ರಾಯಚೂರು ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ದಲಿತರ ಮೇಲಿನ ಸರಣಿ ದೌರ್ಜನ್ಯ ಮತ್ತು ಕೊಲೆ ಪ್ರಕರಣಗಳು ಜನಾಕ್ರೋಶಕ್ಕೆ ಕಾರಣವಾಗಿವೆ. ಈ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಸಚಿವ ಕೆ.ಎಚ್. ಮುನಿಯಪ್ಪ ಅವರು ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಕೊಲೆಯಾದ ದಲಿತ ಸಮಾಜದ ಸಂತ್ರಸ್ತರ ಮನೆಗಳಿಗೆ ಶುಕ್ರವಾರ ಭೇಟಿ ನೀಡಿ ಸಾಂತ್ವನ ಹೇಳಿದರು.
‘ನಮ್ಮ ಕಷ್ಟ ನೋಡುವವರಿಲ್ಲ’: ಸಚಿವರ ಮುಂದೆ ಸಹೋದರನ ಕಣ್ಣೀರು
ಕರಡಕಲ್ ಗ್ರಾಮದಲ್ಲಿ ಕೊಲೆಯಾದ ದಲಿತ ಮಹಿಳೆ ರಾಣೆಮ್ಮ ಅವರ ಮನೆಗೆ ಭೇಟಿ ನೀಡಿದ ಸಚಿವ ಕೆ.ಎಚ್. ಮುನಿಯಪ್ಪ ಅವರಿಗೆ ರಾಣೆಮ್ಮ ಅವರ ಸಹೋದರ ಅಮರೇಶ ತಮ್ಮ ತೀವ್ರ ಅಸಮಾಧಾನ ಮತ್ತು ಅಳಲನ್ನು ತೋಡಿಕೊಂಡರು.

“ಹತ್ತು ಜನ ಬರ್ತಾರೆ, ಹತ್ತು ಜನ ಹೋಗ್ತಾರೆ. ಇದೇ ನಡೆದಿದೆ, ಯಾವುದೇ ಶಾಶ್ವತ ಪರಿಹಾರ ಸಿಕ್ಕಿಲ್ಲ. ಬರುವವರು ಬಂದು ಹೋಗುತ್ತಾರೆಯೇ ಹೊರತು ನಮ್ಮ ಕಷ್ಟ ಯಾರೂ ನೋಡುತ್ತಿಲ್ಲ. ಕೊಲೆಯಾದ ನಮ್ಮ ಅಕ್ಕನ ಮಕ್ಕಳಿಗೆ ಸರ್ಕಾರ ಒಂದು ದಾರಿ ಮಾಡಿಕೊಡಬೇಕು, ಅವರಿಗೆ ಜೀವನಾಧಾರ ಕಲ್ಪಿಸಬೇಕು” ಎಂದು ಅಮರೇಶ ಆಗ್ರಹಿಸಿದರು.
ಇದಕ್ಕೆ ಸ್ಪಂದಿಸಿದ ಸಚಿವರು, “ಪರಿಹಾರ ನೀಡಲು ಕಾನೂನಿನ ಚೌಕಟ್ಟಿದೆ. ಅದಕ್ಕೆ ಪೂರಕ ದಾಖಲೆಗಳನ್ನು ಸಿದ್ಧಪಡಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಸರ್ಕಾರದಿಂದ ಸಾಧ್ಯವಾಗುವ ಎಲ್ಲಾ ರೀತಿಯ ನೆರವು ಮತ್ತು ಗರಿಷ್ಠ ಪರಿಹಾರ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ” ಎಂದು ಭರವಸೆ ನೀಡಿದರು.
ಸಿರವಾರ: ಅಶ್ವಿನಿ ಕುಟುಂಬಕ್ಕೆ ಸರ್ಕಾರಿ ನೌಕರಿ, ಜಮೀನಿಗೆ ನೀರಾವರಿ ಭರವಸೆ
ಬಳಿಕ ಸಿರವಾರ ತಾಲೂಕಿನ ಹೊಕ್ರಾಣಿ ಗ್ರಾಮಕ್ಕೆ ಭೇಟಿ ನೀಡಿದ ಸಚಿವರು, ಇತ್ತೀಚೆಗೆ ಮೃತಪಟ್ಟ ಅಶ್ವಿನಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಗ್ರಾಮೀಣ ಭಾಗದಲ್ಲಿ ಅಶಾಂತಿ ಮತ್ತು ಕಾನೂನುಬಾಹಿರ ಚಟುವಟಿಕೆಗಳಿಗೆ ಆಸ್ಪದ ನೀಡದೆ, ಪ್ರೀತಿ-ವಾತ್ಸಲ್ಯದ ವಾತಾವರಣ ನಿರ್ಮಿಸಬೇಕಿದೆ ಎಂದರು.
ಮೃತ ಅಶ್ವಿನಿ ಅವರ ಸಹೋದರನಿಗೆ ಸರ್ಕಾರಿ ನೌಕರಿ ನೀಡುವುದು, ಕುಟುಂಬದ ಜಮೀನಿಗೆ ನೀರಾವರಿ ವ್ಯವಸ್ಥೆ ಕಲ್ಪಿಸುವುದು ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ತಕ್ಷಣವೇ ಒದಗಿಸುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು. ನಂತರ ಪ್ರತಿಭಟನಾ ಸ್ಥಳಕ್ಕೂ ಭೇಟಿ ನೀಡಿದ ಸಚಿವರು, “ನಾವು 41 ವರ್ಷಗಳಿಂದ ಸಾಮಾಜಿಕ ಸಾಮರಸ್ಯಕ್ಕಾಗಿ ಹೋರಾಡುತ್ತಿದ್ದೇವೆ. ದ್ವೇಷ-ಅಸೂಯೆ ಮರೆತು ಸಾಮರಸ್ಯದಿಂದ ಬದುಕದಿದ್ದರೆ ಅಭಿವೃದ್ಧಿ ಸಾಧ್ಯವಿಲ್ಲ” ಎಂದರು.
ಜಿಲ್ಲಾಧಿಕಾರಿ ಪೂವಿತಾ ಎಸ್. ಮಾತನಾಡಿ, “ಜಿಲ್ಲೆಯಲ್ಲಿ ಸಾಮರಸ್ಯ ಮೂಡಿಸಲು ಮತ್ತು ಸರ್ಕಾರದ ಯೋಜನೆಗಳನ್ನು ತಲುಪಿಸಲು ಜಿಲ್ಲಾ ಮಟ್ಟದ ಅಧಿಕಾರಿಗಳು ಪ್ರತಿ ವಾರ ತಾಲೂಕು ಹಾಗೂ ಗ್ರಾಮ ಮಟ್ಟಕ್ಕೆ ಭೇಟಿ ನೀಡುತ್ತಿದ್ದಾರೆ” ಎಂದು ವಿವರಣೆ ನೀಡಿದರು.
ದೇವದುರ್ಗ: ಬಿಎಸ್ಪಿ ಮುಖಂಡ ಭೂಮಾನಂದ ಕೊಲೆ ಪ್ರಕರಣದ ತನಿಖೆಗೆ ಆದೇಶ
ದೇವದುರ್ಗ ತಾಲೂಕಿನ ಹದ್ದಿನಾಳ ಗ್ರಾಮಕ್ಕೆ ಭೇಟಿ ನೀಡಿದ ಸಚಿವ ಮುನಿಯಪ್ಪ, ಇತ್ತೀಚೆಗೆ ಭೀಕರವಾಗಿ ಕೊಲೆಯಾದ ಬಿಎಸ್ಪಿ ಮುಖಂಡ ಭೂಮಾನಂದ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು.

“ಭೂಮಾನಂದ ಕೊಲೆ ಪ್ರಕರಣವನ್ನು ಪೊಲೀಸರು ಅತ್ಯಂತ ನಿಷ್ಪಕ್ಷಪಾತವಾಗಿ ತನಿಖೆ ಮಾಡುತ್ತಿದ್ದಾರೆ. ತಪ್ಪಿತಸ್ಥ ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಲಿದೆ. ಈ ಕುರಿತು ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಸೂಕ್ತ ಪರಿಹಾರ ಘೋಷಿಸಲಾಗುವುದು” ಎಂದರು. ಅಲ್ಲದೆ, ಪರಿಶಿಷ್ಟ ಸಮುದಾಯದವರು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು, ಅನಗತ್ಯ ಗಲಾಟೆಗಳಿಗೆ ಇಳಿಯದೆ ಕಾನೂನುಬದ್ಧ ಹೋರಾಟದ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಸಚಿವರ ಈ ಭೇಟಿಯ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎನ್.ಎಸ್. ಬೋಸರಾಜು, ಶಾಸಕರಾದ ಹಂಪಯ್ಯ ನಾಯಕ, ಕರೆಮ್ಮ ಜಿ. ನಾಯಕ, ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿ ಕೆ.ಪಿ. ಮೋಹನ್ ರಾಜ್, ಆಯುಕ್ತ ರಾಕೇಶ್ ಕುಮಾರ್, ರಾಯಚೂರು ಜಿಲ್ಲಾಧಿಕಾರಿ ಪೂವಿತಾ ಎಸ್., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಅರುಣಾಂಗ್ಷು ಗಿರಿ, ಜಿ.ಪಂ. ಸಿಇಒ ಈಶ್ವರ್ ಕುಮಾರ್ ಕಾಂದೂ, ಅಂಬಣ್ಣ ಅರೋಲಿಕರ್ ಸೇರಿದಂತೆ ವಿವಿಧ ದಲಿತಪರ ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.


