1979 ರಲ್ಲಿ ನಡೆದಿದ್ದ ಅಪ್ರಾಪ್ತೆ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ 71 ವರ್ಷದ ವ್ಯಕ್ತಿಯ ಶಿಕ್ಷೆಯನ್ನು ಅಲಹಾಬಾದ್ ಹೈಕೋರ್ಟ್ ಎತ್ತಿಹಿಡಿದಿದೆ. ಆದರೆ, ಕ್ರಿಮಿನಲ್ ಮೇಲ್ಮನವಿಯ 43 ವರ್ಷಗಳ ಸುದೀರ್ಘ ವಿಚಾರಣೆ ಮತ್ತು ಆತನ ವಯಸ್ಸನ್ನು ಗಮನಿಸಿ ಶಿಕ್ಷೆಯನ್ನು 7.5 ವರ್ಷದಿಂದ ನಾಲ್ಕು ವರ್ಷಗಳಿಗೆ ಇಳಿಸಿದೆ. ಈ ಘಟನೆ ಉತ್ತರ ಪ್ರದೇಶದ ಪಿಲಿಭಿತ್ ಜಿಲ್ಲೆಯಲ್ಲಿ ಸಂಭವಿಸಿತ್ತು.
ನ್ಯಾಯಾಧೀಶ ಸಂತೋಷ್ ರೈ ಅವರು, ಆರೋಪಿಯಾಗಿರುವ ರಾಮ್ ಸ್ವರೂಪ್ ಸಲ್ಲಿಸಿದ ಕ್ರಿಮಿನಲ್ ಮೇಲ್ಮನವಿಯನ್ನು ಭಾಗಶಃ ಅನುಮತಿಸಿದರು. ಆತನಿಗೆ ಶರಣಾಗುವಂತೆ ಸೂಚಿಸಿ ಉಳಿದ ಶಿಕ್ಷೆಯನ್ನು ಅನುಭವಿಸಬೇಕು ಎಂದು ಆದೇಶಿಸಿದೆ.
ಅಕ್ಟೋಬರ್ 31 ಮತ್ತು ನವೆಂಬರ್ 1, 1979 ರ ಮಧ್ಯರಾತ್ರಿ, 15 ರಿಂದ 17 ವರ್ಷ ವಯಸ್ಸಿನ ಅಪ್ರಾಪ್ತ ಬಾಲಕಿಯನ್ನು ಮೂವರಾದ ಕಾಳಿ ಚರಣ್, ರಾಮ್ ಲಾಲ್ ಮತ್ತು ರಾಮ್ ಸ್ವರೂಪ್ ಎಂಬುವವರು ಚಾಕು ತೋರಿಸಿ ಅಪಹರಿಸಿದ್ದರು. ಆಕೆಯನ್ನು ರೈಲಿನಲ್ಲಿ ಶಹಜಹಾನ್ಪುರದ ಮೂಲಕ ತಿಲ್ಹಾರ್ನಲ್ಲಿರುವ ಖಾಲಿ ಮನೆಗೆ ಕರೆದೊಯ್ಯಲಾಯಿತು, ಅಲ್ಲಿ ಆಕೆಯನ್ನು ಒಂದು ವಾರ ಬಂಧನದಲ್ಲಿಟ್ಟು ಪದೇಪದೆ ಸಾಮೂಹಿಕ ಅತ್ಯಾಚಾರಕ್ಕೆ ಒಳಪಡಿಸಲಾಯಿತು.
1983 ರಲ್ಲಿ ಮೂವರು ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಯಿತು, ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಪಿಲಿಭಿತ್ ಅವರು ಮೂವರೂ ತಪ್ಪಿತಸ್ಥರು ಎಂದು ಘೋಷಿಸಿದ್ದರು. ಆಗ ಮೂವರಿಗೂ ಗರಿಷ್ಠ ಏಳೂವರೆ ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಆದರೆ, ಅಪರಾಧಿಗಳು 1983 ರಲ್ಲಿ ಹೈಕೋರ್ಟ್ನಲ್ಲಿ ತೀರ್ಪನ್ನು ಪ್ರಶ್ನಿಸಿದ್ದರು.
ಮೇಲ್ಮನವಿ ವಿಚಾರಣೆಯ ಸಮಯದಲ್ಲಿ, ಸಹ-ಆರೋಪಿಗಳಾದ ಕಾಳಿ ಚರಣ್ ಮತ್ತು ರಾಮ್ ಲಾಲ್ ನಿಧನರಾದರು. ಇಬ್ಬರಿಗೂ ಸಂಬಂಧಿಸಿದ ಮೇಲ್ಮನವಿಯನ್ನು 2022 ರಲ್ಲಿ ವಜಾಗೊಳಿಸಲಾಯಿತು.
ವಿಚಾರಣೆಯ ಸಮಯದಲ್ಲಿ, ಆರೋಪಿ ಪರ ವಕೀಲರು ಅಪರಾಧ ನಿರ್ಣಯದ ಪ್ರಶ್ನೆಯ ಮೇಲೆ ಮೇಲ್ಮನವಿವೆಗೆ ಒತ್ತಾಯಿಸಲಿಲ್ಲ. ಶಿಕ್ಷೆಯ ಪ್ರಶ್ನೆಗೆ ಮಾತ್ರ ತಮ್ಮ ಮನವಿಯನ್ನು ಸೀಮಿತಗೊಳಿಸಿದರು.
ವಿಚಾರಣಾ ನ್ಯಾಯಾಲಯವು ನೀಡಿದ ಶಿಕ್ಷೆಯನ್ನು ಈ ನ್ಯಾಯಾಲಯಕ್ಕೆ ಲಭ್ಯವಿರುವ ವಿವೇಚನೆಯನ್ನು ಬಳಸಿಕೊಂಡು ಸೂಕ್ತವಾಗಿ ಮಧ್ಯಸ್ಥಿಕೆ ವಹಿಸಲು ಅರ್ಹವಾದ ಪ್ರಕರಣ ಇದಾಗಿದೆ ಎಂದು ವಾದಿಸಲಾಯಿತು.
“ಬಲಿಪಶುವಿನ ಸಾಕ್ಷ್ಯವು ಶಿಕ್ಷೆಯ ಮೂಲಾಧಾರವಾಗಿರುವ ಇಂತಹ ಪ್ರಕರಣಗಳಲ್ಲಿ, ಅಪರಾಧಿಗೆ ಅನಗತ್ಯ ಸಹಾನುಭೂತಿ ತೋರಿಸುವುದು ನ್ಯಾಯವನ್ನು ಸಂಪೂರ್ಣ ತಪ್ಪುದಾರಿಗೆಳೆದಂತಾಗುತ್ತದೆ” ಎಂದು ಹೇಳುತ್ತಾ ಹೈಕೋರ್ಟ್ ಅರ್ಜಿಯನ್ನು ತಿರಸ್ಕರಿಸಿತು. ಶಿಕ್ಷೆ ವಿಧಿಸುವುದು ಕೇವಲ ಪ್ರತೀಕಾರದ ಪ್ರಕ್ರಿಯೆಯಲ್ಲ, ಅದು ಅಪರಾಧಿ ಮತ್ತು ಇತರರಿಗೆ ಪ್ರತಿಬಂಧಕವಾಗಿ ಕಾರ್ಯನಿರ್ವಹಿಸಬೇಕು. ದುರ್ಬಲರನ್ನು ರಕ್ಷಿಸುವ ಶಾಸಕಾಂಗ ಉದ್ದೇಶವನ್ನು ಪ್ರತಿಬಿಂಬಿಸಬೇಕು” ಎಂದು ಕೋರ್ಟ್ ಹೇಳಿದೆ.
ಈ ಅಪರಾಧವನ್ನು ಘೋರ ಎಂದು ಹೇಲಿದ ನ್ಯಾಯಾಲಯವು, “ಲೈಂಗಿಕ ಹಿಂಸೆಯ ಸಾಮಾಜಿಕ ಪರಿಣಾಮವು ಆಳವಾದದ್ದು, ಈ ಪ್ರಮಾಣದ ಪ್ರಕರಣದಲ್ಲಿ ಪರೀಕ್ಷಾರ್ಥ ಅವಧಿಯ ಪ್ರಯೋಜನವನ್ನು ನೀಡುವುದು ಸಾಮಾಜಿಕ ಹಿತಾಸಕ್ತಿ ಮತ್ತು ಕ್ರಿಮಿನಲ್ ನ್ಯಾಯದ ತತ್ವಗಳಿಗೆ ವಿರುದ್ಧವಾಗಿರುತ್ತದೆ” ಎಂದು ಮತ್ತಷ್ಟು ಹೇಳಿತು.
ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 376 (ಅತ್ಯಾಚಾರ) ಅಧಾರದಲ್ಲಿ, ವಿಶೇಷ ಕಾರಣಗಳಿಗಾಗಿ ನ್ಯಾಯಾಲಯಗಳು ಶಾಸನಬದ್ಧ ಏಳು ವರ್ಷಗಳಿಗಿಂತ ಶಿಕ್ಷೆಯನ್ನು ಕಡಿಮೆ ಮಾಡಲು ಅವಕಾಶ ಮಾಡಿಕೊಟ್ಟಿತು ಎಂದು ನ್ಯಾಯಾಲಯವು ಗಮನಿಸಿತು.
ಘಟನೆಯು 1979 ರ ವರ್ಷ ಅಂದರೆ ಸುಮಾರು 47 ವರ್ಷ ಹಳೆಯದಾಗಿದೆ, ಮೇಲ್ಮನವಿಯು ಮೇಲ್ಮನವಿದಾರರ ಯಾವುದೇ ತಪ್ಪಿಲ್ಲದೆ ಸುಮಾರು 43 ವರ್ಷಗಳಿಂದ ಈ ನ್ಯಾಯಾಲಯದಲ್ಲಿ ಬಾಕಿ ಉಳಿದಿದೆ ಎಂಬ ಅಂಶವನ್ನು ಕೋರ್ಟ್ ಗಣನೆಗೆ ತೆಗೆದುಕೊಂಡಿತು.


