ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ ‘ನೀಲಿ’ (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್ಐಎಚ್ (FIH) ವಿಶ್ವಕಪ್ಗಾಗಿ ಹಾಕಿ ಇಂಡಿಯಾ (HI) ಬಿಡುಗಡೆ ಮಾಡಿರುವ ಹೊಸ ಕಿಟ್, ಕ್ರೀಡಾಪಟುಗಳ ವಲಯದಲ್ಲಷ್ಟೇ ಅಲ್ಲದೆ ರಾಜಕೀಯ ರಂಗದಲ್ಲೂ ದೊಡ್ಡ ಸಂಚಲನ ಸೃಷ್ಟಿಸಿದೆ. ಸಾಂಪ್ರದಾಯಿಕ ಗುರುತನ್ನು ನಾಶಪಡಿಸಿ, ಪ್ರತಿಯೊಂದರಲ್ಲೂ ಕೇಸರಿಮಯ ಮಾಡಲು ಹೊರಟಿರುವ ಆಡಳಿತಾರೂಢ ಬಿಜೆಪಿ ಸಿದ್ಧಾಂತದ ವಿರುದ್ಧ ಪ್ರತಿಪಕ್ಷಗಳು ಹಾಗೂ ಮಾಜಿ ಆಟಗಾರರು ತೀವ್ರ ವಾಗ್ದಾಳಿ ನಡೆಸಿದ್ದಾರೆ.
“ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?”: ಮಾಜಿ ನಾಯಕ ರಸ್ಕ್ವಿನ್ಹಾ ಆಕ್ರೋಶ
ಭಾರತೀಯ ಹಾಕಿ ತಂಡದ ಈ ಹಠಾತ್ ಬಣ್ಣ ಬದಲಾವಣೆಯನ್ನು ಮಾಜಿ ನಾಯಕ ಹಾಗೂ ಪ್ರಸಿದ್ಧ ಹಾಕಿ ಪಟು ವೀರೆನ್ ರಸ್ಕ್ವಿನ್ಹಾ ತೀವ್ರವಾಗಿ ಖಂಡಿಸಿದ್ದಾರೆ. ‘X’ (ಟ್ವಿಟರ್) ಖಾತೆಯಲ್ಲಿ ಬಹಿರಂಗವಾಗಿ ತಮ್ಮ ಅಸಮಾಧಾನ ಹೊರಹಾಕಿರುವ ಅವರು, “ಹಾಕಿ ಇಂಡಿಯಾದ ಈ ನಿರ್ಧಾರ ನಿಜಕ್ಕೂ ತೀರಾ ಮುಜುಗರ ತರುವಂತದ್ದು. ಭಾರತೀಯ ಹಾಕಿ ತಂಡದ ಪರಂಪರೆ ಮತ್ತು ಗುರುತು ಯಾವಾಗಲೂ ನೀಲಿ ಬಣ್ಣದ್ದಾಗಿದೆ. ನಾನು ವರ್ಷಗಳ ಕಾಲ ಅತ್ಯಂತ ಹೆಮ್ಮೆಯಿಂದ ಆ ನೀಲಿ ಜೆರ್ಸಿ ಧರಿಸಿ ಆಡಿದ್ದೇನೆ. ಅಭಿಮಾನಿಗಳು ಕೂಡ ನಮ್ಮ ತಂಡವನ್ನು ನೀಲಿ ಬಣ್ಣದಲ್ಲೇ ನೋಡಲು ಬಯಸುತ್ತಾರೆ. ಇದ್ದಕ್ಕಿದ್ದಂತೆ ಕಿತ್ತಳೆ ಬಣ್ಣ ತಂದಿದ್ದರ ಹಿಂದಿನ ತರ್ಕವೇನು?” ಎಂದು ನೇರವಾಗಿ ಪ್ರಶ್ನಿಸಿದ್ದಾರೆ. ಹೆಮ್ಮೆ ಮತ್ತು ಪರಂಪರೆಯ ವಿಷಯದಲ್ಲಿ ಇಂತಹ ಬದಲಾವಣೆ ಸರಿಯಲ್ಲ ಎಂಬುದು ಅವರ ಸ್ಪಷ್ಟ ನಿಲುವಾಗಿದೆ.
“ಮುಂದೆ ಸೇನಾ ಸಮವಸ್ತ್ರಕ್ಕೂ ಕೇಸರಿ ಹೇರಬಹುದು”: ಪ್ರಿಯಾಂಕಾ ಗಾಂಧಿ, ಪ್ರತಿಪಕ್ಷಗಳ ನೇರ ದಾಳಿ
ಹಾಕಿ ಜೆರ್ಸಿಗೆ ಕೇಸರಿ ಬಣ್ಣ ಬಳಿಯುತ್ತಿದ್ದಂತೆ ಸಂಸತ್ತಿನ ಅಂಗಳದಲ್ಲಿ ವಿರೋಧ ಪಕ್ಷದ ನಾಯಕರು ಸರ್ಕಾರದ ವಿರುದ್ಧ ಧ್ವನಿಯೆತ್ತಿದ್ದಾರೆ. ದೇಶದ ಪ್ರತಿಯೊಂದು ಸಾಂಸ್ಥಿಕ ಹಾಗೂ ಕ್ರೀಡಾ ಗುರುತಿನ ಮೇಲೆ ಕೇಸರಿ ಬಣ್ಣವನ್ನು ಹೇರಲಾಗುತ್ತಿದೆ ಎಂದು ನಾಯಕರು ದೂರಿದ್ದಾರೆ.
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಈ ಬಗ್ಗೆ ಕಠಿಣವಾಗಿ ಮಾತನಾಡಿ, “ಆರ್ಎಸ್ಎಸ್ ಪ್ರಭಾವಿತ ಶಿಕ್ಷಣ ನೀತಿ ಮತ್ತು ನಿರ್ಧಾರಗಳ ಮೂಲಕ ಸರ್ಕಾರವು ದೇಶದ ಇತಿಹಾಸ, ಸಮವಸ್ತ್ರಗಳನ್ನು ಬದಲಾಯಿಸಲು ಹೊರಟಿದೆ. ಆದರೆ ಈ ವಿಷಯಗಳಲ್ಲಿ ದೇಶದ ಯುವಜನತೆಯ ನಿಜವಾದ ಅಭಿಪ್ರಾಯವೇನು ಎಂಬುದನ್ನು ಅರ್ಥಮಾಡಿಕೊಳ್ಳುವುದು ಅತ್ಯಗತ್ಯ. ಈ ದೇಶದ ಸ್ವಾತಂತ್ರ್ಯ ಸಂಗ್ರಾಮವು ಸತ್ಯ ಮತ್ತು ಅಹಿಂಸೆಯ ತತ್ವಗಳ ಮೇಲೆ ನಡೆದಿದೆ. ಆ ಇತಿಹಾಸದಲ್ಲಿ ಆರ್ಎಸ್ಎಸ್ ಎಲ್ಲೂ ಇರಲಿಲ್ಲ. ದೇಶದ ಜನರಿಗೆ ಸತ್ಯ ಏನೆಂದು ತಿಳಿದಿದೆ ಮತ್ತು ಬಿಜೆಪಿ-ಆರ್ಎಸ್ಎಸ್ನ ನಿಜವಾದ ಉದ್ದೇಶವೇನೆಂಬುದು ಈಗ ಅವರಿಗೆ ಸ್ಪಷ್ಟವಾಗಿ ಅರ್ಥವಾಗುತ್ತಿದೆ,” ಎಂದು ಆಕ್ರೋಶ ಹೊರಹಾಕಿದರು.
ಕಾಂಗ್ರೆಸ್ ಸಂಸದ ಅಮರ್ ಸಿಂಗ್ ಮಾತನಾಡಿ, “ಇಂದು ಅವರು ಹಾಕಿಯಲ್ಲಿ ಬಣ್ಣ ಬದಲಾಯಿಸಿದ್ದಾರೆ, ನಾಳೆ ಭಾರತೀಯ ಸೈನ್ಯದ ಸಮವಸ್ತ್ರಕ್ಕೂ ಇದೇ ರೀತಿ ಕೇಸರಿ ಬಣ್ಣ ಹೇರಿದರೂ ಅಚ್ಚರಿಯಿಲ್ಲ. ಯಾರೂ ಇವರನ್ನು ನಂಬಲು ಸಾಧ್ಯವಿಲ್ಲ, ಅವರಿಗೆ ಪ್ರತಿಯೊಂದರಲ್ಲೂ ಕೇಸರಿಯೇ ಬೇಕು. ಪ್ರತಿಯೊಂದಕ್ಕೂ ತನ್ನದೇ ಆದ ಇತಿಹಾಸ ಮತ್ತು ಮಹತ್ವವಿದೆ. ಅಧಿಕಾರಕ್ಕೆ ಬಂದ ತಕ್ಷಣ ಇಂತಹ ಚಿಹ್ನೆಗಳನ್ನು ಬದಲಾಯಿಸುವುದು ಅತ್ಯಂತ ದುರದೃಷ್ಟಕರ,” ಎಂದಿದ್ದಾರೆ.
ಮತ್ತೊಬ್ಬ ಹಿರಿಯ ನಾಯಕ ತಾರಿಕ್ ಅನ್ವರ್ ಮಾತನಾಡಿ, “ಇದು ಬಿಜೆಪಿಯ ಸಂಕುಚಿತ ಮನಸ್ಥಿತಿಯ ಸಂಕೇತ. ಶಿಕ್ಷಣವಿರಲಿ ಅಥವಾ ಕ್ರೀಡೆಯಿರಲಿ, ಎಲ್ಲೆಡೆ ತಮ್ಮ ಸಿದ್ಧಾಂತವನ್ನು ಹೇರಲಾಗುತ್ತಿದೆ. ಮೈದಾನದಲ್ಲಿ ಪ್ರದರ್ಶನ ಮುಖ್ಯವೇ ಹೊರತು ಧಾರ್ಮಿಕ ಬಣ್ಣಗಳಲ್ಲ. ಸಾಂಪ್ರದಾಯಿಕ ನೀಲಿ ಬಣ್ಣವನ್ನು ಬದಲಾಯಿಸಿ ಧಾರ್ಮಿಕ ಬಣ್ಣ ಹೇರುವ ಅಗತ್ಯವೇನಿತ್ತು?” ಎಂದು ಪ್ರಶ್ನಿಸಿದ್ದಾರೆ.
ಇತ್ತ ವಿವಾದ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಸ್ಪಷ್ಟನೆ ನೀಡಿರುವ ಹಾಕಿ ಇಂಡಿಯಾ ಅಧ್ಯಕ್ಷ ದಿಲೀಪ್ ಟರ್ಕಿ, “ಆಟದ ಮೈದಾನದ ಟರ್ಫ್ ನೀಲಿ ಬಣ್ಣದಲ್ಲಿರುವುದರಿಂದ ಆಟಗಾರರ ಜೆರ್ಸಿಯೂ ನೀಲಿಯಾಗಿದ್ದರೆ ಗೋಚರತೆಯ (Visibility) ಸಮಸ್ಯೆ ಉಂಟಾಗುತ್ತದೆ ಎಂದು ತರಬೇತುದಾರರು ಹೇಳಿದ್ದರು. ಆದ್ದರಿಂದ ಈ ಬದಲಾವಣೆ ಮಾಡಲಾಗಿದೆ” ಎಂದು ಸಮರ್ಥಿಸಿಕೊಂಡಿದ್ದಾರೆ.
ಆದರೆ, ದಶಕಗಳಿಂದ ಕ್ರೀಡಾಭಿಮಾನಿಗಳ ಮನಸ್ಸಿನಲ್ಲಿ ನೆಲೆಸಿದ್ದ ‘ಮೆನ್ ಇನ್ ಬ್ಲೂ’ ಗುರುತನ್ನು ಅಳಿಸಿ ಕೇಸರಿಮಯ ಮಾಡಲು ಹೊರಟಿರುವ ಸರ್ಕಾರದ ನಡೆಗೆ ಸಾರ್ವಜನಿಕ ವಲಯದಲ್ಲೂ ಭಾರಿ ವಿರೋಧ ವ್ಯಕ್ತವಾಗುತ್ತಿದೆ.


