ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಮೂಲಕ ಮನುವಾದದ ಮರು ಜಾರಿಗೆ ಪ್ರಯತ್ನಿಸಲಾಗುತ್ತಿದೆ ಎಂದು ಪದ್ಮಶ್ರೀ ಪುರಸ್ಕೃತ ಡಾ. ಗಣೇಶ್ ದೇವಿ ಹೇಳಿದರು.
ಮಂಗಳವಾರ (ಜೂ.16) ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಬಳಿಯ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಎಸ್ಐಆರ್ ವಿರೋಧಿ ಜನಜಾಗೃತಿ ಜಾಥಾಗೆ ಚಾಲನೆ ಕೊಟ್ಟು ಅವರು ಮಾತನಾಡಿದರು.

ಮಹಾತ್ಮ ಗಾಂಧಿ ಮತ್ತಿತರ ಮಹನೀಯರು ಹೋರಾಡಿ ನಮಗೆ ಸ್ವಾತಂತ್ರ್ಯ ತಂದು ಕೊಟ್ಟರು. ಆ ಬಳಿಕ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಶ್ರೇಷ್ಠ ಸಂವಿಧಾನದ ಮೂಲಕ ಸರ್ವರಿಗೆ ಸಮಬಾಲು, ಸಮಪಾಲು ಕೊಟ್ಟರು. ಅದನ್ನು ಜವಹರಲಾಲ್ ನೆಹರು ನೇತೃತ್ವದ ಸರ್ಕಾರ ಜಾರಿಗೆ ತಂದಿತು. ನಮಗೆ ನಮ್ಮನ್ನು ಅಳುವವರನ್ನು ಆಯ್ಕೆ ಮಾಡಲು ಮತದಾನದ ಹಕ್ಕು ನೀಡಿತು. ಆ ಹಕ್ಕನ್ನು ಎಸ್ಐಆರ್ ಮೂಲಕ ಕಿತ್ತುಕೊಳ್ಳಲು ಮುಂದಾಗಿದ್ದಾರೆ ಎಂದರು.
ಎಸ್ಐಆರ್ ಎಂಬ ಈ ಕುತಂತ್ರದ ಬಗ್ಗೆ ನಾವೆಲ್ಲ ಜಾಗೃತರಾಗಬೇಕು, ನಾವು ಇದರ ವಿರುದ್ಧ ಒಂದಾಗಬೇಕು, ನಾವು ಸಂಘಟಿತರಾದರೆ ಯಾರಿಂದಲೂ ನಮ್ಮನ್ನು ಅಲುಗಾಡಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಎಸ್ಐಆರ್ ವಿರೋಧಿ ಜನಜಾಗೃತಿ ಜಾಥಾ ತಂಡಕ್ಕೆ ಶುಭ ಕೋರಿದರು. ನಾವು ನಿಮ್ಮೊಂದಿಗೆ ಇದ್ದೇವೆ ಎಂದರು.
ದಲಿತ ಸಂಘರ್ಷ ಸಮಿತಿ (ಡಿಎಸ್ಎಸ್) ನಾಯಕ ಲಕ್ಷ್ಮಣ್ ಬಕ್ಕಾಯಿ ಮಾತನಾಡಿ, ಆರ್ಯರು, ಮೂಲಭೂತವಾದಿಗಳು ಅಧಿಕಾರವಹಿಸಿಕೊಂಡು ದೇಶವನ್ನು ಹಾಳುಗೆಡವುತ್ತಿದ್ದಾರೆ ಎಂದು ಕಿಡಿಕಾರಿದರು.
ಈ ದೇಶದಲ್ಲಿ ದಲಿತರು, ಅಲ್ಪಸಂಖ್ಯಾತರು ಸೇರಿ ಹಿಂದುಳಿದವರು ಶೇಕಡ 85% ಇದ್ದೇವೆ. ನಾವೆಲ್ಲರೂ ಒಟ್ಟಾಗಿ ನಮ್ಮ ಹಕ್ಕುಗಳನ್ನು ಉಳಿಸಿಕೊಳ್ಳಬೇಕು. ನಮ್ಮ ನಾಯಕರು ತಂದು ಕೊಟ್ಟ ಸ್ವಾತಂತ್ರ್ಯ ಮುಂದಿನ ಪೀಳಿಗೆಗೆ ಉಳಿಸುವ ಸಂಘಟಿತ ಹೋರಾಟ ಅಗತ್ಯ ಎಂದರು.
ಅಂಬೇಡ್ಕರ್ ಪ್ರತಿಮೆ ಬಳಿ ಜಾಥಾ ಉದ್ಘಾಟನೆಗೊಂಡ ಬಳಿಕ, ವಿದ್ಯಾವರ್ಧಕ ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಯಿತು. ಜಾಥಾ ಸಂಚಾಲಕ ಯೂಸುಫ್ ಕನ್ನಿ, ಇಸಾಬೆಲ್ಲ ಝೇವಿಯರ್, ಸರೋವರ್ ಬೆಂಕಿಕೆರೆ ಜಾಥಾದ ಉದ್ದೇಶ ಮತ್ತು ಚುನಾವಣಾ ಆಯೋಗದ ಮುಂದಿಟ್ಟಿರುವ ಬೇಡಿಕೆಗಳನ್ನು ವಿವರಿಸಿದರು.

ಎರಡೂ ಕಾರ್ಯಕ್ರಮಗಳಲ್ಲಿ ಅಂಜುಮನ್ ಎ ಇಸ್ಲಾಮ್ ಧಾರವಾಡದ ಉಪಾಧ್ಯಕ್ಷ ಬಶೀರ್ ಖಾನ್ ಜಗೀರ್ ದಾರ್, ಗಾಂಧಿ ಶಾಂತಿ ಪ್ರತಿಷ್ಠಾನ ಧಾರವಾಡದ ಅಧ್ಯಕ್ಷ ಡಾ. ಸಂಜು ಕುಲಕರ್ಣಿ, ಕ.ವಿ.ವ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ್ ಹಾಲಗತ್ತಿ, ಸಾಧನಾ ಸಂಸ್ಥೆಯ ಅಧ್ಯಕ್ಷೆ ವಿಶ್ವೇಶ್ವರಿ ಹಿರೇಮಠ್, ಕದಳಿ ಸಮಾಜದ ಜಿಲ್ಲಾಧ್ಯಕ್ಷೆ ಪ್ರಮೀಳಾ ಜಕ್ಕಪ್ಪನವರ್, ಜಮಾಅತೆ ಇಸ್ಲಾಮಿ ಹಿಂದ್ ಧಾರವಾಡದ ಮಹಿಳಾ ಘಟಕದ ಅಧ್ಯಕ್ಷೆ ನೂರ್ ಜಾನ್ ಭಾಗಿ ಇದ್ದರು.
ಸುದ್ದಿಗೋಷ್ಠಿಯ ಬಳಿಕ ಜಾಥಾ ತಂಡ ಹೋಲಿ ಕ್ರಾಸ್ ಚರ್ಚ್ನಲ್ಲಿ ಫಾದರ್ ಅವರನ್ನ ಭೇಟಿಯಾಗಿ ಮತುಕತೆ ನಡೆಸಿತು. ನಂತರ ಮುರುಘಾ ಮಠಕ್ಕೆ ತೆರಳಿ ಸ್ವಾಮೀಜಿ ಜೊತೆ ಎಸ್ಐಆರ್ ಕುರಿತು ಚರ್ಚೆ ನಡೆಸಿತು. ಜನರಲ್ಲಿ ಜಾಗೃತಿ ಮೂಡಿಸಲು ಸಹಕಾರ ಕೋರಿತು.



