ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಕಾರಣವಾದ ದೇಶವ್ಯಾಪಿ ವಿದ್ಯಾರ್ಥಿ ಆಂದೋಲನದ ವೇಳೆ ದೆಹಲಿ ಪೊಲೀಸರು ನಡೆಸಿದ ಭೀಕರ ದೌರ್ಜನ್ಯ ಮತ್ತು ಮಿತಿಮೀರಿದ ಬಲಪ್ರಯೋಗದ ವಿರುದ್ಧ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜುಲೈ 20 ರಂದು ದೆಹಲಿಯ ಜಂತರ್ ಮಂತರ್ನಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ನಡೆದ “ಅನಾಗರಿಕ ಹಲ್ಲೆ”ಗೆ ನೇರ ಹೊಣೆ ಯಾರು ಎಂದು ಪ್ರಶ್ನಿಸಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಶನಿವಾರ ಕಟು ಪತ್ರ ಬರೆದು ಗೃಹ ಸಚಿವಾಲಯದ ಉತ್ತರದಾಯಿತ್ವವನ್ನು ಒತ್ತಾಯಿಸಿದ್ದಾರೆ.
ತಮ್ಮ ಪತ್ರದಲ್ಲಿ ಗೃಹ ಸಚಿವರನ್ನು ನೇರವಾಗಿ ಪ್ರಶ್ನಿಸಿರುವ ರಾಹುಲ್ ಗಾಂಧಿ, “ನಮ್ಮ ದೇಶದ ಭವಿಷ್ಯವಾಗಿರುವ ಯುವಕರು ಮತ್ತು ವಿದ್ಯಾರ್ಥಿಗಳು ಇಂದು ನ್ಯಾಯ ಮತ್ತು ಉತ್ತರದಾಯಿತ್ವವನ್ನು ಒತ್ತಾಯಿಸುತ್ತಿದ್ದಾರೆ. ದೆಹಲಿಯಲ್ಲಿ ಭದ್ರತಾ ಪಡೆಗಳು ನೇರವಾಗಿ ಕೇಂದ್ರ ಗೃಹ ಸಚಿವಾಲಯದ ವ್ಯಾಪ್ತಿಗೆ ಬರುತ್ತವೆ. ಹೀಗಿರುವಾಗ, ತಮ್ಮ ಹಕ್ಕಿಗಾಗಿ ಶಾಂತಿಯುತವಾಗಿ ಹೋರಾಡುತ್ತಿದ್ದ ವಿದ್ಯಾರ್ಥಿಗಳ ವಿರುದ್ಧ ಪೆಲೆಟ್ ಗನ್ಗಳು ಸೇರಿದಂತೆ ಮಾರಕ ಬಲಪ್ರಯೋಗ ನಡೆಸಲು ಗೃಹ ಸಚಿವರಾಗಿ ನೀವು ಅನುಮೋದನೆ ನೀಡಿದ್ದೀರಾ? ಇಲ್ಲದಿದ್ದರೆ, ವಿದ್ಯಾರ್ಥಿಗಳನ್ನು ಗುರಿಯಾಗಿಸಿ ಈ ಕ್ರೂರ ದಾಳಿ ನಡೆಸಲು ಆದೇಶ ನೀಡಿದವರು ಯಾರು?” ಎಂದು ಗಂಭೀರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಇದರ ಜೊತೆಗೆ, ಪೊಲೀಸ್ ಸಮವಸ್ತ್ರ ಧರಿಸದೆ ಸಾಮಾನ್ಯ ಉಡುಪಿನಲ್ಲಿದ್ದ ಹಲವು ವ್ಯಕ್ತಿಗಳು ಲಾಠಿಗಳನ್ನು ಹಿಡಿದು ವಿದ್ಯಾರ್ಥಿಗಳನ್ನು ಕ್ರೂರವಾಗಿ ಥಳಿಸುತ್ತಿರುವುದು ಸ್ಪಷ್ಟವಾಗಿ ದಾಖಲಾಗಿದೆ. ಅಂತಹ ಅನಧಿಕೃತ ವ್ಯಕ್ತಿಗಳನ್ನು ಪ್ರತಿಭಟನಾ ಸ್ಥಳದಲ್ಲಿ ನಿಯೋಜಿಸಲು ಅಧಿಕಾರ ನೀಡಿದವರು ಯಾರು ಎಂದು ಪತ್ರದಲ್ಲಿ ಸ್ಪಷ್ಟನೆ ಕೇಳಿದ್ದಾರೆ.
ದೇಶದ ಭವಿಷ್ಯ ರೂಪಿಸಬೇಕಾದ ಯುವಜನರು ಯಾವುದೇ ಅಕ್ರಮಗಳಿಲ್ಲದ, ಪಾರದರ್ಶಕ ಹಾಗೂ ನ್ಯಾಯಯುತ ಶಿಕ್ಷಣ ವ್ಯವಸ್ಥೆಗಾಗಿ ಧ್ವನಿ ಎತ್ತಿದ್ದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯುವಜನರ ನ್ಯಾಯಯುತ ಬೇಡಿಕೆಗಳನ್ನು ಆಲಿಸಿ ಮಾತುಕತೆ ಮೂಲಕ ಬಗೆಹರಿಸುವುದು ಸರ್ಕಾರದ ಪ್ರಾಥಮಿಕ ಕರ್ತವ್ಯವಾಗಿತ್ತು. ಆದರೆ, ಭದ್ರತಾ ಪಡೆಗಳು ವಿದ್ಯಾರ್ಥಿಗಳ ದನಿಯನ್ನು ಆಲಿಸುವ ಬದಲು, ಅಶ್ರುವಾಯು ಹಾಗೂ ಮಾರಕ ಪೆಲೆಟ್ ಗನ್ಗಳನ್ನು ಬಳಸಿ ವಿವೇಚನಾರಹಿತವಾಗಿ ದಾಳಿ ನಡೆಸಿದ್ದರಿಂದ ನೂರಾರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ.
ಪ್ರತಿಭಟನೆಯಲ್ಲಿದ್ದ ಮಹಿಳಾ ವಿದ್ಯಾರ್ಥಿನಿಯರ ಖಾಸಗಿ ಭಾಗಗಳನ್ನು ಗುರಿಯಾಗಿಸಿಕೊಂಡು ಪೊಲೀಸರು ಉದ್ದೇಶಪೂರ್ವಕವಾಗಿ ಹಲ್ಲೆ ನಡೆಸಿರುವುದು ಅತ್ಯಂತ ಆಘಾತಕಾರಿ ಹಾಗೂ ಅಮಾನವೀಯ ಘಟನೆಯಾಗಿದೆ ಎಂದು ರಾಹುಲ್ ಗಾಂಧಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಪೆಲೆಟ್ ಗನ್ ದಾಳಿಯಿಂದಾಗಿ ತೀವ್ರವಾಗಿ ಗಾಯಗೊಂಡಿರುವ 19 ವರ್ಷದ ವಿದ್ಯಾರ್ಥಿ ಸಾಹಿಲ್ ಲೋಚಬ್ ಅವರನ್ನು ಖುದ್ದಾಗಿ ಭೇಟಿಯಾದ ರಾಹುಲ್ ಗಾಂಧಿ, ಆತನ ಸ್ಥಿತಿಯನ್ನು ವಿವರಿಸಿದ್ದಾರೆ. ಸಾಹಿಲ್ ಪ್ರಸ್ತುತ ಅಸಹನೀಯ ನೋವಿನಿಂದ ಬಳಲುತ್ತಿದ್ದು, ಪೆಲೆಟ್ ಗನ್ ಗುಂಡೇಟಿನಿಂದಾಗಿ ತನ್ನ ಕಣ್ಣಿನ ದೃಷ್ಟಿಯನ್ನೇ ಕಳೆದುಕೊಳ್ಳುವ ಭೀಕರ ಪರಿಸ್ಥಿತಿ ಎದುರಿಸುತ್ತಿದ್ದಾನೆ. ಸ್ವತಂತ್ರ ಭಾರತದಲ್ಲಿ ನ್ಯಾಯ ಮತ್ತು ಭವಿಷ್ಯವನ್ನು ಕೇಳಿದ ಯುವಕನಿಗೆ ದೆಹಲಿ ಪೊಲೀಸರು ಪೆಲೆಟ್ ಗನ್ ಗುಂಡೇಟು ನೀಡಿದ್ದು ಪ್ರಜಾಸತ್ತಾತ್ಮಕ ಮೌಲ್ಯಗಳ ಮೇಲೆಯೇ ನಡೆದ ದಾಳಿಯಾಗಿದೆ.
ಇನ್ನೊಂದೆಡೆ, ದೆಹಲಿ ಪೊಲೀಸರು ಶಾಂತಿಯುತ ಪ್ರತಿಭಟನಾಕಾರರ ಮೇಲೆ ನಡೆಸಿದ ಈ ಅಪ್ರಜಾಸತ್ತಾತ್ಮಕ ಹಾಗೂ ಅತ್ಯಾಚಾರ ಸದೃಶ ಬಲಪ್ರಯೋಗದ ವಿರುದ್ಧ ಸುಪ್ರೀಂ ಕೋರ್ಟ್ನ ಹಿರಿಯ ವಕೀಲರು ಸಹ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಪ್ರಜೆಗಳ ಮೂಲಭೂತ ಹಕ್ಕಾದ ಶಾಂತಿಯುತ ಪ್ರತಿಭಟನೆಯನ್ನು ಪೆಲೆಟ್ ಗನ್ ಮತ್ತು ಅಮಾನವೀಯ ದೌರ್ಜನ್ಯದ ಮೂಲಕ ಹತೋಟಿ ಮಾಡಲುತ್ನಿಸಿದ ದೆಹಲಿ ಪೊಲೀಸರ ನಡೆ ಹಾಗೂ ಸರ್ಕಾರದ ಉತ್ತರದಾಯಿತ್ವವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ವಕೀಲರ ತಂಡ ಸಜ್ಜಾಗಿದೆ.
ಸೋಮವಾರದಿಂದ ಪ್ರಾರಂಭವಾಗಲಿರುವ ಸಂಸತ್ ಅಧಿವೇಶನದಲ್ಲಿ ವಿದ್ಯಾರ್ಥಿಗಳ ಮೇಲಾದ ಈ ಭೀಕರ ದೌರ್ಜನ್ಯ, ಗಾಯಗೊಂಡ ಯುವಜನರ ಸ್ಥಿತಿ ಹಾಗೂ ಕುಸಿದುಬಿದ್ದಿರುವ ಶಿಕ್ಷಣ ವ್ಯವಸ್ಥೆಯ ಸಾಂಸ್ಥಿಕ ಬಿಕ್ಕಟ್ಟಿನ ಕುರಿತು ಗೃಹ ಸಚಿವಾಲಯದಿಂದ ಸಂಪೂರ್ಣ ಉತ್ತರದಾಯಿತ್ವವನ್ನು ಪಡೆಯಲು ಪ್ರತಿಪಕ್ಷಗಳು ನಿರ್ಧರಿಸಿವೆ.
ಪ್ರಜಾಪ್ರಭುತ್ವದಲ್ಲಿ ಶಾಂತಿಯುತ ಪ್ರತಿಭಟನೆ ಪ್ರಜೆಗಳ ಸಾಂವಿಧಾನಿಕ ಹಕ್ಕು. ಆ ಹಕ್ಕನ್ನು ರಕ್ಷಿಸಬೇಕಾದ ಸರ್ಕಾರವೇ ಯುವಜನರ ವಿರುದ್ಧ ಹಿಂಸಾಚಾರಕ್ಕೆ ಇಳಿದಿರುವುದು ದೇಶಾದ್ಯಂತ ಸಾರ್ವಜನಿಕರ ಮತ್ತು ಯುವಸಮುದಾಯದ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ವಿದ್ಯಾರ್ಥಿಗಳಿಗೆ ನ್ಯಾಯ ಸಿಗುವವರೆಗೂ ಈ ಹೋರಾಟ ಮುಂದುವರಿಯಲಿದೆ.


