ದೇಶಾದ್ಯಂತ ನಡೆಯುತ್ತಿರುವ ಸಿಜೆಪಿ ಪ್ರತಿಭಟನೆಗಳ ನಡುವೆ ನೀಟ್ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಿದ್ದು, ದೆಹಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಬೆಂಬಲಿಗರು ಹರ್ಷೋದ್ಗಾರ ವ್ಯಕ್ತಪಡಿಸಿದ್ದಾರೆ. ಆದರೆ, ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಪೊಲೀಸರು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಸಿಜೆಪಿ ತನ್ನ ಪಟ್ಟು ಮುಂದುವರೆಸಿದೆ.
ಇಂದು ಮಧ್ಯಾಹ್ನ ಪ್ರಧಾನ್ ಅವರ ರಾಜೀನಾಮೆ ಘೋಷಣೆಯ ನಂತರ ಜಂತರ್ ಮಂತರ್ನಲ್ಲಿ ಪ್ರತಿಭಟನಾಕಾರರು ಸಂತಸ ವ್ಯಕ್ತಪಡಿಸಿದರು.
ಯುವಜನರನ್ನು ಉದ್ದೇಶಿಸಿ ಮಾತನಾಡಿದ ಕಾಕ್ರೋಚ್ ಜನತಾ ಪಕ್ಷದ ಸಂಸ್ಥಾಪಕ ಅಭಿಜೀತ್ ದಿಪ್ಕೆ, “ನಾವು ಸಾಧಿಸಿದ್ದೇವೆ. ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಟ್ಟಿದ್ದಾರೆ. ಈ ಸರ್ಕಾರದಲ್ಲಿ ‘ರಾಜೀನಾಮೆಗಳು ಅಸ್ತಿತ್ವದಲ್ಲಿಲ್ಲ’ ಎಂದು ಅವರು ಹೇಳುತ್ತಿದ್ದರು” ಎಂದರು.
“ಇದು ಪ್ರಜಾಪ್ರಭುತ್ವ; ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ನಮಗೆ ಇನ್ನೂ ಎರಡು ಬೇಡಿಕೆಗಳಿವೆ. ನಾವು ಇಷ್ಟಕ್ಕೆ ಹೋಗುವುದಿಲ್ಲ. ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಆದರೆ, ಆತ್ಮಹತ್ಯೆ ಮಾಡಿಕೊಂಡ ಮಕ್ಕಳ ಕುಟುಂಬಗಳಿಗೆ ಒಂದು ಕೋಟಿ ರೂಪಾಯಿ ಪರಿಹಾರ ಸಿಗಬೇಕು. ಅವರಿಗೆ ಸಿಗಲೇಬೇಕು” ಎಂದರು.
“ಆ ಎಲ್ಲಾ ಕುಟುಂಬಗಳಿಗೆ ಒಂದು ಕೋಟಿ ರೂಪಾಯಿ ಪರಿಹಾರ. ಎರಡನೆಯದಾಗಿ, 20 ರಂದು ಪೊಲೀಸ್ ಗೂಂಡಾಗಳು ವಿದ್ಯಾರ್ಥಿಗಳ ಮೇಲೆ ಕೃತ್ಯ ಎಸಗಿದರು. ಅದಕ್ಕಾಗಿ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ನೆನಪಿಡಿ, ಜಿರಳೆಯೊಂದಿಗೆ ಆಟವಾಡಬೇಡಿ” ಎಂದು ಅಭಿಜೀತ್ ಎಚ್ಚರಿಕೆ ನೀಡಿದರು.
ಸಿಜೆಪಿ ಬೇಡಿಕೆಗಳು
- ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು – (ಕೊಟ್ಟಿದ್ದಾರೆ)
- ಆತ್ಮಹತ್ಯೆಯಿಂದ ಸಾವನ್ನಪ್ಪಿದ ಎಲ್ಲಾ ವಿದ್ಯಾರ್ಥಿಗಳ ಕುಟುಂಬಗಳಿಗೆ ರೂ 1 ಕೋಟಿ ಪರಿಹಾರ – ಬಾಕಿ ಇದೆ
- ಯಾವುದೇ ವಿದ್ಯಾರ್ಥಿ ಪ್ರತಿಭಟನಾಕಾರರ ವಿರುದ್ಧ ಕ್ರಮ ತೆಗೆದುಕೊಳ್ಳಬಾರದು – ಬಾಕಿ ಇದೆ
- ಆರ್ಎಎಫ್ ಮತ್ತು ದೆಹಲಿ ಪೊಲೀಸರಿಂದ ಸಾರ್ವಜನಿಕ ಕ್ಷಮೆಯಾಚನೆ – ಬಾಕಿ ಇದೆ


