ಬೆಂಗಳೂರು: ‘ಸಿದ್ದಾರ್ಥ ವಿಹಾರ ಟ್ರಸ್ಟ್’ ವಿರುದ್ಧ ಭೂ ಅಕ್ರಮದ ಆರೋಪ ಮಾಡಿ ತಮ್ಮ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ್ದ ಬಿಜೆಪಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ನೇರ ಬಹಿರಂಗ ಸವಾಲು ಹಾಕುವ ಮೂಲಕ ತೀವ್ರ ತಿರುಗೇಟು ನೀಡಿದ್ದಾರೆ. ತಮ್ಮ ಕುಟುಂಬದ ಅಡಿಯಲ್ಲಿರುವ ಟ್ರಸ್ಟ್ನ ಎಲ್ಲಾ ಆರ್ಥಿಕ ದಾಖಲೆಗಳನ್ನು ಸಾರ್ವಜನಿಕರ ಮುಂದಿಡಲು ತಾವು ಸಿದ್ಧವೆಂದಿರುವ ಅವರು, ಅದೇ ವೇದಿಕೆಯಲ್ಲಿ ಆರ್ಎಸ್ಎಸ್ ಹಾಗೂ ಅಯೋಧ್ಯೆ ರಾಮಮಂದಿರದ ಲೆಕ್ಕಪತ್ರಗಳನ್ನು ಬಹಿರಂಗಪಡಿಸಲು ಬಿಜೆಪಿ ಸಿದ್ಧವಿದೆಯೇ ಎಂದು ಪ್ರಶ್ನಿಸಿದ್ದಾರೆ.
ಸಿದ್ದಾರ್ಥ ವಿಹಾರ ಟ್ರಸ್ಟ್ನ ಭೂ ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ತನಿಖೆಗೆ ಆದೇಶಿಸಿದೆ ಎಂದು ಪ್ರತಿಪಾದಿಸಿ ಬಿಜೆಪಿ ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಖರ್ಗೆ ಕುಟುಂಬವನ್ನು ಗುರಿಯಾಗಿಸಿ ಪೋಸ್ಟ್ ಒಂದನ್ನು ಹಂಚಿಕೊಂಡಿತ್ತು. ನಿರಂತರವಾಗಿ ಆರ್ಎಸ್ಎಸ್ ನೋಂದಣಿ, ದೇವಸ್ಥಾನಗಳ ಹಾಗೂ ವಿವಿಧ ಹಿಂದೂ ಸಂಘಟನೆಗಳ ಲೆಕ್ಕಪತ್ರ ಹಾಗೂ ದಾಖಲೆಗಳನ್ನು ಕೇಳುವ ಸಚಿವ ಪ್ರಿಯಾಂಕ್ ಖರ್ಗೆ ಅವರು, ತಮ್ಮ ಕುಟುಂಬದ ವಿರುದ್ಧ ಕೇಳಿಬಂದಿರುವ ಭೂ ಅಕ್ರಮದ ಆರೋಪದ ಕುರಿತು ಬಾಯ್ಬಿಡಲಿ ಎಂದು ಬಿಜೆಪಿ ಸವಾಲೆಸೆದಿತ್ತು.
ಬಿಜೆಪಿಯ ಈ ಆರೋಪಕ್ಕೆ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಸುದೀರ್ಘ ಪ್ರತ್ಯುತ್ತರ ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆ, ಕಮಲ ಪಾಳೆಯದ ರಾಜಕೀಯ ತಂತ್ರಗಾರಿಕೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ನಾನು ಆರ್ಎಸ್ಎಸ್ ಲೆಕ್ಕ ಕೇಳಿದರೆ ನೀವು ನನ್ನ ಲೆಕ್ಕ ಕೇಳುತ್ತೀರಿ, ಜನರು ಶ್ರೀರಾಮನ ಲೆಕ್ಕ ಕೇಳಿದರೆ ನೀವು ಬುದ್ಧನ ಲೆಕ್ಕ ಕೇಳುತ್ತೀರಿ ಎಂದು ವಾಗ್ದಾಳಿ ನಡೆಸಿರುವ ಅವರು, ಖಂಡಿತವಾಗಿಯೂ ತಂದೆಯಿಂದ ಹಿಡಿದು ತಮ್ಮವರೆಗೆ ನಾವು ಲೆಕ್ಕ ಕೊಡಲು ತಯಾರಿದ್ದೇವೆ, ಆದರೆ ನಮ್ಮನ್ನು ಪ್ರಶ್ನಿಸುವ ನೀವು ಲೆಕ್ಕ ನೀಡಲು ತಯಾರಿದ್ದೀರಾ ಎಂದು ಮರುಪ್ರಶ್ನೆ ಹಾಕಿದ್ದಾರೆ.
ಬೌದ್ಧ ಮಂದಿರವನ್ನು ನಿರ್ವಹಿಸುತ್ತಿರುವ ಸಿದ್ದಾರ್ಥ ವಿಹಾರ ಟ್ರಸ್ಟ್ ಒಂದು ಸಂಪೂರ್ಣ ನಿಯಮಾನುಸಾರ ನೋಂದಾಯಿತ ಸಂಸ್ಥೆಯಾಗಿದ್ದು, ಅತ್ಯಂತ ಪಾರದರ್ಶಕವಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ಸರ್ಕಾರಕ್ಕೆ ನಿಯಮಿತವಾಗಿ ತೆರಿಗೆಯನ್ನೂ ಪಾವತಿಸುತ್ತಿದೆ. ಹೀಗಾಗಿ ಟ್ರಸ್ಟ್ನ ಪ್ರತಿಯೊಂದು ಲೆಕ್ಕಪತ್ರಗಳೊಂದಿಗೆ ಸಾರ್ವಜನಿಕರೆದುರು ಬಹಿರಂಗ ಚರ್ಚೆಗೆ ಬರಲು ತಾವು ಸಿದ್ಧರಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ ಬಿಜೆಪಿಗೆ ಸವಾಲು ಹಾಕಿರುವ ಅವರು, ನಿಮ್ಮ ಪಿತೃಸಂಸ್ಥೆಯಾಗಿರುವ ಆರ್ಎಸ್ಎಸ್ನ ಲೆಕ್ಕಪತ್ರಗಳು ಹಾಗೂ ಅಯೋಧ್ಯೆ ರಾಮಮಂದಿರದ ಲೆಕ್ಕಪತ್ರಗಳೊಂದಿಗೆ ನೀವು ಬಹಿರಂಗ ಚರ್ಚೆಗೆ ಬರುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಆರ್ಎಸ್ಎಸ್ನ ಹಣದ ಮೂಲ ಯಾವುದು ಮತ್ತು ಸಿದ್ದಾರ್ಥ ವಿಹಾರ ಟ್ರಸ್ಟಿನ ಆದಾಯ ಯಾವುದು ಎಂಬುದನ್ನು ಇಡೀ ಜನತೆಯ ಎದುರು ಬಹಿರಂಗಪಡಿಸೋಣ ಬನ್ನಿ ಎಂದು ನೇರ ಸವಾಲೆಸೆದಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ಅವರು ಮೊದಲಿನಿಂದಲೂ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಕಾನೂನಾತ್ಮಕ ಅಸ್ತಿತ್ವ ಹಾಗೂ ಅದರ ನಿಧಿ ಸಂಗ್ರಹಣೆಯ ಮೂಲಗಳನ್ನು ಪ್ರಶ್ನಿಸುತ್ತಲೇ ಬಂದಿದ್ದಾರೆ. ಶತಮಾನ ಪೂರೈಸುತ್ತಾ ಬಂದಿದ್ದರೂ ಆರ್ಎಸ್ಎಸ್ ಅಧಿಕೃತವಾಗಿ ನೋಂದಣಿಯಾಗದಿರುವುದು ಮತ್ತು ಅದರ ಆರ್ಥಿಕ ವ್ಯವಹಾರಗಳು ಸಾರ್ವಜನಿಕ ಪರಿಶೀಲನೆಗೆ ಲಭ್ಯವಿಲ್ಲದಿರುವುದನ್ನು ಅವರು ಈ ಹಿಂದೆಯೂ ಬಹಿರಂಗ ವೇದಿಕೆಗಳಲ್ಲಿ ಪ್ರಸ್ತಾಪಿಸಿದ್ದರು.
ಅದೇ ವಿಚಾರವನ್ನು ಪೋಸ್ಟ್ನಲ್ಲಿ ಮತ್ತೊಮ್ಮೆ ನೆನಪಿಸಿರುವ ಅವರು, ಸಿದ್ದಾರ್ಥ ವಿಹಾರ ಟ್ರಸ್ಟ್ ಪಾರದರ್ಶಕವಾಗಿ ತೆರಿಗೆ ಪಾವತಿಸುವ ಸಂಸ್ಥೆಯಾಗಿದೆ. ಆದರೆ ಬಿಜೆಪಿ ಉತ್ತರಿಸಬೇಕಾದ ಮೂಲಭೂತ ಪ್ರಶ್ನೆಗಳು ಹಾಗೆಯೇ ಬಾಕಿ ಇವೆ. ನಿಮ್ಮ ಯಜಮಾನಿಕೆಯ ಸಂಸ್ಥೆಯಾಗಿರುವ ಆರ್ಎಸ್ಎಸ್ ಇಂದಿಗೂ ಏಕೆ ನೋಂದಾವಣೆಯಾಗಿಲ್ಲ? ಅದನ್ನು ಯಾವಾಗ ನೋಂದಣಿ ಮಾಡಿಕೊಳ್ಳುವಿರಿ? ಆರ್ಎಸ್ಎಸ್ನ ಆರ್ಥಿಕ ಚಟುವಟಿಕೆಗಳು ಮತ್ತು ಹಣದ ಮೂಲಗಳ ಬಗ್ಗೆ ಪಾರದರ್ಶಕ ದಾಖಲೆಗಳೊಂದಿಗೆ ಯಾವಾಗ ಸಾರ್ವಜನಿಕವಾಗಿ ಚರ್ಚಿಸುತ್ತೀರಿ ಎಂದು ಸಚಿವ ಖರ್ಗೆ ಬಿಜೆಪಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.


