ಸಮಾಜವಾದಿ ಪಕ್ಷದ ನಾಯಕ ಆಝಂ ಖಾನ್ ಅವರಿಗೆ ಸಂಬಂಧಿಸಿದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಬುಧವಾರ (ಆ.19) ಉತ್ತರ ಪ್ರದೇಶದ ರಾಂಪುರ, ಸಹಾರನ್ಪುರ ಮತ್ತು ದೆಹಲಿಯಲ್ಲಿ ಶೋಧ ನಡೆಸಿದೆ.
ವರದಿಗಳ ಪ್ರಕಾರ, ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ದಾಖಲಾಗಿರುವ ಪ್ರಕರಣದ ಭಾಗವಾಗಿ ಉತ್ತರ ಪ್ರದೇಶದ ರಾಂಪುರ ಮತ್ತು ಸಹಾರನ್ಪುರ ಹಾಗೂ ದೆಹಲಿಯ ಸುಮಾರು 10 ಸ್ಥಳಗಳಲ್ಲಿ ಶೋಧ ಕಾರ್ಯ ಕೈಗೊಳ್ಳಲಾಗಿದೆ.
ಸರ್ಕಾರಿ ಗುತ್ತಿಗೆಯ ಹಣವನ್ನು ಖಾಸಗಿ ಗುತ್ತಿಗೆದಾರರ ಮೂಲಕ ದುರುಪಯೋಗಪಡಿಸಿಕೊಂಡ ಆರೋಪ ಮತ್ತು ಆ ಹಣವನ್ನು ನಂತರದ ದಿನಗಳಲ್ಲಿ ವಿಶ್ವವಿದ್ಯಾಲಯ ಹಾಗೂ ಟ್ರಸ್ಟ್ನ ಆಸ್ತಿಗಳನ್ನು ಸೃಜಿಸಲು ಒಳಗೊಂಡಂತೆ ಇತರೆ ಉದ್ದೇಶಗಳಿಗಾಗಿ ಬಳಕೆ ಮಾಡಿರುವ ಕುರಿತು ತನಿಖೆ ನಡೆಯುತ್ತಿದೆ ಎಂದು ವರದಿಗಳು ಉಲ್ಲೇಖಿಸಿವೆ.
ಕೆಲವು ಗುತ್ತಿಗೆದಾರರು ಮತ್ತು ಟ್ರಸ್ಟ್ ನಡುವೆ ಹಣಕಾಸಿನ ವಹಿವಾಟುಗಳು ನಡೆದಿರುವುದು ತನಿಖೆಯಿಂದ ತಿಳಿದುಬಂದಿದೆ. ಸರ್ಕಾರಿ ಗುತ್ತಿಗೆಗಳಿಂದ ಲಾಭ ಪಡೆದ ಗುತ್ತಿಗೆದಾರರು, ಆ ಹಣವನ್ನು ಟ್ರಸ್ಟ್ ಮತ್ತು ವಿಶ್ವವಿದ್ಯಾಲಯಕ್ಕೆ ಗಣನೀಯ ಪ್ರಮಾಣದ ದೇಣಿಗೆಗಳು ಮತ್ತು ನಿರ್ಮಾಣ ಕಾಮಗಾರಿಗಳ ರೂಪದಲ್ಲಿ ವರ್ಗಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.
ಉತ್ತರ ಪ್ರದೇಶದ ಮಾಜಿ ಸಚಿವ ಆಝಂ ಖಾನ್, ಅವರ ಕುಟುಂಬ ಸದಸ್ಯರು ಮತ್ತು ಆಪ್ತರು ಪ್ರಮುಖ ಟ್ರಸ್ಟಿಗಳಾಗಿರುವ ಲಕ್ನೋ ಮೂಲದ ಮೌಲಾನಾ ಮೊಹಮ್ಮದ್ ಅಲಿ ಜೌಹರ್ ಟ್ರಸ್ಟ್, ರಾಂಪುರ ಜಿಲ್ಲೆಯಲ್ಲಿ ಮೊಹಮ್ಮದ್ ಅಲಿ ಜೌಹರ್ ವಿಶ್ವವಿದ್ಯಾಲಯ ಮತ್ತು ಸಾರ್ವಜನಿಕ ಶಾಲೆಯೊಂದನ್ನು ನಡೆಸುತ್ತಿದೆ.
ಮೊಹಮ್ಮದ್ ಅಲಿ ಜೌಹರ್ ವಿಶ್ವವಿದ್ಯಾಲಯದ 38 ಕಟ್ಟಡಗಳನ್ನು ಕೆಡವಲು ರಾಂಪುರ ನಗರಾಭಿವೃದ್ಧಿ ಪ್ರಾಧಿಕಾರ (ಆರ್ಡಿಎ) ಆದೇಶಿಸಿದೆ ಎಂದು ಜುಲೈ 15ರಂದು ವರದಿಯಾಗಿತ್ತು. ಈ ಎಲ್ಲಾ ಕಟ್ಟಡಗಳನ್ನು ಯಾವುದೇ ಅನುಮೋದಿತ ಕಟ್ಟಡ ಯೋಜನೆಗಳಿಲ್ಲದೆ (ನಕ್ಷೆ ಮಂಜೂರಾತಿ ಇಲ್ಲದೆ) ಕಾನೂನುಬಾಹಿರವಾಗಿ ನಿರ್ಮಿಸಲಾಗಿದೆ ಎಂದು ಪ್ರಾಧಿಕಾರ ಹೇಳಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಉಲ್ಲೇಖಿಸಿತ್ತು.
ಮೊಹಮ್ಮದ್ ಅಲಿ ಜೌಹರ್ ವಿವಿಯ ಕಟ್ಟಡಗಳನ್ನು ಕೆಡವುವ ವಿಚಾರ ದೇಶದಾದ್ಯಂತ ದೊಡ್ಡ ಆಕ್ರೋಶಕ್ಕೆ ಕಾರಣವಾಗಿದೆ. ರಾಜಕೀಯ ದ್ವೇಷದಿಂದ ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ಆಝಂ ಖಾನ್ ಅವರ ವಿವಿಯನ್ನು ಗುರಿಯಾಗಿಸುತ್ತಿದೆ ಎಂದು ಆರೋಪಿಸಲಾಗಿದೆ.
ವಿವಿ ಕಟ್ಟಡಗಳನ್ನು ಕೆಡವುವ ಆದೇಶದ ವಿರುದ್ದ ತೀವ್ರ ಪ್ರತಿಭಟನೆಗಳು ವ್ಯಕ್ತವಾದ ಬಳಿಕ, ಆದೇಶಕ್ಕೆ ತಾತ್ಕಾಲಿಕ ತಡೆ ನೀಡಲಾಗಿದೆ. ಈ ಬೆನ್ನಲ್ಲೇ ಆಝಂ ಖಾನ್ ಮತ್ತು ವಿವಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಇಡಿ ದಾಳಿಯಾಗಿದೆ.


