ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (TMC) ಪಕ್ಷದೊಳಗೆ ತೀವ್ರ ಭಿನ್ನಾಭಿಪ್ರಾಯ ಸ್ಫೋಟಗೊಂಡಿದೆ. ಕೇಂದ್ರದ ಬಿಜೆಪಿ ನೇತೃತ್ವದ ಎನ್ಡಿಎ (NDA) ಮೈತ್ರಿಕೂಟಕ್ಕೆ ಬೆಂಬಲ ನೀಡಲು ಮುಂದಾಗಿರುವ ಸ್ವಪಕ್ಷದ ಬಂಡಾಯ ಸಂಸದರ ವಿರುದ್ಧ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಂಡಾಯಗಾರರನ್ನು “ದುರಾಸೆಯ ಸ್ವಾರ್ಥಿ ದೇಶದ್ರೋಹಿಗಳು” ಎಂದು ಕರೆದಿರುವ ಅವರು, “ಧೈರ್ಯವಿದ್ದರೆ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಟಿಕೆಟ್ನಿಂದ ಸ್ಪರ್ಧಿಸಿ ಗೆದ್ದು ತೋರಿಸಿ” ಎಂದು ಬಹಿರಂಗ ಸವಾಲು ಹಾಕಿದ್ದಾರೆ.
ಲೋಕಸಭೆ ಚುನಾವಣೆಯ ಬೆನ್ನಲ್ಲೇ ತೃಣಮೂಲ ಕಾಂಗ್ರೆಸ್ ಸಂಸದೀಯ ಪಕ್ಷ ಇಬ್ಬಾಗವಾಗುವ ಮುನ್ಸೂಚನೆ ಸಿಗುತ್ತಿದ್ದಂತೆ ಕೃಷ್ಣನಗರ ಸಂಸದೆ ಮಹುವಾ ಮೊಯಿತ್ರಾ ಸಾಮಾಜಿಕ ಜಾಲತಾಣ ‘ಎಕ್ಸ್’ (X) ನಲ್ಲಿ ಸರಣಿ ಪೋಸ್ಟ್ಗಳನ್ನು ಹಾಕುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
“2024ರಲ್ಲಿ ಈ ಸಂಸದರು ಗೆದ್ದಿರುವುದು ಟಿಎಂಸಿ ಟಿಕೆಟ್ ಮೇಲೆ. ಇಲ್ಲಿನ ಜನಾದೇಶ ಎನ್ಡಿಎ ಪರವಾಗಿ ಇರಲಿಲ್ಲ. ಹಳದಿ ಬಣ್ಣದ ಪ್ಯಾಂಟ್ ಧರಿಸಿರುವ ಎಲ್ಲಾ ದುರಾಸೆಯ ಸ್ವಾರ್ಥಿ ದೇಶದ್ರೋಹಿಗಳು ದಯವಿಟ್ಟು ಈಗಲೇ ಬಿಜೆಪಿಗೆ ಸೇರಬಹುದು. ಮೊದಲು ನಿಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ಮತ್ತು ಬಿಜೆಪಿ ಟಿಕೆಟ್ನಲ್ಲಿ ಸ್ಪರ್ಧಿಸಿ. ನೀವು ಎಂತಹ ದೊಡ್ಡ ನಾಯಕರು ಎಂಬುದನ್ನು ನಾವೂ ನೋಡುತ್ತೇವೆ” ಎಂದು ಮಹುವಾ ಮೊಯಿತ್ರಾ ಗುಡುಗಿದ್ದಾರೆ.
ಪಕ್ಷಾಂತರ ನಿಷೇಧ ಕಾನೂನು ಮತ್ತು ‘ಮ್ಯಾಜಿಕ್ ನಂಬರ್’ ಸವಾಲು
ಸುಮಾರು 20 ಟಿಎಂಸಿ ಲೋಕಸಭಾ ಸದಸ್ಯರು ಎನ್ಡಿಎ ಮೈತ್ರಿಕೂಟಕ್ಕೆ ಬೆಂಬಲ ಘೋಷಿಸಲು ಸಜ್ಜಾಗಿದ್ದು, ಈ ಕುರಿತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ ಎಂದು ಟಿಎಂಸಿ ಬಂಡಾಯ ಸಂಸದ ಕಾಕೋಲಿ ಘೋಷ್ ದಸ್ತಿದಾರ್ ಹೇಳಿಕೆ ನೀಡಿದ್ದರು. ಅಲ್ಲದೆ, ಸುದ್ದಿ ಸಂಸ್ಥೆ ‘ಎಎನ್ಐ’ ಜೊತೆ ಮಾತನಾಡುವಾಗ ಹೆಬ್ಬೆರಳು ಎತ್ತುವ (Thumbs Up) ಎಮೋಜಿ ಮೂಲಕ ಈ ಬೆಳವಣಿಗೆಯನ್ನು ದೃಢಪಡಿಸಿದ್ದರು.
ಆದರೆ, ಈ ಆರೋಪಗಳನ್ನು ತಳ್ಳಿಹಾಕಿರುವ ಮಹುವಾ ಮೊಯಿತ್ರಾ, ಬಂಡುಕೋರರ ಬಳಿ ಪಕ್ಷಾಂತರ ನಿಷೇಧ ಕಾಯ್ದೆಯಿಂದ ಪಾರಾಗಲು ಅಗತ್ಯವಿರುವ ಸಂಖ್ಯಾಬಲವಿಲ್ಲ ಎಂದು ಪ್ರತಿಪಾದಿಸಿದ್ದಾರೆ.
“ಪಕ್ಷಾಂತರ ನಿಷೇಧ ಕಾನೂನಿನ ಅಡಿಯಲ್ಲಿ ಅನರ್ಹತೆಯಿಂದ ತಪ್ಪಿಸಿಕೊಳ್ಳಲು, ಬಂಡಾಯ ಬಣಕ್ಕೆ ಒಟ್ಟು ಸಂಸದರ ಪೈಕಿ ಕನಿಷ್ಠ ಮೂರನೇ ಎರಡರಷ್ಟು (2/3) ಸದಸ್ಯರ ಬೆಂಬಲ ಬೇಕಾಗುತ್ತದೆ. ಸದ್ಯ ಲೋಕಸಭೆಯಲ್ಲಿ ಟಿಎಂಸಿ 28 ಸಂಸದರನ್ನು ಹೊಂದಿದ್ದು, ಕಾನೂನಾತ್ಮಕವಾಗಿ ಒಡೆಯಲು ಭಿನ್ನಮತೀಯರಿಗೆ 19 ಸದಸ್ಯರ ಬೆಂಬಲ ಅತ್ಯಗತ್ಯ. ಆದರೆ ಅವರ ಬಳಿ 19 ಸಂಸದರಿಲ್ಲ!” ಎಂದು ಮೊಯಿತ್ರಾ ಸವಾಲು ಹಾಕಿದ್ದಾರೆ.
ಯೂಸುಫ್ ಪಠಾಣ್ ವಿರುದ್ಧವೂ ಆಕ್ರೋಶ
ಇದೇ ವೇಳೆ ಟಿಎಂಸಿ ಸಂಸದ ಹಾಗೂ ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ಅವರ ನಿಲುವನ್ನೂ ಮಹುವಾ ಪ್ರಶ್ನಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಆದೇಶದ ಮೇರೆಗೆ ಪಠಾಣ್ ದೆಹಲಿಗೆ ಧಾವಿಸುತ್ತಿದ್ದಾರೆಯೇ ಎಂದು ಪ್ರಶ್ನಿಸಿರುವ ಅವರು, “ಸ್ವಲ್ಪ ಧೈರ್ಯವಿರಲಿ. ನೀವು ಭಾರತ ದೇಶಕ್ಕಾಗಿ ಆಡಿದವರು. ನಮ್ಮ ಜಿಲ್ಲೆಯ ಜನ ನಿಮಗೆ ಭಾರಿ ಬಹುಮತದಿಂದ ಮತ ಹಾಕಿದ್ದಾರೆ. ಸ್ವಲ್ಪ ನಾಚಿಕೆ ಮತ್ತು ಬೆನ್ನೆಲುಬು ಇರಲಿ” ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಭಿನ್ನಮತದ ನಡುವೆಯೇ, ಇತ್ತೀಚೆಗೆ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಸುಖೇಂದು ಶೇಖರ್ ರೇ ಸೇರಿದಂತೆ ಟಿಎಂಸಿಯ ಭಿನ್ನಮತೀಯ ನಾಯಕರ ಗುಂಪು, ಕೇಂದ್ರ ಸಚಿವ ಹಾಗೂ ಬಿಜೆಪಿಯ ಬಂಗಾಳ ಚುನಾವಣಾ ಉಸ್ತುವಾರಿ ಭೂಪೇಂದ್ರ ಯಾದವ್ ಅವರ ನಿವಾಸದಲ್ಲಿ ಸಭೆ ನಡೆಸಿದೆ. ಈ ಸಭೆಯಲ್ಲಿ ಪಶ್ಚಿಮ ಬಂಗಾಳದ ಹಿರಿಯ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಕೂಡ ಉಪಸ್ಥಿತರಿದ್ದರು ಎನ್ನಲಾಗಿದೆ. ದೆಹಲಿಯಲ್ಲಿ ಇಂಡಿಯಾ (INDIA) ಒಕ್ಕೂಟದ ಸಭೆಯಲ್ಲಿ ಮಮತಾ ಬ್ಯಾನರ್ಜಿ ಮತ್ತು ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಭಾಗವಹಿಸಿದ್ದ ದಿನವೇ ಈ ಬೆಳವಣಿಗೆ ನಡೆದಿದೆ.
ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಸದ್ಯ ಎದುರಿಸುತ್ತಿರುವ ಆಂತರಿಕ ಬಿಕ್ಕಟ್ಟಿಗೆ ಕೇವಲ ತತ್ಕಾಲದ ರಾಜಕೀಯ ಲಾಭ ಕಾರಣವಲ್ಲ; ಇದರ ಹಿಂದೆ ಇತ್ತೀಚಿನ ಚುನಾವಣಾ ಫಲಿತಾಂಶಗಳು ಮತ್ತು ಪಕ್ಷದ ಆಂತರಿಕ ನಾಯಕತ್ವದ ಸಂಘರ್ಷ ಅಡಗಿದೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ಟಿಎಂಸಿ ನಿರೀಕ್ಷಿತ ಮಟ್ಟದಲ್ಲಿ ಸಾಧನೆ ಮಾಡದ ಕೆಲವು ಕ್ಷೇತ್ರಗಳಲ್ಲಿ ಪಕ್ಷದೊಳಗೆ ಅಸಮಾಧಾನ ಹೊಗೆಯಾಡುತ್ತಿತ್ತು. ಚುನಾವಣೋತ್ತರ ಹಿಂಸಾಚಾರದ ಆರೋಪಗಳು, ಕೇಂದ್ರ ಸಂಸ್ಥೆಗಳಾದ ಇಡಿ (ED) ಮತ್ತು ಸಿಬಿಐ (CBI) ನಡೆಸುತ್ತಿರುವ ತನಿಖೆಗಳು ಟಿಎಂಸಿಯ ಹಲವು ಹಿರಿಯ ನಾಯಕರನ್ನು ಆತಂಕಕ್ಕೆ ತಳ್ಳಿವೆ. ಬಿಜೆಪಿಯು ಈ ನಾಯಕರ ಅಸಮಾಧಾನವನ್ನು ಬಳಸಿಕೊಂಡು ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ಗೆ ಆಘಾತ ನೀಡಲು ಸತತವಾಗಿ ಯತ್ನಿಸುತ್ತಿದೆ. ಇದರ ಭಾಗವಾಗಿಯೇ ಈಗ ಸಂಸದರನ್ನು ಸೆಳೆಯುವ ತಂತ್ರಗಾರಿಕೆ ನಡೆದಿದೆ.
ಟಿಎಂಸಿ ಪಕ್ಷದೊಳಗೆ ದೀರ್ಘಕಾಲದಿಂದ “ಹಳಬರು ವರ್ಸಸ್ ಹೊಸಬರು” ಎಂಬ ಶೀತಲ ಸಮರ ನಡೆಯುತ್ತಿದೆ. ಮಮತಾ ಬ್ಯಾನರ್ಜಿ ಅವರ ಸೋದರ ಅಳಿಯ ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರ ಕಾರ್ಯವೈಖರಿ ಮತ್ತು ಪಕ್ಷದ ಮೇಲಿನ ಹಿಡಿತ, ಸುಖೇಂದು ಶೇಖರ್ ರೇ ಮತ್ತು ಕಾಕೋಲಿ ಘೋಷ್ ದಸ್ತಿದಾರ್ ಅವರಂತಹ ಹಿರಿಯ ನಾಯಕರಿಗೆ ಅಸಮಾಧಾನ ತಂದಿದೆ. ಯುವ ನಾಯಕರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂಬ ಭಾವನೆ ಹಿರಿಯರಲ್ಲಿ ಮೂಡಿರುವುದು ಈ ಬಂಡಾಯಕ್ಕೆ ಮುಖ್ಯ ಮುನ್ನಲೆಯಾಗಿದೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸದ್ಯಕ್ಕೆ ಯಾವುದೇ ಕಾರಣಕ್ಕೂ ಬಿಜೆಪಿಯ ದಬ್ಬಾಳಿಕೆಗೆ ಮಣಿಯುವುದಿಲ್ಲ ಎಂಬ ಕಠಿಣ ನಿಲುವು ತಳೆದಿದ್ದಾರೆ. ದೆಹಲಿಯಲ್ಲಿ ‘ಇಂಡಿಯಾ’ ಒಕ್ಕೂಟದ ಸಭೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ, ತಾವು ರಾಷ್ಟ್ರಮಟ್ಟದಲ್ಲಿ ಬಿಜೆಪಿ ವಿರೋಧಿ ಹೋರಾಟದ ಮುಂಚೂಣಿಯಲ್ಲಿದ್ದೇವೆ ಎಂಬ ಸಂದೇಶ ನೀಡುತ್ತಿದ್ದಾರೆ.
ಪಕ್ಷದೊಳಗಿನ ಭಿನ್ನಮತವನ್ನು ಶಮನಗೊಳಿಸಲು ಅವರು ಒಂದು ಕಡೆ ಸಂಧಾನದ ಪ್ರಯತ್ನ ನಡೆಸುತ್ತಿದ್ದರೆ, ಮತ್ತೊಂದೆಡೆ ಪಕ್ಷಾಂತರ ಮಾಡಲು ಯತ್ನಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ (ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹತೆ) ಜರುಗಿಸಲು ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ. ಬಂಡಾಯಗಾರರು ‘ಮ್ಯಾಜಿಕ್ ನಂಬರ್ 19’ ತಲುಪದಂತೆ ತಡೆಯುವುದೇ ಮಮತಾ ಬ್ಯಾನರ್ಜಿ ಅವರ ಸದ್ಯದ ಮೊದಲ ತಂತ್ರವಾಗಿದೆ ಎಂಬ ಚರ್ಚೆ ಬಂಗಾಳದ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.


