ರಾಜಕೀಯ ನಾಯಕರು, ಬೆಂಬಲಿಗರು ಮತ್ತು ಕಾನೂನು ಮಧ್ಯಸ್ಥಿಕೆಗಳ ಮೂಲಕ ಪದೇ ಪದೇ ಮನವಿ ಮಾಡಿಕೊಂಡಿದ್ದರೂ ಸಹ, ಹೋರಾಟಗಾರ ಸೋನಮ್ ವಾಂಗ್ಚುಕ್ ಅವರು ತಮ್ಮ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೊನೆಗೊಳಿಸಲು ನಿರಾಕರಿಸಿದ್ದಾರೆ. ಸರ್ಕಾರದ ಕಡೆಯಿಂದ ಯಾವುದೇ ಸ್ಪಂದನೆ ಸಿಗದೆ ಪ್ರತಿಭಟನೆಯನ್ನು ಹಿಂತೆಗೆದುಕೊಂಡರೆ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ಹೇಳಿದ್ದಾರೆ.
“ನಾನು ಆಹಾರ ಸೇವಿಸಿದರೆ, ಯಾವ ಸಂದೇಶ ರವಾನೆಯಾಗುತ್ತದೆ? ಸರ್ಕಾರಕ್ಕೆ ಹೊಣೆಗಾರಿಕೆಯ ಅಗತ್ಯವೇ ಇಲ್ಲ ಎಂಬ ಸಂದೇಶ ಹೋಗುತ್ತದೆ. ಪ್ರತಿಭಟನಾಕಾರರು ಬರುತ್ತಾರೆ ಮತ್ತು ಹಾಗೇ ಹೊರಟುಹೋಗುತ್ತಾರೆ” ಎಂದು ತಾವು ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಿದರೆ ಏನಾದರೂ ಬದಲಾಗುತ್ತದೆಯೇ ಎಂದು ಪ್ರಶ್ನಿಸುತ್ತಾ ವಾಂಗ್ಚುಕ್ ಹೇಳಿದ್ದಾರೆ.
ಬುಧವಾರ (ಜು.15) ತಡರಾತ್ರಿ ಬಿಡುಗಡೆ ಮಾಡಿದ ವಿಡಿಯೋ ಸಂದೇಶದಲ್ಲಿ, ತಮ್ಮ ಉಪವಾಸ ಸತ್ಯಾಗ್ರಹದ 18ನೇ ದಿನದಂದು ಪ್ರತಿಭಟನೆಯನ್ನು ಕೈಬಿಡುವಂತೆ ವ್ಯಾಪಕ ಮನವಿಗಳು ಬಂದಿವೆ ಎಂದು ಹೇಳಿದ್ದಾರೆ.
“ಉಪವಾಸ ಕೈಬಿಡುವಂತೆ ಕೋರಿ ನನಗೆ ಸಾವಿರಾರು ಸಂದೇಶಗಳು ಬಂದಿವೆ. ಅನೇಕ ಹಿರಿಯ ರಾಜಕಾರಣಿಗಳು ನನ್ನ ಬಳಿ ಬಂದು ಪ್ರೀತಿ ಮತ್ತು ಕಾಳಜಿಯಿಂದ ಮಾತನಾಡಿದ್ದಾರೆ. ನನಗೆ ಆಹಾರ ನೀಡುವಂತೆ ನಿರ್ದೇಶನ ನೀಡಲು ಕೋರಿ ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ” ಎಂದು ವಾಂಗ್ಚುಕ್ ತಿಳಿಸಿದ್ದಾರೆ.
ತಮ್ಮ ಆರೋಗ್ಯದ ಬಗೆಗಿನ ಕಳವಳಗಳನ್ನು ಉದ್ದೇಶಿಸಿ ಮಾತನಾಡಿದ ವಾಂಗ್ಚುಕ್, “ವೈದ್ಯಕೀಯ ತಪಾಸಣೆಗಳು ಯಾವುದೇ ತಕ್ಷಣದ ಅಪಾಯವನ್ನು ಸೂಚಿಸಿಲ್ಲ” ಎಂದು ಹೇಳಿದ್ದಾರೆ.
“ನನ್ನ ಪರಿಸ್ಥಿತಿ ಎರಡು-ನಾಲ್ಕು ದಿನಗಳಲ್ಲಿ ಸಾಯುವಷ್ಟೇನೂ ಕೆಟ್ಟದಾಗಿಲ್ಲ. ಅನೇಕ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗಿದ್ದು, 18 ದಿನಗಳ ಉಪವಾಸಕ್ಕೆ ಹೋಲಿಸಿದರೆ ಫಲಿತಾಂಶಗಳು ಸಾಕಷ್ಟು ಸಾಮಾನ್ಯವಾಗಿವೆ. ಇಸಿಜಿ ಕೂಡ ಮಾಡಲಾಗಿದ್ದು, ಅದು ಕಳಪೆಯಾಗಿಲ್ಲ. ನಾನು ಇನ್ನೂ ಅನೇಕ ದಿನಗಳವರೆಗೆ ಇದನ್ನು ಮುಂದುವರಿಸಬಲ್ಲೆ. ಹೌದು, ದೌರ್ಬಲ್ಯವಿದೆ ಮತ್ತು ನನ್ನ ಸ್ನಾಯುಗಳು ದುರ್ಬಲಗೊಳ್ಳುತ್ತಿವೆ, ಆದರೆ ನನ್ನ ಹೃದಯ ಮತ್ತು ದೇಹದ ಮುಖ್ಯ ಭಾಗಗಳು ಇನ್ನೂ ಚೆನ್ನಾಗಿಯೇ ಇವೆ” ಎಂದಿದ್ದಾರೆ.
ತಮ್ಮ ಉಪವಾಸವನ್ನು ಕೊನೆಗೊಳಿಸುವಂತೆ ಮನವಿ ಮಾಡುವ ಬದಲು, ಸರ್ಕಾರಕ್ಕೆ ಬಲವಾದ ಸಂದೇಶವನ್ನು ರವಾನಿಸಲು ಜುಲೈ 20ರಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಹಮ್ಮಿಕೊಂಡಿರುವ “ಚಲೋ ಸಂಸದ್” ಮಾರ್ಚ್ನಲ್ಲಿ ಭಾರಿ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ವಾಂಗ್ಚುಕ್ ಅವರು ಬೆಂಬಲಿಗರಿಗೆ ಕರೆ ನೀಡಿದ್ದಾರೆ.
“ರಾಷ್ಟ್ರೀಯ ಶಿಕ್ಷಣ ನೀತಿಯಡಿ (ಎನ್ಇಪಿ) ಜುಲೈ 20 ಅನ್ನು ಪ್ರಾಯೋಗಿಕ ಶಿಕ್ಷಣದ ದಿನವನ್ನಾಗಿ ಆಚರಿಸುವಂತೆ ನಾನು ಎಲ್ಲಾ ಶಾಲೆ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳಿಗೆ ವಿನಂತಿಸುತ್ತೇನೆ. ವಿದ್ಯಾರ್ಥಿಗಳು ರಾಜಕೀಯ ವಿಜ್ಞಾನ ಮತ್ತು ಪ್ರಜಾಪ್ರಭುತ್ವದ ನೈಜ ಪಾಠವನ್ನು ಕಣ್ಣಾರೆ ವೀಕ್ಷಿಸಲು ಮತ್ತು ಅದರಲ್ಲಿ ಭಾಗವಹಿಸಲು ಇದು ಅವಕಾಶ ನೀಡುತ್ತದೆ ಎಂದು ಹೇಳಿದ್ದಾರೆ.
ಅಭಿಯಾನದ ವೆಬ್ಸೈಟ್ ಅಥವಾ ಮಿಸ್ಡ್-ಕಾಲ್ ಮೂಲಕ ಈ ಮಾರ್ಚ್ಗಾಗಿ ನೋಂದಾಯಿಸಿಕೊಳ್ಳುವಂತೆ ಜನರಿಗೆ ಕರೆ ನೀಡಿದ್ದಾರೆ.
“ಜುಲೈ 20ರಂದು ಸಾವಿರಾರು ಸಂಖ್ಯೆಯಲ್ಲಿ ಬನ್ನಿ. ನಾವೆಲ್ಲರೂ ಒಟ್ಟಾಗಿ ಈ ಸಮಸ್ಯೆಯನ್ನು ಸಂಸತ್ತಿಗೆ ಹಸ್ತಾಂತರಿಸೋಣ. ಆಗ ಇದು ಸರಿಯಾದ ಕೈಗಳಿಗೆ ಸೇರಿದೆ ಎಂದು ನಾನು ನಂಬುತ್ತೇನೆ” ಎಂದು ವಾಂಗ್ಚುಕ್ ಹೇಳಿದ್ದಾರೆ.
ನೀಟ್ ಸೇರಿದಂತೆ ವಿವಿಧ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಶಿಕ್ಷಣ ಕ್ಷೇತ್ರದ ಅವ್ಯವಸ್ಥೆಗಳ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ದೆಹಲಿಯ ಜಂತರ್ ಮಂತರ್ನಲ್ಲಿ ಜೂನ್ 20ರಿಂದ ಪ್ರತಿಭಟನೆ ನಡೆಸುತ್ತಿದೆ. ಇದೇ ಜಾಗದಲ್ಲಿ ಸೋನಮ್ ವಾಂಗ್ಚುಕ್ ಜೂನ್ 28ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ. ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗಲಿರುವ ಜುಲೈ 20ರಂದು ಸಿಜೆಪಿ “ಚಲೋ ಸಂಸದ್” ಮಾರ್ಚ್ಗೂ ಕರೆ ನೀಡಿದೆ.


