೇ ಧೋರಣೆಯನ್ನು ಮುಂದುವರಿಸಿದರೆ ಮುಂದಿನ ಚುನಾವಣೆಯಲ್ಲಿ ಎದ್ದೇಳು ಕರ್ನಾಟಕವನ್ನೂ ಒಳಗೊಂಡಂತೆ ಎಲ್ಲಾ ಜನಪರ ಶಕ್ತಿಗಳ ಬೆಂಬಲ ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಬಯಸುತ್ತೇವೆ. ದಾವಣಗೆರೆ ವಿದ್ಯಮಾನ ಬರಲಿರುವ 2028 ರ ಚುನಾವಣೆಗೆ ಮುನ್ನದ ಎಚ್ಚರಿಕೆ ಗಂಟೆಯಾಗಿದೆ. ಅಲ್ಪಸಂಖ್ಯಾತರನ್ನು, ದಲಿತರನ್ನು, ಜಾತ್ಯಾತೀತ ಜನತೆಯನ್ನು, ಪ್ರಗತಿಪರ ಶಕ್ತಿಯನ್ನು ‘ಟೇಕನ್ ಫಾರ್ ಗ್ರ್ಯಾಂಟೆಡ್’ ಮಾಡಿಕೊಳ್ಳಬೇಡಿ ಎಂದು ದಾವಣಗೆರೆ ಹೇಳುತ್ತಿದೆ. ಕಾಂಗ್ರೆಸ್ ನಾಯಕತ್ವ ಈಗಾದರೂ ತನ್ನ ತಪ್ಪನ್ನು ನೋಡಿಕೊಂಡು ಆಗಿರುವ ಅನಾಹುತವನ್ನು ಸರಿಪಡಿಸುವ ದಿಕ್ಕಿನಲ್ಲಿ ಹೆಜ್ಜೆ ಇಡಬೇಕೆಂದು ಒತ್ತಾಯಿಸುತ್ತದೆ” ಎಂದು ಆಗ್ರಹಿಸಿದ್ದಾರೆ.
ಎದ್ದೇಳು ಕರ್ನಾಟಕದ ಪರವಾಗಿ, ತಾರಾ ರಾವ್, ಬಸವರಾಜ್ ಕೌತಾಳ್, ಕಿರಣ್ ಕಮಲ್ ಪ್ರಸಾದ್, ಜೆ.ಎಂ. ವೀರಸಂಗಯ್ಯ, ಅರುಣ್ ಲೂಯಿಸ್, ಅನುಪಮ ಹೆಗಡೆ, ಕೆ.ಎಲ್. ಅಶೋಕ್, ಬಿ.ಎಸ್. ಶ್ರೀಧರ್, ಎನ್. ವೆಂಕಟೇಶ್, ಮೊಹಮ್ಮದ್ ಕುಂಜ್ ಸಹಿ ಮಾಡಿದ್ದಾರೆ.


