Homeಮುಖಪುಟಮಣಿಪುರ ಎಸ್‌ಐಆರ್ ವಿರೋಧಿಸಿದ ಕುಕಿ-ಝೋ ಗುಂಪುಗಳು

ಮಣಿಪುರ ಎಸ್‌ಐಆರ್ ವಿರೋಧಿಸಿದ ಕುಕಿ-ಝೋ ಗುಂಪುಗಳು

- Advertisement -
- Advertisement -

ಮಣಿಪುರ ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ವಿರುದ್ಧ ಪ್ರತಿಭಟನೆ ವ್ಯಕ್ತವಾಗಿದೆ. ಕುಕಿ-ಝೋ ಬುಡಕಟ್ಟು ಜನಾಂಗದ ಸಾಂಪ್ರದಾಯಿಕ ಗುಂಪಾದ ಕುಕಿ ಇನ್ಪಿ ಮಣಿಪುರ (ಕೆಐಎಂ) ಮತದಾರರ ಪಟ್ಟಿ ಪರಿಷ್ಕರಣಾ ಪ್ರಕ್ರಿಯೆಯನ್ನು ತೀವ್ರವಾಗಿ ವಿರೋಧಿಸಿ, ತಮ್ಮ ಅನುಮಾನಗಳನ್ನು ವ್ಯಕ್ತಪಡಿಸಿದೆ.

ಕಳೆದ ಮೂರು ವರ್ಷಗಳಿಂದ ಜನಾಂಗೀಯ ಹಿಂಸಾಚಾರದಿಂದ ಹಾನಿಗೊಳಗಾದ ರಾಜ್ಯದ ಪ್ರಸ್ತುತ ಸ್ಥಿತಿಯನ್ನು ಪರಿಗಣಿಸಿ – ಎಸ್‌ಐಆರ್‌ ಪ್ರಕ್ರಿಯೆ ಸ್ವೀಕಾರಾರ್ಹವಲ್ಲ ಎಂದು ಕೆಐಎಂ ವಾದಿಸುತ್ತಿದೆ. ಇದು ನ್ಯಾಯಸಮ್ಮತತೆ, ಒಳಗೊಳ್ಳುವಿಕೆ ಮತ್ತು ಆಡಳಿತಾತ್ಮಕ ಜವಾಬ್ದಾರಿಯ ಬಗ್ಗೆ ಗಂಭೀರ ಕಳವಳಗಳನ್ನು ಹುಟ್ಟುಹಾಕಿದೆ. ಎಸ್‌ಐಆರ್‌ ಪ್ರಕ್ರಿಯೆಯು ಆಂತರಿಕವಾಗಿ ಸ್ಥಳಾಂತರಗೊಂಡ ಜನರನ್ನು (ಐಡಿಪಿಎಸ್‌) ಹೊರಗಿಡಲು ಕಾರಣವಾಗುತ್ತದೆ ಎಂದು ಸಂಸ್ಥೆ ಆರೋಪಿಸಿದೆ.

ಆಂತರಿಕವಾಗಿ ಸ್ಥಳಾಂತರಗೊಂಡ ಜನರು ಎಂದರೆ ಸಶಸ್ತ್ರ ಸಂಘರ್ಷ, ಸಾಮಾನ್ಯೀಕೃತ ಹಿಂಸಾಚಾರ, ಮಾನವ ಹಕ್ಕುಗಳ ಉಲ್ಲಂಘನೆ, ವಿಪತ್ತುಗಳು ಅಥವಾ ಯಾವುದೇ ಇತರ ಬೆದರಿಕೆಗಳಿಂದಾಗಿ ತಮ್ಮ ಮನೆಗಳನ್ನು ಬಿಟ್ಟು ಓಡಿಹೋಗಬೇಕಾದ ವ್ಯಕ್ತಿಗಳು. ಆದರೂ ಅವರೆಲ್ಲಾ ತಮ್ಮ ರಾಜ್ಯ/ದೇಶದ ಪ್ರಾದೇಶಿಕ ಗಡಿಯೊಳಗೆ ಉಳಿದಿದ್ದಾರೆ. ಭಾರತೀಯ ಕಾನೂನು ದತ್ತಸಂಚಯ ಮತ್ತು ಕಾನೂನು ಸಂಶೋಧನಾ ವೇದಿಕೆಯಾದ ಲೀಗಲ್ ಈಗಲ್ ಎಲೈಟ್‌ನ ವರದಿಯ ಪ್ರಕಾರ, ಮೇ 2023 ರಲ್ಲಿ ಮಣಿಪುರದಲ್ಲಿ ಜನಾಂಗೀಯ ಸಂಘರ್ಷ ಪ್ರಾರಂಭವಾದಾಗಿನಿಂದ ಮೈತೇಯಿ ಮತ್ತು ಕುಕಿ-ಝೋ ಸಮುದಾಯಗಳಿಂದ ಸುಮಾರು 65,0000 ಜನರನ್ನು ಐಡಿಪಿಗಳು ಎಂದು ಗುರುತಿಸಲಾಗಿದೆ.

ಕಳೆದ ಕೆಲವು ತಿಂಗಳುಗಳಲ್ಲಿ ಅನೇಕ ದಾಳಿಗಳು ರಾಜ್ಯವನ್ನು ಬೆಚ್ಚಿಬೀಳಿಸಿರುವುದರಿಂದ ಮಣಿಪುರದಲ್ಲಿ ಪರಿಸ್ಥಿತಿ ಇನ್ನೂ ಅಸ್ಥಿರವಾಗಿದೆ. ಏಪ್ರಿಲ್ 2026 ರಲ್ಲಿ, ನಾಗರಿಕ ಪ್ರದೇಶದಲ್ಲಿ ಕ್ಷಿಪಣಿಯು ಇಬ್ಬರು ಮಕ್ಕಳನ್ನು ಕೊಂದಿತು. ಅದೇ ತಿಂಗಳ ನಂತರ, ಉಖ್ರುಲ್ ಜಿಲ್ಲೆಯಲ್ಲಿ ಅವಳಿ ಗುಂಡಿನ ದಾಳಿಯಲ್ಲಿ ಮೂವರು ಸಾವನ್ನಪ್ಪಿದರು. ನಂತರ ಮೇ 2026 ರ ಆರಂಭದಲ್ಲಿ, ಮೂವರು ಕುಕಿ-ಝೋ ಚರ್ಚ್ ನಾಯಕರನ್ನು ಗುಂಡಿಕ್ಕಿ ಕೊಲ್ಲಲಾಯಿತು, ಇದು ಒತ್ತೆಯಾಳು ಬಿಕ್ಕಟ್ಟಿಗೆ ಕಾರಣವಾಯಿತು. ಸುಮಾರು 44 ಜನರನ್ನು ಅವರ ಮನೆಗಳಿಂದ ಅಪಹರಿಸಿ ಒತ್ತೆಯಾಳುಗಳಾಗಿ ಇರಿಸಲಾಯಿತು. ಜೂನ್ 5, 2026 ರಂದು, ಕಾಂಗ್ಪೋಕ್ಪಿ ಜಿಲ್ಲೆಯಲ್ಲಿ ಹೊಸ ಹಿಂಸಾಚಾರ ಭುಗಿಲೆದ್ದಿತು, ಮೂವರು ನಾಗರಿಕರು ಸಾವನ್ನಪ್ಪಿ, ಹಲವಾರು ಮನೆಗಳಿಗೆ ಬೆಂಕಿ ಹಚ್ಚಲಾಯಿತು.

ಇದನ್ನೂ ನೋಡಿ: ಮಣಿಪುರ ಒತ್ತೆಯಾಳು ಬಿಕ್ಕಟ್ಟು: 20 ಕುಕಿ-ಝೋ ಮತ್ತು ನಾಗಾ ಒತ್ತೆಯಾಳುಗಳು ಇನ್ನೂ ಸೆರೆಯಲ್ಲಿ ಇರುವುದರಿಂದ ಬಹು ಜಿಲ್ಲೆಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ

ಕುಕಿ-ಝೋ ಸಂಘಟನೆಯು ತಮ್ಮ ಸಮುದಾಯದ ಸುಮಾರು 59,000 ಸದಸ್ಯರನ್ನು ಆಂತರಿಕವಾಗಿ ಸ್ಥಳಾಂತರಿಸಲಾಗಿದೆ ಎಂದು ಹೇಳುತ್ತದೆ. ಎಸ್‌ಯಾರ್‌ ಪ್ರಾರಂಭವಾಗುವ ಮೊದಲು ಪ್ರಕ್ರಿಯೆಯಲ್ಲಿ ಭಾಗವಹಿಸಲು ತಮ್ಮ ಮನೆಗಳಿಗೆ ಮರಳಲು ಸಾಧ್ಯವಾಗದ ಸಾವಿರಾರು ಕುಕಿ-ಝೋ ಜನರ ಪರಿಸ್ಥಿತಿಯನ್ನು ಪರಿಹರಿಸಲು ಸಾಕಷ್ಟು ಪ್ರಾಯೋಗಿಕ ವ್ಯವಸ್ಥೆಗಳನ್ನು ಜಾರಿಗೆ ತರಬೇಕು ಎಂದು ಕೆಐಎಂ ಒತ್ತಾಯಿಸುತ್ತಿದೆ.

ಸ್ಥಳಾಂತರಗೊಂಡವರನ್ನು ಸರಿಯಾಗಿ ದಾಖಲಿಸಲಾಗಿದೆ, ಎಸ್‌ಐಆರ್‌ನಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ ಎಂದು ಖಚಿತಪಡಿಸಿಕೊಳ್ಳಲು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಸಂಸ್ಥೆ ಕೇಂದ್ರ ಸರ್ಕಾರ ಮತ್ತು ಸ್ಥಳೀಯ ಅಧಿಕಾರಿಗಳನ್ನು ಒತ್ತಾಯಿಸಿದೆ.

“ಯಾವುದೇ ನಿಬಂಧನೆಗಳಿಲ್ಲದೆ ಎಸ್‌ಐಆರ್‌ ಅನ್ನು ಮುಂದುವರಿಸುವುದು ಅನ್ಯಾಯವಾಗುವುದಲ್ಲದೆ, ಇಡೀ ಪ್ರಕ್ರಿಯೆಯ ಕಾನೂನುಬದ್ಧತೆ ಮತ್ತು ವಿಶ್ವಾಸಾರ್ಹತೆಯನ್ನು ಪ್ರಶ್ನಿಸುತ್ತದೆ” ಎಂದು ಕೆಐಎಂ ಹೇಳಿದರು.

ಕಳವಳ ವ್ಯಕ್ತಪಡಿಸಿದ ಕೊಹೂರ್

ಕುಕಿ ಆರ್ಗನೈಸೇಶನ್ ಫಾರ್ ಹ್ಯೂಮನ್ ರೈಟ್ಸ್ ಟ್ರಸ್ಟ್ (ಕೊಹೂರ್) ಈ ಹಿಂದೆಯೂ ಇದೇ ರೀತಿಯ ಕಳವಳಗಳನ್ನು ವ್ಯಕ್ತಪಡಿಸಿತ್ತು. ಬುಧವಾರ, ಜೂನ್ 3, 2026 ರಂದು, ಸ್ಥಳಾಂತರಗೊಂಡ ಕುಕಿ-ಝೋ ಸದಸ್ಯರು ಪ್ರಸ್ತುತ ಮಿಜೋರಾಂ, ಮೇಘಾಲಯ ಮತ್ತು ಇತರ ರಾಜ್ಯಗಳಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಸಂಸ್ಥೆ ಹೇಳಿದೆ.

“ಎಸ್‌ಐಆರ್‌ ಕಾರ್ಯವು ಬೂತ್ ಮಟ್ಟದ ಅಧಿಕಾರಿಗಳ ಮನೆ-ಮನೆ ಎಣಿಕೆಯ ಸುತ್ತ ನಿರ್ಮಿಸಲ್ಪಟ್ಟಿದೆ, ಅವರು ಜೂನ್ 29 ರ ಕಟ್-ಆಫ್ ದಿನಾಂಕದ ಮೊದಲು ಗಣತಿ ನಮೂನೆಗಳನ್ನು ವಿತರಿಸಲು, ಸಂಗ್ರಹಿಸಲು ಮತ್ತು ಪರಿಶೀಲಿಸಲು ಪ್ರತಿ ಮತದಾರರ ನಿವಾಸಕ್ಕೆ ಭೇಟಿ ನೀಡುತ್ತಾರೆ. ಮನೆ ನಾಶವಾದ, ತನ್ನ ಮತಗಟ್ಟೆಯ ಪ್ರದೇಶಕ್ಕೆ ಸುರಕ್ಷಿತವಾಗಿ ಹಿಂತಿರುಗಲು ಸಾಧ್ಯವಾಗದ ಮತ್ತು ಬೇರೆ ಜಿಲ್ಲೆಯಲ್ಲಿ – ಅಥವಾ ಇನ್ನೊಂದು ರಾಜ್ಯದಲ್ಲಿ – ಪರಿಹಾರ ಶಿಬಿರದಲ್ಲಿ ದಾಖಲಾಗಿರುವ ಸ್ಥಳಾಂತರಗೊಂಡ ಮತದಾರರಿಗೆ, ಸಾಮಾನ್ಯ ಮನೆ-ಮನೆ ಕಾರ್ಯವಿಧಾನವು ವಿನ್ಯಾಸಗೊಳಿಸಿದಂತೆ ಕಾರ್ಯನಿರ್ವಹಿಸುವುದಿಲ್ಲ” ಎಂದು ಕೊಹೂರ್ ಹೇಳಿದರು.

ಭಾರತೀಯ ಚುನಾವಣಾ ಆಯೋಗವು ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದ ಮೂರನೇ ಮತ್ತು ಅಂತಿಮ ಹಂತವನ್ನು ಪ್ರಾರಂಭಿಸಿದೆ. ಮಣಿಪುರ, ಮಿಜೋರಾಂ ಮತ್ತು ಸಿಕ್ಕಿಂನ ಮೂರು ಈಶಾನ್ಯ ರಾಜ್ಯಗಳಲ್ಲಿ, ಈ ಕಾರ್ಯವು ಕಳೆದ ವಾರ ಮೇ 30, 2026 ರಂದು ಪ್ರಾರಂಭವಾಯಿತು.

ಗಲಭೆ ಆರಂಭವಾಗಿದ್ದು ಯಾವಾಗ?

ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರವು 2023ರ ಮೇ 3 ರಂದು ಅಧಿಕೃತವಾಗಿ ಆರಂಭವಾಯಿತು. ರಾಜ್ಯದ ಚುರಾಚಾಂದ್‌ಪುರ ಜಿಲ್ಲೆಯಲ್ಲಿ ಬುಡಕಟ್ಟು ವಿದ್ಯಾರ್ಥಿ ಒಕ್ಕೂಟ ಆಯೋಜಿಸಿದ್ದ ‘ಬುಡಕಟ್ಟು ಐಕ್ಯತಾ ರ್ಯಾಲಿ’ಯ (Tribal Solidarity March) ವೇಳೆ ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವೆ ಸಣ್ಣ ಮಟ್ಟದಲ್ಲಿ ಶುರುವಾದ ಘರ್ಷಣೆ, ಕೆಲವೇ ಗಂಟೆಗಳಲ್ಲಿ ಇಡೀ ರಾಜ್ಯಕ್ಕೆ ವ್ಯಾಪಿಸಿತು.

ಗಲಭೆ ಯಾಕೆ?

ಎರಡೂ ಸಮುದಾಯಗಳ ನಡುವಿನ ಗಲಭೆಗೆ ಅಂದಿನ ತಕ್ಷಣದ ಪ್ರಚೋದನೆ ಮತ್ತು ದೀರ್ಘಕಾಲದ ಭಿನ್ನಾಭಿಪ್ರಾಯಗಳು ಕಾರಣವಾಗಿವೆ. ಮಣಿಪುರದ ಜನಸಂಖ್ಯೆಯಲ್ಲಿ ಶೇ. 53 ಕ್ಕಿಂತ ಹೆಚ್ಚಿರುವ, ಇಂಫಾಲ ಕಣಿವೆಯಲ್ಲಿ ವಾಸಿಸುವ ಮೈತೇಯಿ ಸಮುದಾಯಕ್ಕೆ ‘ಪರಿಶಿಷ್ಟ ಪಂಗಡ’ (ಎಸ್‌ಟಿ) ಸ್ಥಾನಮಾನ ನೀಡುವಂತೆ ಪರಿಗಣಿಸಲು ಮಣಿಪುರ ಹೈಕೋರ್ಟ್ 2023ರ ಏಪ್ರಿಲ್‌ನಲ್ಲಿ ರಾಜ್ಯ ಸರ್ಕಾರಕ್ಕೆ ಸೂಚಿಸಿತು. ಇದನ್ನು ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುವ ಕುಕಿ ಮತ್ತು ನಾಗಾ ಬುಡಕಟ್ಟು ಜನ ತೀವ್ರವಾಗಿ ವಿರೋಧಿಸಿದರು. ಮೈತೇಯಿ ಸಮುದಾಯಕ್ಕೆ ಈ ಸ್ಥಾನಮಾನ ಸಿಕ್ಕರೆ ತಮ್ಮ ಉದ್ಯೋಗ ಮತ್ತು ಶಿಕ್ಷಣದ ಮೀಸಲಾತಿ ಕೈತಪ್ಪುತ್ತದೆ ಹಾಗೂ ತಮ್ಮ ಭೂಮಿಯ ಮೇಲಿನ ಹಕ್ಕು ನಷ್ಟವಾಗುತ್ತದೆ ಎಂಬುದು ಬುಡಕಟ್ಟು ಜನರ ಆತಂಕವಾಗಿತ್ತು.

ಮಣಿಪುರದ ಒಟ್ಟು ಭೂಪ್ರದೇಶದ ಶೇ. 10 ರಷ್ಟಿರುವ ಕಣಿವೆ ಪ್ರದೇಶದಲ್ಲಿ ಶೇ. 53 ರಷ್ಟು ಮೈತೇಯಿ ಜನರು ವಾಸಿಸುತ್ತಿದ್ದಾರೆ. ಉಳಿದ ಶೇ. 90 ರಷ್ಟಿರುವ ಗುಡ್ಡಗಾಡು ಪ್ರದೇಶದಲ್ಲಿ ಶೇ. 40 ರಷ್ಟಿರುವ ಕುಕಿ ಮತ್ತು ನಾಗಾ ಬುಡಕಟ್ಟು ಜನರು ವಾಸಿಸುತ್ತಿದ್ದಾರೆ. ಕಾನೂನಿನ ಪ್ರಕಾರ ಕಣಿವೆಯ ಜನ ಗುಡ್ಡಗಾಡು ಪ್ರದೇಶದಲ್ಲಿ ಜಮೀನು ಕೊಳ್ಳುವಂತಿಲ್ಲ. ಮೈತೇಯಿ ಸಮುದಾಯವು ಈ ನಿಯಮದ ವಿರುದ್ಧ ಅಸಮಾಧಾನ ಹೊಂದಿತ್ತು.

ನೆರೆಹೊರೆಯ ಮ್ಯಾನ್ಮಾರ್‌ನಿಂದ ಕುಕಿ ಜನಾಂಗದವರು ಕಾನೂನುಬಾಹಿರವಾಗಿ ವಲಸೆ ಬಂದು ಕಾಡುಗಳನ್ನು ಒತ್ತುವರಿ ಮಾಡುತ್ತಿದ್ದಾರೆ ಮತ್ತು ಅಫೀಮು ಬೆಳೆಯುತ್ತಿದ್ದಾರೆ ಎಂದು ಮೈತೇಯಿ ಜನ ಹಾಗೂ ಅಂದಿನ ಸರ್ಕಾರ ಆರೋಪಿಸಿತ್ತು. ಇದನ್ನು ಕುಕಿ ಸಮುದಾಯವು ತರತಮ ನೀತಿ ಎಂದು ಕರೆದು ತೀವ್ರವಾಗಿ ಪ್ರತಿಭಟಿಸಿತ್ತು.

ಈವರೆಗೆ ಎಷ್ಟು ಜನರು ಮೃತಪಟ್ಟಿದ್ದಾರೆ?

ಹಿಂಸಾಚಾರ ಆರಂಭವಾಗಿ ಮೂರು ವರ್ಷಗಳು ಕಳೆಯುತ್ತಿದ್ದರೂ (2025ರ ಆರಂಭದಲ್ಲಿ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿದ್ದರೂ), ಆಗಾಗ್ಗೆ ಸಣ್ಣಪುಟ್ಟ ಸಂಘರ್ಷಗಳು ವರದಿಯಾಗುತ್ತಲೇ ಇವೆ. ಸರ್ಕಾರಿ ಮತ್ತು ಅಧಿಕೃತ ಮೂಲಗಳ ಪ್ರಕಾರ, ಈ ಜನಾಂಗೀಯ ಗಲಭೆಯಲ್ಲಿ ಈವರೆಗೆ 260 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದು, ಸಾವಿರಾರು ಜನರು ಗಾಯಗೊಂಡಿದ್ದಾರೆ.

ಹಿಂಸಾಚಾರದಿಂದಾಗಿ 60,000 ಕ್ಕೂ ಹೆಚ್ಚು ಜನರು ತಮ್ಮ ಮನೆ-ಮಠಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ ಮತ್ತು ಪರಿಹಾರ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ. ರಾಜ್ಯಾದ್ಯಂತ ಸುಮಾರು 7,800 ಕ್ಕೂ ಹೆಚ್ಚು ಮನೆಗಳು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿವೆ. ಜೊತೆಗೆ ನೂರಾರು ಚರ್ಚ್‌ಗಳು ಮತ್ತು ದೇವಸ್ಥಾನಗಳನ್ನು ಧ್ವಂಸಗೊಳಿಸಲಾಗಿದೆ.

ಪ್ರಸ್ತುತ ಮಣಿಪುರವು ಭೌಗೋಳಿಕವಾಗಿ ಇಭ್ಭಾಗವಾದಂತಾಗಿದೆ; ಮೈತೇಯಿ ಸಮುದಾಯದವರು ಕಣಿವೆ ಪ್ರದೇಶದಲ್ಲೂ, ಕುಕಿ ಸಮುದಾಯದವರು ಗುಡ್ಡಗಾಡು ಪ್ರದೇಶದಲ್ಲೂ ಸಂಪೂರ್ಣವಾಗಿ ಪ್ರತ್ಯೇಕಗೊಂಡು ವಾಸಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾಗತಿಕವಾಗಿ ಮೂರು ವರ್ಷಗಳಲ್ಲಿ 600 ಪರಿಸರ ರಕ್ಷಕರ ಹತ್ಯೆ: ವಿಶ್ವಸಂಸ್ಥೆ ತೀವ್ರ ಕಳವಳ: ಜಾಗತಿಕ ತಾಪಮಾನಕ್ಕೆ ಸಾಕ್ಷಿಯಾಗುತ್ತಿರುವ ಭಾರತ

ಜೂನ್ 5 ವಿಶ್ವ ಪರಿಸರ ದಿನ. ಜಗತ್ತಿನಾದ್ಯಂತ ಗಿಡ ನೆಡುವ, ಹಸಿರು ಭಾಷಣ ಬಿಗಿಯುವ ಮತ್ತು ಪರಿಸರ ಕಾಳಜಿಯ ಸಡಗರದ ಆಚರಣೆಗಳು ಎಲ್ಲೆಡೆ ವಿಭಿನ್ನ ರೀತಿಗಳಲ್ಲಿ ವಿಜೃಂಭಿಸುತ್ತಿವೆ. ಆದರೆ, ಇದೇ ಹೊತ್ತಿನಲ್ಲಿ ವಿಶ್ವಸಂಸ್ಥೆಯು...

ಹೇಗಿತ್ತು ‘ಕಾಕ್ರೋಚ್ ಜನತಾ ಪಕ್ಷ’ದ ಮೊದಲ ಸುದ್ದಿಗೋಷ್ಠಿ…? ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಕರೆ

ಜೂನ್ 6, 2026 ರಂದು ಜಂತರ್ ಮಂತರ್‌ನಲ್ಲಿ ನಡೆಯಲಿರುವ 'ಶಾಂತಿಯುತ ಪ್ರತಿಭಟನೆ'ಗೆ ಮುನ್ನ ಜಿರಳೆ ಜನತಾ ಪಕ್ಷ (ಸಿಜೆಪಿ) ತನ್ನ ಮೊದಲ ಪತ್ರಿಕಾಗೋಷ್ಠಿಯನ್ನು ನಡೆಸಿದೆ. ಬುಧವಾರ ಸಂಜೆ (ಜೂ.3) ಸಿಜೆಪಿಯ ಮೂವರು ವಕ್ತಾರರು...

‘ಇದು ಆತ್ಮಹತ್ಯೆಯಲ್ಲ, ಮೋದಿ ಸರ್ಕಾರದ ಭ್ರಷ್ಟ ವ್ಯವಸ್ಥೆ ಮಾಡಿದ ಕೊಲೆ’: ನೀಟ್ ಆಕಾಂಕ್ಷಿಯ ಸಾವಿಗೆ ರಾಹುಲ್ ಗಾಂಧಿ ಆಕ್ರೋಶ

ದೇಶದ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ‘ನೀಟ್-ಯುಜಿ’ (NEET-UG) ವಿವಾದ ಮತ್ತು ವಿದ್ಯಾರ್ಥಿಗಳ ಸಾವುಗಳು ಭಾರತದ ಒಟ್ಟಾರೆ ಶಿಕ್ಷಣ ವ್ಯವಸ್ಥೆಯ ದಯನೀಯ ಸ್ಥಿತಿಗೆ ಕನ್ನಡಿ ಹಿಡಿದಿವೆ. ಪರೀಕ್ಷಾ ಅಕ್ರಮಗಳು, ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು...

ತಕ್ಷಣವೇ ‘SIR ಹೆಲ್ಪ್‌ ಡೆಸ್ಕ್‌’ ಸ್ಥಾಪಿಸುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ

ರಾಜ್ಯದಲ್ಲಿ ಭಾರತೀಯ ಚುನಾವಣಾ ಆಯೋಗದಿಂದ ನಡೆಯುತ್ತಿರುವ ಎಸ್‌ಐಆರ್ (Special Electoral Roll Purification) ಪ್ರಕ್ರಿಯೆ ಸಂದರ್ಭದಲ್ಲಿ ರಾಜ್ಯದ ಯಾವುದೇ ಪ್ರಜೆಯೂ ತನ್ನ ಅತ್ಯಮೂಲ್ಯವಾದ ಮತದಾನದ ಹಕ್ಕನ್ನು ಕಳೆದುಕೊಳ್ಳಬಾರದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್...

ವಿಷಾಹಾರಕ್ಕೆ ಜಾಗತಿಕವಾಗಿ ವರ್ಷಕ್ಕೆ 15 ಲಕ್ಷ ಜನರು ಬಲಿ: ಮಕ್ಕಳಿಗೆ ಹೆಚ್ಚಿನ ಅಪಾಯ: ಭಾರತದ ಸ್ಥಿತಿಯೂ ಆತಂಕಕಾರಿ! 

ನಾವು ದಿನನಿತ್ಯ ಸೇವಿಸುವ ಆಹಾರವೇ ನಮ್ಮ ಜೀವಕ್ಕೆ ಕಂಟಕವಾಗುತ್ತಿದೆಯೇ? ಹೌದು ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆಯ (WHO) ಇತ್ತೀಚಿನ ಆಘಾತಕಾರಿ ವರದಿ. ಜಾಗತಿಕವಾಗಿ ಅಸುರಕ್ಷಿತ ಮತ್ತು ಕಲುಷಿತ ಆಹಾರದ ಸೇವನೆಯಿಂದಾಗಿ ಪ್ರತಿ ವರ್ಷ...

ಡಿಕೆಶಿ ಸಂಪುಟದಲ್ಲಿ ಅಲ್ಪಸಂಖ್ಯಾತರಿಗೆ ಸಿಗುತ್ತಾ ಸೂಕ್ತ ಪ್ರಾತಿನಿಧ್ಯ?

ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ, ಡಿ.ಕೆ ಶಿವಕುಮಾರ್ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿದೆ. ಈ ಮೂಲಕ ಕಳೆದ ಒಂದು ವರ್ಷದಿಂದ ನಡೆಯುತ್ತಿದ್ದ ಸಿಎಂ ಬದಲಾವಣೆಯ...

‘ಕರ್ನಾಟಕದಲ್ಲಿ SIR’ ಮತ ಉಳಿಸಿಕೊಳ್ಳುವಂತೆ ಕಾರ್ಯಕರ್ತರಿಗೆ CM ಡಿ.ಕೆ ಶಿವಕುಮಾರ್ ಕರೆ!

ಕರ್ನಾಟಕ ರಾಜಕಾರಣದಲ್ಲಿ ಹೊಸ ಯುಗ ಆರಂಭವಾಗಿದೆ. ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಕೆಲಸ ಮಾಡದಿರುವ ಸಚಿವ ಮತ್ತು ಶಾಸಕರನ್ನು ಸುಮ್ಮನೆ ಬಿಡುವುದಿಲ್ಲ ಎಂದು...

ವೋಟರ್ ಐಡಿ, ಆಧಾರ್ ಇದ್ದರೂ ನೆಮ್ಮದಿ ಇಲ್ಲ, ಪಶ್ಚಿಮ ಬಂಗಾಳದಲ್ಲಿ ಶುರುವಾಯ್ತು ‘ಹೋಲ್ಡಿಂಗ್ ಸೆಂಟರ್’ಗಳ ಭಯ

ಪಶ್ಚಿಮ ಬಂಗಾಳದಲ್ಲಿ "ಯಾರು ಈಗಾಗಲೇ ಮತದಾರರ ಪಟ್ಟಿಯಿಂದ ಹೊರಗುಳಿದಿದ್ದಾರೋ ಮತ್ತು ಟ್ರಿಬ್ಯೂನಲ್‌ನ (ನ್ಯಾಯಮಂಡಳಿ) ಅನುಮೋದನೆಗಾಗಿ ಕಾಯುತ್ತಿದ್ದಾರೋ, ಅಂತಹವರಲ್ಲಿ ಹೊಸ ಪೊಲೀಸ್ ವ್ಯವಸ್ಥೆ ಮತ್ತು ಬಂಧನ ಕೇಂದ್ರಗಳು (ಡಿಟೆಂಷನ್ ಸೆಂಟರ್) ತಮ್ಮನ್ನು ವಿದೇಶಿಯರಂತೆ ನಡೆಸಿಕೊಳ್ಳಲ್ಪಡಬಹುದು...

ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ : ಮೊದಲ ಬೀದಿ ಹೋರಾಟಕ್ಕೆ ಸಜ್ಜಾದ ಕಾಕ್ರೋಚ್ ಜನತಾ ಪಾರ್ಟಿ

ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಅಲೆಯನ್ನು ಸೃಷ್ಟಿಸಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ತನ್ನ ಮೊದಲ ಬೀದಿ ಹೋರಾಟಕ್ಕೆ ಸಜ್ಜಾಗಿದೆ. ಜೂನ್ 6, 2026ರಂದು ನವದೆಹಲಿಯ ಜಂತರ್ ಮಂತರ್‌ನಲ್ಲಿ ಸಿಜೆಪಿ ಪ್ರತಿಭಟನೆ ಆಯೋಜಿಸಿದ್ದು, ಇದರ...

ದೆಹಲಿ: ‘ಮಾಳವೀಯ ನಗರ’ ಅಗ್ನಿ ದುರಂತಕ್ಕೆ 21 ಜನರು ಬಲಿ: ವ್ಯವಸ್ಥೆಯ ವೈಫಲ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ನಾಗರೀಕರು 

ದೆಹಲಿಯ ಅತ್ಯಂತ ಜನನಿಬಿಡ ಮತ್ತು ವಾಣಿಜ್ಯ ಪ್ರದೇಶವಾದ ಮಾಳವೀಯ ನಗರದಲ್ಲಿ 2026 ಜೂನ್ 3, ಬುಧವಾರ ನಸುಕಿನ ಜಾವ ಸಂಭವಿಸಿದ ಭೀಕರ ಅಗ್ನಿ ದುರಂತವು ಇಡೀ ದೇಶವನ್ನು ಬೆಚ್ಚಿಬೀಳಿಸಿದೆ. 'ಫ್ಲೋರಿಶ್ ಸ್ಟೇ ಬಿ...